Home / ಕವನ / ಕವಿತೆ / ಹಿರಿಯ ಜೀವ

ಹಿರಿಯ ಜೀವ

(ಸರ್ವಜ್ಞ ಮೂರ್ತಿಯ ಸ್ವರೂಪದರ್ಶನಕಾರನನ್ನು ಕುರಿತು)

ಯಾರ ಅಭಿಶಾಪವೋ ಸರ್ವಜ್ಞ ಮೂರುತಿಗೆ !
ಅಮರನಲ್ಲವೆ- ಪುಷ್ಪದತ್ತ ಗಂಧರ್ವನವ?

ಕರದಿ ಕಪ್ಪರ ಹಿಡಿದು ಹಿರಿದಾದ ನಾಡಿನಲಿ
ತಿರಿದು ತಿನ್ನುತ, ತನ್ನ ಕಿರಿದುನಾಳ್ನುಡಿಗಳಲಿ
ಹಿರಿಯ ಹುರುಳನು ತುಂಬಿ ಜನಮನಕೆ ತಿನ್ನಿಸುತ್ತ
ಕನ್ನಡದ ಮಲೆನಾಡ-ಕನ್ನಡ ಬಯಲ್ನಾಡ-
ಮೂಡು-ಪಡುವಲು-ಬಡಗ-ತೆಂಕಣವನಲೆದಾಡಿ,
ಕನ್ನಡಿಗರೆಲ್ಲರನು ಕಂಡಿರ್ದ್ದ; ಆ ಕವಿಯ
ಕನ್ನಡಿಗರೆಲ್ಲ ಕಣ್ಣಾರೆ ಕಂಡಿರ್ದರು.

ಆ ಕವಿಯ ನಗೆನುಡಿಯ ಕೇಳಿ ನಕ್ಕಿರ್ದ್ದರು;
ಆತನಾ ಕಿಡಿನುಡಿಗೆ ನಡುಕ ಪಡೆದಿರ್ದ್ದರು,
ಅವನ ಬೆಡಗನು ಕೇಳಿ ಬೆರಗುವಟ್ಟಿರ್ದ್ದರು;
ಅವನ ಜೋಯಿಸ ಕೇಳಿ ಸೊಬಗನಾಂತಿರ್ದ್ದರು
ಅವನ ವೈದ್ಯಕದಿಂದ ಬೇನೆಯನು ನೀಗಿರ್ದ್ದ-
ರವನ ರಸವೈದ್ಯದಲ್ಲಿ ಕಲ್ಲು-ಕಬ್ಬಿಣವನೂ
ಕಾಂಚನವನಾಗಿ ಮಾಡುವ ಬಗೆಯಲಿರ್ದ್ದರು.
ಭವ್ಯ ದೇಹದ ಬ್ರಹ್ಮಚಾರಿ ಸರ್ವಜ್ಞನನು
ಬಲ್ಲದವರಿರಲಿಲ್ಲ ನಾಡಿನೋಳು….ಆದರೆ –
ಯಾರ ಶಾಪವೋ ಏನೋ, ಆ ಅಮರ ಕವಿಗೆ !
ಒಮ್ಮೆಲೇ ಅವನ ಮೈ ಅಳಿದು ಹೋಯಿತು; ಕೆಚ್ಚು-
ಗಟ್ಟಿರ್ದ್ದ ಅವನೊಡಲು ನುಚ್ಚು ನೂರಾಯಿತು !
ಆ ಊರಲೊಂದು ಚೂರ್, ಈ ಊರಲೊಂದು ಚೂರ್;
ಹಳ್ಳಿಗೊಂದೊಂದು ಚೂರ್, ಹಟ್ಟಿಗೊಂದೊಂದು ಚೂರ್;
ಹೊಲೆಯರಲಿ ತುಣುಕೊಂದು, ಹಾರುವರಲಿನ್ನೊಂದು,
ಕುರುಬ ಕುಂಬರ-ಜೇಡ-ಕಮ್ಮರರಲೊಂದೊಂದು;
ಒಕ್ಕಲಿಗರಲ್ಲಿ, ಆ ಲೆಕ್ಕಿಗರ ಮನೆಯಲ್ಲಿ-
ಮಕ್ಕಳಾಟಕೆ ಸಿಕ್ಕಿ ದಿಕ್ಕು ದಿಕ್ಕಿಗೆ ಚೂರು
ಸಿಕ್ಕಿದೊಲು ಚೆದರಿ ಸರ್ವಜ್ಞ ಮೂರ್ತಿಯ ಮೂರ್ತಿ
ಕಾಣದಂತಾಗಿತ್ತು ಕನ್ನಡದ ನಾಡಿನಲಿ.

ಯಾರ ಶಾಪವೋ ಕಾಣೆ, ಆ ಅಮೃತ ಮೂರುತಿಗೆ !
ಮೂರ್ತಿ ಅಳಿದರೆಯು ಆತನ ಕೀರ್ತಿ ನಾಡಿನಲಿ
ಸುಳಿದಾಡುತಿತ್ತು; ಸರ್ವಜ್ಞನಾ ಸವಿಹೆಸರು
ಕನ್ನಡದ ಬಾಯಿ-ಕಿವಿಗಳಲ್ಲಿ ಮನೆ ಮಾಡಿತ್ತು.
ಅಮರಕವಿ ಸರ್ವಜ್ಞ ಶಾಪಕ್ಕೆ ಸಾಯುವನೆ ?
ಶಾಪಮೋಚನ ಕಾಲ ಸಂದುಬಂದಿತು; ಕಾಲ
ತಾನೆ ಮಾಡುವನೇನು ತನ್ನ ಕಜ್ಜವನೆಲ್ಲ?
ಯಾವುದೋ ಹಿರಿಯ ಜೀವವನೊಂದ ಕರೆಯುವನು;
ಅದರ ಉಸಿರಲಿ ತನ್ನ ಉಸಿರನ್ನು ಊದುವನು.
ತನ್ನ ಕಜ್ಜವನೆಲ್ಲ ಮಾಡಿಸುವನದರಿಂದ.
ಆ ಜೀವವನೆ ‘ಮಹಾಪುರುಷ’ ಎನ್ನುತ ಲೋಕ
ಕೊಂಡಾಡಿ ಕೊನೆವಂತೆ ಮಾಡುತಿಹನಾತ.

ಸರ್ವಜ್ಞನಾ ನುಚ್ಚು ನೂರಾದ ಕಾಯವನು
ಮರಳಿ ಸಂಧಿಸಿ ಮೂರ್ತಿಯನ್ನು ನಿರ್ಮಿಸಲೆಂದು
ಕಾಲನಾರಿಸಿದ ಕನ್ನಡದೊಂದು ಹಿರಿಜೀವ
ದಿಕ್ಕು-ದಿಕ್ಕಿಗೆ ಚೆದರಿಬಿದ್ದಿರ್ದ್ದ ಕವಿರಾಯ-
ನಾ ಮೈಯ ನುಚ್ಚುನೂರುಗಳನೊರ್ಗೂಡಿಸುತ,
ತನ್ನ ಹಿರಿಮೆಯ ತಪದ ಸಂಜೀವಶಕ್ತಿಯಲಿ
ಸರ್ವಜ್ಞ ಕವಿಗೆ ಉಸಿರನ್ನಿತ್ತಿತಾ ಜೀವ.
ಮೆಯ್ಯಳಿದ ಕವಿ ಮತ್ತೆ ಮೆಯ್ಯಾಂತು ನಿಲ್ಲುವಂ-
ದದಿ ಮಾಡಿತಾ ಹಿರಿಯ ಜೀವ; ಈ ದಿನ ಮತ್ತೆ
ಸರ್ವಜ್ಞ ಮರಳಿ ಮಾತಾಡುತಿಹ ಮೈಗೊಂಡು.

ಕನ್ನಡಕೆ ಸರ್ವಜ್ಞ ಕವಿಯನೊದವಿಸಿಕೊಟ್ಟ
ಹಿರಿಜೀವ ಕನ್ನಡದ ಸೌಭಾಗ್ಯವದು ಸತ್ಯ !
ಕಾಲನೇ ಒಪ್ಪಿರಲು ಅದರ ಹಿರಿಮೆಯನಿನ್ನು
ಕನ್ನಡರು ಒಪ್ಪದೇನಿರುವರೇ? ಆ ಜೀವ
ಕನ್ನಡದ ನಾಡಿನಲಿ ಬಹುಕಾಲ ಬಾಳಲಿ !
ಆಳಾದ ಕನ್ನಡವು ಅರಸಾಗಿ ಬಾಳ್ವುದನು
ಕಣ್ಣಾರೆ ಕಂಡು ಸುಖ, ಶಾಂತಿಯನು ತಾಳಲಿ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...