Home / ಕವನ / ಕವಿತೆ / ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ನನ್ನ ಮನೆಯ ನೆತ್ತಿಯ ಮೇಲೆ
ಸೂರ್ಯ ಇನ್ನೂ ಹುಟ್ಟಿರಲಿಲ್ಲ.
ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ
ಚಳಿಯಲ್ಲಿ ನಡುಗುತ್ತ ಮಲಗಿದ್ದ
ಹಸಿವಿನಿಂದ ಚಡಪಡಿಸುತ್ತಿರುವ
ಮಕ್ಕಳಿಗೆ ಹೇಗೆ ಹೇಳಲಿ ನಾನು
ನಮ್ಮ ರಂಜಾನಿನ ಉಪವಾಸ
ಇನ್ನೂ ಮುಗಿದಿಲ್ಲ ಎಂದು.
ಹಾಳಾದ ಚಳಿಗೆ ಮತ್ತಷ್ಟು ಹಸಿವು
ಅಳಬೇಡ ಕಂದ ಇಂದು ಪವಿತ್ರಹಬ್ಬ
ರಂಜಾನಿನ ಪುಣ್ಯದಿನ ನಮಾಜಿಗೆ ಹೋಗು
ಅಲ್ಲಾಹ್ ಬಡವರ ಕೈ ಬಿಡಲಾರ.

ಪುಟ್ಟ ಮಕ್ಕಳು ಪ್ರಾರ್ಥನೆ ಮಾಡಿದರೆ
ಕರುಣಾಮಯನಿಗೆ ಬೇಗ ಮುಟ್ಟುತ್ತದೆ
ಅಳಬಾರದು ಬೇಟಾ ಇಂದು ಪುಣ್ಯದಿನ
ಎದ್ದು ನಮಾಜಿಗೆ ಹೋಗು ಮಸೀದಿಗೆ
ಅಮ್ಮಿ ಹೇಳುವ ಮಾತುಗಳು,
ಕಿವಿಗಪ್ಪಳಿಸಿ ಹಿಂತಿರುಗಿ ಹೋದವು.
ದೇವರು ನಮಗೆ ಬಡವರಾಗಿ
ಹುಟ್ಟಿಸಿದ ಸಿಟ್ಟಿಗೆ ಮುಷ್ಟಿ ಬಿಗಿಯಾದವು.

ತಿಂಗಳುಪವಾಸದ ನಂತರ ಪವಿತ್ರ ಹಬ್ಬ
ಪಕ್ಕದ ಶ್ರೀಮಂತರ ಮನೆಯಿಂದ
ಕರಿದ ಮೀನು, ಚಿಕನ್ನು, ಮಟನ್ನು
ಭಕ್ಷಾನ್ನಗಳ ಘಮಘಮ ವಾಸನೆಗೆ
ಮಕ್ಕಳ ಹಸಿವಿನ ಕಿಚ್ಚು ಹೆಚ್ಚಾಗದಿರಲಿ ರಬ್ಬೆ.
ಗುಡಿಸಲ ಬಾಗಿಲು ಭದ್ರ ಮುಚ್ಚಿದಳು
ದೇವರಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದಳು.
ನನ್ನ ಮಕ್ಕಳು ನೊಂದಾರು ಪ್ರಭುವೇ!
ಪಕ್ಕದ ಮಕ್ಕಳ ಹೊಸ ಬಟ್ಟೆಗಳು
ಅವರ ಕಣ್ಣಿಗೆ ಬೀಳದಿರಲಿ ರಬ್ಬೇ!

ಯಾಕಾದರೂ ನೀನು ಹಬ್ಬಗಳ ಮಾಡಿದೆ?
ಮಾಡಿದರೂ ಮಾಡಿದೆ ಬಿಡು
ನಮ್ಮನ್ನು ಬಡವರಾಗೇಕೆ ಹುಟ್ಟಿಸಿದೆ?
ಸರ್ವಶಕ್ತ ನೀನಂತೆ, ಒಂದು ಸಲ ನೀನು
ಲೋಕದ ಬಡತನದ ಬೇರುಗಳ ಸಹಿತ
ಬುಡದಿಂದ ಕಿತ್ತೆಸೆಯಬಾರದೇ?
`ನೆರೆಮನೆಯವರು ಹಸಿದಿರುವಾಗ
ಬೀರಿಯುವಂತೆ ತಿನ್ನುವುದು ಪಾಪ’
ಎಂದು ಪೈಗಂಬರರು ಹೇಳುತ್ತಿದ್ದರಲ್ಲವೇ

ಮನುಜ ಮನುಜರ ನಡುವಿನ
ಅಸಮತೆಯ ಗೋಡೆ ಕೆಡವಬಾರದೇ?
ನೋವಿನ ಉಸಿರು ಭಾರವಾದಾಗ
ಬದುಕು ಅಸಹನೀಯವಾದಾಗ
ಆ ಸೃಷ್ಟಿಕರ್ತನಿಗೇ ಕೇಳುತ್ತೇನೆ
ಜಗದಲಿ ಹಬ್ಬಗಳನ್ನೇಕೆ ಮಾಡಿದೆ?
ನೀನು ಹೇಳದಿದ್ದರೆ ನಿನ್ನ ದೇವಲೋಕದಲಿ
ನ್ಯಾಯಕ್ಕಾಗಿ ಜಿಹಾದ್‌ ಹೂಡುತ್ತೇನೆ
ಹೇಳು ಹಬ್ಬಗಳನ್ನೇಕೆ ಮಾಡಿದೆ
ಬಡತನವನ್ನೇಕೆ ಹುಟ್ಟು ಹಾಕಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...