Home / ಕವನ / ಕವಿತೆ / ಒಂದು ಹಳೆಯ ಕತೆ

ಒಂದು ಹಳೆಯ ಕತೆ

ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು
ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ
ಏನಿದ್ದರೂ ಈಗಲೆ ಎಂದು.
ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ
ದನ ಕರುವ ಎಚ್ಚರಿಕೆಯಿಂದ ಆರಿಸಿ ತರುವವರು
ಇನ್ನು ಹೆಣ್ಣು ತರುವ ಮಾತೆಂದ ಮೇಲೆ ಹೇಳಬೇಕೆ
ಇದಕ್ಕಾಗಿಯೇ ಏನೋ
ಹಿಂದೆ ಹೆಣ್ಣು ತರುವಷ್ಟರಲ್ಲಿ ಏಳುಜೊತೆ ಜೋಡು
ಸವೆಯುತ್ತಿದ್ದವಂತೆ.

ಇದನ್ನೇ ದೊಡ್ಡಸ್ತಿಕೆ ವಿಷಯ ಮಾಡಿ
ಉಪ್ಪುಕಾರ ಬೆರೆಸಿ
ಹತ್ತಾರು ಜನರಲ್ಲಿ ಆಡಿ ಬಂದ ಮೇಲೆಯೆ
ಅತ್ತೆ ಮಾವ ಅವರಿಗೆ ಸಮಾಧಾನ
ತಮ್ಮ ಸೊಸೆಯ ಮೇಲೆ ಇನ್ನಿಲ್ಲದ ಅಭಿಮಾನ

ಏನಾದರೂ…..
ಅದೆಲ್ಲಿ ಹಳಿ ತಪ್ಪುವುದೋ ತಪ್ಪಿ ಬಿಡುವುದು
ಅತ್ತೆ ಸೊಸೆಯರು ಹಾವು ಮುಂಗಲಿಯಾಗುವರು
ಆರೋಪ, ಪ್ರತ್ಯಾರೋಪ ಸಾಗುವುದು-
ಒಬ್ಬಳು ‘ಬಾಳು ಕೊಡಲಿಲ್ಲ’ ವೆಂದರೆ
ಇನ್ನೊಬ್ಬಳು ‘ಮನೆ ಮುರುಕಿ’ ಯೆನ್ನುವಳು

ಸೊಸೆ-
ಮಗಳು, ಅವಳ ಮಕ್ಕಳೆಂದರೆ ಕೈಕಾಲು ಮುರಿದು ಕೊಳ್ಳುವಳು
ಸಂದರ್ಭ, ಮನೆಯನ್ನೇ ಬಳಿದು ಕೊಡಲು ತಯ್ಯಾರಿವಳು
ಹೀಗಾದರೆ ನಾನು ನನ್ನ ಮಕ್ಕಳು ಏನು ತಿನ್ನಬೇಕು?
ಅಂತವಳು ನನ್ನನ್ಯಾಕ ತರಬೇಕಾಗಿತ್ತು.
ಎರಡು ಕೈಲಿ ಸುರಿದು ಕೊಳ್ಳುವುದಕ್ಕೆ…!
ಒಂದುಟ್ಟರೆ ಸಹಿಸುವಳೆ? ಉಂಡರೆ ಸಹಿಸುವಳೆ?
ನೆರೆ ಕೆರೆ ಅಂತ ಒಂದಕ್ಕರೆಯ ನುಡಿಯಾಡಿದರೆ ಸಹಿಸುವಳೆ?
ರಕ್ಕಸಿ, ಕೊನೆಗೆ ಕೈ ಹಿಡಿದವನ ಜೊತೆಗೂ ‘ಎಷ್ಟೋ ಅಷ್ಟು’
ಮಾಡಿದಳು

ಇವಳ ಮಕ್ಕಳಂತಲ್ಲವೆ ನಾವು
ನಮ್ಮನ್ನೇನು ಹದ್ದು ಕಚ್ಚಿ ಕೊಂಡು ಬಂದು ಬಿಟ್ಟಿದೆಯೆ?
ಯಾಕಿದೆಲ್ಲಾ ಗೊತ್ತಾಗುವುದಿಲ್ಲ ಇವರಿಗೆ
ಗಂಡ ನೋಡಿದರೆ ಅಮ್ಮನ ಪಕ್ಷಪಾತಿ
ನೋಡೆ! ನನಗೆ ನೀನೂ ಬೇಕು ಅಮ್ಮನೂಬೇಕು
ಇದರಲ್ಲಿ ಯಾರನ್ನು ಬಿಡುವುದು ಹೇಳೆ?
ಎಷ್ಟಾದರು ಅವರು ಹಿರಿಯರು ನಿನ್ನ ತಂದವರಲ್ಲವೇನೆ?
‘ಒಂದಂದರೆ ಏನಾಯಿತು ಬಿಡು ಈಗ’ ಎನ್ನುವರು;

ಮಾವನಾದರೋ ಮುದಿಗೂಬೆ
ಬಾಯಿ ಬಿಚ್ಚಿದರೆ ಗೊಡ್ಡು ವೇದಾಂತ
ಇದೆಲ್ಲಾ ನೋಡುತ್ತಿದ್ದರೆ
ನನ್ನ ಮೈ ನಾನೇ ಪರಚಿ ಕೊಳ್ಳ ಬೇಕೆನಿಸುವುದು

ಅತ್ತೆ….
ಅವಳ ಮಾತೇನು ಕತೆಯೇನು
ಅವಳ ಅಳ್ಳಾಟ ಇಷ್ಟೆ ಅಂತ ಹೇಳೋಕಾಗಲ್ಲ
ಗ್ರಾಸ್ತರ ಮನೆಯ ಸೊಸೆಯೆಂದರೆ ಎಂಗಿರಬೇಕು!
ಜನ ಒಳಗೊಳಗೆ ಇರುವರು
ಇವಳಿಗೇನು ಗೊತ್ತು

ನಾವು ಹತ್ತಾಡಿದರೆ ಆಕೆ ಒಂದಾಡುವುದೂ ಕಷ್ಟ
ದೊಡ್ಡಮನೆಯ ದೊಡ್ಡ ಗುಣದ ಹೆಣ್ಣು ಮಗಳು ಎನ್ನಿಸಿಕೊಳ್ಳಬೇಕು.
ಅದಬಿಟ್ಟು ಒಂದಾಡುವಲ್ಲಿ ಹತ್ತಾಡಿದರೆ ಪೊಳ್ಳು ಎನ್ನುವರು
ಒಬ್ಬರ ಹತ್ತಿರ, ಒಂದು ಮನೆಯ ಹತ್ತಿರ ಹೋಗಲು
ಏನು ನಿಂತಿದೆ ಇವಳಿಗೆ?

ಏನು ಕೊಡ್ತಾಳ … ತಾರ್‍ತಾಳಾ… !
ಕೆಲಸವಿದ್ದರೆ ಮಾಡಬೇಕು
ಇಲ್ಲಾ ಅಂದರೆ ಒಳಗೆ ತೆಪ್ಪಗಿರಬೇಕು
ಸೊಸೆಯಾದವಳು ಹೊಸಿಲ ದಾಟಿ ಬರಬಾರದು
ನನ್ನ ಮಕ್ಕಳು ಬಂದಾಗ ಕೈ ಬಾಯಿ ನೋಡುವಳು
ಅಲ್ಲಿ… ಹೇಗೋ ಏನೋ ಇಲ್ಲಿಯಾದರೂ ಒಂದೆರಡುದಿನವಾದರು

ಸುಖವಾಗಿರಲು ಬಿಡುವುದಿಲ್ಲ ತಾಟಗಿತ್ತಿ!
ಅದೆ ತನ್ನ ಕಡೆಯವರ್‍ಯಾರಾದರು ಬಂದರೆ
ಸೀರೆ ಉದುರುವುದೇನೋ ಅನ್ನೋ ಹಾಗೆ ಓಡಾಡುವಳು

ಮಾಯಾಂಗನೆ, ಏನಿಂಡಿಹಳೋ ಅವನ ಕಿವಿಯಲ್ಲಿ
ಈ ನಡುವೆ ಅವನು ಹೆತ್ತು ಹೊತ್ತವರೆಂಬ ಗುರುತೆ ಮರೆತು
ಮಾತು ಮಾತಿಗೆ ರೇಗಾಡುವನು.

ನನ್ನ ಹತ್ತಿರ ನೀನು ಏನೂ ಹೇಳಲು ಬರಬೇಡ
ತಂದಪಳು ನೀನು
ಆಳಿಸುವಳು ಬಾಳಿಸುವಳು ನೀನು ಎನ್ನುವನು;
ಇನ್ನು ಅವರಿಗೇನಾದರೂ ಹೇಳಲು ಹೋದರೆ
ಏನು ಹೇಳುವಿ ನೀನು
ಯಾವ ದಿನ ತಿಂದದ್ದೆ ಆ ಮಗು
ಇಷ್ಟಕ್ಕೂ, ಅವಳು ಏನು ಮಾಡಿದರೂ ಚಿಕ್ಕವಳಾಗುವಳು
ಬರುವುದೆಲ್ಲಾ ನನ್ನ ತಲೆಗೇಯೆ
ನೀನೇ ಅದ್ದಿ ಕೊಳ್ಳಬೇಕು
ತಪ್ಪೋ ಒಪ್ಪೋ ಎಂಗೋ ಒಂದು ಸುಧಾರಿಸಿಕೊಂಡು ಹೋಗಬೇಕು
ಆದ ತಪ್ಪ ಇನ್ನೇನಾದರೂ ಮಾಡುವುದಿದೆಯೆ
ನೀನೆ ಹೇಳು! ನೀನೆ ಹೇಳು!!

ನಾನು ತಂದವಳು
ನನಗೆ ಎದುರಾಡುವಳು
ಹೀಗೆ ಬಿಟ್ಟರೆ ನನ್ನ ಬುಡಕ್ಕೆ ನೀರು ತರುವಳು
ನನ್ನ ಕರ್ಮ ಈ ಮನೆಗೆ ಸಿಕ್ಕಿದೆ
ತಿಕ ತಡವರಿಸಿ ಕೊಳ್ಳಲು ಪುರುಸೊತ್ತಿಲ್ಲ.
ಇವರ ಸಿಟ್ಟು ನಿರ್ವಾಕಿಲ್ಲ
ಮೇಲೆ ಅತ್ತೆ ಮಾವಂದಿರ ಚಾಕರಿ, ಕಾಟ
ಎಷ್ಟು ತೇದರು ಅಷ್ಟರಲ್ಲೆ ಇದೆ
ಒಂದೊಳ್ಳೆ ಮಾತಿಲ್ಲ
ಮಂದಿ ನೋಡಿದರೆ ಹೊಟ್ಟಿಗೆ ಹಾಲುಯ್ದು ಕೊಂಡಂತಾಗುವುದು

ಅತ್ತೆ-
ನಮ್ಮಗೋಳು ಶಿವನಿಗೆ ಮುಟ್ಟುವುದು
ಬಟ್ಟೆ ಬರೆ ಕುಕ್ಕಿ ಕೊಡುವದು ಹೋಗಲಿ
ಲಕ್ಷಣವಾಗಿ ತುತ್ತನ್ನು ಕಾಣುವುದು ದುಸ್ತಾರವಾಗಿದೆ
ಈ ನಡುವೀ ನಡುವೆ
ಇದು ಯಾರಿಗೂ ಬಿಟ್ಟಿದ್ದಲ್ಲ.
ಖಂಡಿತವಾಗಿ ಮಾಡಿದ್ದುಣ್ಣುವಳು
ಹ್ಹೇ ಭಗವಂತಾ!
ಇನ್ನು ಯಾಕಿಟ್ಟಿರುವೆ ನಮ್ಮನ್ನು
ಸಾಕುಮಾಡೋ ನಮ್ಮಪ್ಪ ನಿನ್ನ ಪಾದಸೇರಿಸಿ ಕೊಳ್ಳಪ್ಪಾ!
ಎಂದು ಮೊರೆಯುವಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...