ಮಹಾ ಪರಿನಿರ್ವಾಣ


ಕಾಂಡವೇ ಶಿಲೀಕೃತಗೊಂಡು
ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ
ಕೆತ್ತಿದ ಬುದ್ಧನಿಗೆ
ಅವಳಡುಗೆ ಮನೆಯೀಗ ತಪೋವನ.
ನೀಳ ಕಣ್ಣು ಮುಚ್ಚಿ
ಧ್ಯಾನಕ್ಕೆ ಕೂತ ಅವನೊಂದಿಗೆ
ಅವಳ ನಿತ್ಯ ಕಸುಬಿನಲ್ಲೇ
ಮೌನ ಜುಗಲ್‌ಬಂದಿ.


ಸೊಪ್ಪು ಸೋಸುತ್ತಾ
ಕಾಳು ಬಿಡಿಸುತ್ತಾ
ಪಾತ್ರೆ ತೊಳೆಯುತ್ತಾ
ಮಗುವಿಗೆ ಹಾಲೂಡಿ
ಲಾಲಿ ಹೇಳುತ್ತಾ
ಮರಗಲ್ಲ ಬುದ್ಧನನ್ನು ನೆಟ್ಟಿದ್ದಾಳೆ
ಹೆಣ್ಣ ಪ್ರತಿರೂಪದ ಮೃತ್ತಿಕೆಯಲಿ.


ಗಡಿಬಿಡಿಯಲಿ ಕೈಸುಟ್ಟು
ಬೆರಳು ಕೊಯ್ದು
ಜಾರಿ ಬಿದ್ದು
ನೋವು ಉಮ್ಮಳಿಸಿ
ಬಿಕ್ಕಳಿಸಿದ ಸದ್ದು.
ಒಂದಿಷ್ಟೇ ಕಣ್ತೆರೆದು ನೋಡಿ
ಥಟ್ಟನೆ ಮುಚ್ಚುವ ತಥಾಗತ!
ಅವಳ ನೋವಿಗೆ ಮಿಡುಕುವನೇ?
ತನ್ನ ಸಂಘಕ್ಕೇ ಹೆಣ್ಣ ನಿರಾಕರಿಸಿ
ಅವಳೊಡಲನೇ ಅಪಮಾನಿಸಿ
ಈ ಹಸಿಮಣ್ಣನೊದ್ದು ಮೇಲೇರಿದವನು?


ಆದರೀಗ…
ಈರುಳ್ಳಿ ಹೆಚ್ಚುವ ನೆವದಲಿ
ಒಳಗಿನ ಸಂಕಟಕ್ಕೇ ಬಾಯ್ಬಂದು
ದಳ ದಳ ಉದುರುವ ಅವಳ ಕಣ್ಣೀರಿಗೆ
ಈಗೀಗ ಅವನ ಕಣ್ಣಂಚಿನಲ್ಲೂ
ಕಂಡೂ ಕಾಣದಂತೆ ನೀರ ಪಸೆಯೇ?


ಒಲೆಯ ಕಾವಿಗೆ ಬಿಸಿಯಾಗಿ
ಕುಳಿರ್ಗಾಳಿಗೆ ತಂಪಾಗಿ
ಜೋಗುಳಕ್ಕೆ ನಿದ್ದೆಯಾಗಿ
ಪಾತ್ರೆ ಸಪ್ಪಳಕ್ಕೆ ಕಿವಿಯಾಗಿ
ಅಡುಗೆ ಘಮಕ್ಕೆ ವಾಸನೆಯಾಗಿ
ಅವಳ ತುಡುಮುಡಿಕೆಗೆ ಕಣ್ಣಾಗಿ
ಅರಳುತ್ತಿವೆ ಅವನೊಳಹೊರಗು
ಬುದ್ಧನೆನಿಸಿಕೊಂಡೂ ಮುಕ್ಕಾಗಿ
ಮಿಕ್ಕುಳಿದ ಸಾಕ್ಷಿಗಾಗಿ.


ಹೆಣ್ಣ ಮಿಡಿತದ ಮೃತ್ತಿಕೆಯಲಿ ನೆಟ್ಟ
ಮರಗಲ್ಲ ಬುದ್ಧನಿಗೀಗ
ನೆಲದಾಳದಲ್ಲೆಲ್ಲಾ ಬೇರು
ಕೈಕಾಲು ಎದೆ ತಲೆಗಳೆಲ್ಲ ಚಿಗುರು
ಕಣಕಣದ ಚಲನೆಗೂ ಮಿಡಿವ
ಹೆಣ್ಣ ನೋವಿಗೂ ತುಡಿವ
ಅವನೀಗ ಮರ್ತ್ಯಲೋಕದ ಕೂಸು!

[ಮರದ ಕಾಂಡ ಒಣಗಿ ಅನೇಕ ವರ್ಷಗಳ ಕಾಲ ಮಣ್ಣಿನೊಂದಿಗಿನ ಸಂಪರ್ಕ ದಿಂದ, ರಾಸಾಯನಿಕ ಕ್ರಿಯೆ ನಡೆದು ಖನಿಜವನ್ನು ಹೀರಿ ಮರದ ಕಾಂಡವೇ ಕಲ್ಲಾಗಿ ಪರಿವರ್ತನೆಯಾಗುವ ಸೃಷ್ಟಿ ವಿಶೇಷಕ್ಕೆ ಇಂಗ್ಲಿಷಿನಲ್ಲಿ petrified wood ಎನ್ನುತ್ತಾರೆ. ಅದಕ್ಕೆ ಸಂವಾದಿಯಾಗಿ ‘ಮರಗಲ್ಲು’ ಎಂದಿಲ್ಲಿ ಬಳಸಿದ್ದೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವ ನೀಗುವ ಬಗೆ
Next post ಮನ ಮಂಥನ ಸಿರಿ – ೧೦

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys