Home / ಕವನ / ಕವಿತೆ / ಆ ಕನ್ನಡಿ ಬೇಕೆಂದರೆ……

ಆ ಕನ್ನಡಿ ಬೇಕೆಂದರೆ……


ನನಗಾಗಿ ನನ್ನದೇ ಒಂದು
ಕನ್ನಡಿ ಬೇಕೆಂಬ
ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ

ಕನ್ನಡಿಯೇ ಇಲ್ಲವೆಂದಲ್ಲ
ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ
ಅವರಿಗಿಷ್ಟದ ಪಾದರಸ
ಇವರಿಗಿಷ್ಟದ ಮಾಪಕ
ಅವರಿಗೆ ಬೇಕೆನಿಸಿದಷ್ಟು ಹೊತ್ತು
ಕಾಯಿಸಿ ಎರಕ ಹೊಯ್ದು
ಕನ್ನಡಿ ಮಾಡಿ
ಕುಳ್ಳಿರಿಸಿದ್ದಾರೆ ಕಟ್ಟು ಹಾಕಿ.
ಬಣ್ಣ ಬಣ್ಣದ ಕನ್ನಡಿ
ಪ್ರತಿಫಲಿಸುವುದೇ ಇಲ್ಲ
ಕಟ್ಟು ಕನ್ನಡಿ!

ಆ ಬಣ್ಣದ ಕನ್ನಡಿಯಲ್ಲೇ
ನಾವೂ ನೋಡಿಕೊಳ್ಳಬೇಕೆಂದು
ಅದರಲ್ಲಿ ನೋಡಿಕೊಂಡರೆ
ಇದೇನು ಕನ್ನಡಿಯೋ
ಅವರದೇ ಭಾವಚಿತ್ರವೋ?
ಕಣ್ಕಟ್ಟೋ?

ನನ್ನದೇ ಕನ್ನಡಿಯಿದ್ದರೆ
ಇಡಿಯಾಗಿ ಬಿಡಿಯಾಗಿ
ನಾನು, ನನ್ನ ರೆಕ್ಕೆ ಪುಕ್ಕ
ಒಳಗಿನ ಸೊಕ್ಕು
ಮುರುಕು ಮುಳ್ಳು
ಅರಳು ಮುದುಡು
ಇಂಚಿಂಚೂ ನೋಡಿಕೊಳ್ಳುವ
ಹಂಬಲದಲಿ ಕಾದಿದ್ದೇನೆ
ದಾರಿ ತೋರು ಗುರುವೇ.


ನಿನ್ನ ತೋರುವ
ಸಿದ್ದ ಕನ್ನಡಿ
ಎಲ್ಲಿಯೂ ಎಂದಿಗೂ
ಬಿಕರಿಗೆ ಸಿಕ್ಕುವುದಿಲ್ಲ ಕಂದ
ಕನ್ನಡಿ ಬೇಕೇಬೇಕೆಂದರೆ
ಇರುವುದೊಂದೇ ದಾರಿ
ತಕ್ಕಡಿಯಲಿ ಪ್ರತಿಕ್ಷಣ ನಿನ್ನನಿಟ್ಟು
ತೂಗಿ ಅಳತೆ ಮಾಡುತ್ತಾ
ಕಣ ಕಣಗಳಿಗೂ
ಪಾರದರ್ಶಕವಾಗಿಸುವ ಲೇಪ ಬಳಿದು
ಆ ನೋವಿಗೆ ಕಾವಿಗೆ
ನಿನ್ನೊಳಗಿನದೆಲ್ಲ ಘನವನೂ
ಪ್ರತಿಫಲನ ಮೂಡುವವರೆಗೆ
ಕರಗಿಸಿ ಕರಗಿಸಿ ತಿಳಿಯಾಗಿಸಬೇಕು.
ಕಂದ, ನೀನೇ ಕನ್ನಡಿಯಾಗಬೇಕು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...