Home / ಕವನ / ಕವಿತೆ / ಪ್ರಾಣಾಂಗನೆ

ಪ್ರಾಣಾಂಗನೆ

ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ
ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ
ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು
ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು.

ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ಪಡೆದೆ
ಖೇದ ಮೋದಗಳನೆರಡು ತೋಳಿನಲಿ ತೂಗಿ ತೂಗಿ ಹಿಡಿದೆ
ಇಗೊ ಇತ್ತ ಮೃತ್ಯು ಅಗೊ ಅತ್ತ ಅಮೃತ ಎರಡಕ್ಕು ನಡುವೆ ಇರುವೆ
ನೋವು ಸಾವುಗಳ ಕವಳ ಮಾಡಿ ಹಿಗ್ಹಿಗ್ಗಿ ಬಾಯಿದೆರೆವೆ.

ಘನನಿಬಿಡವಾಗಿ ಆಲಿಂಗಿಸೆನ್ನ ತುಸು ಕೂಡ ತೆರವು ಬೇಡ
ಬಾನಗಲ ನಿನ್ನ ಎದೆ ಹರವುಗೊಳಿಸಿ ಹೃದಯವನೆ ತುತ್ತು ಮಾಡ
ಓ ಭೀಮಕಾಯ ನಿರ್ಮಾಯ ಮುಖವೆ ಹಿಂಜರಿವುದೇಕೆ ಇನ್ನು ?
ಮೂರ್ಚ್ಛೆಮುಸುಕು ತೆರೆದೆರಗಿ ಬಾರ ಕ್ರೀಡೆಯಲ್ಲಿ ಇದುವೆ ಚೆನ್ನು.

ತೊಟ್ಟು ಕೂಡ ಬಿಡದಂತೆ ಸವರಿ ಹಿಗ್ಗನ್ನು ಹುಡುಕಿ ಕುಡಿವೆ
ಕಚ್ಚು ಚುಚ್ಚು ಎದೆ ಹೊಚ್ಚು ಬಿಚ್ಚು; ಮೆಚ್ಚಿದ್ದ ಮಾಡಿ ಬಿಡುವೆ
ನರಸಿಂಹನಂತೆ ಬಸಿರನ್ನೆ ಹೊಕ್ಕು ಕರುಳುಗಳ ಮಾಲೆ ಸೂಡಿ
ಮಧುಮಾಸ ಮತ್ತಮಧುಕರನ ಹಾಗೆ ರಸ ಸರಸ ವಿರಸಮಾಡಿ

ಏನು ತಾನು ಮಾಡಿದರು ನಾನು ದಾನವನ ಹಾಗೆ ಹೀರಿ
ಅಭಿಮಾನಿ ದೈವ ಬರುವೊಲು ಸದೈವ ಆನಂದ ಮೇರೆ ಮೀರಿ
ಮಾನವನ ಮೈಯೆ ಯಾತಕ್ಕು ಸೈಯೆ, ನಾನಿರುವೆ ಪ್ರೇಮದಂತೆ
ಶಿವ-ರತಿಯ ತಕ್ಕೆಯಲಿ ನಲಿನ ಉಲಿವ ಚಿರಬಾಲ ಕಾಮನಂತೆ.

ನಾ ಬೇಡಲೇನು ನೀ ಕೊಡುವದೇನು ? ವ್ಯಾಪಾರ ಸಾಕು ಬಲ್ಲೆ
ಆ ದೈವದತ್ತ ಈ ಮೊಗದ ಮುತ್ತ ಸುತ್ತುತ್ತಲಿರುವೆ ಇಲ್ಲೆ
ಅರಸಾದರೇನು ಆಳಾದರೇನು ಆನಂದ ಭೋಗದಲ್ಲಿ
ಬಾಳಾದರೇನು ಹಾಳಾದರೇನು ಈ ಪೂರ್ಣಯೋಗದಲ್ಲಿ.

ಅಧಃಪಾತದಲಿ ನೆರೆದು ಬರುವೆ ಗಂಗಾವತಾರದಂತೆ
ಜೀರ್ಣವಸ್ತ್ರದಲಿ ಮಿಂಚಿ ತೆರೆವೆ ಸುರ ಸುಮನ ಹಾರದಂತೆ
ಮೂರ್ತ ಮೃತ್ಯುಮುಖರಂಗದಲ್ಲಿ ನರ್ತಿಸುವೆ ಅಮರನಂತೆ
ತೊತ್ತುಳಿದರೂನು ಥಥ್ಥಳಿಸಿ ಹೊಳೆವೆ ಸಂಜೀವ ಭ್ರಮರನಂತೆ.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...