Home / ಕವನ / ಕವಿತೆ / ಮಹಾ ಪರಿನಿರ್ವಾಣ

ಮಹಾ ಪರಿನಿರ್ವಾಣ


ಕಾಂಡವೇ ಶಿಲೀಕೃತಗೊಂಡು
ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ
ಕೆತ್ತಿದ ಬುದ್ಧನಿಗೆ
ಅವಳಡುಗೆ ಮನೆಯೀಗ ತಪೋವನ.
ನೀಳ ಕಣ್ಣು ಮುಚ್ಚಿ
ಧ್ಯಾನಕ್ಕೆ ಕೂತ ಅವನೊಂದಿಗೆ
ಅವಳ ನಿತ್ಯ ಕಸುಬಿನಲ್ಲೇ
ಮೌನ ಜುಗಲ್‌ಬಂದಿ.


ಸೊಪ್ಪು ಸೋಸುತ್ತಾ
ಕಾಳು ಬಿಡಿಸುತ್ತಾ
ಪಾತ್ರೆ ತೊಳೆಯುತ್ತಾ
ಮಗುವಿಗೆ ಹಾಲೂಡಿ
ಲಾಲಿ ಹೇಳುತ್ತಾ
ಮರಗಲ್ಲ ಬುದ್ಧನನ್ನು ನೆಟ್ಟಿದ್ದಾಳೆ
ಹೆಣ್ಣ ಪ್ರತಿರೂಪದ ಮೃತ್ತಿಕೆಯಲಿ.


ಗಡಿಬಿಡಿಯಲಿ ಕೈಸುಟ್ಟು
ಬೆರಳು ಕೊಯ್ದು
ಜಾರಿ ಬಿದ್ದು
ನೋವು ಉಮ್ಮಳಿಸಿ
ಬಿಕ್ಕಳಿಸಿದ ಸದ್ದು.
ಒಂದಿಷ್ಟೇ ಕಣ್ತೆರೆದು ನೋಡಿ
ಥಟ್ಟನೆ ಮುಚ್ಚುವ ತಥಾಗತ!
ಅವಳ ನೋವಿಗೆ ಮಿಡುಕುವನೇ?
ತನ್ನ ಸಂಘಕ್ಕೇ ಹೆಣ್ಣ ನಿರಾಕರಿಸಿ
ಅವಳೊಡಲನೇ ಅಪಮಾನಿಸಿ
ಈ ಹಸಿಮಣ್ಣನೊದ್ದು ಮೇಲೇರಿದವನು?


ಆದರೀಗ…
ಈರುಳ್ಳಿ ಹೆಚ್ಚುವ ನೆವದಲಿ
ಒಳಗಿನ ಸಂಕಟಕ್ಕೇ ಬಾಯ್ಬಂದು
ದಳ ದಳ ಉದುರುವ ಅವಳ ಕಣ್ಣೀರಿಗೆ
ಈಗೀಗ ಅವನ ಕಣ್ಣಂಚಿನಲ್ಲೂ
ಕಂಡೂ ಕಾಣದಂತೆ ನೀರ ಪಸೆಯೇ?


ಒಲೆಯ ಕಾವಿಗೆ ಬಿಸಿಯಾಗಿ
ಕುಳಿರ್ಗಾಳಿಗೆ ತಂಪಾಗಿ
ಜೋಗುಳಕ್ಕೆ ನಿದ್ದೆಯಾಗಿ
ಪಾತ್ರೆ ಸಪ್ಪಳಕ್ಕೆ ಕಿವಿಯಾಗಿ
ಅಡುಗೆ ಘಮಕ್ಕೆ ವಾಸನೆಯಾಗಿ
ಅವಳ ತುಡುಮುಡಿಕೆಗೆ ಕಣ್ಣಾಗಿ
ಅರಳುತ್ತಿವೆ ಅವನೊಳಹೊರಗು
ಬುದ್ಧನೆನಿಸಿಕೊಂಡೂ ಮುಕ್ಕಾಗಿ
ಮಿಕ್ಕುಳಿದ ಸಾಕ್ಷಿಗಾಗಿ.


ಹೆಣ್ಣ ಮಿಡಿತದ ಮೃತ್ತಿಕೆಯಲಿ ನೆಟ್ಟ
ಮರಗಲ್ಲ ಬುದ್ಧನಿಗೀಗ
ನೆಲದಾಳದಲ್ಲೆಲ್ಲಾ ಬೇರು
ಕೈಕಾಲು ಎದೆ ತಲೆಗಳೆಲ್ಲ ಚಿಗುರು
ಕಣಕಣದ ಚಲನೆಗೂ ಮಿಡಿವ
ಹೆಣ್ಣ ನೋವಿಗೂ ತುಡಿವ
ಅವನೀಗ ಮರ್ತ್ಯಲೋಕದ ಕೂಸು!

[ಮರದ ಕಾಂಡ ಒಣಗಿ ಅನೇಕ ವರ್ಷಗಳ ಕಾಲ ಮಣ್ಣಿನೊಂದಿಗಿನ ಸಂಪರ್ಕ ದಿಂದ, ರಾಸಾಯನಿಕ ಕ್ರಿಯೆ ನಡೆದು ಖನಿಜವನ್ನು ಹೀರಿ ಮರದ ಕಾಂಡವೇ ಕಲ್ಲಾಗಿ ಪರಿವರ್ತನೆಯಾಗುವ ಸೃಷ್ಟಿ ವಿಶೇಷಕ್ಕೆ ಇಂಗ್ಲಿಷಿನಲ್ಲಿ petrified wood ಎನ್ನುತ್ತಾರೆ. ಅದಕ್ಕೆ ಸಂವಾದಿಯಾಗಿ ‘ಮರಗಲ್ಲು’ ಎಂದಿಲ್ಲಿ ಬಳಸಿದ್ದೇನೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...