Home / ಕವನ / ಕವಿತೆ / ಪ್ರಾಣಾಂಗನೆ

ಪ್ರಾಣಾಂಗನೆ

ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ
ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ
ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು
ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು.

ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ಪಡೆದೆ
ಖೇದ ಮೋದಗಳನೆರಡು ತೋಳಿನಲಿ ತೂಗಿ ತೂಗಿ ಹಿಡಿದೆ
ಇಗೊ ಇತ್ತ ಮೃತ್ಯು ಅಗೊ ಅತ್ತ ಅಮೃತ ಎರಡಕ್ಕು ನಡುವೆ ಇರುವೆ
ನೋವು ಸಾವುಗಳ ಕವಳ ಮಾಡಿ ಹಿಗ್ಹಿಗ್ಗಿ ಬಾಯಿದೆರೆವೆ.

ಘನನಿಬಿಡವಾಗಿ ಆಲಿಂಗಿಸೆನ್ನ ತುಸು ಕೂಡ ತೆರವು ಬೇಡ
ಬಾನಗಲ ನಿನ್ನ ಎದೆ ಹರವುಗೊಳಿಸಿ ಹೃದಯವನೆ ತುತ್ತು ಮಾಡ
ಓ ಭೀಮಕಾಯ ನಿರ್ಮಾಯ ಮುಖವೆ ಹಿಂಜರಿವುದೇಕೆ ಇನ್ನು ?
ಮೂರ್ಚ್ಛೆಮುಸುಕು ತೆರೆದೆರಗಿ ಬಾರ ಕ್ರೀಡೆಯಲ್ಲಿ ಇದುವೆ ಚೆನ್ನು.

ತೊಟ್ಟು ಕೂಡ ಬಿಡದಂತೆ ಸವರಿ ಹಿಗ್ಗನ್ನು ಹುಡುಕಿ ಕುಡಿವೆ
ಕಚ್ಚು ಚುಚ್ಚು ಎದೆ ಹೊಚ್ಚು ಬಿಚ್ಚು; ಮೆಚ್ಚಿದ್ದ ಮಾಡಿ ಬಿಡುವೆ
ನರಸಿಂಹನಂತೆ ಬಸಿರನ್ನೆ ಹೊಕ್ಕು ಕರುಳುಗಳ ಮಾಲೆ ಸೂಡಿ
ಮಧುಮಾಸ ಮತ್ತಮಧುಕರನ ಹಾಗೆ ರಸ ಸರಸ ವಿರಸಮಾಡಿ

ಏನು ತಾನು ಮಾಡಿದರು ನಾನು ದಾನವನ ಹಾಗೆ ಹೀರಿ
ಅಭಿಮಾನಿ ದೈವ ಬರುವೊಲು ಸದೈವ ಆನಂದ ಮೇರೆ ಮೀರಿ
ಮಾನವನ ಮೈಯೆ ಯಾತಕ್ಕು ಸೈಯೆ, ನಾನಿರುವೆ ಪ್ರೇಮದಂತೆ
ಶಿವ-ರತಿಯ ತಕ್ಕೆಯಲಿ ನಲಿನ ಉಲಿವ ಚಿರಬಾಲ ಕಾಮನಂತೆ.

ನಾ ಬೇಡಲೇನು ನೀ ಕೊಡುವದೇನು ? ವ್ಯಾಪಾರ ಸಾಕು ಬಲ್ಲೆ
ಆ ದೈವದತ್ತ ಈ ಮೊಗದ ಮುತ್ತ ಸುತ್ತುತ್ತಲಿರುವೆ ಇಲ್ಲೆ
ಅರಸಾದರೇನು ಆಳಾದರೇನು ಆನಂದ ಭೋಗದಲ್ಲಿ
ಬಾಳಾದರೇನು ಹಾಳಾದರೇನು ಈ ಪೂರ್ಣಯೋಗದಲ್ಲಿ.

ಅಧಃಪಾತದಲಿ ನೆರೆದು ಬರುವೆ ಗಂಗಾವತಾರದಂತೆ
ಜೀರ್ಣವಸ್ತ್ರದಲಿ ಮಿಂಚಿ ತೆರೆವೆ ಸುರ ಸುಮನ ಹಾರದಂತೆ
ಮೂರ್ತ ಮೃತ್ಯುಮುಖರಂಗದಲ್ಲಿ ನರ್ತಿಸುವೆ ಅಮರನಂತೆ
ತೊತ್ತುಳಿದರೂನು ಥಥ್ಥಳಿಸಿ ಹೊಳೆವೆ ಸಂಜೀವ ಭ್ರಮರನಂತೆ.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...