ವಾಗ್ದೇವಿ – ೩

ವಾಗ್ದೇವಿ – ೩

ಶ್ರೀಪಾದ– “ವೆಂಕಟಪತಿ! ನಮಗೆ ಸನ್ಯಾಸವಾಗಿ ಹದಿನೈದು ಸಂವತ್ಸರಗಳಾದವು. ಈಗ ನಮ್ಮ ವಯಸ್ಸು ಮೂವತ್ತು ವರುಷ. ಇದು ವರಿವಿಗೂ ನಾವು ಷಡ್ವೈರಿಗಳನ್ನು ಜಯಿಸಿ ಕೀರ್ತಿಯನ್ನು ಹೊಂದಿದೆವು.”

ವೆಂಕಟಪತಿ– “ಪರಾಕೆ! ಶ್ರೀಪಾದಂಗಳವರು ಅತಿ ಪರಿಶುದ್ಧರೆಂದು ಇಡೀ ಲೋಕವೇ ಕೊಂಡಾಡುವಾಗ ಬಣಗು ಮನುಷ್ಯನಾದ ನಾನು ಹೆಚ್ಚಿಗೆ ಏನು ಹೇಳಲಿ?”

ಶ್ರೀಪಾದ- “ಅದಂತಿರಲಿ. ನಮಗೆ ಈಗ ಪ್ರಾಪ್ತವಾದ ಸಂಕಟವನ್ನು ಕುರಿತು ಕೊಂಚ ಪ್ರಸ್ತಾಪ ಮಾಡಿಬಿಡುತ್ತೇವೆ; ಇನ್ನೊಬ್ಬರ ಕಿವಿಗೆ ಅದು ಬೀಳಬಾರದು.”

ವೆಂಕಟಪತಿ– “ಅಪ್ಪಣೆಯಾಗುವದು ಬರಾಬರಿ. ಇಲ್ಲಿ ಈಗ ಬೇರೆ ಯಾರೂ ಇಲ್ಲ. ಕೆಪ್ಪಮಾಣಿ ಒಬ್ಬ ಇದ್ದಾನೆ.”

ಶ್ರೀಪಾದ–“ಕೆಪ್ಪನಿರಲಿ, ಪರ್ವಾ ಇಲ್ಲ. ಹಾಗಾದರೆ ಹೇಳುತ್ತೇವೆ ಕೇಳು. ನಮಗೆ ಏನೋ ಕೆಟ್ಟ ಗ್ರಹಗತಿ ಹಿಡಿಯುವ ಹಾಗಿದೆ. ಇಲ್ಲವಾದರೆ ಇದುವರೆಗೆ ಪ್ರಪಂಚವಿಚಾರ ಸೋಕದೆ ಇರುವ ನಮಗೆ ತತ್ಕಾಲದಲ್ಲಿ ವಿಷ ಯಾತುರತೆ ಕಾಡುವದ್ಯಾಕೆ?”

ವೆಂಕಟಪತಿ– “ಪರಾಕೆ! ವಿಧಿ ಬರೆದ ಬರಹ ಬೆನ್ನಬಿಡದೆಂಬ ನುಡಿಯು ಸರ್ವಧಾ ಸಟೆಯಲ್ಲ. ಮಾನುಷಿಕ ವಿಚಾರವು ಏಕರೀತಿಯಲ್ಲಿ ನಡೆಯುವದುಂಟೇ ? ಸರ್ವಕಾರ್ಯಗಳಿಗೆ ಕಾರಣಭೂತನಾದ ಬುದ್ದಿಯು ದೈವಪ್ರೇರಿತವಾದದ್ದೆಂದು ನನ್ನ ಮತ. ಸರ್ವಜ್ಞರಾದ ಶ್ರೀಪಾದಂಗಳ ಸನ್ನಿಧಿಯಲ್ಲಿ ಹೆಚ್ಚಿಗೆ ಅರಿಕೆ ಮಾಡಲೇ?”

ಶ್ರೀಪಾದ- “ಇಂದಿನ ವಿಚಾರಕ್ಕೆ ನಿನ್ನ ಮತವೇ ಉಪಯುಕ್ತ ವಾಗಿದೆ ಸತ್ಕೀರ್ತಿಯನ್ನು ಹೋಗಲಾಡಿಸಿಕೊಳ್ಳುವ ಕಾಲವು ಬ೦ದೊದ ಗಿತಲ್ಲಾ! ಏನು ಮಾಡಬಹುದು.? ”

ವೆಂಕಟಪತಿ – “ಅಪ್ಪಣೆಯಾದರೆ ಸಣ್ಣದೊಂದು ಮಾತು ಹೇಳಿಬಿಡು ತ್ತೇನೆ. ”

ಶ್ರೀಪಾದ – “ಓಹೋ ! ಆಗತ್ಯವಾಗಿ ಹೇಳಪ್ಪಾ.”

ವೆಂಕಟಪತಿ -“ಮನಸ್ಸು ಎಂದೆಂದೂ ಚಂಚಲವೆ, ಅದರ ಚ೦ಚಲ್ಯ ವನ್ನು ತೆಗದು; ಅದನ್ನು ಸರಿಪಡಿಸಲಿಕ್ಕೆ ವಿವೇಕಶಕ್ತಿಯೊ೦ದೇ ಉಪಾಯ ಆದಕಾರಣ ಶ್ರೀಪಾದಂಗಳವರು ವಿವೇಕದಿಂದ ವಿಚಾರಮಾಡಿ ನೋಡಿದರೆ, ವಿಷಯಾತುರತೆಯನ್ನು ಪ್ರಯಾಸವಿಲ್ಲದೆ ದೂರಪಡಿಸಿ, ಸತ್ಕೀರ್ತಿಯನ್ನು ಬೆಳಸಬಹುದು. ವಿಶೇಷ ಹೇಳಲಿಕ್ಕೆ ಬಡ ಕಿಂಕರನು ಶಕ್ಯನಲ್ಲ.”

ಶ್ರೀಪಾದ -. ” ಜ್ಞಾನೋಪದೇಶ ಮಾಡುವುದು ಕಷ್ಟದ ಕೆಲಸವಲ್ಲ. ಅದರಂತೆ ನಡೆಯುವದೇ ಪ್ರಯಾಸ. ವಿವೇಕವನ್ನು ಹೊಡೆದೋಡಿಸುವ ದುರ್ವ್ಯಸನವು ಮನಸ್ಸಿಗೆ ತಗಲಿಬಿಟ್ಟರೆ ಮಾಡತಕ್ಕದ್ದೇನು?ಯಾವ ಯತ್ನವೂ ನಡೆಯುವಯವಾಗಿಲ್ಲ, ವಾಗ್ದೇವಿಯ ಸುಪ್ರಸನ್ನತೆಯನ್ನು ದೊರಕಿಸಿಕೊಳ್ಳು ವುದು ಹೇಗೆ ? ಎಂಬ ಯೋಚನೆಯಲ್ಲದೆ ಮತ್ತೊಂದು ಮಗದೊಂದು ಯಾವುದೂ ಈಗ ನಮ್ಮ ಮನಸ್ಸಿಗೆ ಹೋಗುವಹಾಗಿಲ್ಲ. ಬಹು ಭಾಷಣ . ದಿ೦ದ ಸಮಯ ವ್ಯರ್ಥವಾಗಿ ಕಳೆಯಬೇಕೇಕೆ ? ನನ್ನ ಪ್ರಾಣವೇ ನಮಗೆ ಭಾರವಾಗಿ ತೋರುತ್ತದೆ ಅದು ಒಡಲು ಬಿಟ್ಟು ಹೋದರಾದರೂ ಆಗುತಿತ್ತು. ಶ್ರೀಹರಿ ! ಏನು ಮಾಡಬಹುದು?”

ವೆಂಕಟಪತಿ… – “ಸ್ವಾಮೀ ! ಶ್ರೀಹರಿಯನ್ನು ಭಕ್ತಿಪೂರ್ವಕವಾಗಿ ಮನಸ್ಸಿನಲ್ಲಿ ಧ್ಯಾನಿಸಿದರೆ, ಎಂಥಾ ಸಂಕಷ್ಟವೂ ಪರಿಹಾರವಾಗುವುದು. ಪ್ರಕೃತದ ದುರ್ವ್ಯಸವು ದೂರಾಗುವುದು ಏನು ಆಶ್ಚರ್ಯ? ಆದಪ್ರಯುಕ್ತ ವಾಗ್ದೇವಿಯ ಪ್ರಸ್ತಾಪವು ಈಗಲೇ ಅಂತ್ಯವಾಗಲೆಂದು ನಮ್ಮ ವಿಜ್ಞಾಪನೆ.”

ಶ್ರೀಪಾದ- “ನಿನ್ನ ಜ್ಞಾನ ಸುಡು ನಮ್ಮ ಸೇವೆಯಲ್ಲಿ ಇದ್ದೇ ಈ ಜ್ಞಾನವನ್ನು ನೀನು ಪಡೆದಿಯಲ್ಲವೆ?’

ವೆಂಕಟಪತಿ- “ಹೌದು. ಆದಕಾರಣವೇ ಅದೇ ಜ್ಞಾನವನ್ನು ತಮ್ಮ ಪಾದಕ್ಕೆ ಅರ್ಪಿಸಿದೆ. ಇದೊಂದು ಅನ್ಯಾಯವೇ ಸ್ವಾಮೀ ? ”

ಶ್ರೀಪಾದ- ನಮ್ಮ ಉದ್ದೇಶವು ನಿಮ್ಮ ಜ್ಞಾನೋಪದೇಶ ಪಡೆಯು ವುದಲ್ಲ. ವಾಗ್ದೇವಿಯು ಕ್ಷಿಪ್ರದಲ್ಲಿ ನಮ್ಮ ಕೈವಶವಾಗುವ ಪ್ರಯತ್ನ ನಿನ್ನಿಂದ ನಡೆಯುವುದಾದರೆ ಹೇಳು. ಇಲ್ಲವಾದರೆ ನಡೆ, ಬೇರೆಯವರ ಪರಿಮುಖ ವಾದರೂ ನಮ್ಮ ಸಂಕಲ್ಪಸಿದ್ಧಿಯಾಗುವ ಹಾಗೆ ನೋಡಿಕೊಳ್ಳುವೆವು.”

ವೆಂಕಟಪತಿ– “ಬುದ್ಧಿ! ಚರಣಕಮಲಗಳನ್ನು ನಿರಂತರ ಧ್ಯಾನಿಸುವ ತಮ್ಮ ಆಜ್ಞಾಧಾರಕನ ಮೇಲೆ ಇಷ್ಟು ಬೇಸರನಾಗುವಹಾಗಿನ ಅನ್ಯಾಯ ಯಾವದೂ ನನ್ನಿಂದ ನಡೆಯಲ್ಲ. ನನ್ನ ಸಣ್ಣ ಬುದ್ದಿಗೆ ಕಂಡ ಅಭಿಪ್ರಾಯ ವನ್ನು ನಿಮ್ಮಸನ್ನಿಧಿಯಲ್ಲಿ ಅರಿಕೆ ಮಾಡಿದ ನನ್ನ ಅಪರಾಧವನ್ನು ವಾತ್ಸಲ್ಯ ವಿಟ್ಟು ಕ್ಷಮಿಸಬೇಕಾಗಿ ಬೀಡಿಕೊಳ್ಳುತ್ತೇನೆ. ಅಪ್ಪಣೆಯಾಗಲಿ ಈಗಲೇ ವಾಗ್ದೇವಿಯನ್ನು ಕಂಡು, ಸನ್ನಿಧಿಯ ಆಜ್ಞೆಯನ್ನು ಅವಳಿಗೂ ಅವಳ ತಂದೆ ತಾಯಿಗಳಿಗೂ ತಿಳಸಿ ಪ್ರತ್ಯುತ್ತರವನ್ನು ಪಡೆದು ಬರುವೆನು.

ಶ್ರೀಪಾದ-ವೆಂಕಟಪತಿ! ಸ್ವಲ್ಪ ಕಠಿನಮಾತು ಅಡಿಬಿಟ್ಟೆವೆಂದು ಸಿಟ್ಟುತಾಳಕೋಬೇಡಾ. ನಿನ್ನಂಥಾ ಅಪ್ತನು ಇನ್ನೊಬ್ಬ ನಮಗಿರುವನೇ? ವಾಗ್ದೇವಿಯನ್ನು ಮಾತನಾಡಿಸಿ ಪ್ರತ್ಯುತ್ತರವನ್ನು ತಿಳಿಸುವೆನೆಂದು ಹೇಳಿದೆ. ಅಷ್ಟುಮಾತ್ರದಿಂದ ನಮ್ಮ ಮನಸ್ಸು ತೃಪ್ತಿಯಾಗಿ ನಿನ್ನ ಮೇಲೆ ನಮ್ಮ ದಯವು ಉಂಟಾಗದು. ನೀನು ಮನಃಪೂರ್ತಿಯಾಗಿ ಭಗೀರಧಪ್ರಯತ್ನ ದಿಂದಲಾದರೂ ನಮ್ಮ ವಾಂಛೆಯನ್ನು ಪೂರೈಸದಿದ್ದರೆ, ನಮ್ಮ ಪ್ರಾಣದಾಶೆ ನೀನು ಸರ್ವಥಾ ಮಾಡಬೇಡ. ಸಾವಿರ ಮಾತಾಡಿ ಏನು ಪುರುಷಾರ್ಥವಿದೆ?”

ವೆಂಕಟಪತಿ– “ಪರಾಕೆ! ನಾನು ನಡಿಸುವ ಪ್ರಯತ್ನವು ಎಂದಾದರೂ ಸಾಧ್ಯವಾಗದೆ ಹೋದೀತೇ? ಹೋದ ಕೆಲಸ ನೆರವೇರಿಸದೆ ವೆಂಕಟಪತಿಯು ಹಿಂದೆ ಬರುವನೇನು?”

ಶ್ರೀಪಾದ– “ಶಹಬಾಸ್‌! ತಾಮಸಮಾಡಬೇಡ, ನಡೆ! ನಿನಗೇನು ಬೇಕು? ಹೇಳಿಬಿಡು. ಈಗಲೇ ತಕ್ಕೋ,”

ವೆಂಕಟಪತಿ– “ನನಗೇನೂ ಬೇಡ. `ಅಟ್ಟಮೇಲ ಒಲೆ ಉರಿಯು ವುದು, ಕೆಟ್ಟಮೇಲೆ ಬುದ್ಧಿಬರುವುದು’ ಎಂಬುದೊಂದು ಗಾದೆ ಇದೆ. ಶ್ರೀಪಾದಂಗಳವರು ಇನ್ನೊಮ್ಮೆ ದೇವರ ಮುಂದೆ ಕುಳಿತು ಸ್ಥಿರಬುದ್ಧಿಯಿಂದ ಪುನರಾಲೋಚನೆ ಮಾಡುವುದು. ಉತ್ತಮವೆಂದು ಹೇಳಿಬಿಡುತ್ತೇನೆ. ಕಿಂಕರನ ಮೇಲೆ ಸಿಟ್ಟಾಗಬಾರದು. ಸಂಸ್ಥಾನದ ಕೀರ್ತಿಯ ಮೇಲೆ ದೃಷ್ಟಿಯಿರಲಿ.”

ಶ್ರೀಪಾದ “ತನ್ನ ವಿನಾ ನಮ್ಮ ಸಂಕಲ್ಪವು. ಸಿದ್ಧಿಯಾಗದೆಂದು ನಿನಗೆ ಗರ್ವಹತ್ತಿ ಹೋಯಿತಲ್ಲವೇ? ಚಿಂತೆಯಿಲ್ಲ. ಕೆಪ್ಪಮಾಣಿಯಿಂದ ಈ ಕೆಲಸವನ್ನು ಜಯಪ್ರದಮಾಡಿಸುವುದು ನೋಡುತ್ತೀಯಾ? ನಮ್ಮ ಸಾಮರ್ಥ್ಯವನ್ನು ನಿನಗೆ ತೋರಿಸುವೆವು. ನೀನೀಗ ಮನೆಗೆ ಹೋಗು ವೃರ್ಥವಾಗಿ ನಮ್ಮ ಸಮಯವನ್ನು ಹಾಳುಮಾಡಬೇಡ!”

ವೆಂಕಟಪತಿ ಆಚಾರ್ಯನು ಶ್ರೀಪಾದಂಗಳ ಮಾನವನ್ನು ಉಳಿನು ವುದು ತೀರಾ ಅಸಾಧ್ಯವಾದುದರಿಂದ: ತನ್ನ ತಪ್ಪನ್ನು ಕ್ಷಮಿಸಬೇಕಾಗಿ ಕಣ್ಣೀರಿಟ್ಟು, ಯತಿಗಳ ಮುಂದೆ ಅಡ್ಡಬಿದ್ದು, ಅಪ್ಪಣೆಯಾದ ಕೆಲಸವನ್ನು ತಾಮಸನವಿಲ್ಲದೆ ನೆರವೇರಿಸುವೆನೆಂದು ವಾಗ್ದತ್ತಮಾಡಿದನು… ಚಂಚಲ ನೇತ್ರರು ಅತಿ ಸಂತೋಷದಿಂದ ವೆಂಕಟಪತಿಯನ್ನು ಕೂಡಲೇ ವಾಗ್ದೇವಿಯ ಮನೆಯ ಕಡೆಗೆ ಕಳುಹಿಸಿ,-ಇವನು ಇನ್ನೇನೆಲ್ಲಾ ಪೀಕಲಾಟ ಮಾಡಿಬಿಡು ವನೋ ಎಂಬ ಅನುಮಾನದಿಂದ, ಬಂಗಿ ತಿಂದನನ ಅವಸ್ಥೆಯನ್ನು ತಾಳಿ ಕೊಂಡರು. ವೆಂಕಟಪತಿಯು ತನಗೆ ಉಪ್ಪನ್ನು ಕೊಟ್ಟು ಸಾಕಿದ ಗುರುವಿನ ಆಜ್ಞೆಯನ್ನು ಮೀರುವುದು ಪಾಪಕೃತ್ಯವೆಂದು ಹೆದರಿದರೂ, ಆಶ್ರಮ ಪಡ ಕೊಂಡಂದಿನಿಂದ ಯಾವುದೊಂದೂ ಅಪವಾದಕ್ಕೆ ಒಳಪಡದೆ ಸನ್ಮಾರ್ಗದಲ್ಲಿ ನಡೆದು ಖ್ಯಾತಿಗೊಂಡಿರುವ ಮಠಾಧಿಪತಿಯ ಪಾತಿತ್ಯಕ್ಕೆ ತಾನೂ ಹೊಣೆ ಯಾಗುವುದಾಯಿತೆಂಬ ವ್ಯಸನದಿಂದ ಬೆಂಡಾದನು. ಪರಂತು ತನ್ನಿಂದಾಗು. ವಷ್ಟರಮಟ್ಟಿಗೆ ಜ್ಞಾನಮಾರ್ಗವನ್ನು ಸೂಚಿಸಿದರೂ, ‘ಮೂರ್ಖಂಗೆ ಹೇಳಿದ ಬುದ್ಧಿ, ಘೋರ್ಕಲ್ಲ ಮೇಲೆ ಹೊಯಿದ ಮಳೆ’ ಎಂಬಂತಾದ ಮೇಲೆ ತಾನಿನ್ನೇನು ಮಾಡಲಿ! ಸನ್ಯಾಸಿಗೆ ಕೆಡುವ ಕಾಲ ಬಂದಿರುವುದೇ ನಿಶ್ಚಯ; ದೇವರು ಇಟ್ಟಹಾಗೆ ಆಗುವುದು; ತಾನು ಆಜ್ಞೆ ಮೀರುವನಲ್ಲವೆಂದು ವಾಗ್ಚೇ ವಿಯ ಮನೆ ಕಡೆಗೆ ತೆರಳಿದನು.

ಅವಳ ಮನೆಯಿಂದ ಸ್ವಲ್ಪದೂರದಲ್ಲಿ ಜೋಯಿಸರಲ್ಲಿ ಹೆಸರುಗೊಂಡ ಬಣಗೂರ ತಿಪ್ಪಾಶಾಸ್ತ್ರಿಯು ಕವಡಿಚೀಲವನನ್ನು ಕಂಕುಳಲ್ಲಿ ಹೆಟ್ಟಿಕೊಂಡು, ಏಕಾದಶಿಯಾದರೂ ತಾಂಬೂಲವನ್ನು ಜಗಿಯುತ್ತಾ, ಸಟಸಟನೆ ನಡೆಯು ತಿದ್ದನು. ಅವನು ವೆಂಕಟಪತಿ ಆಚಾರ್ಯನನ್ನು ಫಕ್ಕನೆ ನೋಡಿ–“ಆಚಾ ರ್ಯರೇ! ಯಾವಲ್ಲಿಗೆ, ಸವಾರಿ” ಎಂದು ಕೇಳಿದನು. ವಾಗ್ದೇವಿಯ ಮನೆಗೆ ಹೋಗುವುದಾಗಿ ಪ್ರತ್ಯುತ್ತರ ಕೊಡಲಿಕ್ಕೆ ವೆಂಕಟಪತಿಯು ನಾಚಿಕೊಂಡು– “ಎಲ್ಲಿಗೂ ಇಲ್ಲ. ಹೀಗೆಯೇ ತಿರುಗಾಡುತ್ತೇನೆ; ತಾನು ಹೊರಟದ್ದೆಲ್ಲಿಗೆ?” ಎಂದು ಪುನಃ ಪ್ರಶ್ನೆಮಾಡಿದನು. “ತಮ್ಮಣ್ಣ ಭಟ್ಟನಲ್ಲಿಂದ ಕರೆ ಬಂದಿತ್ತು, ಅಲ್ಲಿಗೆ ಹೊರಟೆ” ಎಂದು ಜೋಯಿಸನು ಹೇಳಿದನು. “ದಯಮಾಡೋಣಾ ಗಲಿ, ನನಗೆ ಬೇರೆ ಕಡೆಯಲ್ಲಿ ಕೆಲಸವಿದೆ” ಎಂದು ವೆಂಕಟಪತಿಯು ಅಲ್ಲಿಯೇ ಇರುವ ಕುರುಮಾರ್ಗಕ್ಕೆ ತಿರುಗಿದನು. ತಮ್ಮಣ್ಣ ಭಟ್ಟನು ವಾಗ್ದೇವಿಯ ತಂದೆ. ಜೋಯಿಸಗೆ ಅವನು ಬರಮಾಡುವ ಕೆಲಸವೇನೋ ತಿಳಿಯಬೇಕೆಂಬ ಆತುರದಿಂದ, ವೆಂಕಟಪತಿಯು ಕುರುಮಾರ್ಗದಿಂದ ಮೆಲ್ಲಗೆ ಅದೇ ಮನೆಯ ಬಳಿಗೆ ಹೋಗಿ, ತನ್ನನ್ನು ಯಾರೂ ನೋಡದಂತೆ ಆ ಮನೆಯ ಹೊರ ಜಗಲಿಯಲ್ಲಿ ಸುಮ್ಮನೆ ಕುಳಿತುಕೊಂಡನು. ಮನೆಯ ಬಾಗಿಲು ಮುಚ್ಚಿತ್ತು. ತಿಪ್ಪಾಶಾಸ್ತ್ರಿಯು ಹೊರಗಿನಿಂದ “ಭಾಗೀರಥಿ ಅಮ್ಮ! ಭಾಗೀರಥಿ ಅಮ್ಮ!” ಎಂದುಕರೆದನು. ವಾಗ್ದೇವಿಯು–“ಅಮ್ಮಾ! ಅಮ್ಮಾ! ತಿಪ್ಪಾಶಾಸ್ತ್ರಿಗಳು ಬಾಗಲಲ್ಲಿ ಕರೆಯುತ್ತಾರೆ” ಎಂದು ತಾಯಿಗೆ ಕರೆದು ಹೇಳಿದಳು.

“ಮಗಳೇ! ಕಾಲುಮುಟ್ಟಿ ನಮಸ್ಕಾರಮಾಡು” ಎಂದು ಭಾಗೀ ರಥಿಯು ಕದವನ್ನು ತೆರೆದಳು.

ಜೋಯಿಸನು ಒಳಕ್ಕೆ ಪ್ರವೇಶಿದ ಕೂಡಲೇ ವಾಗ್ದೇವಿಯು ಅವನಿಗೆ ಒಂದು ಮಣೆಯನ್ನು ಕೊಟ್ಟು ಕೂರಿಸಿ, ಕಾಲುಮುಟ್ಟಿ ನಮಸ್ಕಾರಮಾಡಿ, ನಿಂತುಕೊಂಡಳು. “ಸೌಭಾಗ್ಯವತೀ ಭವ” ಎಂದು ಆಶೀರ್ವಾದಮಾಡಿ ಜೋಯಿಸನು “ತಮ್ಮಣ್ಣ ಭಟ್ಟರು ಎಲ್ಲಿ?” ಎಂದು ಕೇಳಿದನು.

“ಅಂಗಡಿ ಬೀದಿಗೆ ಹೋಗಿರುವರು. ಈಗತಾನೇ ಮರಳಿ ಬರುವರು” ಎಂದು ವಾಗ್ದೇವಿಯ ತಾಯಿಯು ಪ್ರತ್ಯುತ್ತರಕೊಟ್ಟಳು.

“ಜೋಯಿಸರೇ! ನಮ್ಮ ಮೇಲೆ ಇಷ್ಟು ಬೇಸರವ್ಯಾಕೆ? ತಮ್ಮ ದರುಶನವಿಲ್ಲದೆ. ಬಹು ದಿವಸಗಳಾದವು. ವಾಗ್ದೇವಿಯನಕ ತಮ್ಮ ಧ್ಯಾನದಲ್ಲಿಯೇ ಇದ್ದಾಳೆ. ನಮ್ಮವರಂತೂ ತಮ್ಮನ್ನ ಸ್ವಪ್ನದಲ್ಲಿಯೂ ಕಾಣುತ್ತಲಿದ್ದಾರೆ. ನಾನು ಅವರಿವರ ಹತ್ತಿರ ತಮ್ಮ ವಿಷಯದಲ್ಲಿ ವಿಚಾರಿಸುತ್ತಾ ಇದ್ದೇನೆ. ನೋಡಿರಿ! ಬಡವರ ನೆನಪು ಯಾರೂ ಇಡರು. ಅದೊಂದು ಆಶ್ಚರ್ಯವಲ್ಲ; ಆದರೂ ನೋಡಿಬಿಡುವಾ ಎಂದು ನಮ್ಮವರ ಹತ್ತಿರ ಪ್ರಸ್ತಾಸಮಾಡಿದಾಗ, ಅವರು ತಮಗೆ ಜನ ಕಳುಹಿಸಿದರು. ಈ ಸಂಬಂಧ ಕೋಪಮಾಡಬೇಡಿ. ನಾವು ಕೇವಲ ಬಡವರು. ತಮ್ಮ ಆಶ್ರಿತರು, ಎಂದೆಂದೂ ತಮ್ಮ ಉಪಕಾರ ಮರೆಯುವರಲ್ಲ” ಎಂದು ಭಾಗೀರಥಿಯು ಸವಿಯಾದ ಮಾತುಗಳಿಂದ ಜೋಯಿಸನನ್ನು ಉಪಚರಿಸಿದಳು. ಅವನು ಉಬ್ಬೇರಿ–“ಏನವ್ವಾ! ನಿಮ್ಮನ್ನು ನಾನು ಮರೆತು ಬಿಡುವದುಂಟೇ? ಬಡವರಾದರೇನಾಯಿತು? ನನಗೆ ಅಂಥವರ ಮೇಲೆಯೇ ಹೆಚ್ಚು ಅಂತಃ ಕರಣ. ಶ್ರೀಕೃಷ್ಣನು ವಿದುರನನ್ನು ಪ್ರೀತಿಸಲಿಲ್ಲವೇ? ಒಂದು ಜಾತಕ ಸಂದರ್ಭ ನೋಡಲಿಕ್ಕೆ ಕರೆ ಬಂದುದರಿಂದ ಶಂಬೂರಿಗೆ ಒಬ್ಬ ಶೆಟ್ಟಿಯ ಮನೆಗೆ ಹೋಗಿದ್ದೆ. ಅಲ್ಲಿ ಕೊಂಚ ತಾಮಸವಾಯಿತು. ಇಲ್ಲವಾದರೆ ನಿಮ್ಮ ಲ್ಲಿಗೆ ಮೊದಲೇ ಬರುವವನಾಗಿದ್ದೆ. ಹಲವು ಮಾತುಗಳಿಂದೇನು? ನಿಮ್ಮ ಮಗಳ ಜಾತಕವನ್ನು ಸೂಕ್ಷ್ಮರೀತಿಯಲ್ಲಿ ಪರಿಶೋಧಿಸಿ, ಸ್ಫುಟಮಾಡಿ ತಂದಿರುವೆ. ಇನ್ನಾದರೂ ನನ್ನನ್ನು ದೂರುವದು ಬಿಡುವಿರಾ” ಎಂದು ಪ್ರತ್ಯುಪಚಾರದ ಮಾತುಗಳಿಂದ ಭಾಗೀರಥಿಯನ್ನು ಜೋಯಿಸನು ಸಮಾ ಧಾನಮಾಡಿದನು.

“ಹಾಗಾದರೆ ನಮ್ಮ ಮೇಲೆ ತಮ್ಮ ದಯ ಪೂರ್ಣ ಉಂಟಾಯಿತು; ಇನ್ನು ನಮಗೇನು ಕಡಿಮೆ?” ಎಂದು ಕಡೆಗಣ್ಣು ನೋಟದಿಂದ ವಾಗ್ದೇವಿಯು ಜೋಯಿಸಗಿಗೆ ತಡೆಗಟ್ಟಿ ಬಿಟ್ಟಳು.

ಅಷ್ಟರಲ್ಲಿ ತಮ್ಮಣ್ಣ ಭಟ್ಟನು ಬಂದು- “ಸ್ವಾಮೀ! ಸ್ವಾಮೀ! ಜೋಯಿಸ ರಿಗೆ ನಮೋನಮಃ! ನಮ್ಮ ಮೇಲೆ ಇಷ್ಟು ಉದಾಸೀನವ್ಯಾಕೆ? ತಮ್ಮ ಭೇಟಿ ಯಿಲ್ಲದೆ ಬಹು ದಿವಸಗಳು ಕಳೆದವು. ನಮ್ಮಿಂದೇನು ಅಪರಾಧ ನಡಿಯಿತೋ ತಿಳಿಯದು” ಎಂದು ತಮ್ಮಣ್ಣಭಟ್ಟನು ಹಲ್ಲುಕಿರಿದನು.

ಭಾಗೀರಥಿಯು ಗಂಡನನ್ನು ಕುರಿತು-“ನಿಮ್ಮ ರಗಳೆ ಯಾವಾಗಲೂ ಮುಗಿಯುವದೇ ಇಲ್ಲ. ಜೋಯಿಸರಿಗೆ ನಮ್ಮ ಮೇಲೆ ಉದಾಸೀನವಾದರೆ, ನಿಮ್ಮ ಮಗಳ ಜಾತಕವನ್ನು ಸೂಕ್ಷ್ಮರೀತಿಯಿಂದ ಸ್ಫುಟಮಾಡಿ ಇಷ್ಟು ಪ್ರೀತಿಯಿಂದ ನಮ್ಮ ಮನೆಬಾಗಿಲಿಗೆ ಹೊತ್ತುಕೊಂಡು ಬರುವರೇನು? ಅವರಿಗೆ ನಾವು ಗಂಟು ಕೊಟ್ಟಿರುವೆವೇ?” ಎಂದು ಗದರಿಸಿ ಬಿಟ್ಟಳು.

ಅಷ್ಟರಲ್ಲಿ ವಾಗ್ದೇವಿಯು “ಅಪ್ಪಯ್ಯಾ! ಕಾಳೀ ದನ ಹಟ್ಟಿಗೆ ಇನ್ನೂ ಕೂಡಲಿಲ್ಲ. ಎಲ್ಲಿಗೆ ಹೋಯಿತೋ, ಯಾರು ಕಟ್ಟಿ ಹಾಕಿ ಬಿಟ್ಟರೋ ತಿಳಿಯದು” ಎಂದು ತಂದೆಗೆ ದೂರುಕೊಟ್ಟಳು.

ಮುದುಕಗೆ ಸ್ವಲ್ಪ ಸಿಟ್ಟುಬಂತು. “ಯಾರು ಕಟ್ಟಿ ಹಾಕಿದರೋ ಏನಾಯಿತೋ, ಅದಕ್ಕೆ ಹುಲಿ ಹಿಡಿಯಲಿ! ಈ ದುಃಖ ಯಾವಾಗಲೂ ತಪ್ಪುವುದೇ ಇಲ್ಲ” ಎಂದನು.

“ಮೊಟ್ಟ ಮೊದಲು ನಿಮ್ಮ ಬಾಯಿಯಿಂದ ಹೊರಡುವದೇ ಅವಾಚ್ಯ ವಷ್ಟೆ! ದನವನ್ನು ಹುಲಿ ಹಿಡಿದರೆ ಹಾಲೆಂದು ಗಲಗಚ್ಚಿ ಕುಡಿಯುವಿರೇನು? ಪಶುಗಳಿಗೆ ಬುದ್ಧಿಯುಂಟೇ? ನೀವು ಇಷ್ಟು ವಿವೇಕಶೂನ್ಯರಾದರೆ ಸಂಸಾರ ನಡೆಯುವದು ಹ್ಯಾಗೆ?” ಎಂದು ಭಾಗೀರಥಿಯು ಪತಿಯ ಮೇಲೆ ಜರಿದುಬಿದ್ದಳು.

“ಅವ್ವಾ! ವೃದ್ಧರಲ್ಲವೇ? ಅವರಿಗೆ ಅಷ್ಟು ನಿಷ್ಠೂರವಾಡಬೇಡಿ. ದಣಿದು ಬಂದವರು ಏನೋ ಅಡಿಬಿಟ್ಟರು; ಚಿಂತೆ ಇಲ್ಲ” ಎಂದು ತಿಪ್ಪಾ ಶಾಸ್ತ್ರಿಯು ಭಾಗೀರಥಿಗೆ ಬುದ್ಧಿ ಹೇಳಿ, ಗಂಡಹೆಂಡಿರಲ್ಲಿ ಜಗಳ ಬೆಳೆಯ ದಂತೆ ಮಾಡಿದನು.

ಹಾಗೆಯೇ ತಮಣ್ಣಭಟ್ಟನು ಸೂಟೆಯನ್ನು ಬೀಸಿಕೊಂಡು ದನವನ್ನು ಹುಡುಕಿ ತರುವದಕ್ಕೆ ಬೇಗನೆ ಹೊರಹೊರಟನು. ಅಷ್ಟರಲ್ಲಿ ಭಾಗೀರಥಿಯು ಬೆಕ್ಕು ಏನೋ ಗಡಿಬಿಡಿ ಮಾಡುತ್ತದೆ, ನೋಡಿ ಬರುವೆನೆಂದು ಮನೆಯೊಳಕ್ಕೆ ಹೋಗಿ ಬಿಟ್ಟಳು. ವಾಗ್ದೇವಿಯೂ ತಿಪ್ಪಾಶಾಸ್ತ್ರಿಯೂ ಇಬ್ಬರೇ ಸಂಭಾಷಣೆಗೆ ಉಪಕ್ರಮಿಸಿದರು.

ವಾಗ್ದೇವಿ- ” ಜೋಯಿಸರೇ, ನನ್ನ ಜಾತಕ ಸ್ಫುಟ ಮಾಡಿದ್ದು ನಿಜವೇನು?”

ತಿಪ್ಪಾಶಾಸ್ತ್ರಿ- “ನನ್ನ ಮಾತಿನ ಮೇಲೆ. ಭರವಸೆ ಇಲ್ಲವೇ?

ವಾಗ್ದೇವಿ- “ಹಾಗೇನು ನಾನು ಹುಚ್ಚಳೇ? ತಮ್ಮ ಮಾತು ನಂಬ ದಿರಲಾರೆ. ಮುಖ್ಯವಾಗಿ ನೋಡಿರಿ; ತಂದೆತಾಯಿಗಳು ನನಗೆ ಒಬ್ಬ ಮೊದ್ದು ಜಂತುವನ್ಮು ಗಂಡನನ್ನಾಗಿ ಜೋಡಿಸಿದರಲ್ಲ. ಊಟವೊಂದು ಪರಿಷ್ಕಾರ ವಾದರೆ ಅವರಿಗೆ ಮತ್ತೊಂದು ಬೇಡ. ಸ್ವಸ್ಥವಾಗಿ ಶಯನ ಮಾಡುವರು. ಯಾರು ದುಡಿಯುತ್ತಾರೆ, ಏನು ತಾನು ಎಂಬ ಗೊಡವೆಯು ಅವರಿಗಿಲ್ಲ. ಅವರ ಕೈ ಹಿಡಿದು ಈಗ ಎಂಟು ವರ್ಷವಾಯಿತು. ಉಡಲಿಕ್ಕೆ ಒಂದು ಶಾಲೆ ಯಾಗಲೀ ತೊಡಲಿಕ್ಕೆ ಒಂದು ಕುಪ್ಪಸವಾಗಲೀ, ಒಂದೇ ಒಂದುಕಾಸಿನ ಚಿನ್ನವಾಗಲೀ ಅವರಿಂದ ನನಗೆ ದೊರತಿದ್ದಿಲ್ಲ. ನನ್ನ ಬುದ್ಧಿಯಿಂದಲೇ ಅಲ್ಪ ಸ್ವಲ್ಪ ಉಡಿಗೆ ತೊಡಿಗೆ ಚಿನ್ನಚಿಗುರು ಮಾಡಿಕೊಂಡಿರುವೆ. ಅದಾದರೂ ಹ್ಯಾಗೆ ದೊರಕಿಸಿಕೊಂಡೆನೆಂಬ ಜ್ಞಾನವು ಆ ಪ್ರಾಣಿಗೆ ಉಂಟೇ? ಶ್ರಿ$ಹರಿಯು ಲೋಕದಲ್ಲಿ ಇನ್ನೆಂಥೆಂಧಾ ಪ್ರಾಣಿಗಳನ್ನು ಸೃಷ್ಟಿಮಾಡಿರುವನೋ ಕಾಣೆ!”

ತಿಪ್ಪಾಶಾಸ್ತ್ರಿ-“ ಅಷ್ಟು ಒಳ್ಳೇ ಗಂಡನು ದೊರಕಬೇಕಾದರೆ ಹೆಂಡತಿಯು ಏಳೇಳು ಜನ್ಮದಲ್ಲಿಯೂ ಎಷ್ಟೋ ಸುಕೃತ ಮಾಡಿರಬೇಕು. ಇನ್ನೊಬ್ಬ ಗಂಡ ನಾದರೆ ಹೊಡೆದು ನಿನ್ನ ಹಲ್ಲು ಮುರಿಯುತ್ತಿದ್ದಿಲ್ಲವೇ? ಇವನು ಕೈಬೆರಳು ಎತ್ತಬಲ್ಲನೇ?

ವಾಗ್ದೇವಿ ಕೈ ಬೆರಳು ಎತ್ತುವದು ಬಿಟ್ಟುಸಿಟ್ಟನಿಂದ ನಾನೇ ಕೈ ಬೇರಿದರೂ ಸುಮ್ಮನಿರುವರು ಪಾಪ!?

ತಿಪ್ಪಾಶಾಸ್ತ್ರಿ- “ನಿನಗೆ ರಾಕ್ಷಸಗಣ, ಅವನಿಗೆ ಮಾನುಷಗಣವಾದು ದರಿಂದ ಹಾಗೆಯಾಗಲಿಕ್ಕೆ ಕಾರಣ, ಮತ್ತೇನೂ ಅಲ್ಲ.”

ವಾಗ್ದೇವಿ-“ಅವರ ಜಾತಕ ತಾವು ನೋಡಿರುವಿರಷ್ಟೆ. ಅದರಲ್ಲಿ ಏನೂ ಬಲವಿಲ್ಲವೇ?”

ತಿಪ್ಪಾಶಾಸ್ತಿ-ಆಯುಷ್ಯ ಗಟ್ಟಿಯದೆ. ಮತ್ತೆಲ್ಲ ಸೊನ್ನೆ ಕೇವಲ ಕೇಮದ್ರುಮ ಯೋಗವೆನ್ನಬೇಕು.”

ವಾಗ್ದೇವಿ-“ಈ ಯೋಗದ ಫಲವೇನೋ?”

ತಿಪ್ಪಾಶಾಸ್ತ್ರಿ-“ಭಿಕ್ಷೆಬೇಡಿಕೊಂಡಿರೋಣ ಎಂಬರ್ಥ- ಕಾಸೊಂದೂ ದುಡಿಯಲಾರನು”

ವಾಗ್ದೇವಿ-“ನನ್ನ ಜಾತಕ ಹ್ಯಾಗೆ? ಅದಾದರೂ ಕೇಳುವ?

ತಿಪ್ಪಾಶಾಸ್ತ್ರಿ- “ತಬ್ಲಿ ಅಲ್ಲ. ಈಗ ನಡಿಯುವ ದಶಾಂತರ್ದಶೆಯೂ ಗೋಚರದಲ್ಲಿ ಗ್ರಹಗಳು ನಿಂತ ಭಾವವೂ ಅತಿ ಶುಭಕರ. ಇನ್ನೂ ಎಂಟೇ ದಿವಸಗಳೊಳಗೆ ನಿನ್ನ ದರ್ಬಾರಿಗೆ ಎಣೆ ಇರದು. ಆಗ ತಿಪ್ಪನನ್ನ ಮರೆಯದೆ ಕರೆಕಳುಹಿಸಿದರೆ ಮುಂದಿನ ವೃದ್ಧಿಯ ಉಪಾಯವೆಲ್ಲ ಹೇಳಿಕೊಡುವೆನು. ರಾತ್ರೆಯಾಯಿತು, ಮನೆಯಲ್ಲಿ ನೆಂಟರು ಬಂದಿರುವರು. ಇನ್ನೊಮ್ಮೆ ಮಾತನಾಡಬಹುದು.? ಎಂದು ತಿಪ್ಪಾಶಾಸ್ತ್ರಿಯು ಅವಸರದಿಂದೆದ್ದು ತನ್ನ ಮನೆಗೆ ಬಂದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುಗ್ಗೆಗಳು
Next post ಕಲಿಸು ನನಗೆ ಕಲಿಸು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys