Home / ಕವನ / ಕವಿತೆ / ಆ ಕನ್ನಡಿ ಬೇಕೆಂದರೆ……

ಆ ಕನ್ನಡಿ ಬೇಕೆಂದರೆ……


ನನಗಾಗಿ ನನ್ನದೇ ಒಂದು
ಕನ್ನಡಿ ಬೇಕೆಂಬ
ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ

ಕನ್ನಡಿಯೇ ಇಲ್ಲವೆಂದಲ್ಲ
ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ
ಅವರಿಗಿಷ್ಟದ ಪಾದರಸ
ಇವರಿಗಿಷ್ಟದ ಮಾಪಕ
ಅವರಿಗೆ ಬೇಕೆನಿಸಿದಷ್ಟು ಹೊತ್ತು
ಕಾಯಿಸಿ ಎರಕ ಹೊಯ್ದು
ಕನ್ನಡಿ ಮಾಡಿ
ಕುಳ್ಳಿರಿಸಿದ್ದಾರೆ ಕಟ್ಟು ಹಾಕಿ.
ಬಣ್ಣ ಬಣ್ಣದ ಕನ್ನಡಿ
ಪ್ರತಿಫಲಿಸುವುದೇ ಇಲ್ಲ
ಕಟ್ಟು ಕನ್ನಡಿ!

ಆ ಬಣ್ಣದ ಕನ್ನಡಿಯಲ್ಲೇ
ನಾವೂ ನೋಡಿಕೊಳ್ಳಬೇಕೆಂದು
ಅದರಲ್ಲಿ ನೋಡಿಕೊಂಡರೆ
ಇದೇನು ಕನ್ನಡಿಯೋ
ಅವರದೇ ಭಾವಚಿತ್ರವೋ?
ಕಣ್ಕಟ್ಟೋ?

ನನ್ನದೇ ಕನ್ನಡಿಯಿದ್ದರೆ
ಇಡಿಯಾಗಿ ಬಿಡಿಯಾಗಿ
ನಾನು, ನನ್ನ ರೆಕ್ಕೆ ಪುಕ್ಕ
ಒಳಗಿನ ಸೊಕ್ಕು
ಮುರುಕು ಮುಳ್ಳು
ಅರಳು ಮುದುಡು
ಇಂಚಿಂಚೂ ನೋಡಿಕೊಳ್ಳುವ
ಹಂಬಲದಲಿ ಕಾದಿದ್ದೇನೆ
ದಾರಿ ತೋರು ಗುರುವೇ.


ನಿನ್ನ ತೋರುವ
ಸಿದ್ದ ಕನ್ನಡಿ
ಎಲ್ಲಿಯೂ ಎಂದಿಗೂ
ಬಿಕರಿಗೆ ಸಿಕ್ಕುವುದಿಲ್ಲ ಕಂದ
ಕನ್ನಡಿ ಬೇಕೇಬೇಕೆಂದರೆ
ಇರುವುದೊಂದೇ ದಾರಿ
ತಕ್ಕಡಿಯಲಿ ಪ್ರತಿಕ್ಷಣ ನಿನ್ನನಿಟ್ಟು
ತೂಗಿ ಅಳತೆ ಮಾಡುತ್ತಾ
ಕಣ ಕಣಗಳಿಗೂ
ಪಾರದರ್ಶಕವಾಗಿಸುವ ಲೇಪ ಬಳಿದು
ಆ ನೋವಿಗೆ ಕಾವಿಗೆ
ನಿನ್ನೊಳಗಿನದೆಲ್ಲ ಘನವನೂ
ಪ್ರತಿಫಲನ ಮೂಡುವವರೆಗೆ
ಕರಗಿಸಿ ಕರಗಿಸಿ ತಿಳಿಯಾಗಿಸಬೇಕು.
ಕಂದ, ನೀನೇ ಕನ್ನಡಿಯಾಗಬೇಕು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...