Home / ಕವನ / ಕವಿತೆ / ಮಸ್ಸೂರಿ

ಮಸ್ಸೂರಿ

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ
ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು
ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು
ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ!

ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು
ಕುಳಿತಿದ್ದೆವು ಕಾರಿನಲ್ಲಿ ಅಪಘಾತಗಳ ನೋಟ ಅಲ್ಲಲ್ಲಿ
ನಮ್ಮ ಚಾಲಕನೂ ತೋರಿಸುತ್ತಿದ್ದ ತನ್ನ ಕೈಚಳಕ
“ಇಂಥ ಹಾದಿಗಳೇ ಹೀಗೆ!” ಎಂದುಕೊಂಡೆವು ನಮ್ಮೊಳಗೆ

ಸುತ್ತಿ ಬಳಸಿ ಹತ್ತಿ ಕುಳಿತಲ್ಲೆ ತಲೆ ಸುತ್ತಿ
ಮುಗಿಯುವುದೆಂದು ಈ ಆರೋಹಣವೆಂದು
ನೊಡಿದರೆ ಎಲಾ! ಎದುರು ಮಸ್ಸೂರಿಯ ಬಜಾರು
ಇನ್ನು ನಮ್ಮನ್ನು ಹಿಡಿದು ನಿಲ್ಲಿಸುವವರಾರು?

ಬಿಟ್ಟು ನಮ್ಮೂರ ಬಂದಿದ್ದೆವು ಬಹಳ ದೂರ
ಈಗೇಕೆ ಆ ಗೊಡವೆ ಇಂಥ ಬೀದಿಗಳ ನಡುವೆ
ಬೇಕಾದವರು ಹೊರಡಿ ಹೇಸರಗತ್ತೆಗಳ ಗಾಡಿ
ಪಾದಚಾರಿಗಳಾಗಿಯೆ ನಾವು ಇಲ್ಲಿ ಸಂಚರಿಸುವೆವು

ಕೊಡು ಎವೆಗೆ ಎವೆಯ ನೆಲೆ ಬೆಟ್ಟದ ಚೆಲುವೆ
ಇಲ್ಲಿಯ ತನಕವು ಬಂದೆ ನಿನ್ನ ನೋಡಲೆಂದೆ
ಏನ ಮಾರುವೆ ನನಗೆ ಬೇಕಾದ್ದು ನಿನ್ನ ನಗೆ
ಮಾರುವೆಯ ನನಗೊಂದು ಮಂಜಿನರಮನೆಯ ?

ಕಟಾಂಜಣದ ಬಳಿ ಸಿಗರೇಟಿನ ಹೊಗೆಯುಗುಳಿ
ನೋಡಿದೆನು ಡೆಹರಾಡೂನು ಆಚೆಗಿನ್ನೊಂದು ಸಾನು
ನಿಂತಿದ್ದೆನಲ್ಲಿ ಮರೆತು ಹೀಗೆಷ್ಟು ಹೊತ್ತು
ಬಂದ ದಾರಿಯ ಪಯಣ ಉಳಿದಿತ್ತು ಅವರೋಹಣ

ಆವರಿಸಿದಾಗ ಕತ್ತಲು ತಲಪಿದ್ದೆವು ಕೆಳಗಿನ ತಪ್ಪಲು
ಎಲ್ಲಿ ಮುಂಜಾನೆ ಎಲ್ಲಿ ನನ್ನ ಮಂಜಿನರಮನೆ ?
ಎದ್ದೆ ಹಾಸಿಗೆಯಿಂದ ಧಾವಿಸಿದೆ ಅಂಗಳದ ಬದಿಗೆ
ತೇಲಿ ಹೋಗುತ್ತಿತ್ತು ಅದು ಮಸ್ಸೂರಿಯ ಕಡೆಗೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...