Home / ಕವನ / ಕವಿತೆ / ತ್ಯಾಗವೆ ಒಲುಮೆ

ತ್ಯಾಗವೆ ಒಲುಮೆ

ಮೇಜಿನ ಮೇಲೊಂದು ರೋಜದ ಹೂವು,
ಹಿಂದೆಂದು ಕಾಣದ ಸೊಗಸಿನ ಹೂವು,
ಅಂದೆ ಅರಳಿದ ಹೂವು,
ಸಂಜೆಗೆಂಪಿನ ಹೂವು,
ಕಂಗಳು ತಂಗುವ ಸೊಗಸಿನ ರೇವು.

ಬಾಲಸೂರ್‍ಯನ ಕಿರಣ ರಂಧ್ರದಿ ತೂರಿ,
ಮಲರನ್ನು ಮುತ್ತಿಡಲು ಹೊಸ ಚೆಲುವ ತೋರಿ,
ಜೀವಗೂಡಿರುವಂತೆ
ಒಲವೆರೆದು ನಗುವಂತೆ
ಕಳಕಳಿಸಿ ಮೆರೆದುದು ಸೋಜಿಗವ ಬೀರಿ.

ಕಣ್ಮುಚ್ಚಿ ಮೆಲ್ಲನೆ ಹೂವ ತುಟಿಗೆತ್ತಿ
“ನನ್ನೊಲವೆ” ಎನ್ನುತ್ತ ಮುತ್ತಿಟ್ಟಿನೊತ್ತಿ;
ಅದರ ಸೊಂಪಿನ ಕಂಪು,
ಸ್ಪರ್‍ಶದ ಸುಖ, ತಂಪು,
ಮುದದ ಮೋರೆಯ ತೋರೆ ಸ್ವರ್‍ಗಕೆ ಎತ್ತಿ,

ಬಾನಿನ ನೆತ್ತಿಯನೇರಿತು ಹೊತ್ತು;
ಚೆಂದದ ಹೂವನ್ನು ತುಟಿಮೇಲೆ ಇತ್ತು.
ರೋಜದ ರೂಪು,
ಪ್ರಾಯದ ಹುರುಪು,
ಆಸೆಯಾವೇಶಕ್ಕೆ ಕಂದಿಹೋಗಿತ್ತು,

ತುಟಿಯಿಂದ ತೆಗೆದೆನು ಸೊರಗಿದ ಹೂವ,
ದುಂಡನೆ ದಳವೆಲ್ಲ ಸುರುಟಿಕೊಂಡಿರುವ,
ಪ್ರೇಮಕೆ ಬಿಂಕವ-
ನೀಯಲು ಸುಂಕವ,
ಹೆಚ್ಚಿದ ಕಂಪಿಗೆ ಸೋತುದು ಜೀವ.

“ಒಲುಮೆಯ ಸಲುವಾಗಿ ಎಲ್ಲವ ತೆತ್ತೆ,
ಚೆಂದವ, ಪ್ರಾಯವ, ಜೀವವ ತೆತ್ತೆ;
ಒಲಿಯಲು ತೆತ್ತೆ,
ಒಲಿದುದಕೇ ತೆತ್ತೆ;
ಸಾಯುವೆ; ತುಸಹೊತ್ತು ಮುತ್ತಿಡು ಮತ್ತೆ.”

ಎನ್ನಲು ಹೂವಿನ ದಳಗಳು ಅಲುಗಿ,
ಎನ್ನಯ ಕ್ರೂರತೆಗೆ ದೈನ್ಯದಿ ಕೊರಗಿ,
ನುಡಿಯೆನ್ನ ಚುಚ್ಚಿತು,
ಹೃದಯವ ಕೊಚ್ಚಿತು,
ತುಟಿಗೆತ್ತಿ ಮುತ್ತಿಟ್ಟೆ ರೋಜವ ತಿರುಗಿ.

ಹೂವಂದು ಸತ್ತಿತು ಮುತ್ತನು ಕೊಟ್ಟು,
ಮುತ್ತಿನ ನೆನಪಿಗೆ ಕಂಪನು ಬಿಟ್ಟು;
“ತ್ಯಾಗವೆ ಒಲುಮೆ
ಬಾಳ್ವೆಯ ಕುಲುಮೆ”
ಎನ್ನುವ ನುಡಿಯನ್ನು ಎದೆಯೊಳಗೆ ನೆಟ್ಟು,
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...