ಅಮರ ಕಲಾವಿದ ಸಪ್ದರ

ಅಮರ ಕಲಾವಿದ ಸಪ್ದರ

ಹೊಸ ವರ್ಷದ ಹರುಷವನ್ನು ಸ್ವಾಗತಿಸುತ್ತಾ, ಸ್ವಾದಿಸುತ್ತಾ ದೆಹಲಿಯ ಸಮೀಪದ ಸಾಹಿ ಬಾಬಾದಲ್ಲಿ ಜನನಾಟ್ಯ ಮಂಚ ತಂಡದ ‘ಹಲ್ಲಾ ಬೋಲಾ’ ನಾಟಕದ ಹಾಸ್ಯಮಯ ದೃಶ್ಯ ವೀಕ್ಷಿಸುತ್ತಾ ಕಲೆಯ, ಅಭಿನಯದ ಸವಿ ಸವಿಯುತ್ತಲಿದ್ದ ಪ್ರೇಕ್ಷಕರ ಮಧ್ಯೆ ಒಮ್ಮೆಲೇ ಕ್ರೂರ ಮೃಗಗಳಂತೆ ದಾಳಿಯಿಟ್ಟ ಕೆಲ ಧಾಂಡಿಗರ ಅನಾಗರಿಕ ವರ್ತನೆ. ಅಲ್ಲೆಲ್ಲಾ ಹರಡಿ, ಮಾನವೀಯತೆ ಕಾಲಲ್ಲಿ ತುಳಿದ ಸಮಾಜಘಾತುಕ ಗೂಂಡಾಗಳಿಗೆ ಬಲಿಯಾಗಿ, ಸಾರಸ್ವತ ಲೋಕದಲ್ಲಿ ಭಾರಿ ಭರವಸೆ ಮೂಡಿಸಿದ್ದ ಮತ್ತು ಜನಪದ ರಂಗಭೂಮಿ, ಬೀದಿ ನಾಟಕಗಳ ಪುನರುಜೀವನಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಅರಳುತ್ತಿರುವಾಗಲೇ ಅಮಾನುಷವಾಗಿ ಅಪ್ರತಿಮ ಕಲಾಪ್ರೌಢಿಮೆಯ ಹದಿಹರೆಯದ ಸಪ್ದರ ಹಸ್ಮಿಯ ಪ್ರಾಣವು, ಹೊಸ ವರ್ಷದ ಆ ನಡು ಮಧ್ಯಾಹ್ನ ಸುಡುಬಿಸಿಲಲ್ಲಿ ದೇಹವನ್ನು ತೊರೆದು ಅಮರನಾಗಿಸಿತು.

ಸಪ್ದರ ಹಶ್ಮಿಯ ಸಾವು, ಈ ವ್ಯವಸ್ಥೆಯಲ್ಲಿ ಪ್ರತಿದಿನ ನಡೆಯುತ್ತಿರುವ ಅಸಂಖ್ಯಾತ ಸಾವುಗಳು, ಒಬ್ಬ ಸಾಮಾನ್ಯ ತರುಣ ವ್ಯಕ್ತಿಯ ಕೊಲೆಯಾಗಿದ್ದರೆ ಅನತಿ ಕಾಲದಲ್ಲಿಯೇ ನೆನಪಿನಿಂದ ಮರೆಯಾಗುತ್ತಿತ್ತು.

ಆದರೆ ಹಾಗಾಗಲಿಲ್ಲ, ಹುತಾತ್ಮ ಸಪ್ದರ ಹಶ್ಮಿಯ ರಕ್ತ, ವ್ಯರ್ಥವಾಗಿ ಹರಿದು ಹೋಗಲಿಲ್ಲ ಎಂಬುದು ಚರಿತ್ರೆಯಲ್ಲಿ ಸಾಬೀತಾಗಿದೆ, ಸಪ್ದರ ಬದುಕಿರುವಾಗ ಹೇಗೋ ಹಾಗೆಯೇ ಸಾವಿನಲ್ಲಿಯೂ ತಮ್ಮ ಹಾಡು, ಬರಹ, ನಾಟಕಗಳ ಮೂಲಕ ಸಮಾಜದ ನೈಜ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲು ಜನರನ್ನು ಹುರಿದುಂಬಿಸುವಲ್ಲಿ ಸಫಲರಾದರು.

ಸಪ್ದಾರ ಹಶ್ಮಿ ನೊಂದ ಜನತೆಯ ಪರವಾಗಿ ಕನಿಕರ, ಅನುಕಂಪವಿರುವ ಕುಟುಂಬದಲ್ಲಿ ೧೯೫೪ರ ಏಪ್ರಿಲ್ ೧೨ರಂದು ದೆಹಲಿಯಲ್ಲಿ ಜನಿಸಿದರು.

ಬಾಲ್ಯದಲ್ಲಿಯೇ ನಾಟಕದ ಗೀಳು ಹಚ್ಚಿಕೊಂಡ ಸಪ್ದರ ಸೆಂಟ್ ಸ್ಟೀಪನ್ ಕಾಲೇಜಿನಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದ ಸಪ್ದರ ಹಶ್ಮಿ ಇಂಗ್ಲಿಷ್, ಉರ್ದು, ಹಿಂದಿ ಭಾಷೆಗಳಲ್ಲದೆ, ಅಭಿಮಾನದ ಸಂಗತಿಯೆಂದರೆ ಕನ್ನಡದಲ್ಲಿಯೂ ಪರಿಣಿತರಾಗಿದ್ದರು. ಅವರು ವಿದ್ಯಾರ್‍ಥಿಯಿರುವಾಗ ಎಸ್.ಎಫ್.ಯ್. ಸಾಂಸ್ಕೃತಿಕ ವಿಭಾಗದ ಕಾರ್‍ಯಕರ್‍ಥರಾಗಿದ್ದರು. ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್, ಹಳೆಯ ಹಾಡುಗಳನ್ನು ಮುಷ್ಕರ ನಿರತ ಕಾರ್ಖಾನೆಗಳ ಕಾರ್‍ಮಿಕರ, ಕಟ್ಟಡ ಕೆಲಸಗಾರರ, ವಿಶ್ವವಿದ್ಯಾನಿಲಯದ ಮುಂದೆ ಸಾಮೂಹಿಕ ಹಾಡುವ ಹವ್ಯಾಸ ಹೊಂದಿದ್ದರು.

೧೯೭೬ ರಲ್ಲಿ ಸಪ್ದರ್, ಸಿಪಿ‌ಐ (ಎಂ) ಪಕ್ಷದ ಸದಸ್ಯರಾದರು. ೧೯೭೮ರಲ್ಲಿ ಜನ ನಾಟ್ಯ ಮಂಚ ತಂಡದ ಸ್ಥಾಪಕರಲ್ಲಿ ಒಬ್ಬರಾದರು. ಕೆಲದಿನ ವಿಶ್ವವಿದ್ಯಾನಿಲಯ ಆಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಪಶ್ಚಿಮಬಂಗಾಲದ ವಾರ್‍ತಾ ಅಧಿಕಾರಿಯಾದರು, ೧೯೮೩ರಿಂದ ಪೂರ್ಣ ಪ್ರಮಾಣದ ರಂಗಕಲಾವಿದರಾಗಿ ‘ರಂಗಕಲೆ’ ನಾಟಕಗಳಲ್ಲಿ ತೊಡಗಿಸಿಕೊಂಡರು.

ದೇಶದ ಶ್ರೇಷ್ಠ ಬೀದಿ ನಾಟಕಕಾರರಾದರು. ಜನರನ್ನು ಒಗ್ಗುಡಿಸಿ ನಾಟಕ ಬರೆದರು, ನಿರ್‍ದೇಶಿಸಿದರು. ಸಪ್ದರ ಬೀದಿ ನಾಟಕವನ್ನು ಅಭಿವೃದ್ಧಿಗೊಳಿಸಿ, ಶ್ರೀಮಂತವಾಗಿಸಿ ಅದಕ್ಕೊಂದು ಅಭಿವ್ಯಕ್ತಿಯ ವಿಶಿಷ್ಟಭಾಷೆಯನ್ನು ನೀಡಿ, ಪ್ರಬಲ ಕ್ರಿಯಾತ್ಮಕ ಶಕ್ತಿಯನ್ನಾಗಿ ಮಾಡಿ, ಕಳೆದ ಹತ್ತು ವರ್‍ಷಗಳಲ್ಲಿ ಜನನಾಟ್ಯ ತಂಡದ ೨೨ ನಾಟಕಗಳನ್ನು, ೯೦ ನಗರಗಳಲ್ಲಿ, ೪,೩೦೦ ಪ್ರದರ್‍ಶನಗಳನ್ನು ೨೦ ಲಕ್ಷಕ್ಕಿಂತ ಹೆಚ್ಚು ಪ್ರೇಕ್ಷಕರನ್ನು ತಲುಪಿಸಿದ ಕೀರ್‍ತಿ ಸಪ್ದರ ಹಶ್ಮಿಯವರದು.

ಹಶ್ಮಿಯವರ ಹಲವು ನಾಟಕಗಳು ಪ್ರಸಕ್ತ ರಾಜಕೀಯ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುವಂತಹ, ರಾಜಕೀಯ ಚದುರಂಗದ ಬಲಿಪಶುವಾಗಿ, ಅಸಹಾಯಕತೆಯಲ್ಲಿ ಬಳಲುವ ಶ್ರೀಸಾಮಾನ್ಯನ ಧ್ವನಿಯಾಗಿ, ಪ್ರತಿಬಿಂಬಿಸುವ ಸಾಮ್ರಾಟ ತುಳಿತಕ್ಕೊಳಗಾದ ಮಹಿಳೆಯರ ಕುರಿತಾದ ‘ಔರತ’ ಶ್ರಮಿಕ ವರ್‍ಗದ ದಾರುಣ ಜೀವನನ್ನು ಪ್ರತಿಧ್ವನಿಸುವ ‘ಚಕ್ ಜಾಮ’ ‘ಮಶಿನ್’ ‘ಹಲ್ಲಾಬೊಲ್ಲಾ’ ‘ಬಕ್ರಿ’ ಹಾಗೂ ‘ಗಾವೋಸೆ ಶಹರ ತಕ್’ ಇಂಥ ಕ್ರಾಂತಿಕಾರಿ, ನೈಜ ದಬ್ಬಾಳಿಕೆಯ, ಅನ್ಯಾಯಗಳ, ರೂಪಕವಾದ ನಾಟಕಗಳಿಂದ, ಸರ್‍ಕಾರಕ್ಕೆ ತಲೆನೋವಾಗಿದ್ದರು.

‘ರಂಗಭೂಮಿ’ ನನಗೆ ಪ್ರತಿಭಟನೆಯ ಪ್ರಬಲ ಮಾಧ್ಯಮ. ರಂಗಭೂಮಿಯ ಮುಖ್ಯ ಉದ್ದೇಶ ಹೋರಾಟ ಮಾಡುವದು ಮತ್ತು ಜನರನ್ನು ಕಾರ್‍ಯೋನ್ಮುಖರಾಗಿ ಮಾಡುವದು – ಎನ್ನುವ ಸಪ್ದರರ ಬೀದಿ ನಾಟಕಗಳು ಕ್ರಾಂತಿಕಾರಿಯಾಗಿದ್ದರೂ, ಕೇವಲ ಪ್ರಚಾರ ಮಾಧ್ಯಮದ ಘೋಷಣೆಗಳಾಗಬಾರದು ಎಂದು ಸ್ಪಷ್ಟಪಡಿಸುತ್ತಾರೆ. ಮುಂದುವರಿಯುತ್ತಾ ‘ನಮ್ಮ ಹೋರಾಟ ವರ್‍ಗ ವೈರಿಗಳ ವಿರುದ್ಧವೇ ಹೊರತು ಅವರ ಪರ ಪಾತ್ರವಹಿಸುತ್ತಿರುವ ಪೋಲೀಸರಂತಹ ಜನರ ವಿರುದ್ದವಲ್ಲ. ನಾವು ಜನರನ್ನು ಎದುರುಹಾಕಿಕೊಳ್ಳಬಾರದು ಎಂಬ ಸತ್ಯ ಕಂಡಿದ್ದರು ಸಪ್ದರ.

“ಪ್ರೇರಕಶಕ್ತಿಯಾಗಿ, ಇದರ ಯಶಸ್ಸಿನ ಹಿಂದಿನ ವ್ಯಕ್ತಿಯಾಗಿದ್ದ ಬಾಳಸಂಗಾತಿ, ಪತ್ನಿ ಮಾಲಾ ಜತೆಯಲ್ಲಿ ರಂಗಭೂಮಿಗೆ ತನ್ನ ಬೆವರು, ರಕ್ತ ಹರಿಸಿದರು. ಜೀವ ತುಂಬಿದರು. ವಿವರಣಾತೀತ ಕಲೆರೂಪ ಕೊಡಿಸಿ ಶ್ರೀಮಂತಗೊಳಿಸಿದರು. ಅದೇ ಕಲೆಗಾಗಿ ರಂಗಭೂಮಿಗಾಗಿ, ಅಮಾನುಷವಾಗಿ ಹತ್ಯೆಗೀಡಾಗಿ, ಕಲಾದಿಗಂತದಿ ಮಿನುಗುವ ತಾರೆಯಾಗಿ ಅಮರರಾದರು.

ಬೀದಿ ನಾಟಕಗಳ ಮತ್ತು ಪ್ರೊಸೇನಿಯಂ ನಾಟಕಗಳ ಬಗ್ಗೆ ಸಮನಾದ ಗೌರವಭಾವದ ಹಶ್ಮಿ, ಇತ್ತೀಚೆಗೆ ತಾನೆ ಪ್ರೊಶೆನಿಯಂ ನಾಟಕ ಮಾಧ್ಯಮದಲ್ಲಿ ಶೇಕ್ಸ್ಪಿಯರನ, ಕಾಳಿದಾಸನ, ಜೈಶಂಕರ ಪ್ರಸಾದರ ನಾಟಕಗಳ ರಸದೂಟ, ದುಡಿಯುವ ಜನರಿಗೆ ತೋರಿಸುವ ಕನಸು ಕಂಡಿದ್ದರು. ಮೂಲಭೂತ ಸಮಸ್ಯೆಗಳಾದ ‘ಬದುಕು ಸಾವು ಮತ್ತು ಪ್ರೇಮ’ ವಸ್ತುಗಳುಳ್ಳ ಸೂಕ್ಷ್ಮ ವಿಷಯಗಳನ್ನು ಅಭಿವ್ಯಕ್ತಗೊಳಿಸಲು ಆಶಿಸಿದ ಸಪ್ದರ ಬಯಕೆ ಅಮಾನುಷವಾಗಿ ಮರೆಯಾದುದು ಕಲಾ ಜಗತ್ತಿಗೆ ತುಂಬದ ಹಾನಿ.

ಸಪ್ದರು ಕರ್ನಾಟಕಕ್ಕೆ ಹೊಸಬರಾಗಿರಲಿಲ್ಲ, ತಮ್ಮ ಬೀದಿ ನಾಟಕಗಳ ಮೂಲಕ ಕರ್ನಾಟಕದಲ್ಲಿಯೂ ಹೆಸರಾಗಿದ್ದರು. ಇವರ ಖ್ಯಾತ ಬೀದಿ ನಾಟಕ ‘ಔರತ’ ಹಿಂದಿ ನಾಟಕದ ಅನುವಾದ ‘ಹೆಣ್ಣು’ ರಾಜ್ಯದಲ್ಲೆಲ್ಲಾ ಪ್ರದರ್ಶನ ಕಂಡು ತಮ್ಮದೇ ಆದ ಸೀಮಿತ ಪ್ರೇಕ್ಷಕ ವರ್ಗ, ಅಭಿಮಾನಿಗಳ ಪ್ರೀತಿಗಳಿಸಿದ್ದ ಹಶ್ಮಿ ದೆಹಲಿಯ ಕನ್ನಡ ಮಾಧ್ಯಶಾಲೆಯಲ್ಲಿ ನಾಲ್ಕನೆ ವರ್ಗದವರೆಗೆ ಓದಿದ್ದರೆಂಬುದು, ಕೂಡಾ ಕನ್ನಡಿಗರಾದ ನಮಗೆಲ್ಲಾ ಹೆಮ್ಮೆ ತರುವ ವಿಷಯ.

ದಿವಂಗತ ಹಶ್ಮಿಯವರು ತಮ್ಮ ಜೀವಿತಕಾಲದಲ್ಲಿ ಶ್ರಮಿಸುತ್ತಿದ್ದ ಧೈಯೋದ್ದೇಶಗಳಿಗಾಗಿ ಮತ್ತು ಅವುಗಳಿಗಾಗಿ ಹುತಾತ್ಮರಾದ ಮೌಲ್ಯಗಳಿಗಾಗಿ ಜನಪರ ರಂಗಭೂಮಿಯನ್ನು ದೇಶಾದ್ಯಂತ ಇನ್ನಷ್ಟು ಮುಂದುವರೆಸಿಕೊಂಡು ಹೋಗಲು ಅಭಿವ್ಯಕ್ತಿ ಸ್ವಾತಂತ್ರ, ರಾಷ್ಟ್ರೀಯ ಐಕ್ಯತೆ, ಕೋಮು ಸೌಹಾರ್ಧತೆ, ಪ್ರಜಾಪ್ರಭುತ್ವ ರಕ್ಷಣೆಗೆ ಜನಪರ ಹೋರಾಟಗಳನ್ನು ಇನ್ನಷ್ಟು ಹರಿತಗೊಳಿಸಲು ಕಲಾವಿದರು, ರಂಗಕರ್ಮಿಗಳು, ಬರಹಗಾರರು, ಬುದ್ದಿಜೀವಿಗಳಲ್ಲಿ ‘ತಮಸ್’ ಖ್ಯಾತಿಯ ಭೀಷ್ಮ ಸಹಾನಿ, ಕಲಾವಿದ ಎಂ.ಕೆ. ರೈನಾ, ಪ್ರಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಪೋಷಕರಾಗಿದ್ದರು. ಪ್ರಗತಿಪರ ಕಲಾವಿದರೆಲ್ಲ ಒಗ್ಗಟ್ಟಾಗಿ, ‘ಹಷ್ಮಿಯವರು ಯಾವ ಮೌಲ್ಯಗಳಿಗಾಗಿ ಬದುಕಿದರೋ… ಮತ್ತು ಹುತಾತ್ಮರಾದರೋ’ ಅವುಗಳನ್ನು ಪ್ರಸಾರಗೊಳಿಸಲು, ಬೆಳೆಸಲು ಮುನ್ನಡೆಸಲು ನವದೆಹಲಿಯಲ್ಲಿ ‘ಸಪ್ದರ್ ಹಸ್ಮಿ’ ಸ್ಮಾರಕ ಸಮಿತಿ ಸ್ಥಾಪಿಸಿದ್ದು ಸ್ತುತ್ಯಾರ್ಹ, ಹಶ್ಮಿಯವರ ಆತ್ಮಕ್ಕೆ ನೀಡಿದ ಈ ಗೌರವದೊಂದಿಗೆ, ಹಶ್ಮಿಯವರ ಜನ್ಮ ದಿನಾಚರಣೆಯನ್ನು (ಏಪ್ರಿಲ್ ೧೨) ‘ರಾಷ್ಟ್ರೀಯ ಬೀದಿ ರಂಗಭೂಮಿ ದಿನಾಚರಣೆ’ಯಾಗಿ ಆಚರಿಸುವದು, ನಮ್ಮ ನಡುವಿರದ ಹಶ್ಮಿಯ ನೆನಪಾಗಿಸುತ್ತ, ಕಲಾಸೇವೆ, ರಂಗದಭಿರುಚಿ ಮೂಡಿಸಲು ಸಾಧನವಾಗಲಿದೆ.

ಸಪ್ದರ್ ಅವರ ರಂಗಸೇವೆ, ಜನಪರ ಕಾಳಜಿಯನ್ನು ಗುರುತಿಸಿದ ಕಲಕತ್ತಾ ವಿಶ್ವವಿದ್ಯಾನಿಲಯವು ಸಪ್ದರ ಹಶ್ಮಿ ಅವರಿಗೆ ಮರಣೋತ್ತರ ‘ಡಾಕ್ಟರ್ ಆಫ್ ಲಿಟರೇಚರ್’ ಪದವಿ ನೀಡಿ ಗೌರವಿಸಿತು. ಇದು ಜನಪರ ನವ ಸಂಸ್ಕೃತಿಗೆ ಸಂದ ಗೌರವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿಯಲ್ಲಿ ಹೆಜ್ಜೆ ಸದ್ದು
Next post ಮನಸ್ಸಿದ್ದಲ್ಲಿ ಮರುಭೂಮಿ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys