Home / ಕವನ / ಕವಿತೆ / ಮಸ್ಸೂರಿ

ಮಸ್ಸೂರಿ

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ
ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು
ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು
ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ!

ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು
ಕುಳಿತಿದ್ದೆವು ಕಾರಿನಲ್ಲಿ ಅಪಘಾತಗಳ ನೋಟ ಅಲ್ಲಲ್ಲಿ
ನಮ್ಮ ಚಾಲಕನೂ ತೋರಿಸುತ್ತಿದ್ದ ತನ್ನ ಕೈಚಳಕ
“ಇಂಥ ಹಾದಿಗಳೇ ಹೀಗೆ!” ಎಂದುಕೊಂಡೆವು ನಮ್ಮೊಳಗೆ

ಸುತ್ತಿ ಬಳಸಿ ಹತ್ತಿ ಕುಳಿತಲ್ಲೆ ತಲೆ ಸುತ್ತಿ
ಮುಗಿಯುವುದೆಂದು ಈ ಆರೋಹಣವೆಂದು
ನೊಡಿದರೆ ಎಲಾ! ಎದುರು ಮಸ್ಸೂರಿಯ ಬಜಾರು
ಇನ್ನು ನಮ್ಮನ್ನು ಹಿಡಿದು ನಿಲ್ಲಿಸುವವರಾರು?

ಬಿಟ್ಟು ನಮ್ಮೂರ ಬಂದಿದ್ದೆವು ಬಹಳ ದೂರ
ಈಗೇಕೆ ಆ ಗೊಡವೆ ಇಂಥ ಬೀದಿಗಳ ನಡುವೆ
ಬೇಕಾದವರು ಹೊರಡಿ ಹೇಸರಗತ್ತೆಗಳ ಗಾಡಿ
ಪಾದಚಾರಿಗಳಾಗಿಯೆ ನಾವು ಇಲ್ಲಿ ಸಂಚರಿಸುವೆವು

ಕೊಡು ಎವೆಗೆ ಎವೆಯ ನೆಲೆ ಬೆಟ್ಟದ ಚೆಲುವೆ
ಇಲ್ಲಿಯ ತನಕವು ಬಂದೆ ನಿನ್ನ ನೋಡಲೆಂದೆ
ಏನ ಮಾರುವೆ ನನಗೆ ಬೇಕಾದ್ದು ನಿನ್ನ ನಗೆ
ಮಾರುವೆಯ ನನಗೊಂದು ಮಂಜಿನರಮನೆಯ ?

ಕಟಾಂಜಣದ ಬಳಿ ಸಿಗರೇಟಿನ ಹೊಗೆಯುಗುಳಿ
ನೋಡಿದೆನು ಡೆಹರಾಡೂನು ಆಚೆಗಿನ್ನೊಂದು ಸಾನು
ನಿಂತಿದ್ದೆನಲ್ಲಿ ಮರೆತು ಹೀಗೆಷ್ಟು ಹೊತ್ತು
ಬಂದ ದಾರಿಯ ಪಯಣ ಉಳಿದಿತ್ತು ಅವರೋಹಣ

ಆವರಿಸಿದಾಗ ಕತ್ತಲು ತಲಪಿದ್ದೆವು ಕೆಳಗಿನ ತಪ್ಪಲು
ಎಲ್ಲಿ ಮುಂಜಾನೆ ಎಲ್ಲಿ ನನ್ನ ಮಂಜಿನರಮನೆ ?
ಎದ್ದೆ ಹಾಸಿಗೆಯಿಂದ ಧಾವಿಸಿದೆ ಅಂಗಳದ ಬದಿಗೆ
ತೇಲಿ ಹೋಗುತ್ತಿತ್ತು ಅದು ಮಸ್ಸೂರಿಯ ಕಡೆಗೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...