Home / ಕವನ / ಕವಿತೆ / ಹಿರಿಯ ಜೀವ

ಹಿರಿಯ ಜೀವ

(ಸರ್ವಜ್ಞ ಮೂರ್ತಿಯ ಸ್ವರೂಪದರ್ಶನಕಾರನನ್ನು ಕುರಿತು)

ಯಾರ ಅಭಿಶಾಪವೋ ಸರ್ವಜ್ಞ ಮೂರುತಿಗೆ !
ಅಮರನಲ್ಲವೆ- ಪುಷ್ಪದತ್ತ ಗಂಧರ್ವನವ?

ಕರದಿ ಕಪ್ಪರ ಹಿಡಿದು ಹಿರಿದಾದ ನಾಡಿನಲಿ
ತಿರಿದು ತಿನ್ನುತ, ತನ್ನ ಕಿರಿದುನಾಳ್ನುಡಿಗಳಲಿ
ಹಿರಿಯ ಹುರುಳನು ತುಂಬಿ ಜನಮನಕೆ ತಿನ್ನಿಸುತ್ತ
ಕನ್ನಡದ ಮಲೆನಾಡ-ಕನ್ನಡ ಬಯಲ್ನಾಡ-
ಮೂಡು-ಪಡುವಲು-ಬಡಗ-ತೆಂಕಣವನಲೆದಾಡಿ,
ಕನ್ನಡಿಗರೆಲ್ಲರನು ಕಂಡಿರ್ದ್ದ; ಆ ಕವಿಯ
ಕನ್ನಡಿಗರೆಲ್ಲ ಕಣ್ಣಾರೆ ಕಂಡಿರ್ದರು.

ಆ ಕವಿಯ ನಗೆನುಡಿಯ ಕೇಳಿ ನಕ್ಕಿರ್ದ್ದರು;
ಆತನಾ ಕಿಡಿನುಡಿಗೆ ನಡುಕ ಪಡೆದಿರ್ದ್ದರು,
ಅವನ ಬೆಡಗನು ಕೇಳಿ ಬೆರಗುವಟ್ಟಿರ್ದ್ದರು;
ಅವನ ಜೋಯಿಸ ಕೇಳಿ ಸೊಬಗನಾಂತಿರ್ದ್ದರು
ಅವನ ವೈದ್ಯಕದಿಂದ ಬೇನೆಯನು ನೀಗಿರ್ದ್ದ-
ರವನ ರಸವೈದ್ಯದಲ್ಲಿ ಕಲ್ಲು-ಕಬ್ಬಿಣವನೂ
ಕಾಂಚನವನಾಗಿ ಮಾಡುವ ಬಗೆಯಲಿರ್ದ್ದರು.
ಭವ್ಯ ದೇಹದ ಬ್ರಹ್ಮಚಾರಿ ಸರ್ವಜ್ಞನನು
ಬಲ್ಲದವರಿರಲಿಲ್ಲ ನಾಡಿನೋಳು….ಆದರೆ –
ಯಾರ ಶಾಪವೋ ಏನೋ, ಆ ಅಮರ ಕವಿಗೆ !
ಒಮ್ಮೆಲೇ ಅವನ ಮೈ ಅಳಿದು ಹೋಯಿತು; ಕೆಚ್ಚು-
ಗಟ್ಟಿರ್ದ್ದ ಅವನೊಡಲು ನುಚ್ಚು ನೂರಾಯಿತು !
ಆ ಊರಲೊಂದು ಚೂರ್, ಈ ಊರಲೊಂದು ಚೂರ್;
ಹಳ್ಳಿಗೊಂದೊಂದು ಚೂರ್, ಹಟ್ಟಿಗೊಂದೊಂದು ಚೂರ್;
ಹೊಲೆಯರಲಿ ತುಣುಕೊಂದು, ಹಾರುವರಲಿನ್ನೊಂದು,
ಕುರುಬ ಕುಂಬರ-ಜೇಡ-ಕಮ್ಮರರಲೊಂದೊಂದು;
ಒಕ್ಕಲಿಗರಲ್ಲಿ, ಆ ಲೆಕ್ಕಿಗರ ಮನೆಯಲ್ಲಿ-
ಮಕ್ಕಳಾಟಕೆ ಸಿಕ್ಕಿ ದಿಕ್ಕು ದಿಕ್ಕಿಗೆ ಚೂರು
ಸಿಕ್ಕಿದೊಲು ಚೆದರಿ ಸರ್ವಜ್ಞ ಮೂರ್ತಿಯ ಮೂರ್ತಿ
ಕಾಣದಂತಾಗಿತ್ತು ಕನ್ನಡದ ನಾಡಿನಲಿ.

ಯಾರ ಶಾಪವೋ ಕಾಣೆ, ಆ ಅಮೃತ ಮೂರುತಿಗೆ !
ಮೂರ್ತಿ ಅಳಿದರೆಯು ಆತನ ಕೀರ್ತಿ ನಾಡಿನಲಿ
ಸುಳಿದಾಡುತಿತ್ತು; ಸರ್ವಜ್ಞನಾ ಸವಿಹೆಸರು
ಕನ್ನಡದ ಬಾಯಿ-ಕಿವಿಗಳಲ್ಲಿ ಮನೆ ಮಾಡಿತ್ತು.
ಅಮರಕವಿ ಸರ್ವಜ್ಞ ಶಾಪಕ್ಕೆ ಸಾಯುವನೆ ?
ಶಾಪಮೋಚನ ಕಾಲ ಸಂದುಬಂದಿತು; ಕಾಲ
ತಾನೆ ಮಾಡುವನೇನು ತನ್ನ ಕಜ್ಜವನೆಲ್ಲ?
ಯಾವುದೋ ಹಿರಿಯ ಜೀವವನೊಂದ ಕರೆಯುವನು;
ಅದರ ಉಸಿರಲಿ ತನ್ನ ಉಸಿರನ್ನು ಊದುವನು.
ತನ್ನ ಕಜ್ಜವನೆಲ್ಲ ಮಾಡಿಸುವನದರಿಂದ.
ಆ ಜೀವವನೆ ‘ಮಹಾಪುರುಷ’ ಎನ್ನುತ ಲೋಕ
ಕೊಂಡಾಡಿ ಕೊನೆವಂತೆ ಮಾಡುತಿಹನಾತ.

ಸರ್ವಜ್ಞನಾ ನುಚ್ಚು ನೂರಾದ ಕಾಯವನು
ಮರಳಿ ಸಂಧಿಸಿ ಮೂರ್ತಿಯನ್ನು ನಿರ್ಮಿಸಲೆಂದು
ಕಾಲನಾರಿಸಿದ ಕನ್ನಡದೊಂದು ಹಿರಿಜೀವ
ದಿಕ್ಕು-ದಿಕ್ಕಿಗೆ ಚೆದರಿಬಿದ್ದಿರ್ದ್ದ ಕವಿರಾಯ-
ನಾ ಮೈಯ ನುಚ್ಚುನೂರುಗಳನೊರ್ಗೂಡಿಸುತ,
ತನ್ನ ಹಿರಿಮೆಯ ತಪದ ಸಂಜೀವಶಕ್ತಿಯಲಿ
ಸರ್ವಜ್ಞ ಕವಿಗೆ ಉಸಿರನ್ನಿತ್ತಿತಾ ಜೀವ.
ಮೆಯ್ಯಳಿದ ಕವಿ ಮತ್ತೆ ಮೆಯ್ಯಾಂತು ನಿಲ್ಲುವಂ-
ದದಿ ಮಾಡಿತಾ ಹಿರಿಯ ಜೀವ; ಈ ದಿನ ಮತ್ತೆ
ಸರ್ವಜ್ಞ ಮರಳಿ ಮಾತಾಡುತಿಹ ಮೈಗೊಂಡು.

ಕನ್ನಡಕೆ ಸರ್ವಜ್ಞ ಕವಿಯನೊದವಿಸಿಕೊಟ್ಟ
ಹಿರಿಜೀವ ಕನ್ನಡದ ಸೌಭಾಗ್ಯವದು ಸತ್ಯ !
ಕಾಲನೇ ಒಪ್ಪಿರಲು ಅದರ ಹಿರಿಮೆಯನಿನ್ನು
ಕನ್ನಡರು ಒಪ್ಪದೇನಿರುವರೇ? ಆ ಜೀವ
ಕನ್ನಡದ ನಾಡಿನಲಿ ಬಹುಕಾಲ ಬಾಳಲಿ !
ಆಳಾದ ಕನ್ನಡವು ಅರಸಾಗಿ ಬಾಳ್ವುದನು
ಕಣ್ಣಾರೆ ಕಂಡು ಸುಖ, ಶಾಂತಿಯನು ತಾಳಲಿ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...