Home / ಕವನ / ಕವಿತೆ / ತ್ಯಾಗವೆ ಒಲುಮೆ

ತ್ಯಾಗವೆ ಒಲುಮೆ

ಮೇಜಿನ ಮೇಲೊಂದು ರೋಜದ ಹೂವು,
ಹಿಂದೆಂದು ಕಾಣದ ಸೊಗಸಿನ ಹೂವು,
ಅಂದೆ ಅರಳಿದ ಹೂವು,
ಸಂಜೆಗೆಂಪಿನ ಹೂವು,
ಕಂಗಳು ತಂಗುವ ಸೊಗಸಿನ ರೇವು.

ಬಾಲಸೂರ್‍ಯನ ಕಿರಣ ರಂಧ್ರದಿ ತೂರಿ,
ಮಲರನ್ನು ಮುತ್ತಿಡಲು ಹೊಸ ಚೆಲುವ ತೋರಿ,
ಜೀವಗೂಡಿರುವಂತೆ
ಒಲವೆರೆದು ನಗುವಂತೆ
ಕಳಕಳಿಸಿ ಮೆರೆದುದು ಸೋಜಿಗವ ಬೀರಿ.

ಕಣ್ಮುಚ್ಚಿ ಮೆಲ್ಲನೆ ಹೂವ ತುಟಿಗೆತ್ತಿ
“ನನ್ನೊಲವೆ” ಎನ್ನುತ್ತ ಮುತ್ತಿಟ್ಟಿನೊತ್ತಿ;
ಅದರ ಸೊಂಪಿನ ಕಂಪು,
ಸ್ಪರ್‍ಶದ ಸುಖ, ತಂಪು,
ಮುದದ ಮೋರೆಯ ತೋರೆ ಸ್ವರ್‍ಗಕೆ ಎತ್ತಿ,

ಬಾನಿನ ನೆತ್ತಿಯನೇರಿತು ಹೊತ್ತು;
ಚೆಂದದ ಹೂವನ್ನು ತುಟಿಮೇಲೆ ಇತ್ತು.
ರೋಜದ ರೂಪು,
ಪ್ರಾಯದ ಹುರುಪು,
ಆಸೆಯಾವೇಶಕ್ಕೆ ಕಂದಿಹೋಗಿತ್ತು,

ತುಟಿಯಿಂದ ತೆಗೆದೆನು ಸೊರಗಿದ ಹೂವ,
ದುಂಡನೆ ದಳವೆಲ್ಲ ಸುರುಟಿಕೊಂಡಿರುವ,
ಪ್ರೇಮಕೆ ಬಿಂಕವ-
ನೀಯಲು ಸುಂಕವ,
ಹೆಚ್ಚಿದ ಕಂಪಿಗೆ ಸೋತುದು ಜೀವ.

“ಒಲುಮೆಯ ಸಲುವಾಗಿ ಎಲ್ಲವ ತೆತ್ತೆ,
ಚೆಂದವ, ಪ್ರಾಯವ, ಜೀವವ ತೆತ್ತೆ;
ಒಲಿಯಲು ತೆತ್ತೆ,
ಒಲಿದುದಕೇ ತೆತ್ತೆ;
ಸಾಯುವೆ; ತುಸಹೊತ್ತು ಮುತ್ತಿಡು ಮತ್ತೆ.”

ಎನ್ನಲು ಹೂವಿನ ದಳಗಳು ಅಲುಗಿ,
ಎನ್ನಯ ಕ್ರೂರತೆಗೆ ದೈನ್ಯದಿ ಕೊರಗಿ,
ನುಡಿಯೆನ್ನ ಚುಚ್ಚಿತು,
ಹೃದಯವ ಕೊಚ್ಚಿತು,
ತುಟಿಗೆತ್ತಿ ಮುತ್ತಿಟ್ಟೆ ರೋಜವ ತಿರುಗಿ.

ಹೂವಂದು ಸತ್ತಿತು ಮುತ್ತನು ಕೊಟ್ಟು,
ಮುತ್ತಿನ ನೆನಪಿಗೆ ಕಂಪನು ಬಿಟ್ಟು;
“ತ್ಯಾಗವೆ ಒಲುಮೆ
ಬಾಳ್ವೆಯ ಕುಲುಮೆ”
ಎನ್ನುವ ನುಡಿಯನ್ನು ಎದೆಯೊಳಗೆ ನೆಟ್ಟು,
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...