Home / ಕವನ / ಕವಿತೆ / ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ನನ್ನ ಮನೆಯ ನೆತ್ತಿಯ ಮೇಲೆ
ಸೂರ್ಯ ಇನ್ನೂ ಹುಟ್ಟಿರಲಿಲ್ಲ.
ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ
ಚಳಿಯಲ್ಲಿ ನಡುಗುತ್ತ ಮಲಗಿದ್ದ
ಹಸಿವಿನಿಂದ ಚಡಪಡಿಸುತ್ತಿರುವ
ಮಕ್ಕಳಿಗೆ ಹೇಗೆ ಹೇಳಲಿ ನಾನು
ನಮ್ಮ ರಂಜಾನಿನ ಉಪವಾಸ
ಇನ್ನೂ ಮುಗಿದಿಲ್ಲ ಎಂದು.
ಹಾಳಾದ ಚಳಿಗೆ ಮತ್ತಷ್ಟು ಹಸಿವು
ಅಳಬೇಡ ಕಂದ ಇಂದು ಪವಿತ್ರಹಬ್ಬ
ರಂಜಾನಿನ ಪುಣ್ಯದಿನ ನಮಾಜಿಗೆ ಹೋಗು
ಅಲ್ಲಾಹ್ ಬಡವರ ಕೈ ಬಿಡಲಾರ.

ಪುಟ್ಟ ಮಕ್ಕಳು ಪ್ರಾರ್ಥನೆ ಮಾಡಿದರೆ
ಕರುಣಾಮಯನಿಗೆ ಬೇಗ ಮುಟ್ಟುತ್ತದೆ
ಅಳಬಾರದು ಬೇಟಾ ಇಂದು ಪುಣ್ಯದಿನ
ಎದ್ದು ನಮಾಜಿಗೆ ಹೋಗು ಮಸೀದಿಗೆ
ಅಮ್ಮಿ ಹೇಳುವ ಮಾತುಗಳು,
ಕಿವಿಗಪ್ಪಳಿಸಿ ಹಿಂತಿರುಗಿ ಹೋದವು.
ದೇವರು ನಮಗೆ ಬಡವರಾಗಿ
ಹುಟ್ಟಿಸಿದ ಸಿಟ್ಟಿಗೆ ಮುಷ್ಟಿ ಬಿಗಿಯಾದವು.

ತಿಂಗಳುಪವಾಸದ ನಂತರ ಪವಿತ್ರ ಹಬ್ಬ
ಪಕ್ಕದ ಶ್ರೀಮಂತರ ಮನೆಯಿಂದ
ಕರಿದ ಮೀನು, ಚಿಕನ್ನು, ಮಟನ್ನು
ಭಕ್ಷಾನ್ನಗಳ ಘಮಘಮ ವಾಸನೆಗೆ
ಮಕ್ಕಳ ಹಸಿವಿನ ಕಿಚ್ಚು ಹೆಚ್ಚಾಗದಿರಲಿ ರಬ್ಬೆ.
ಗುಡಿಸಲ ಬಾಗಿಲು ಭದ್ರ ಮುಚ್ಚಿದಳು
ದೇವರಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದಳು.
ನನ್ನ ಮಕ್ಕಳು ನೊಂದಾರು ಪ್ರಭುವೇ!
ಪಕ್ಕದ ಮಕ್ಕಳ ಹೊಸ ಬಟ್ಟೆಗಳು
ಅವರ ಕಣ್ಣಿಗೆ ಬೀಳದಿರಲಿ ರಬ್ಬೇ!

ಯಾಕಾದರೂ ನೀನು ಹಬ್ಬಗಳ ಮಾಡಿದೆ?
ಮಾಡಿದರೂ ಮಾಡಿದೆ ಬಿಡು
ನಮ್ಮನ್ನು ಬಡವರಾಗೇಕೆ ಹುಟ್ಟಿಸಿದೆ?
ಸರ್ವಶಕ್ತ ನೀನಂತೆ, ಒಂದು ಸಲ ನೀನು
ಲೋಕದ ಬಡತನದ ಬೇರುಗಳ ಸಹಿತ
ಬುಡದಿಂದ ಕಿತ್ತೆಸೆಯಬಾರದೇ?
`ನೆರೆಮನೆಯವರು ಹಸಿದಿರುವಾಗ
ಬೀರಿಯುವಂತೆ ತಿನ್ನುವುದು ಪಾಪ’
ಎಂದು ಪೈಗಂಬರರು ಹೇಳುತ್ತಿದ್ದರಲ್ಲವೇ

ಮನುಜ ಮನುಜರ ನಡುವಿನ
ಅಸಮತೆಯ ಗೋಡೆ ಕೆಡವಬಾರದೇ?
ನೋವಿನ ಉಸಿರು ಭಾರವಾದಾಗ
ಬದುಕು ಅಸಹನೀಯವಾದಾಗ
ಆ ಸೃಷ್ಟಿಕರ್ತನಿಗೇ ಕೇಳುತ್ತೇನೆ
ಜಗದಲಿ ಹಬ್ಬಗಳನ್ನೇಕೆ ಮಾಡಿದೆ?
ನೀನು ಹೇಳದಿದ್ದರೆ ನಿನ್ನ ದೇವಲೋಕದಲಿ
ನ್ಯಾಯಕ್ಕಾಗಿ ಜಿಹಾದ್‌ ಹೂಡುತ್ತೇನೆ
ಹೇಳು ಹಬ್ಬಗಳನ್ನೇಕೆ ಮಾಡಿದೆ
ಬಡತನವನ್ನೇಕೆ ಹುಟ್ಟು ಹಾಕಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...