Home / ಕವನ / ಕವಿತೆ / ಹಿರಿಯ ಜೀವ

ಹಿರಿಯ ಜೀವ

(ಸರ್ವಜ್ಞ ಮೂರ್ತಿಯ ಸ್ವರೂಪದರ್ಶನಕಾರನನ್ನು ಕುರಿತು)

ಯಾರ ಅಭಿಶಾಪವೋ ಸರ್ವಜ್ಞ ಮೂರುತಿಗೆ !
ಅಮರನಲ್ಲವೆ- ಪುಷ್ಪದತ್ತ ಗಂಧರ್ವನವ?

ಕರದಿ ಕಪ್ಪರ ಹಿಡಿದು ಹಿರಿದಾದ ನಾಡಿನಲಿ
ತಿರಿದು ತಿನ್ನುತ, ತನ್ನ ಕಿರಿದುನಾಳ್ನುಡಿಗಳಲಿ
ಹಿರಿಯ ಹುರುಳನು ತುಂಬಿ ಜನಮನಕೆ ತಿನ್ನಿಸುತ್ತ
ಕನ್ನಡದ ಮಲೆನಾಡ-ಕನ್ನಡ ಬಯಲ್ನಾಡ-
ಮೂಡು-ಪಡುವಲು-ಬಡಗ-ತೆಂಕಣವನಲೆದಾಡಿ,
ಕನ್ನಡಿಗರೆಲ್ಲರನು ಕಂಡಿರ್ದ್ದ; ಆ ಕವಿಯ
ಕನ್ನಡಿಗರೆಲ್ಲ ಕಣ್ಣಾರೆ ಕಂಡಿರ್ದರು.

ಆ ಕವಿಯ ನಗೆನುಡಿಯ ಕೇಳಿ ನಕ್ಕಿರ್ದ್ದರು;
ಆತನಾ ಕಿಡಿನುಡಿಗೆ ನಡುಕ ಪಡೆದಿರ್ದ್ದರು,
ಅವನ ಬೆಡಗನು ಕೇಳಿ ಬೆರಗುವಟ್ಟಿರ್ದ್ದರು;
ಅವನ ಜೋಯಿಸ ಕೇಳಿ ಸೊಬಗನಾಂತಿರ್ದ್ದರು
ಅವನ ವೈದ್ಯಕದಿಂದ ಬೇನೆಯನು ನೀಗಿರ್ದ್ದ-
ರವನ ರಸವೈದ್ಯದಲ್ಲಿ ಕಲ್ಲು-ಕಬ್ಬಿಣವನೂ
ಕಾಂಚನವನಾಗಿ ಮಾಡುವ ಬಗೆಯಲಿರ್ದ್ದರು.
ಭವ್ಯ ದೇಹದ ಬ್ರಹ್ಮಚಾರಿ ಸರ್ವಜ್ಞನನು
ಬಲ್ಲದವರಿರಲಿಲ್ಲ ನಾಡಿನೋಳು….ಆದರೆ –
ಯಾರ ಶಾಪವೋ ಏನೋ, ಆ ಅಮರ ಕವಿಗೆ !
ಒಮ್ಮೆಲೇ ಅವನ ಮೈ ಅಳಿದು ಹೋಯಿತು; ಕೆಚ್ಚು-
ಗಟ್ಟಿರ್ದ್ದ ಅವನೊಡಲು ನುಚ್ಚು ನೂರಾಯಿತು !
ಆ ಊರಲೊಂದು ಚೂರ್, ಈ ಊರಲೊಂದು ಚೂರ್;
ಹಳ್ಳಿಗೊಂದೊಂದು ಚೂರ್, ಹಟ್ಟಿಗೊಂದೊಂದು ಚೂರ್;
ಹೊಲೆಯರಲಿ ತುಣುಕೊಂದು, ಹಾರುವರಲಿನ್ನೊಂದು,
ಕುರುಬ ಕುಂಬರ-ಜೇಡ-ಕಮ್ಮರರಲೊಂದೊಂದು;
ಒಕ್ಕಲಿಗರಲ್ಲಿ, ಆ ಲೆಕ್ಕಿಗರ ಮನೆಯಲ್ಲಿ-
ಮಕ್ಕಳಾಟಕೆ ಸಿಕ್ಕಿ ದಿಕ್ಕು ದಿಕ್ಕಿಗೆ ಚೂರು
ಸಿಕ್ಕಿದೊಲು ಚೆದರಿ ಸರ್ವಜ್ಞ ಮೂರ್ತಿಯ ಮೂರ್ತಿ
ಕಾಣದಂತಾಗಿತ್ತು ಕನ್ನಡದ ನಾಡಿನಲಿ.

ಯಾರ ಶಾಪವೋ ಕಾಣೆ, ಆ ಅಮೃತ ಮೂರುತಿಗೆ !
ಮೂರ್ತಿ ಅಳಿದರೆಯು ಆತನ ಕೀರ್ತಿ ನಾಡಿನಲಿ
ಸುಳಿದಾಡುತಿತ್ತು; ಸರ್ವಜ್ಞನಾ ಸವಿಹೆಸರು
ಕನ್ನಡದ ಬಾಯಿ-ಕಿವಿಗಳಲ್ಲಿ ಮನೆ ಮಾಡಿತ್ತು.
ಅಮರಕವಿ ಸರ್ವಜ್ಞ ಶಾಪಕ್ಕೆ ಸಾಯುವನೆ ?
ಶಾಪಮೋಚನ ಕಾಲ ಸಂದುಬಂದಿತು; ಕಾಲ
ತಾನೆ ಮಾಡುವನೇನು ತನ್ನ ಕಜ್ಜವನೆಲ್ಲ?
ಯಾವುದೋ ಹಿರಿಯ ಜೀವವನೊಂದ ಕರೆಯುವನು;
ಅದರ ಉಸಿರಲಿ ತನ್ನ ಉಸಿರನ್ನು ಊದುವನು.
ತನ್ನ ಕಜ್ಜವನೆಲ್ಲ ಮಾಡಿಸುವನದರಿಂದ.
ಆ ಜೀವವನೆ ‘ಮಹಾಪುರುಷ’ ಎನ್ನುತ ಲೋಕ
ಕೊಂಡಾಡಿ ಕೊನೆವಂತೆ ಮಾಡುತಿಹನಾತ.

ಸರ್ವಜ್ಞನಾ ನುಚ್ಚು ನೂರಾದ ಕಾಯವನು
ಮರಳಿ ಸಂಧಿಸಿ ಮೂರ್ತಿಯನ್ನು ನಿರ್ಮಿಸಲೆಂದು
ಕಾಲನಾರಿಸಿದ ಕನ್ನಡದೊಂದು ಹಿರಿಜೀವ
ದಿಕ್ಕು-ದಿಕ್ಕಿಗೆ ಚೆದರಿಬಿದ್ದಿರ್ದ್ದ ಕವಿರಾಯ-
ನಾ ಮೈಯ ನುಚ್ಚುನೂರುಗಳನೊರ್ಗೂಡಿಸುತ,
ತನ್ನ ಹಿರಿಮೆಯ ತಪದ ಸಂಜೀವಶಕ್ತಿಯಲಿ
ಸರ್ವಜ್ಞ ಕವಿಗೆ ಉಸಿರನ್ನಿತ್ತಿತಾ ಜೀವ.
ಮೆಯ್ಯಳಿದ ಕವಿ ಮತ್ತೆ ಮೆಯ್ಯಾಂತು ನಿಲ್ಲುವಂ-
ದದಿ ಮಾಡಿತಾ ಹಿರಿಯ ಜೀವ; ಈ ದಿನ ಮತ್ತೆ
ಸರ್ವಜ್ಞ ಮರಳಿ ಮಾತಾಡುತಿಹ ಮೈಗೊಂಡು.

ಕನ್ನಡಕೆ ಸರ್ವಜ್ಞ ಕವಿಯನೊದವಿಸಿಕೊಟ್ಟ
ಹಿರಿಜೀವ ಕನ್ನಡದ ಸೌಭಾಗ್ಯವದು ಸತ್ಯ !
ಕಾಲನೇ ಒಪ್ಪಿರಲು ಅದರ ಹಿರಿಮೆಯನಿನ್ನು
ಕನ್ನಡರು ಒಪ್ಪದೇನಿರುವರೇ? ಆ ಜೀವ
ಕನ್ನಡದ ನಾಡಿನಲಿ ಬಹುಕಾಲ ಬಾಳಲಿ !
ಆಳಾದ ಕನ್ನಡವು ಅರಸಾಗಿ ಬಾಳ್ವುದನು
ಕಣ್ಣಾರೆ ಕಂಡು ಸುಖ, ಶಾಂತಿಯನು ತಾಳಲಿ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...