Home / ಕವನ / ಕವಿತೆ / ಕಂಕಣ

ಕಂಕಣ

ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ
ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ
ಪಡುವಲಿನ ಹೊಡೆತದಲಿ
ವಡಲೊಡೆದು ಬೇರೆನಿಸಿ
|| ಸಡಲಿರಲು ಪ್ರೇಮಬಂಧ ||

ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ
ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು
ಮೃಡನಲ್ಲಿ ಬೇಡಿದೆನು
ಬಿಡುಯೆಂದು ಹಣೆಗಣ್ಣ
|| ಸುಡುಯೆಂದು ಸತ್ಯ ಕುರುಹ ||

ತಾಳಿದಾವೇಶಗಳು ಬಾಳದೆಯೆ ಅಳಿದಿಹುವು
ಬೀಳದಲೆ ತರ್ಪಣದ ಜಲ ಮೊಳೆಯುವುವೆ ಬೀಜ!
ಮೂಜಗದ ಭಂಡಾರ
ಸೋಜಿಗದ ಕರುನಾಡು
|| ಈ ಜಗದ ಚಿತ್ರ ಭಿತ್ತಿ ||

ಚಾಳೀಸೆ ಕಂಗಳಲಿ ಕಾಣಿಸವೆ ! ಕರುಹುಗಳು
ಸಾಲದೀವಿಗೆಯಿಟ್ಟು ತೋರಣವ ಸಿಂಗರಿಸಿ
ಸೋಗೆಗಂಗಳ ಭಾಗ್ಯ
ಬಾಗಿ ಬಳುಕುತ ಬಹಳು
|| ಈಗಲಿದೊ ಹರಕೆ ಫಲಿಸಿ ||

ಎಣಿಸುತಿದೆ ಹೆಜ್ಜೆಗಳ ಮಹಿಷರ ಶಿರವನ್ನು
ಚಿಣಿಚಿಣನೆ ಚಿಗಿದೋಡೆ ಧಾರ್ವಾಡ ಹೃದಯವದು
ಉರ್ವಿಯನು ಮೆಟ್ಟುವೆನು
ಓರ್ವನೆನೆ ದಕ್ಖಿಣನು
|| ಮರ್ಮದಲಿನಾಡು ಕರೆಯೆ ||

ಸೆಣಸಲೆನೆ ಭಾರತಿಗೆ ಕರ್ಣಾಟ ಖಡ್ಗವಿದೆ
ಹಣೆಗಿಡಲು ತಿಲಕಕ್ಕೆ ಕರುನಾಡ ಕತ್ತುರಿಯು
ತನ್ನಿರವ ನೋಡಲಿಕೆ ಕನ್ನಡದ ಕನ್ನ ಡಿಯು
|| ಇನ್ನುಂಟೆ ತಾಯ್ಗೆ ಕೊರತೆ ||

ಶರಧಿಗಳ ಸಂತವಿಸಿ ಹರಿದ ಕಾವ್ಯಗಳೆಲ್ಲಿ
ಚಿರದಿನಕೆ ಬೆಳಕೀವ ಲಾವಣ್ಯ ರೂಹೆಲ್ಲಿ
ಯಾವಲ್ಲಿ ಅಡಗಿಹವು
ಯಾವಗಿರಿ ಗುಹೆಯಲ್ಲಿ
|| ಭಾವನೆಗೆ ನಿಲುಕದಂತೆ ||

ಕರುನಾಡ ನಡುವಲಿದೆ, ಹೇಮಗಿರಿ ಅಡರದನು
ಹಿರಿಯರೆಮಗಿಟ್ಟಿರುವ ಭಂಡಾರ ನಿಲುಕುವುದು
ಕಂಡವನು ಕೆಳಗಿಳಿದು
ಮಂಡಲಕೆ ಬಿತ್ತಿದರೆ.
|| ಮಂಡಿಗೆಯ ಭೂಮ ಮಹಿಗೆ ||

ಪಾಳೆಯಗಳಲ್ಲಲ್ಲಿ ಅಲೆಯಿಟ್ಟ ನಾಡಲ್ಲಿ
ಏಳಿಗೆಯ ಕಂಪಿಲ್ಲ ಬೆಳವಿಗೆಯ ಸೊಂಪಿಲ್ಲ
ತಿಳಿವಿನಾ ಶಾಂತಿಯಲಿ
ಕೊಳೆಯುವುದು ದಿವ್ಯಛವಿ
|| ಇಳೆಯೆಲ್ಲ ಮೇಳೈಸಲು ||

ಏಳಿರೇಳೇಳಿರಿ ಬೇಲೂರ ಪುತ್ಥಳಿಯ
ಪೌಳಿಯನು ಹಂಪೆಯಲಿ, ತೊಳೆದಿಟ್ಟು ಎಲ್ಲೋರ
ತಿದ್ದಿಟ್ಟು ತಿಳಿರಂಗ
ಹೊತ್ತಿಟ್ಟು ಗೋದೆಯಲಿ
|| ಸುತ್ತಿಸುವ ತೆಪ್ಪೋತ್ಸವ ||

ಕೊಂಕಣರ ಶ್ರೀಧಾಟಿ ಪಡುವಣರ ಪದ ಸರಣಿ
ತೆಂಕಣರ ನಯನೀತಿ ನಡುವಣರ ಜೀವಕಳೆ
ಬೆಳೆಯಲಿದು ಕರುನಾಡು
ಬೆಳೆಸಿಡುವ ಗುಟ್ಟಿದುವೆ
|| ತಿಳಿದವರು ಕಂಡತೆರನು ||

ಬಹುದಿನದ ಕಾಂತಿಯಿದೆ ಶ್ರೀ ಕೃಷ್ಣ ರೂಪದಲಿ
ವಹಿಸಿರಿದ ಹೃದಯದಲಿ ಬೆಳೆವಹಿಯ ಸಜ್ಜೆಯಲಿ
ಬಾಳುವಿರಿ ಬಲು ದಿನದ
ಏಳಿಗೆಯ ಸೊಡರುರಿದು
|| ಕೇಳಿರಿದು ಬೆಳೆವ ಗುಟ್ಟು ||

ಮುಂದಿನಾ ಮಧು ಯುಗವು ಮೊಗ್ಗಿನೊಳಗಡಗಿಹುದು
ಮುಂದದನು ಆಳುವರು ನಿಮ್ಮೊಳಗೆ ಜನಿಸುವರು
ಬೊಮ್ಮ ವರ್ತನೆಯಲ್ಲಿ
ಮುಮ್ಮೊದಲು ಬೆಳೆದಿಹರು
|| ನಿಮ್ಮವರು ಹಿರಿಯರೆಲ್ಲ ||

ಒಂದಾಗಿರೊಂದಾಗಿ ಕಂಕಣದ ಬಂಧದಲಿ
ಒಂದಾಗಿ ಮುಂದಿರುತ ವಿಶ್ವಕರ್ಣಾಟಕ
ವಿಶ್ವಾಸದಾರತಿಯ
ವಿಶ್ವಕೆನಲೆತ್ತಲಿದು
||ಶ್ರೀ ವಿಶ್ವಕರ್ಣಾಟಕ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...