Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.)


‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ,
ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ,
ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು,
ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು,
ಅಳತೆಯಿಲ್ಲದ ಪಳುಕು-
ಸೆಳೆಯಂತಿರುವ ತನ್ನ
ಹೊಳೆವ ಕೈ ಕೆಳಗಿಳುಹಿ,
ಹೊನ್ನ ಹುಡಿಯನ್ನು ಹಸನೆಣ್ಣೆಯಲ್ಲಿ ಹೊರೆದು,
ಬಣ್ಣ ಬರೆದನು ಇಳೆಗೆ ಕಲೆಯ ನೆಲೆಯರಿದು.


ಬೆಳಕಿನೊಂದಿಗೆ ರವಿಯು ಬಿರುಬಿಸಿಲ ಪಸರಿಸಿರೆ
ಝಳತಾಗಿ ಜೀವ ಕುಲ ತಳಮಳಿಸುತಿರಲು, ಪೆರೆ
ಬೆಳಕಿನೊಡವೆರಸಿ ತನ್ನೊಡಲಿನಮೃತವ ಸುರಿಸಿ,
ಎಳನಗೆಯ ಮಲ್ಲಿಗೆಯ ಅರಳುಗಳ ಮಳೆಗರಿಸಿ
ನೆಲಕೆ ತಂಪನು ನೀಡಿ,
ಜೀವಿಗಳ ಮೈ ತೀಡಿ,
ಸುಖ-ಶಾಂತಿಗಳನೂಡಿ,
ಜಗವನೆಲ್ಲವ ನಗಿಸಿ ಸೊಗಸನೊಂದಿರುವ-
ನಗುನಗುತ ಬಾನ ತೊರೆಯೊಳು ತೇಲುತಿರುವ.


ಏನಿದೇನಿದು ಚಿತ್ರ? ಬಾನೊಳಾಡುವ ಪೆರೆಯು
ಹೀನಕಳೆಯವನಾಗುತಿಹನೇಕೆ? ಅಚ್ಚರಿಯು!
ನೋಡು ನೋಡುವುದರೊಳೆ ಎನಿತು ಇದು ಮಾರ್‍ಪಾಡು?
ಮೋಡ ನಸುವೂ ಇಲ್ಲ, ಆದರೆಯು ಈ ಪಾಡು!
ಚೆಲುವು ಜಾರುತ್ತಲಿದೆ,
ಹೊಳಪು ಹಾರುತ್ತಲಿದೆ,
ಕೊಳೆಯು ಹೇರುತ್ತಲಿದೆ-
ಬಾಡಿರುವ ಹೊನ್ನರಳ ತೆರ ತೋರುತಿಹನು-
ನೋಡುಗರ ಕಣ್- ಮನದ ತಣಿವ ಕಳೆದಿಹನು.


ಅರಿವು ಮಿರುಗುವ ಎದೆಯು ಮುನಿಯ ಮನವಲ್ಲಾಡೆ,
ಮರೆವು ಅವನನು ಮುಸುಕುವಂತೆ-ಪೆರೆಮೊಗ ಬಾಡೆ,
ಎದ್ದು ಹೊರಟಿದೆ ನೆಲದೊಳಿದ್ದ ಹೊಂಬಣ್ಣವದು;
ಇದ್ದಲಿನ ಹುಡಿಯೆರಚಿದಂತೆ ಕತ್ತಲೆ ಕವಿದು
ಎತ್ತಲೂ ಹರಡಿಹುದು,
ಗೊತ್ತಾಗದೇನೊಂದು,
ಹೊತ್ತು ಎಂತಹದಿಂದು?
ಹೀಗೇತಕಾಗಿದೆಯೊ! ಹಾಂ! ತಿಳಿದೆ, ಅಹುದು!
ಈಗ ಚಂದ್ರನಿಗೆ ಗ್ರಹಣದ ಸಮಯವಿಹುದು!


ಗ್ರಹಣಸಮಯವು ಇಹುದು; ಕುಹಕಿ ಯಹ ಗರವೊಂದು
ಗುಹೆಯಂತೆ ಬಾಯ್ದೆರೆದು ನೊಣೆಯಲಿಕ ನಿಂದಿಹುದು.
ಎಂತಲೇ ತಿಂಗಳಿನ ಕಾಂತಿ ಕುಂದುತಲಿಹುದು-
ಇಂತಹನ ಹಿಂಸಿಸುವುದೆಂಥ ಗರವಿರಬಹುದು?
ಚೆಲುವಿಕೆಗೆ ನೆಲೆಯಿವನೆ,
ಒಲವಿನಾ ಸೆಲೆಯಿವನೆ,
ಕಳೆಯ ಹಿರಿಹೊಳೆಯಿವನೆ!
ಅಯ್ಯೋ, ಏನನ್ಯಾಯ! ಈತಗೂ ಹಗೆಯೆ?
ಅಯ್ಯ! ಜಗದೊಡೆಯ! ನಿನಗೆಲ್ಲವಿದು ನಗೆಯೆ?


ಕೇಡು- ಹಗೆ- ಪೀಡೆ-ಗರ ಕಾಡಬಹುದಾರನ್ನು?
ಖೋಡಿ-ಕೇಡಿಗ-ಕವಡಿಯಾದ ನಾಡಾಡಿಯನು!
ಜಗದಾಪ್ತನೀತ, ಇವನಿಗು ಹಗೆಗಳಿಹರೇನು?
ಜಗವನೇ ಸೊಗದೊಳಿಡೆ ಹಗಲಿರುಳು ಹವಣಿಪನು.
ಎಳೆಯರೆಲ್ಲರು ಇವನ
ಕಳೆಗಳಿಗೆ ಮನಸೋತು,
ಒಲವಿನೊಲವಾಗಿರುವ
ತಮ್ಮ ತಾಯಿಗೆ ತಮ್ಮನೆಂದು ತಿಳಿಯುವರು-
‘ನಮ್ಮ ಚಂದಮಾಮ’ ಎನುತ ಹಿಗ್ಗುವರು.


ಕೊಡುಗೂಸುಗಳು ಇವನ ಬೆಡಗು-ಗಾಡಿಗೆ ಬೆರೆತು,
ಪಡೆಯಲಿಹ ಒಡನಾಡಿ ಸೆರೆಯಂತೆ ಇರಲೆಂದು,
ಮನದೆರಕದಿಂದ ಮೈ ಮರೆದು ಲಜ್ಜೆ ಯನುಳಿದು
‘ಇನಿಯ ಚಂದ್ರಮರಾಯ!’ ಎಂದು ಒಕ್ಕಣಿಸುವರು.
ನಲ್ಲ-ನಲ್ಲೆಯರೊಂದಿ
ಚೆಲ್ಲಾಟಗಳನಾಡೆ-
ಉಲ್ಲಸದೊಳೋಲಾಡೆ-
ಎಲ್ಲರೀ ಚೆಲ್ಲಿಗನ ಕೆಳೆಯ ಬಯಸುವರು-
‘ಇಲ್ಲ ಸರಿ ಇದಕೆ’ನುವ ಸೊಗವ ಸಾರುವರು.


ಬಾಳುವೆಯ ತಿರುಳೆಂದು ತಿಳಿದ ಹಸುಮಕ್ಕಳನು
ಹೇಳಲಾಗದ ಹೃದಯದೊಲವಿಂದೆ ತಾಯದಿರು
ಬಲು ಮುದ್ದು ಮಾಡಿ ಕರೆಯುವರಾವ ಹೆಸರಿಂದೆ?
‘ಚೆಲುವ ಚೆಂದಿರ!’ ಎಂದೆ-ಬೇರೆ ಇನ್ನಾವುದಿದೆ?
ಎಲ್ಲರೊಲವಿನ ಸರಿಗೆ
ಸಲ್ಲುವಂತೆಯೆ ತೂಗೆ
ಇಲ್ಲವೀತನ ಹಾಗೆ!
ಮಾತಿನಾಚೆಯ ಬಗೆಯ ಮೌನಗೀತವ ಹಾಡಿ,
ಈತ ಜಡಗಳನು ಸಹ ನಲಿಸುವನುಸಿರ ನೀಡಿ.


‘ಸುರರ ಗರುವಿಕೆಯೇನು? ನರರ ಕಿರುಕುಳವೇನು?
ಸರಿಯೆ ಎಲ್ಲರು!’ ಎಂಬ ಸಮದರ್ಶಿ ಚಂದಿರನು-
ಸುರಿಸುತಿರುವನು ನಿರುತ ಧರೆಗೆ ಸವಿಸೊದೆಯನ್ನು ;
ಸರಿಹೋಲುವರಾರು ಈ ಯೋಗಿರಾಜನನು?
ಇವನೊಡನೆಯೂ ಹಗೆಯೆ?
ಇವನಲಿಯು ಕೀಳ್‌ಬಗೆಯೆ?
ಇವನಿಗೂ ತಗುಬಗಿಯೆ?
ರವಿಯ ರಾಜ್ಯದೊಳು ಕಾವಳದ ಹಾವಳಿಯೆ ?
ಸುವಿಮುಕ್ತ ಜೀವರಿಗು ಭವದ ಬಳಲಿಕೆಯೆ ?

೧೦
ಭಂಗಕೊಳಗಾಗಿಸಲು ತಿಂಗಳಿನ ತಪ್ಪೇನು ?
ಕೊಂಗಿಗಳು ಒಪ್ಪು-ತಪ್ಪುಗಳ ನೋಡುವರೇನು ?
ಬಹುಜನಕೆ ಬೇಕಾದ ಮಹಿಮನನು ಕಂಡೊಂದು
ಕುಹಕಿ ತಾ ಸಹಿಸದೆಯೆ ಬರಿದೆ ವೈರವ ತಳೆದು
ಖೋಡಿಗಳೆಯುತೆ ಹಳಿದು,
ಕಾಡಿ ಪೀಡಿಸುವುದಿದು
ರೂಢಿನಿಯಮವೆ ಇಹುದು.
ಹಾಲಗಡಿಗೆಯಲಿ ಹುಳಿಬೆರಸಿ ಹಿಗ್ಗುವುದು,
ಕೀಳುಜೀವದ ಹುಟ್ಟು ಗುಣವೆ ಆಗಿಹುದು.

ನೊಣೆಯಲಿಗೆ ಬಂದಿರುವ ಹಗೆಯನ್ನು ಹಣಿದು,
ಮಿನುಗದಿಹನೇ ಮುನ್ನಿನಂತೆ ಪೂರ್ಣೇಂದು?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...