Home / ಕವನ / ಕವಿತೆ / ಪ್ರಾಣಾಂಗನೆ

ಪ್ರಾಣಾಂಗನೆ

ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ
ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ
ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು
ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು.

ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ಪಡೆದೆ
ಖೇದ ಮೋದಗಳನೆರಡು ತೋಳಿನಲಿ ತೂಗಿ ತೂಗಿ ಹಿಡಿದೆ
ಇಗೊ ಇತ್ತ ಮೃತ್ಯು ಅಗೊ ಅತ್ತ ಅಮೃತ ಎರಡಕ್ಕು ನಡುವೆ ಇರುವೆ
ನೋವು ಸಾವುಗಳ ಕವಳ ಮಾಡಿ ಹಿಗ್ಹಿಗ್ಗಿ ಬಾಯಿದೆರೆವೆ.

ಘನನಿಬಿಡವಾಗಿ ಆಲಿಂಗಿಸೆನ್ನ ತುಸು ಕೂಡ ತೆರವು ಬೇಡ
ಬಾನಗಲ ನಿನ್ನ ಎದೆ ಹರವುಗೊಳಿಸಿ ಹೃದಯವನೆ ತುತ್ತು ಮಾಡ
ಓ ಭೀಮಕಾಯ ನಿರ್ಮಾಯ ಮುಖವೆ ಹಿಂಜರಿವುದೇಕೆ ಇನ್ನು ?
ಮೂರ್ಚ್ಛೆಮುಸುಕು ತೆರೆದೆರಗಿ ಬಾರ ಕ್ರೀಡೆಯಲ್ಲಿ ಇದುವೆ ಚೆನ್ನು.

ತೊಟ್ಟು ಕೂಡ ಬಿಡದಂತೆ ಸವರಿ ಹಿಗ್ಗನ್ನು ಹುಡುಕಿ ಕುಡಿವೆ
ಕಚ್ಚು ಚುಚ್ಚು ಎದೆ ಹೊಚ್ಚು ಬಿಚ್ಚು; ಮೆಚ್ಚಿದ್ದ ಮಾಡಿ ಬಿಡುವೆ
ನರಸಿಂಹನಂತೆ ಬಸಿರನ್ನೆ ಹೊಕ್ಕು ಕರುಳುಗಳ ಮಾಲೆ ಸೂಡಿ
ಮಧುಮಾಸ ಮತ್ತಮಧುಕರನ ಹಾಗೆ ರಸ ಸರಸ ವಿರಸಮಾಡಿ

ಏನು ತಾನು ಮಾಡಿದರು ನಾನು ದಾನವನ ಹಾಗೆ ಹೀರಿ
ಅಭಿಮಾನಿ ದೈವ ಬರುವೊಲು ಸದೈವ ಆನಂದ ಮೇರೆ ಮೀರಿ
ಮಾನವನ ಮೈಯೆ ಯಾತಕ್ಕು ಸೈಯೆ, ನಾನಿರುವೆ ಪ್ರೇಮದಂತೆ
ಶಿವ-ರತಿಯ ತಕ್ಕೆಯಲಿ ನಲಿನ ಉಲಿವ ಚಿರಬಾಲ ಕಾಮನಂತೆ.

ನಾ ಬೇಡಲೇನು ನೀ ಕೊಡುವದೇನು ? ವ್ಯಾಪಾರ ಸಾಕು ಬಲ್ಲೆ
ಆ ದೈವದತ್ತ ಈ ಮೊಗದ ಮುತ್ತ ಸುತ್ತುತ್ತಲಿರುವೆ ಇಲ್ಲೆ
ಅರಸಾದರೇನು ಆಳಾದರೇನು ಆನಂದ ಭೋಗದಲ್ಲಿ
ಬಾಳಾದರೇನು ಹಾಳಾದರೇನು ಈ ಪೂರ್ಣಯೋಗದಲ್ಲಿ.

ಅಧಃಪಾತದಲಿ ನೆರೆದು ಬರುವೆ ಗಂಗಾವತಾರದಂತೆ
ಜೀರ್ಣವಸ್ತ್ರದಲಿ ಮಿಂಚಿ ತೆರೆವೆ ಸುರ ಸುಮನ ಹಾರದಂತೆ
ಮೂರ್ತ ಮೃತ್ಯುಮುಖರಂಗದಲ್ಲಿ ನರ್ತಿಸುವೆ ಅಮರನಂತೆ
ತೊತ್ತುಳಿದರೂನು ಥಥ್ಥಳಿಸಿ ಹೊಳೆವೆ ಸಂಜೀವ ಭ್ರಮರನಂತೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...