Home / ಕವನ / ಕವಿತೆ / ಸಂಕ್ರಾಂತಿ

ಸಂಕ್ರಾಂತಿ

– ಪಲ್ಲವಿ –

ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ!
ಇಳೆಯೊಳಿಡಿದ ಕುಳಿರನಳಿದು
ಬಲಿಯಲು ಹೊಸಕಾಂತಿ!

ಮೂಡುಗಾಳಿ ಬೀಸಿ ಬೀಸಿ,
ನಾಡ ಬೆಳೆಯ ಕಸುಕ ಸೋಸಿ,
ಮಾಡಿ ವಿವಿಧಧಾನ್ಯರಾಶಿ,
ಹಸಿವೆಗೀಯೆ ಶಾಂತಿ…
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೧

ಕುಡಿಯೊಡೆದಿದೆ ಬರಲುಮಾವು
ಗಿಡಗಿಡ ಕಾಡೆಲ್ಲ ಹೂವು,
ಹುಡುಕುತಲಿದೆ ಜೇನ್ಗೆ ಠಾವು
ಜೇನ್ನೊಣಗಳ ಹಂತಿ !
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೨

ಬಿಸುಪ ಕಳೆದುಕೊಂಡ ರವಿ,
ಎಸೆವನಿದೋ ತೀವಿ ಛವಿ,
ಹೊಸಹಬ್ಬವಿದನಿತು ಸವಿ!
ಬುವಿಯು ಭಾಗ್ಯವಂತಿ…
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೩

ಒಲವಮ್ಮನ ಜಾತ್ರೆಗೆಂದು
ಚೆಲುವಿನ ಗುಡಿಯೆತ್ತಿ ನಿಂದು
ನಲಿಯುತಲಿದೆ ಹೆಣ್ಣು-ಗಂಡು,
ಇಲ್ಲದೆ ವಿಶ್ರಾಂತಿ….
ಕಳೆದು ಭ್ರಾಂತಿ, ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೪

ಎಳ್ಳು-ಬೆಲ್ಲ ಚಿಗುಳಿ ಹದ
ಒಲ್ದಾಯಿಗೆ ಶ್ರೀಪ್ರಸಾದ,
ಸಲ್ಲಿಸಿ ಸೆಳೆಯುವರು ಮುದ
ಏನಿದೇನು ಶಾಂತಿ….
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ! ೫

ಎಳ್ಳ ನೇಹ ಎದೆಯೊಳಾಯ್ತು,
ಬೆಲ್ಲದ ಸಿಹಿ ಸೊಲ್ಲೊಳಾಯ್ತು,
ಎಲ್ಲಿಯ ಸಮರಸದ ಗುರುತು
ಶಾಂತಿ ಶಾಂತಿ ಶಾಂತಿ!
ಕಳೆದು ಭ್ರಾಂತಿ ತುಳಿದಶಾಂತಿ
ಹೊಳೆಯಿತು ಸಂಕ್ರಾಂತಿ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...