Home / ಕವನ / ಕವಿತೆ / ಹೊಳೆ ಮಗಳು

ಹೊಳೆ ಮಗಳು

ಅವಳು ಹಳ್ಳ
ಇವಳು ಹೊಳೆ

ಹಳ್ಳದ ಬಳ್ಳಯಲಿ
ಹರಿದು ಬಂದವಳು
ಹೊಳೆ ಮಗಳು

ತಾಯಿ-
ಹೊಳೆ ಮಗಳ ಹುಬ್ಬನು ತೀಡುವಳು
ಸುಳಿ ಮುಂಗುರುಳ ಬಾಚುವಳು
ದಿಟ್ಟಿಯ ಬೊಟ್ಟಿಟ್ಟು
ಅಕ್ಕರೆಯ ಮುತ್ತಿಟ್ಟು
ಮುನ್ನಡೆಸುವಳು

ಇದು ಬೆಟ್ಟ ಇದು ಗಾಳಿ
ಇದು ಹೂವು ಇದು ಎಲೆ
ಎಂದು ಮಗಳಿಗೆ
ಪರಿಚಯಿಸುವಳು

ಮಗಳು-
ಕಲಿಯುವಳು
ಗಿಡ ಮರಗಳ ಅಡಿಯಲಿ ಬಾಗಿ
ಕಣಿವೆ ಕೊರಕಲು ಬಂಡೆ
ಹಾದಿಯಲಿ ಬಳುಕಿ ಸಾಗುವಳು

ಅವ್ವನಿಗೆ ತೋರುವಳು
ಸಂಭ್ರಮಿಸಿ ಹೇಳುವಳು
ನಕ್ಷತ್ರ ಗಣವಿರುವುದು
ನನ್ನೊಳಗೆ
ಚಂದಿರನಿರುವನು ತಳಗೆ

ತಾಯಿ ನಸುನಕ್ಕು-
ಸಣ್ಣನೆಯ ದನಿಯವಳೆ
ನುಣ್ಣನೆಯ ನಡೆಯವಳೆ
ನನ್ನ ಕರುಳಿನ ಕುಡಿಯೆ
ನನ್ನ ಆಶೆಯ ಕಿಡಿಯೆ
ಎಂದು ಮಗಳ ಮುದ್ದಾಡುವಳು

ತಾಯಿ ಎಚ್ಚರಿಸುವಳು:
ಚಿಣ್ಣರನು ಮುಳುಗಿಸದಿರು
ಮೀನುಗಳ ಒಣಗಿಸದಿರು
ಕಲ್ಲುಗಳ ಮಿದುಗೊಳಿಸಿ
ಸಹನೆಯಲಿ ನೀರುಣಿಸಿ
ಹರಿವ ಹಾದಿಯಲ್ಲೆಲ್ಲ
ಜೀವ ದೀಪವನುರಿಸು

ವಿಷಕಂಠನನುಸರಿಸಿ
ಕೊಳೆ ಕಳಂಕವ ಧರಿಸಿ
ಕಾಳಿಯಾವೇಶವ ತಾಳಿ
ಕೇಡಿನೆದೆಗೂಡ ಸೆಳೆದು
ಮಡುವಿನಲಿ ಮುಳುಗಿಸು

ಸೂರ್‍ಯನ ಕರುಣೆ
ನೆಲದ ಋಣ
ತಾಯ ಹರಕೆ
ಕೊನೆವರೆಗೆ ಕಾಯುವುದು

ತಾಯಿ
ನಿಂತಲ್ಲೆ ನಿಲ್ಲುವಳು
ತಪಸ್ವಿನಿ
‘ತಾವರೆ’ ಈಗವಳು

ಹಳ್ಳದ ಬಳ್ಳಿಯನು ಕಡಿದು
ಕಣ್ಣೀರ ತಡೆ ತಡೆದು
ಮುಂದೆ ಸಾಗುವಳು
ಹಿಂದೆ ನೋಡುವಳು
ಹೊಳೆ ಮಗಳು……
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...