Home / ಕವನ / ಕವಿತೆ / ಪುಟ್ಟ ಕೆಂಚವ್ವ

ಪುಟ್ಟ ಕೆಂಚವ್ವ

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು
ಹಾಳು ಹಕ್ಕಿಯ ಹಾಡು ಕಿವಿ ತುಂಬಲು
ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು
ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ…..

ಚೂರು ಅಂಗಳವನೆ ಪರಪರ ಕೆರೆದು
ಒಡೆದ ಗಡಿಗೆಯ ಸೊಂಟಕ್ಕೆ ಕರೆದು
ಊರ ಗಟ್ಟಿಗಿತ್ತಿಯರೊಡನೆ ಗುದ್ದಾಡಿ
ನೀರು ತರುವಳು ನಮ್ಮ ಪುಟ್ಟ ಕೆಂಚವ್ವ…..

ಕರವೀರದ ಕೊಂಬೆಗಳ ಕಡಿದು
ಒಣಗಿದ ರೆಂಬೆಗಳನು ಬಡಿದು
ಕಡ್ಡಿ-ಪುರಳೆಯ ಒಟ್ಟಿಗೆ ಒಗೆದು
ಬೆಂಕಿ ಉರಿಸುವಳು ನಮ್ಮ ಪುಟ್ಟ ಕೆಂಚವ್ವ…..

ಚಟಾಕು ಹಾಲಿಗೆ ಚಿಟಿಕೆ ಪುಡಿಯನು ಬೆರೆಸಿ
ಪಾವು ನೀರನೆ ಸುರಿದು
ಘಮ್ಮೆನ್ನುವ ಹಾಗೆ ಟೀ ಕುದಿಸುವಳು
ಮಾಯಾವಿ ಹುಡುಗಿ ನಮ್ಮ ಪುಟ್ಟ ಕೆಂಚವ್ವ…..

ಹೊಲದಲ್ಲಿ ಸಂಜೆಯ ತನಕ ದುಡಿದು
ಅಕ್ಕಿ-ಮೆಣಸಿನಕಾಯಿ ಪಡೆದು
ತಮ್ಮನ ಬಾಯ ಚಪಲಕ್ಕೆ ಉದ್ದು-ಕಡಲೆಯ
ಕದ್ದು ತರುವಳು ನಮ್ಮ ಪುಟ್ಟ ಕೆಂಚವ್ವ…..

ದಾರಿಯಲಿ ಅಂತರಗಟ್ಟಮ್ಮನಿಗೆ ಕೈ ಮುಗಿವಳು
ಹೊಟ್ಟೆ ಬಟ್ಟೆಗಿಟ್ಟು ಮಡುಗು ಎಂದು ಬೇಡುವಳು
ಹಕ್ಕಿ ಗೂಡಿಗೆ ಮರಳುವಂತೆ
ಗುಡಲಿಗೆ ಮರಳುವಳು ನಮ್ಮ ಪುಟ್ಟ ಕೆಂಚವ್ವ…..

ಸೋರುವ ಬುಡ್ಡಿಯನೂ ಒಲಿಸಿ ಉರಿಸುವಳು
ಪಾವಕ್ಕಿಯಲಿ ತಂಗಿ ತಮ್ಮನ ಹೊಟ್ಟೆ ತೂಗಿಸುವಳು
ಹರಿದ ಹಚ್ಚಡವನೆ ಸಮನಾಗಿ ಎಲ್ಲರಿಗೆ ಹೊದಿಸಿ
ಕೈ ಚಳಕ ಮೆರೆವಳು ನಮ್ಮ ಪುಟ್ಟ ಕೆಂಚವ್ವ…..

ಅಪ್ಪನ ಕುಡಿತ-ಜೂಜಿಗೆ ಬೆದರುವಳು
ಅವ್ವನ ದಮ್ಮು-ಗೂರಲಿಗೆ ನೋಯುವಳು
ಸಿಟ್ಟಿನಲಿ ಕಟ್ಟಿರುವೆ, ಚಿಟ್ಟೆ ನಗೆಯವಳು
ದಿಟ್ಟ ನಡೆಯವಳು ನಮ್ಮ ಪುಟ್ಟ ಕೆಂಚವ್ವ…..

ಹೂವಿನ ವಾಸನೆ ಹಿಡಿದು ಹೆಸರು ಹೇಳುವಳು
ಹಕ್ಕಿಯ ಕೂಗನಳೆದು ಅಣಕಿಸುವಳು
ಎರೆಮಣ್ಣನು ಕಲಸಿ ಬೊಂಬೆಯ ಮಾಡುವಳು
ಬೊಂಬೆಗೂ ಜೀವ ಕೊಡುವಳು ನಮ್ಮ ಪುಟ್ಟ ಕೆಂಚವ್ವ…..

ಹುಲಿಯನಿಗೆ ಹಳ್ಳದಲಿ ಮಜ್ಜನ ಮಾಡಿಸುವಳು
ಭೂತಾಯಿ ಮೀನ ಕಿರುಬೆರಳಲಿ ಕುಣಿಸುವಳು
ಗಟ್ಟಿ ಗುಂಡಿಗೆಯವಳು ಕಾಳವ್ವನ
‘ಕಿಡಿ’ ಇವಳು ನಮ್ಮ ಪುಟ್ಟ ಕೆಂಚವ್ವ…..
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...