Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.)


‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ,
ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ,
ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು,
ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು,
ಅಳತೆಯಿಲ್ಲದ ಪಳುಕು-
ಸೆಳೆಯಂತಿರುವ ತನ್ನ
ಹೊಳೆವ ಕೈ ಕೆಳಗಿಳುಹಿ,
ಹೊನ್ನ ಹುಡಿಯನ್ನು ಹಸನೆಣ್ಣೆಯಲ್ಲಿ ಹೊರೆದು,
ಬಣ್ಣ ಬರೆದನು ಇಳೆಗೆ ಕಲೆಯ ನೆಲೆಯರಿದು.


ಬೆಳಕಿನೊಂದಿಗೆ ರವಿಯು ಬಿರುಬಿಸಿಲ ಪಸರಿಸಿರೆ
ಝಳತಾಗಿ ಜೀವ ಕುಲ ತಳಮಳಿಸುತಿರಲು, ಪೆರೆ
ಬೆಳಕಿನೊಡವೆರಸಿ ತನ್ನೊಡಲಿನಮೃತವ ಸುರಿಸಿ,
ಎಳನಗೆಯ ಮಲ್ಲಿಗೆಯ ಅರಳುಗಳ ಮಳೆಗರಿಸಿ
ನೆಲಕೆ ತಂಪನು ನೀಡಿ,
ಜೀವಿಗಳ ಮೈ ತೀಡಿ,
ಸುಖ-ಶಾಂತಿಗಳನೂಡಿ,
ಜಗವನೆಲ್ಲವ ನಗಿಸಿ ಸೊಗಸನೊಂದಿರುವ-
ನಗುನಗುತ ಬಾನ ತೊರೆಯೊಳು ತೇಲುತಿರುವ.


ಏನಿದೇನಿದು ಚಿತ್ರ? ಬಾನೊಳಾಡುವ ಪೆರೆಯು
ಹೀನಕಳೆಯವನಾಗುತಿಹನೇಕೆ? ಅಚ್ಚರಿಯು!
ನೋಡು ನೋಡುವುದರೊಳೆ ಎನಿತು ಇದು ಮಾರ್‍ಪಾಡು?
ಮೋಡ ನಸುವೂ ಇಲ್ಲ, ಆದರೆಯು ಈ ಪಾಡು!
ಚೆಲುವು ಜಾರುತ್ತಲಿದೆ,
ಹೊಳಪು ಹಾರುತ್ತಲಿದೆ,
ಕೊಳೆಯು ಹೇರುತ್ತಲಿದೆ-
ಬಾಡಿರುವ ಹೊನ್ನರಳ ತೆರ ತೋರುತಿಹನು-
ನೋಡುಗರ ಕಣ್- ಮನದ ತಣಿವ ಕಳೆದಿಹನು.


ಅರಿವು ಮಿರುಗುವ ಎದೆಯು ಮುನಿಯ ಮನವಲ್ಲಾಡೆ,
ಮರೆವು ಅವನನು ಮುಸುಕುವಂತೆ-ಪೆರೆಮೊಗ ಬಾಡೆ,
ಎದ್ದು ಹೊರಟಿದೆ ನೆಲದೊಳಿದ್ದ ಹೊಂಬಣ್ಣವದು;
ಇದ್ದಲಿನ ಹುಡಿಯೆರಚಿದಂತೆ ಕತ್ತಲೆ ಕವಿದು
ಎತ್ತಲೂ ಹರಡಿಹುದು,
ಗೊತ್ತಾಗದೇನೊಂದು,
ಹೊತ್ತು ಎಂತಹದಿಂದು?
ಹೀಗೇತಕಾಗಿದೆಯೊ! ಹಾಂ! ತಿಳಿದೆ, ಅಹುದು!
ಈಗ ಚಂದ್ರನಿಗೆ ಗ್ರಹಣದ ಸಮಯವಿಹುದು!


ಗ್ರಹಣಸಮಯವು ಇಹುದು; ಕುಹಕಿ ಯಹ ಗರವೊಂದು
ಗುಹೆಯಂತೆ ಬಾಯ್ದೆರೆದು ನೊಣೆಯಲಿಕ ನಿಂದಿಹುದು.
ಎಂತಲೇ ತಿಂಗಳಿನ ಕಾಂತಿ ಕುಂದುತಲಿಹುದು-
ಇಂತಹನ ಹಿಂಸಿಸುವುದೆಂಥ ಗರವಿರಬಹುದು?
ಚೆಲುವಿಕೆಗೆ ನೆಲೆಯಿವನೆ,
ಒಲವಿನಾ ಸೆಲೆಯಿವನೆ,
ಕಳೆಯ ಹಿರಿಹೊಳೆಯಿವನೆ!
ಅಯ್ಯೋ, ಏನನ್ಯಾಯ! ಈತಗೂ ಹಗೆಯೆ?
ಅಯ್ಯ! ಜಗದೊಡೆಯ! ನಿನಗೆಲ್ಲವಿದು ನಗೆಯೆ?


ಕೇಡು- ಹಗೆ- ಪೀಡೆ-ಗರ ಕಾಡಬಹುದಾರನ್ನು?
ಖೋಡಿ-ಕೇಡಿಗ-ಕವಡಿಯಾದ ನಾಡಾಡಿಯನು!
ಜಗದಾಪ್ತನೀತ, ಇವನಿಗು ಹಗೆಗಳಿಹರೇನು?
ಜಗವನೇ ಸೊಗದೊಳಿಡೆ ಹಗಲಿರುಳು ಹವಣಿಪನು.
ಎಳೆಯರೆಲ್ಲರು ಇವನ
ಕಳೆಗಳಿಗೆ ಮನಸೋತು,
ಒಲವಿನೊಲವಾಗಿರುವ
ತಮ್ಮ ತಾಯಿಗೆ ತಮ್ಮನೆಂದು ತಿಳಿಯುವರು-
‘ನಮ್ಮ ಚಂದಮಾಮ’ ಎನುತ ಹಿಗ್ಗುವರು.


ಕೊಡುಗೂಸುಗಳು ಇವನ ಬೆಡಗು-ಗಾಡಿಗೆ ಬೆರೆತು,
ಪಡೆಯಲಿಹ ಒಡನಾಡಿ ಸೆರೆಯಂತೆ ಇರಲೆಂದು,
ಮನದೆರಕದಿಂದ ಮೈ ಮರೆದು ಲಜ್ಜೆ ಯನುಳಿದು
‘ಇನಿಯ ಚಂದ್ರಮರಾಯ!’ ಎಂದು ಒಕ್ಕಣಿಸುವರು.
ನಲ್ಲ-ನಲ್ಲೆಯರೊಂದಿ
ಚೆಲ್ಲಾಟಗಳನಾಡೆ-
ಉಲ್ಲಸದೊಳೋಲಾಡೆ-
ಎಲ್ಲರೀ ಚೆಲ್ಲಿಗನ ಕೆಳೆಯ ಬಯಸುವರು-
‘ಇಲ್ಲ ಸರಿ ಇದಕೆ’ನುವ ಸೊಗವ ಸಾರುವರು.


ಬಾಳುವೆಯ ತಿರುಳೆಂದು ತಿಳಿದ ಹಸುಮಕ್ಕಳನು
ಹೇಳಲಾಗದ ಹೃದಯದೊಲವಿಂದೆ ತಾಯದಿರು
ಬಲು ಮುದ್ದು ಮಾಡಿ ಕರೆಯುವರಾವ ಹೆಸರಿಂದೆ?
‘ಚೆಲುವ ಚೆಂದಿರ!’ ಎಂದೆ-ಬೇರೆ ಇನ್ನಾವುದಿದೆ?
ಎಲ್ಲರೊಲವಿನ ಸರಿಗೆ
ಸಲ್ಲುವಂತೆಯೆ ತೂಗೆ
ಇಲ್ಲವೀತನ ಹಾಗೆ!
ಮಾತಿನಾಚೆಯ ಬಗೆಯ ಮೌನಗೀತವ ಹಾಡಿ,
ಈತ ಜಡಗಳನು ಸಹ ನಲಿಸುವನುಸಿರ ನೀಡಿ.


‘ಸುರರ ಗರುವಿಕೆಯೇನು? ನರರ ಕಿರುಕುಳವೇನು?
ಸರಿಯೆ ಎಲ್ಲರು!’ ಎಂಬ ಸಮದರ್ಶಿ ಚಂದಿರನು-
ಸುರಿಸುತಿರುವನು ನಿರುತ ಧರೆಗೆ ಸವಿಸೊದೆಯನ್ನು ;
ಸರಿಹೋಲುವರಾರು ಈ ಯೋಗಿರಾಜನನು?
ಇವನೊಡನೆಯೂ ಹಗೆಯೆ?
ಇವನಲಿಯು ಕೀಳ್‌ಬಗೆಯೆ?
ಇವನಿಗೂ ತಗುಬಗಿಯೆ?
ರವಿಯ ರಾಜ್ಯದೊಳು ಕಾವಳದ ಹಾವಳಿಯೆ ?
ಸುವಿಮುಕ್ತ ಜೀವರಿಗು ಭವದ ಬಳಲಿಕೆಯೆ ?

೧೦
ಭಂಗಕೊಳಗಾಗಿಸಲು ತಿಂಗಳಿನ ತಪ್ಪೇನು ?
ಕೊಂಗಿಗಳು ಒಪ್ಪು-ತಪ್ಪುಗಳ ನೋಡುವರೇನು ?
ಬಹುಜನಕೆ ಬೇಕಾದ ಮಹಿಮನನು ಕಂಡೊಂದು
ಕುಹಕಿ ತಾ ಸಹಿಸದೆಯೆ ಬರಿದೆ ವೈರವ ತಳೆದು
ಖೋಡಿಗಳೆಯುತೆ ಹಳಿದು,
ಕಾಡಿ ಪೀಡಿಸುವುದಿದು
ರೂಢಿನಿಯಮವೆ ಇಹುದು.
ಹಾಲಗಡಿಗೆಯಲಿ ಹುಳಿಬೆರಸಿ ಹಿಗ್ಗುವುದು,
ಕೀಳುಜೀವದ ಹುಟ್ಟು ಗುಣವೆ ಆಗಿಹುದು.

ನೊಣೆಯಲಿಗೆ ಬಂದಿರುವ ಹಗೆಯನ್ನು ಹಣಿದು,
ಮಿನುಗದಿಹನೇ ಮುನ್ನಿನಂತೆ ಪೂರ್ಣೇಂದು?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...