ಮೊದಲ ಪುಟಗಳನು (ತನಗೆ ಬೇಕಷ್ಟು)
ನುಂಗಿಹಾಕುವ ಹಕ್ಕು
ಹಿರಿತನದ ಸಹಜ ಅಧಿಕಾರ ಬಲ
ತೋರಿದ್ದೆ ದಿಕ್ಕು
ತಿಳಿದವರು ತಿಳಯದವರು ಎಂಥ ಮಹಾತ್ಮರೂ
ಓದುವರು ಮುನ್ನುಡಿ
ಬಾಗಿಲು ದಾಟಲೇಬೇಕಷ್ಟೆ ಮನೆಯ
ಒಳಗಿರಿಸುವುದಕ್ಕೆ ಅಡಿ
ಮನಸ್ಸು ಮಾಡಿದರೆ ಎಂಥ ಲೇಖಕನನ್ನೂ
ಏರಿಸಬಲ್ಲ ಅಟ್ಟಕ್ಕೆ
ಎತ್ತಿ ಹಾಗೆಯೇ ನೆಲಕ್ಕೆ ಅಪ್ಪಳಿಸಿ
ಮುರಿಯ ಬಲ್ಲ ಪಕ್ಕೆ
ಆದರೂ ಮೀರುವುದು ಹೇಗೆ ಪರಂಪರೆಯ
ಶಿಷ್ಟಾಚಾರದ ಕಟ್ಟು
ಹಾವು ಸಾಯದಂತೆ ಕೋಲು ಮುರಿಯದಂತೆ
ಹಾಕಬೇಕು ಪೆಟ್ಟು
ಇದು ಸುಲಭವಲ್ಲ; ಅಡ್ಡ ಗೋಡೆಯ ಮೇಲೆ
ಇರಿಸಿದಂತೆ ಬೆಳಕು
ಕಣ್ಣಿಗೆ ಶಬ್ದಗಳನೆರಚುವಂಥ ಕಲೆ
ಸಿದ್ಧಿಸಿರಬೇಕು
ಇಷ್ಟೆಲ್ಲ ಆದರೂ ಮುಗಿಯುವುದಿಲ್ಲ ಅಲ್ಲಿಗೆ
ಮುನ್ನುಡಿಕಾರನ ಕಷ್ಟ
ದುಷ್ಟ ವಿಮರ್ಶಕರ ಕೈಗೆ ಸಿಗದಿರುವನೆ ಕೊನೆಗೂ
ಈ ನತದೃಷ್ಟ!
*****
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
Latest posts by ತಿರುಮಲೇಶ್ ಕೆ ವಿ
(see all)