Home / ಕವನ / ಕವಿತೆ / ಕಂಕಣ

ಕಂಕಣ

ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ
ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ
ಪಡುವಲಿನ ಹೊಡೆತದಲಿ
ವಡಲೊಡೆದು ಬೇರೆನಿಸಿ
|| ಸಡಲಿರಲು ಪ್ರೇಮಬಂಧ ||

ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ
ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು
ಮೃಡನಲ್ಲಿ ಬೇಡಿದೆನು
ಬಿಡುಯೆಂದು ಹಣೆಗಣ್ಣ
|| ಸುಡುಯೆಂದು ಸತ್ಯ ಕುರುಹ ||

ತಾಳಿದಾವೇಶಗಳು ಬಾಳದೆಯೆ ಅಳಿದಿಹುವು
ಬೀಳದಲೆ ತರ್ಪಣದ ಜಲ ಮೊಳೆಯುವುವೆ ಬೀಜ!
ಮೂಜಗದ ಭಂಡಾರ
ಸೋಜಿಗದ ಕರುನಾಡು
|| ಈ ಜಗದ ಚಿತ್ರ ಭಿತ್ತಿ ||

ಚಾಳೀಸೆ ಕಂಗಳಲಿ ಕಾಣಿಸವೆ ! ಕರುಹುಗಳು
ಸಾಲದೀವಿಗೆಯಿಟ್ಟು ತೋರಣವ ಸಿಂಗರಿಸಿ
ಸೋಗೆಗಂಗಳ ಭಾಗ್ಯ
ಬಾಗಿ ಬಳುಕುತ ಬಹಳು
|| ಈಗಲಿದೊ ಹರಕೆ ಫಲಿಸಿ ||

ಎಣಿಸುತಿದೆ ಹೆಜ್ಜೆಗಳ ಮಹಿಷರ ಶಿರವನ್ನು
ಚಿಣಿಚಿಣನೆ ಚಿಗಿದೋಡೆ ಧಾರ್ವಾಡ ಹೃದಯವದು
ಉರ್ವಿಯನು ಮೆಟ್ಟುವೆನು
ಓರ್ವನೆನೆ ದಕ್ಖಿಣನು
|| ಮರ್ಮದಲಿನಾಡು ಕರೆಯೆ ||

ಸೆಣಸಲೆನೆ ಭಾರತಿಗೆ ಕರ್ಣಾಟ ಖಡ್ಗವಿದೆ
ಹಣೆಗಿಡಲು ತಿಲಕಕ್ಕೆ ಕರುನಾಡ ಕತ್ತುರಿಯು
ತನ್ನಿರವ ನೋಡಲಿಕೆ ಕನ್ನಡದ ಕನ್ನ ಡಿಯು
|| ಇನ್ನುಂಟೆ ತಾಯ್ಗೆ ಕೊರತೆ ||

ಶರಧಿಗಳ ಸಂತವಿಸಿ ಹರಿದ ಕಾವ್ಯಗಳೆಲ್ಲಿ
ಚಿರದಿನಕೆ ಬೆಳಕೀವ ಲಾವಣ್ಯ ರೂಹೆಲ್ಲಿ
ಯಾವಲ್ಲಿ ಅಡಗಿಹವು
ಯಾವಗಿರಿ ಗುಹೆಯಲ್ಲಿ
|| ಭಾವನೆಗೆ ನಿಲುಕದಂತೆ ||

ಕರುನಾಡ ನಡುವಲಿದೆ, ಹೇಮಗಿರಿ ಅಡರದನು
ಹಿರಿಯರೆಮಗಿಟ್ಟಿರುವ ಭಂಡಾರ ನಿಲುಕುವುದು
ಕಂಡವನು ಕೆಳಗಿಳಿದು
ಮಂಡಲಕೆ ಬಿತ್ತಿದರೆ.
|| ಮಂಡಿಗೆಯ ಭೂಮ ಮಹಿಗೆ ||

ಪಾಳೆಯಗಳಲ್ಲಲ್ಲಿ ಅಲೆಯಿಟ್ಟ ನಾಡಲ್ಲಿ
ಏಳಿಗೆಯ ಕಂಪಿಲ್ಲ ಬೆಳವಿಗೆಯ ಸೊಂಪಿಲ್ಲ
ತಿಳಿವಿನಾ ಶಾಂತಿಯಲಿ
ಕೊಳೆಯುವುದು ದಿವ್ಯಛವಿ
|| ಇಳೆಯೆಲ್ಲ ಮೇಳೈಸಲು ||

ಏಳಿರೇಳೇಳಿರಿ ಬೇಲೂರ ಪುತ್ಥಳಿಯ
ಪೌಳಿಯನು ಹಂಪೆಯಲಿ, ತೊಳೆದಿಟ್ಟು ಎಲ್ಲೋರ
ತಿದ್ದಿಟ್ಟು ತಿಳಿರಂಗ
ಹೊತ್ತಿಟ್ಟು ಗೋದೆಯಲಿ
|| ಸುತ್ತಿಸುವ ತೆಪ್ಪೋತ್ಸವ ||

ಕೊಂಕಣರ ಶ್ರೀಧಾಟಿ ಪಡುವಣರ ಪದ ಸರಣಿ
ತೆಂಕಣರ ನಯನೀತಿ ನಡುವಣರ ಜೀವಕಳೆ
ಬೆಳೆಯಲಿದು ಕರುನಾಡು
ಬೆಳೆಸಿಡುವ ಗುಟ್ಟಿದುವೆ
|| ತಿಳಿದವರು ಕಂಡತೆರನು ||

ಬಹುದಿನದ ಕಾಂತಿಯಿದೆ ಶ್ರೀ ಕೃಷ್ಣ ರೂಪದಲಿ
ವಹಿಸಿರಿದ ಹೃದಯದಲಿ ಬೆಳೆವಹಿಯ ಸಜ್ಜೆಯಲಿ
ಬಾಳುವಿರಿ ಬಲು ದಿನದ
ಏಳಿಗೆಯ ಸೊಡರುರಿದು
|| ಕೇಳಿರಿದು ಬೆಳೆವ ಗುಟ್ಟು ||

ಮುಂದಿನಾ ಮಧು ಯುಗವು ಮೊಗ್ಗಿನೊಳಗಡಗಿಹುದು
ಮುಂದದನು ಆಳುವರು ನಿಮ್ಮೊಳಗೆ ಜನಿಸುವರು
ಬೊಮ್ಮ ವರ್ತನೆಯಲ್ಲಿ
ಮುಮ್ಮೊದಲು ಬೆಳೆದಿಹರು
|| ನಿಮ್ಮವರು ಹಿರಿಯರೆಲ್ಲ ||

ಒಂದಾಗಿರೊಂದಾಗಿ ಕಂಕಣದ ಬಂಧದಲಿ
ಒಂದಾಗಿ ಮುಂದಿರುತ ವಿಶ್ವಕರ್ಣಾಟಕ
ವಿಶ್ವಾಸದಾರತಿಯ
ವಿಶ್ವಕೆನಲೆತ್ತಲಿದು
||ಶ್ರೀ ವಿಶ್ವಕರ್ಣಾಟಕ ||
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...