Home / ಕವನ / ಕವಿತೆ / ಪುಟ್ಟ ಕೆಂಚವ್ವ

ಪುಟ್ಟ ಕೆಂಚವ್ವ

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು
ಹಾಳು ಹಕ್ಕಿಯ ಹಾಡು ಕಿವಿ ತುಂಬಲು
ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು
ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ…..

ಚೂರು ಅಂಗಳವನೆ ಪರಪರ ಕೆರೆದು
ಒಡೆದ ಗಡಿಗೆಯ ಸೊಂಟಕ್ಕೆ ಕರೆದು
ಊರ ಗಟ್ಟಿಗಿತ್ತಿಯರೊಡನೆ ಗುದ್ದಾಡಿ
ನೀರು ತರುವಳು ನಮ್ಮ ಪುಟ್ಟ ಕೆಂಚವ್ವ…..

ಕರವೀರದ ಕೊಂಬೆಗಳ ಕಡಿದು
ಒಣಗಿದ ರೆಂಬೆಗಳನು ಬಡಿದು
ಕಡ್ಡಿ-ಪುರಳೆಯ ಒಟ್ಟಿಗೆ ಒಗೆದು
ಬೆಂಕಿ ಉರಿಸುವಳು ನಮ್ಮ ಪುಟ್ಟ ಕೆಂಚವ್ವ…..

ಚಟಾಕು ಹಾಲಿಗೆ ಚಿಟಿಕೆ ಪುಡಿಯನು ಬೆರೆಸಿ
ಪಾವು ನೀರನೆ ಸುರಿದು
ಘಮ್ಮೆನ್ನುವ ಹಾಗೆ ಟೀ ಕುದಿಸುವಳು
ಮಾಯಾವಿ ಹುಡುಗಿ ನಮ್ಮ ಪುಟ್ಟ ಕೆಂಚವ್ವ…..

ಹೊಲದಲ್ಲಿ ಸಂಜೆಯ ತನಕ ದುಡಿದು
ಅಕ್ಕಿ-ಮೆಣಸಿನಕಾಯಿ ಪಡೆದು
ತಮ್ಮನ ಬಾಯ ಚಪಲಕ್ಕೆ ಉದ್ದು-ಕಡಲೆಯ
ಕದ್ದು ತರುವಳು ನಮ್ಮ ಪುಟ್ಟ ಕೆಂಚವ್ವ…..

ದಾರಿಯಲಿ ಅಂತರಗಟ್ಟಮ್ಮನಿಗೆ ಕೈ ಮುಗಿವಳು
ಹೊಟ್ಟೆ ಬಟ್ಟೆಗಿಟ್ಟು ಮಡುಗು ಎಂದು ಬೇಡುವಳು
ಹಕ್ಕಿ ಗೂಡಿಗೆ ಮರಳುವಂತೆ
ಗುಡಲಿಗೆ ಮರಳುವಳು ನಮ್ಮ ಪುಟ್ಟ ಕೆಂಚವ್ವ…..

ಸೋರುವ ಬುಡ್ಡಿಯನೂ ಒಲಿಸಿ ಉರಿಸುವಳು
ಪಾವಕ್ಕಿಯಲಿ ತಂಗಿ ತಮ್ಮನ ಹೊಟ್ಟೆ ತೂಗಿಸುವಳು
ಹರಿದ ಹಚ್ಚಡವನೆ ಸಮನಾಗಿ ಎಲ್ಲರಿಗೆ ಹೊದಿಸಿ
ಕೈ ಚಳಕ ಮೆರೆವಳು ನಮ್ಮ ಪುಟ್ಟ ಕೆಂಚವ್ವ…..

ಅಪ್ಪನ ಕುಡಿತ-ಜೂಜಿಗೆ ಬೆದರುವಳು
ಅವ್ವನ ದಮ್ಮು-ಗೂರಲಿಗೆ ನೋಯುವಳು
ಸಿಟ್ಟಿನಲಿ ಕಟ್ಟಿರುವೆ, ಚಿಟ್ಟೆ ನಗೆಯವಳು
ದಿಟ್ಟ ನಡೆಯವಳು ನಮ್ಮ ಪುಟ್ಟ ಕೆಂಚವ್ವ…..

ಹೂವಿನ ವಾಸನೆ ಹಿಡಿದು ಹೆಸರು ಹೇಳುವಳು
ಹಕ್ಕಿಯ ಕೂಗನಳೆದು ಅಣಕಿಸುವಳು
ಎರೆಮಣ್ಣನು ಕಲಸಿ ಬೊಂಬೆಯ ಮಾಡುವಳು
ಬೊಂಬೆಗೂ ಜೀವ ಕೊಡುವಳು ನಮ್ಮ ಪುಟ್ಟ ಕೆಂಚವ್ವ…..

ಹುಲಿಯನಿಗೆ ಹಳ್ಳದಲಿ ಮಜ್ಜನ ಮಾಡಿಸುವಳು
ಭೂತಾಯಿ ಮೀನ ಕಿರುಬೆರಳಲಿ ಕುಣಿಸುವಳು
ಗಟ್ಟಿ ಗುಂಡಿಗೆಯವಳು ಕಾಳವ್ವನ
‘ಕಿಡಿ’ ಇವಳು ನಮ್ಮ ಪುಟ್ಟ ಕೆಂಚವ್ವ…..
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...