Home / ಕವನ / ಕವಿತೆ / ಆ ಕನ್ನಡಿ ಬೇಕೆಂದರೆ……

ಆ ಕನ್ನಡಿ ಬೇಕೆಂದರೆ……


ನನಗಾಗಿ ನನ್ನದೇ ಒಂದು
ಕನ್ನಡಿ ಬೇಕೆಂಬ
ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ

ಕನ್ನಡಿಯೇ ಇಲ್ಲವೆಂದಲ್ಲ
ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ
ಅವರಿಗಿಷ್ಟದ ಪಾದರಸ
ಇವರಿಗಿಷ್ಟದ ಮಾಪಕ
ಅವರಿಗೆ ಬೇಕೆನಿಸಿದಷ್ಟು ಹೊತ್ತು
ಕಾಯಿಸಿ ಎರಕ ಹೊಯ್ದು
ಕನ್ನಡಿ ಮಾಡಿ
ಕುಳ್ಳಿರಿಸಿದ್ದಾರೆ ಕಟ್ಟು ಹಾಕಿ.
ಬಣ್ಣ ಬಣ್ಣದ ಕನ್ನಡಿ
ಪ್ರತಿಫಲಿಸುವುದೇ ಇಲ್ಲ
ಕಟ್ಟು ಕನ್ನಡಿ!

ಆ ಬಣ್ಣದ ಕನ್ನಡಿಯಲ್ಲೇ
ನಾವೂ ನೋಡಿಕೊಳ್ಳಬೇಕೆಂದು
ಅದರಲ್ಲಿ ನೋಡಿಕೊಂಡರೆ
ಇದೇನು ಕನ್ನಡಿಯೋ
ಅವರದೇ ಭಾವಚಿತ್ರವೋ?
ಕಣ್ಕಟ್ಟೋ?

ನನ್ನದೇ ಕನ್ನಡಿಯಿದ್ದರೆ
ಇಡಿಯಾಗಿ ಬಿಡಿಯಾಗಿ
ನಾನು, ನನ್ನ ರೆಕ್ಕೆ ಪುಕ್ಕ
ಒಳಗಿನ ಸೊಕ್ಕು
ಮುರುಕು ಮುಳ್ಳು
ಅರಳು ಮುದುಡು
ಇಂಚಿಂಚೂ ನೋಡಿಕೊಳ್ಳುವ
ಹಂಬಲದಲಿ ಕಾದಿದ್ದೇನೆ
ದಾರಿ ತೋರು ಗುರುವೇ.


ನಿನ್ನ ತೋರುವ
ಸಿದ್ದ ಕನ್ನಡಿ
ಎಲ್ಲಿಯೂ ಎಂದಿಗೂ
ಬಿಕರಿಗೆ ಸಿಕ್ಕುವುದಿಲ್ಲ ಕಂದ
ಕನ್ನಡಿ ಬೇಕೇಬೇಕೆಂದರೆ
ಇರುವುದೊಂದೇ ದಾರಿ
ತಕ್ಕಡಿಯಲಿ ಪ್ರತಿಕ್ಷಣ ನಿನ್ನನಿಟ್ಟು
ತೂಗಿ ಅಳತೆ ಮಾಡುತ್ತಾ
ಕಣ ಕಣಗಳಿಗೂ
ಪಾರದರ್ಶಕವಾಗಿಸುವ ಲೇಪ ಬಳಿದು
ಆ ನೋವಿಗೆ ಕಾವಿಗೆ
ನಿನ್ನೊಳಗಿನದೆಲ್ಲ ಘನವನೂ
ಪ್ರತಿಫಲನ ಮೂಡುವವರೆಗೆ
ಕರಗಿಸಿ ಕರಗಿಸಿ ತಿಳಿಯಾಗಿಸಬೇಕು.
ಕಂದ, ನೀನೇ ಕನ್ನಡಿಯಾಗಬೇಕು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...