Home / ಕವನ / ಕವಿತೆ / ಕಂಕಣ

ಕಂಕಣ

ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ
ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ
ಪಡುವಲಿನ ಹೊಡೆತದಲಿ
ವಡಲೊಡೆದು ಬೇರೆನಿಸಿ
|| ಸಡಲಿರಲು ಪ್ರೇಮಬಂಧ ||

ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ
ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು
ಮೃಡನಲ್ಲಿ ಬೇಡಿದೆನು
ಬಿಡುಯೆಂದು ಹಣೆಗಣ್ಣ
|| ಸುಡುಯೆಂದು ಸತ್ಯ ಕುರುಹ ||

ತಾಳಿದಾವೇಶಗಳು ಬಾಳದೆಯೆ ಅಳಿದಿಹುವು
ಬೀಳದಲೆ ತರ್ಪಣದ ಜಲ ಮೊಳೆಯುವುವೆ ಬೀಜ!
ಮೂಜಗದ ಭಂಡಾರ
ಸೋಜಿಗದ ಕರುನಾಡು
|| ಈ ಜಗದ ಚಿತ್ರ ಭಿತ್ತಿ ||

ಚಾಳೀಸೆ ಕಂಗಳಲಿ ಕಾಣಿಸವೆ ! ಕರುಹುಗಳು
ಸಾಲದೀವಿಗೆಯಿಟ್ಟು ತೋರಣವ ಸಿಂಗರಿಸಿ
ಸೋಗೆಗಂಗಳ ಭಾಗ್ಯ
ಬಾಗಿ ಬಳುಕುತ ಬಹಳು
|| ಈಗಲಿದೊ ಹರಕೆ ಫಲಿಸಿ ||

ಎಣಿಸುತಿದೆ ಹೆಜ್ಜೆಗಳ ಮಹಿಷರ ಶಿರವನ್ನು
ಚಿಣಿಚಿಣನೆ ಚಿಗಿದೋಡೆ ಧಾರ್ವಾಡ ಹೃದಯವದು
ಉರ್ವಿಯನು ಮೆಟ್ಟುವೆನು
ಓರ್ವನೆನೆ ದಕ್ಖಿಣನು
|| ಮರ್ಮದಲಿನಾಡು ಕರೆಯೆ ||

ಸೆಣಸಲೆನೆ ಭಾರತಿಗೆ ಕರ್ಣಾಟ ಖಡ್ಗವಿದೆ
ಹಣೆಗಿಡಲು ತಿಲಕಕ್ಕೆ ಕರುನಾಡ ಕತ್ತುರಿಯು
ತನ್ನಿರವ ನೋಡಲಿಕೆ ಕನ್ನಡದ ಕನ್ನ ಡಿಯು
|| ಇನ್ನುಂಟೆ ತಾಯ್ಗೆ ಕೊರತೆ ||

ಶರಧಿಗಳ ಸಂತವಿಸಿ ಹರಿದ ಕಾವ್ಯಗಳೆಲ್ಲಿ
ಚಿರದಿನಕೆ ಬೆಳಕೀವ ಲಾವಣ್ಯ ರೂಹೆಲ್ಲಿ
ಯಾವಲ್ಲಿ ಅಡಗಿಹವು
ಯಾವಗಿರಿ ಗುಹೆಯಲ್ಲಿ
|| ಭಾವನೆಗೆ ನಿಲುಕದಂತೆ ||

ಕರುನಾಡ ನಡುವಲಿದೆ, ಹೇಮಗಿರಿ ಅಡರದನು
ಹಿರಿಯರೆಮಗಿಟ್ಟಿರುವ ಭಂಡಾರ ನಿಲುಕುವುದು
ಕಂಡವನು ಕೆಳಗಿಳಿದು
ಮಂಡಲಕೆ ಬಿತ್ತಿದರೆ.
|| ಮಂಡಿಗೆಯ ಭೂಮ ಮಹಿಗೆ ||

ಪಾಳೆಯಗಳಲ್ಲಲ್ಲಿ ಅಲೆಯಿಟ್ಟ ನಾಡಲ್ಲಿ
ಏಳಿಗೆಯ ಕಂಪಿಲ್ಲ ಬೆಳವಿಗೆಯ ಸೊಂಪಿಲ್ಲ
ತಿಳಿವಿನಾ ಶಾಂತಿಯಲಿ
ಕೊಳೆಯುವುದು ದಿವ್ಯಛವಿ
|| ಇಳೆಯೆಲ್ಲ ಮೇಳೈಸಲು ||

ಏಳಿರೇಳೇಳಿರಿ ಬೇಲೂರ ಪುತ್ಥಳಿಯ
ಪೌಳಿಯನು ಹಂಪೆಯಲಿ, ತೊಳೆದಿಟ್ಟು ಎಲ್ಲೋರ
ತಿದ್ದಿಟ್ಟು ತಿಳಿರಂಗ
ಹೊತ್ತಿಟ್ಟು ಗೋದೆಯಲಿ
|| ಸುತ್ತಿಸುವ ತೆಪ್ಪೋತ್ಸವ ||

ಕೊಂಕಣರ ಶ್ರೀಧಾಟಿ ಪಡುವಣರ ಪದ ಸರಣಿ
ತೆಂಕಣರ ನಯನೀತಿ ನಡುವಣರ ಜೀವಕಳೆ
ಬೆಳೆಯಲಿದು ಕರುನಾಡು
ಬೆಳೆಸಿಡುವ ಗುಟ್ಟಿದುವೆ
|| ತಿಳಿದವರು ಕಂಡತೆರನು ||

ಬಹುದಿನದ ಕಾಂತಿಯಿದೆ ಶ್ರೀ ಕೃಷ್ಣ ರೂಪದಲಿ
ವಹಿಸಿರಿದ ಹೃದಯದಲಿ ಬೆಳೆವಹಿಯ ಸಜ್ಜೆಯಲಿ
ಬಾಳುವಿರಿ ಬಲು ದಿನದ
ಏಳಿಗೆಯ ಸೊಡರುರಿದು
|| ಕೇಳಿರಿದು ಬೆಳೆವ ಗುಟ್ಟು ||

ಮುಂದಿನಾ ಮಧು ಯುಗವು ಮೊಗ್ಗಿನೊಳಗಡಗಿಹುದು
ಮುಂದದನು ಆಳುವರು ನಿಮ್ಮೊಳಗೆ ಜನಿಸುವರು
ಬೊಮ್ಮ ವರ್ತನೆಯಲ್ಲಿ
ಮುಮ್ಮೊದಲು ಬೆಳೆದಿಹರು
|| ನಿಮ್ಮವರು ಹಿರಿಯರೆಲ್ಲ ||

ಒಂದಾಗಿರೊಂದಾಗಿ ಕಂಕಣದ ಬಂಧದಲಿ
ಒಂದಾಗಿ ಮುಂದಿರುತ ವಿಶ್ವಕರ್ಣಾಟಕ
ವಿಶ್ವಾಸದಾರತಿಯ
ವಿಶ್ವಕೆನಲೆತ್ತಲಿದು
||ಶ್ರೀ ವಿಶ್ವಕರ್ಣಾಟಕ ||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...