ಸತ್ಯ

ಚಿತ್ರ: ಕರಿನ್ ಹೆನ್ಸೆಲರ್‍
ಚಿತ್ರ: ಕರಿನ್ ಹೆನ್ಸೆಲರ್‍

ಆಕೆ ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸು.  ನೋಡಲು ಸುಂದರಿ.  ತವರುಮನೆಯಲ್ಲಿದ್ದ ಆಕೆ ವಿಧವಾ ಬದುಕನ್ನು ಸಹಜವಾಗಿ ಅನುಭವಿಸತೊಡಗಿದ್ದಳು.  ಪುರಾಣ, ಪುಣ್ಯಕಥೆಗಳನ್ನು ಆಲಿಸುವಲ್ಲಿ, ಮಠ, ದೇವಾಲಯಗಳಿಗೆ ಹೋಗುವಲ್ಲಿ ಶ್ರದ್ಧೆ ಬೆಳೆಸಿಕೊಂಡಿದ್ದಳು.  ಅವಳ ಅಲೌಕಿಕ ತುಡಿತಗಳನ್ನು ಊರಿನ ಮಠದ ಸ್ವಾಮಿಗಳು ತುಂಬಾ ಮೆಚ್ಚಿಕೊಂಡಿದ್ದರು.  ಮತ್ತು ಅವಳನ್ನು ಗೌರವಿಸುತ್ತಿದ್ದರು.  ಅವಳ ಪರಿಶುದ್ಧ ಜೀವನ ಬಗೆ ಜನರಿಗೂ ಹೆಮ್ಮೆ ತಂದಿತ್ತು.

ಮನುಷ್ಯನ ಜೀವನದ ಘಟನೆಗಳು ತೀರ ಆಕಸ್ಮಿಕ.

ಅಂಥದೊಂದು ಪ್ರಸಂಗ ಅವಳನ್ನು ಆತಂಕಕ್ಕೀಡು ಮಾಡಿಬಿಟ್ಟಿತು.  ಈಗವಳ ಬಗ್ಗೆ ಜನರ ನಾಲಗೆಗಳು ಪಿಸುಪಿಸು ನುಡಿಯಲಾರಂಭಿಸಿದವು.  ಆಕೆಯ ಬಸಿರು ಅದಕ್ಕೆ ಕಾರಣ.

ಹೊಟ್ಟೆ ಬೆಳೆಯುತ್ತಿದ್ದಂತೆ ಮನೆಯ ಜನರಂತೂ ಮುಳ್ಳಿನ ಮೇಲೆ ಮಲಗಿದಂತೆ ಒದ್ದಾಡತೊಡಗಿದರು.  ಜನರು ತಮ್ಮ ಗೊಡವೆಗಳನ್ನು ಬದಿಗಿಟ್ಟು ಅವಳ ಬಸಿರಿನ ಮೂಲ ಜಾಲಾಡುತ್ತ ರೋಚಕ ಸಂಗತಿಗಳನ್ನು ಹೆಣೆಯತೊಡಗಿದರು.  ಆದರೆ ಆಕೆ ಮಾತ್ರ ಮೌನಿಯಾಗಿದ್ದಳು.

ಈ ಬಸಿರಿಗೆ ಕಾರಣರಾದ ಪುರುಷ ಯಾರು?  ಎಲ್ಲರದೂ ಇದೆ ಪ್ರಶ್ನೆ-ಆದರೆ ಆಕೆ ಮಾತ್ರ `ಗೊತ್ತಿಲ್ಲ’ ಎನ್ನವಳು.  ರಮಿಸುವ, ಶಿಕ್ಷಿಸುವ, ಬೆದರಿಸುವ ಎಲ್ಲ ತಂತ್ರಗಳಿಗೂ ಅವಳದು ಒಂದೇ ಉತ್ತರ.  ಕೊನೆಗೆ ಮನೆಯವರು ಅವಳನ್ನು ಮಠಕ್ಕೆ ಕರೆದುಕೊಂಡು ಬಂದು ಸ್ವಾಮಿಗಳೆದುರು ನಿಲ್ಲಿಸಿದರು.

ಮಠದ ಬಗ್ಗೆ, ಸ್ವಾಮಿಗಳ ಬಗ್ಗೆ ಬಹಳ ಭಕ್ತಿ, ಶ್ರದ್ಧೆ, ಗೌರವ ಇರಿಸಿಕೊಂಡಿದ್ದ ಆಕೆ ಅಲ್ಲಿ ನಿಜಸಂಗತಿಯನ್ನು ಹೇಳುತ್ತಾಳೆಂದು ತಾಯಿ-ತಂದೆಗಳ ನಂಬಿಕೆಯಾಗಿತ್ತು.

“ಮನುಷ್ಯ ತಪ್ಪು ಮಾಡುವುದು ಸಹಜ.  ಆದರೆ ಅದಕ್ಕೆ ಪಶ್ಚಾತ್ತಾಪ ಪಟ್ಟರೆ ದೇವರಿಗೆ ಇಷ್ಟವಾಗುವುದು” ಎಂದು ಸ್ವಾಮೀಜಿ ಅವಳ ಗರ್ಭದ ಸತ್ಯ ಹೊರಗೆ ಹಾಕಲು ಯತ್ನಿಸಿದರು.

“ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ.  ಆದರೆ ಈ ಬಸಿರಿಗೆ ಕಾರಣರಾದವರ ಹೆಸರು ಹೇಳುವುದಿಲ್ಲ”  ಆಕೆ ಮೊದಲ ಬಾರಿ ಇಷ್ಟು ಮಾತನಾಡಿದ್ದಳು.

“ಇದು ನಿನ್ನ ಚಾರಿತ್ರ್‍ಯದ ಪ್ರಶ್ನೆ.  ನಿನ್ನ ಮನೆಯವರ ಮಾನದ ಪ್ರಶ್ನೆ.  ಎಲ್ಲರಿಗೂ ಸತ್ಯ ಗೊತ್ತಾಬೇಕು.  ನಿನ್ನ ಬದುಕಿಗೆ ಅನ್ಯಾಯವಾಗಬಾರದು” ತುಸು ಏರುಧ್ವನಿಯಲ್ಲಿ ಸ್ವಾಮೀಜಿ ನಿಗೂಢತೆಯನ್ನು ಬಯಲುಗೊಳಿಸಲು ಪ್ರೇರೇಪಿಸಿದರು.

“ನಾನು ಬಸಿರಾಗಿದ್ದೇನೆ ಇದು ಸತ್ಯ” ತಲ್ಲಣಕ್ಕೀಡಾಗದೆ ಹೇಳಿದಳಾಕೆ.

“ನೀನು ಅಂತರಂಗದ ಸತ್ಯವನ್ನು ಹೇಳುತ್ತಿಲ್ಲ”  ಸಮಾಜದ ಮುಖ್ಯಸ್ಥನೊಬ್ಬ ಕೆರಳಿದ್ದ.

“ನೀವು ಈ ಜೀವ ತೆಗೆದರೂ ನಾನು ಈ ಬಸಿರಿಗೆ ಕಾರಣರಾದವರ ಬಗ್ಗೆ ಹೇಳುವುದಿಲ್ಲ” ಅವಳು ದೃಢವಾಗಿದ್ದಳು.

ಜನರು ಸ್ತಂಭೀಭೂತರಾಗಿ ಕುಳಿತರು.  ಸ್ವಾಮಿಗಳೆದುರು ಅವಳು ಉದ್ಧಟತನ ತೋರುತ್ತಿದ್ದಾಳೆಂದು ಒಳಗೊಳಗೆ ಸಿಟ್ಟು.  ಮತ್ತೊಬ್ಬ ಎದ್ದು ನಿಂತು ಹೇಳಿದ “ಸ್ವಾಮಿಗಳು ನಮಗೆ ಪೂಜ್ಯರು.  ನಿರ್ಮಲ ಚಿತ್ತದವರು.  ಅವರೆದುರಾದರೂ ಸತ್ಯ ಹೇಳು” ಕೂಡಿದ ಜನರೂ ಈ ಮಾತಿಗೆ ಬೆಂಬಲಿಸಿದರು.

ಆಕೆ ತನ್ನ ನಿಲುವನ್ನು ಪ್ರಕಟಿಸಲಿಲ್ಲ.

ಸಭೆಯಲ್ಲಿ ಹಿಂಸಾತ್ಮಕ ಧೋರಣೆಯ ಪ್ರವೃತ್ತಿ ಕಾವುಗೊಳ್ಳುತ್ತಿರುವಂತೆ ಸ್ವಾಮೀಜಿ “ಸತ್ಯ ಕಠೋರ ಮತ್ತು ನಿಷ್ಠುರ.  ಅದು ಬಹಿರಂಗವಾದರೆ ಆಗುವ ಪರಿಣಾಮ ಎಂಥದೋ?  ಅವಳಿಗೆ ಒಂದಿಷ್ಟು ಸಮಯ ಕೊಡಿರಿ” ಎಂದರು.

ಸಭೆ ಸಮ್ಮತಿಸಿತು.  ಕೂಡಿದ ಜನ ನಾಳೆ ಸೇರೋಣವೆಂದು ಎದ್ದು ನಡೆದರು.  ಆಕೆ ನಿಂತಲ್ಲಿಯೆ ಕುಳಿತಳು.  “ನೀನು ಸತ್ಯ ಹೇಳುವ ತನಕ ನಮ್ಮ ಮನೆಗೆ ಬರಬೇಡ” ಎಂದು ತಾಯಿ-ತಂದೆಗಳು ಹೊರಟು ಹೋದರು.

ಮರುದಿನ ಸತ್ಯ ಬಯಲಾಗಿತ್ತು.  ಸ್ವಾಮೀಜಿ ಬರೆದಿಟ್ಟಿದ್ದರು.

“ಅವಳ ಬಸಿರಿಗೆ ಕಾರಣ ನಾನು.  ಕಾವಿಯಲ್ಲಿ ಕಾಮನೆಗಳನ್ನು ಬಚ್ಚಿಟ್ಟುಕೊಂಡು ನಿಮ್ಮನ್ನು ವಂಚಿಸಲು ನನ್ನಿಂದ ಸಾಧ್ಯವಿಲ್ಲ.  ಕ್ಷಮಿಸಿ, ನಾವು ದೂರ ಹೋಗುತ್ತಿದ್ದೇವೆ.”

*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...