ಆ ಬಾಂಬು ದುರಂತ…

ಆ ಬಾಂಬು ದುರಂತ…

೧೯೪೫ರ ಆಗಸ್ಟ್ ೬ರ ದಿನ. ಎರಡನೆಯ ಜಾಗತಿಕ ಮಹಾಯುದ್ಧ (೧೯೩೯-೪೫) ಮುಗಿಯುವ ಹಂತದಲ್ಲಿತ್ತು. “ಸೂರ್ಯೋದಯದ ನಾಡು” ಎಂದೇ ಕರೆಯಲ್ಪಡುವ ಜಪಾನಿನ ಪ್ರಮುಖ ಪಟ್ಟಣಗಳಲ್ಲೊಂದಾದ ಹಿರೋಷಿಮಾದಲ್ಲಿ ಸೂರ್ಯೋದಯವಾಗಿ ಅಷ್ಟೇನೂ ಹೊತ್ತಾಗಿರಲಿಲ್ಲ. ಜನರು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಬೆಳಗಿನ ೮:೨೦ರ ಸಮಯ. ಅಣುಬಾಂಬೊಂದು ಆ ಪಟ್ಟಣದಲ್ಲಿ ಆಸ್ಪೋಟಿಸಿ ತತ್ತರಿಸುವಂತೆ ಮಾಡಿತು. “ಲಿಟಲ್ ಬಾಯ್” ಎಂಬ ಹೆಸರಿನ ಆ ಅಣು ಬಾಂಬನ್ನು ಅಮೆರಿಕವು ಜಪಾನಿನ ಮೇಲೆ ಮೊಟ್ಟಮೊದಲ ಬಾರಿಗೆ ಪ್ರಯೋಗಿಸಿತ್ತು. ಬಿ-೨೯ ಯುದ್ಧ ವಿಮಾನದಿಂದ ೫೮೦ ಮೀಟರ್ಗಳಷ್ಟು ಎತ್ತರದಿಂದ ಪ್ರಯೋಗಿಸಿದ್ದ ಆ ಬಾಂಬಿನ ಉದ್ದ ಮೂರು ಮೀಟರ್ ಮತ್ತು ಅಗಲ ೭೧ ಸೆಂಟಿಮೀಟರ್ ನಷ್ಟು ಆಗಿತ್ತು. ನಾಲ್ಕು ಟನ್ ತೂಕದ ಅದು ೧೨,೫೦೦ ಟನ್ ಟ್ರೈ-ನೈಟ್ರೋಟೊಲ್ವಿನ್ (TNT) ಸಿಡಿಮದ್ದಿನ ಸಾಮರ್ಥ್ಯ ಪಡೆದಿತ್ತು.

ಅದಾದ ಎರಡು ದಿನಗಳ ನಂತರ, ಅಂದರೆ ಆಗಸ್ಟ್ ೯ ರಂದು ಜಪಾನಿನ ಇನ್ನೊಂದು ಪ್ರಮುಖ ಪಟ್ಟಣವಾದ ನಾಗಸಾಕಿಯಲ್ಲಿ ಬೆಳಗಿನ ೧೧ರ ಸುಮಾರಿಗೆ ಮತ್ತೊಂದು ಅಣುಬಾಂಬ್ ಸಿಡಿದು ಅಲ್ಲೋಲಕಲ್ಲೋಲ ಉಂಟುಮಾಡಿತು. “ಫ್ಯಾಟ್ ಮ್ಯಾನ್” ನಾಮಾಂಕಿತ, ೨೨ ಕಿಲೋ ಟನ್ ಪ್ಲುಟೋನಿಯಂ ಅಣುಬಾಂಬನ್ನು ನಾಗಸಾಕಿಯಿಂದ ೫೦೦ ಮೀಟರ್ಗಳಷ್ಟು ಎತ್ತರದಿಂದ ಸಿಡಿಸಲಾಗಿತ್ತು. ಅದು ೩.೨೫ ಮೀಟರು ಉದ್ದ, ೧.೫ ಮೀಟರಿನಷ್ಟು ಅಗಲವಾಗಿತ್ತು. ನಾಲ್ಕುವರೆ ಟನ್ ನಷ್ಟು ಭಾರವಾಗಿದ್ದ ಅದು ೨೨,೦೦೦ ಟನ್ TNT ಸಿಡಿಮದ್ದಿನಷ್ಟು ಸಾಮರ್ಥ್ಯ ಹೊಂದಿತ್ತು.

ಈ ಅಣುಬಾಂಬುಗಳ ಸ್ಫೋಟದಿಂದಾಗಿ ಹಿರೋಷಿಮಾದಲ್ಲಿ ೧೩ ಚದರ ಕಿಲೋ ಮೀಟರು ಮತ್ತು ನಾಗಸಾಕಿಯಲ್ಲಿ ೬.೭ ಚದರ ಕಿಲೋಮೀಟರು ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡು ದಗದಗ ಉರಿದು ಮರುಭೂಮಿಯಾಗಿ ಮಾರ್ಪಟ್ಟಿತು. ಅಣು ಬಾಂಬಿನಿಂದ ಉತ್ಪತ್ತಿಯಾದ ಒಟ್ಟು ಶಕ್ತಿಯ ಮುಕ್ಕಾಲು ಭಾಗ ಶಾಖದ ರೂಪ ತಾಳಿತು. ಪರಿಣಾಮವಾಗಿ ಆ ಪ್ರದೇಶದ ಉಷ್ಣ ತಾಪಮಾನ ಹತ್ತಾರು ಲಕ್ಷ ಡಿಗ್ರಿ ಸೆಲ್ಸಿಯಸ್ ಗಳ ವರೆಗೆ ಏರಿತು! ಬೆಂಕಿಯ ಜ್ವಾಲೆಗಳು ಎರಡು ಪಟ್ಟಣಗಳನ್ನು ಪೂರ್ತಿಯಾಗಿ ಆಕ್ರಮಿಸಿದವು. ಹಿರೋಷಿಮಾದಲ್ಲಿ ಇದರ ಪ್ರತಾಪ ಹೆಚ್ಚಾಗಿದ್ದು ೬ ಗಂಟೆಗಳಲ್ಲಿ ಬೆಂಕಿ ಸಿಕ್ಕಿದ್ದನ್ನೆಲ್ಲಾ ಭಸ್ಮ ಮಾಡುತ್ತಾ ೨ ಕಿಲೋಮೀಟರ್ ಸುತ್ತಳತೆಯವರೆಗೂ ಚಾಚಿತ್ತು. ತೇವವು ಬೆಂಕಿಯ ಜ್ವಾಲೆ ಯಿಂದ ಉತ್ಪತ್ತಿಯಾದ ಬೂದಿಯ ಸುತ್ತ ದಟ್ಟ ಆವಿಯಾಗಿ, ತಂಪು ಹವೆಯೊಂದಿಗೆ ಕೂಡಿದ ಪರಿಣಾಮವಾಗಿ ಎರಡು ಪಟ್ಟಣಗಳ ಮೇಲೆ ಭಾರಿ ಮಳೆ ಸುರಿಯಿತು. ಅದು ಸಾಮಾನ್ಯ ಮಳೆಯಾಗಿರಲಿಲ್ಲ. ವಿಕಿರಣಶೀಲತೆ ಮತ್ತು ಎಣ್ಣೆಯಂತಹ ದ್ರವ ಆ ಮಳೆಯಲ್ಲಿತ್ತು.

ಹಿರೋಷಿಮಾದಲ್ಲಿ ಅಣುಬಾಂಬು ಸ್ಪೋಟಗೊಂಡಾಗ ಸುಮಾರು ಮೂರುವರೆ ಲಕ್ಷ ಜನರಿದ್ದರು. ಪರಿಣಾಮವಾಗಿ ೧೯೪೫ರ ಕೊನೆವರೆಗೂ ಮಡಿದ ಜನರ ಸಂಖ್ಯೆ ೧,೪೦,೦೦೦ಕ್ಕೇರಿತು. ನಾಗಸಾಕಿ ಯಲ್ಲಿ ಅಣುಬಾಂಬು ಸ್ಫೋಟಿಸಿದಾಗ ೨,೮೦,೦೦೦ ಜನರಿದ್ದರು. ೧೯೪೫ರ ಕೊನೆಯವರೆಗೆ ಅಲ್ಲಿ ಮಡಿದವರ ಸಂಖ್ಯೆ ಸುಮಾರು ೭೪,೦೦೦ದಷ್ಟಾಯಿತು.

ಬಾಂಬ್ ಸ್ಫೋಟದಿಂದ ಶೇಕಡ ೯೦ ರಷ್ಟು ಆಸ್ಪತ್ರೆಗಳು ಮತ್ತು ಸಿಬ್ಬಂದಿ ವರ್ಗ ಮರಣ ಹೊಂದಿದ್ದರಿಂದ ಇಲ್ಲವೇ ಗಾಯಗೊಂಡಿದ್ದರಿಂದ ದುರಂತ ಸಂಭವಿಸಿದಾಗ ಎರಡು ಪಟ್ಟಣಗಳ ಜನರಿಗೆ ತ್ವರಿತ ವೈದ್ಯಕೀಯ ಉಪಚಾರಗಳು ಲಭಿಸಲಿಲ್ಲ.

ಹಿರೋಷಿಮಾದಲ್ಲಿ ಸುಮಾರು ೭೬,೦೦೦ ಮತ್ತು ನಾಗಸಾಕಿಯಲ್ಲಿ ೫೦,೦೦೦ ಕಟ್ಟಡಗಳು ಧ್ವಂಸವಾದವು. ಅಣು ಬಾಂಬು ಸಿಡಿದಾದ ಕೆಲ ವರ್ಷಗಳ ನಂತರವೂ ಅಲ್ಲಿನ ಜನ ವಿಕಿರಣದ ಪರಿಣಾಮದಿಂದಾಗಿ ವಿವಿಧ ರೋಗಗಳಿಗೆ ತುತ್ತಾಗಿ ಸಾವಿಗೀಡಾದರು. ಈಗಲೂ ಅಲ್ಲಿ ಜನಿಸುವ ಮಕ್ಕಳು ಬದಲಾದ ಅನುವಂಶಿಕ ಗುಣ ಮತ್ತು ಶಾರೀರಿಕ ದೋಷಗಳನ್ನು ಪಡೆದುಕೊಂಡು ಹುಟ್ಟುತ್ತಿದ್ದರೆ.

ದುರಂತ ಸಂಭವಿಸಿ ಈಗ ೫೦ ವರ್ಷಗಳು ಕಳೆದಿವೆ. ಜಪಾನಿಯರ ಪಾಲಿಗೆ ಆ ಎರಡು ದಿನಗಳು ಕರಾಳ ದಿನಗಳೇ ಸರಿ. ಬಹುಶಃ ಅವರು ಆ ದುರಂತ ಮತ್ತು ದಿನಗಳನ್ನು ಎಂದೂ ಮರೆಯಲಾರರು. ದುರಂತ ಸಂಭವಿಸಿದ ಸ್ಥಳ ಈಗ ಕೂಡ ಉಪಯೋಗವಿಲ್ಲದಾಗಿದೆ. ಅಲ್ಲಿ ಶಾಂತಿ ಸ್ಮಾರಕಗಳನ್ನು ನಿರ್ಮಿಸಿರುವ ಅವರು ಈ ದಿನಗಳಲ್ಲಿ ವಿಶೇಷ ಶಾಂತಿ ಸಭೆಗಳನ್ನು ನಡೆಸಿ ದುರಂತದಲ್ಲಿ ಮಡಿದ ತಮ್ಮ ಬಂಧು-ಮಿತ್ರರನ್ನು ನೆನೆಯುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಮೊರೆಹೋಗುತ್ತಾರೆ.

ಅಮೆರಿಕ ಜಪಾನಿನ ಮೇಲೆ ಹೀಗೆ ಎರಡು ಅಣು ಬಾಂಬುಗಳನ್ನು ಪ್ರಯೋಗಿಸಿ ಜಗತ್ತಿಗೆ ಇಂತಹ ಭೀಕರ ಅಸ್ತ್ರದ ಕಲ್ಪನೆಯನ್ನು ಮೊದಲ ಬಾರಿಗೆ ಮಾಡಿಕೊಟ್ಟಿತ್ತು. ಮಾನವನ ಇತಿಹಾಸದಲ್ಲಿ ಈ ದುರಂತವನ್ನು ಮಾನವನೇ ಎಸಗಿದ ಅತ್ಯಂತ ಭೀಕರ ನಾಶ ಎಂದೇ ಹೆಸರಿಸಬಹುದು. ಅಣು ಬಾಂಬಿನಿಂದ ಸಕಲ ಜೀವರಾಶಿಗಳ ಸರ್ವನಾಶ ಖಂಡಿತ ಎನ್ನುವುದು ತಿಳಿದಿದ್ದರೂ ಮಾನವ ಅದರ ಶಾಶ್ವತ ನಿವಾರಣೆಗೆ ಪರಿಣಾಮಕಾರಿಯಾದ ಮಾರ್ಗ ಅನುಸರಿಸುತ್ತಿಲ್ಲ ವೆನ್ನುವುದು ಈಗಿನ ಕಾಲದ ದುರಂತಗಳಲ್ಲೊಂದು.

ಪರಿಣಾಮ
ಅಣುಬಾಂಬು ಸ್ಪೋಟಗೊಂಡಾಗ ಏಕಕಾಲದಲ್ಲಿ ಅಪಾರ ಶಕ್ತಿ ಬಿಡುಗಡೆಯಾಗುವುದರೊಂದಿಗೆ ನ್ಯೂಟ್ರಾನ್, ಅಯೋಡಿನ್-೧೩೧ ಮತ್ತು ಸ್ಟ್ಯಾನ್ ಸಿಯಂಗಳು ಬಿಡುಗಡೆಯಾಗುತ್ತವೆ. ನ್ಯೂಟ್ರಾನುಗಳು ವಾಯುವೇಗದಲ್ಲಿ ಚಲಿಸುವಾಗ ದಾರಿಯಲ್ಲಿ ಸಿಕ್ಕ ಯಾವುದೇ ದೇಹವನ್ನು ಹೊಕ್ಕು ಜೀವಾಣುಗಳನ್ನು ನಾಶ ಪಡಿಸಬಲ್ಲವು. ಅಯೋಡಿನ್-೧೩೧ ಬಿಳಿಯ ರಕ್ತ ಕಣ, ಅಸ್ತಿಮಜ್ಜೆ, ಗುಲ್ಮಗಳನ್ನು ನಾಶಪಡಿಸುವುದಲ್ಲದೇ ದೇಹದಲ್ಲಿ ಗಂಟು ಬೆಳೆಯಲು ಕಾರಣವಾಗುತ್ತದೆ. ವಿಕಿರಣಶೀಲತೆಯ ಪರಿಣಾಮದಿಂದ ವಂಶವಾಹಿಗಳಲ್ಲಿ ಬದಲಾವಣೆ ಮತ್ತು ಜೀವಿಗಳಲ್ಲಿ ಆಕಸ್ಮಿಕ ಬದಲಾವಣೆ ಅಂದರೆ ಮ್ಯುಟೇಷನ್ ಕೂಡ ಆಗಬಹುದು. ಇದು ಮಾನವನ ಆಯುಷ್ಯವನ್ನು ಕ್ಷೀಣಿಸುವಂತೆ ಮಾಡಬಹುದಲ್ಲದೆ ಕ್ಯಾನ್ಸರನ್ನು, ಕಣ್ಣಿನ ಬೇನೆ, ಇತ್ಯಾದಿ ರೋಗಗಳನ್ನೂ ತರಬಲ್ಲದು.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದವೆಲ್ಲರಿಗೊಂದಲ್ಲವೆಂಬಾ ದ್ವಂದ್ವ ವಂದ್ಯವಲ್ಲವೇ?
Next post ಒಂದೇ ಒಂದು ಬಿಳಿಯ ಕೂದಲು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys