Home / ಕವನ / ಕವಿತೆ / ಮುಗಿಯದ ಕತೆ

ಮುಗಿಯದ ಕತೆ

ಅವನು ರಾಮನು
ಗುಣ ಸಂಪನ್ನನು
ನೀತಿ ನೇಮಕ್ಕೆ
ತಲೆಬಾಗುವನು
ಗುರುಹಿರಿಯರಿಗೆ
ಪ್ರೀತಿಪಾತ್ರನು
ಯಾರನ್ನೂ ನೋಯಿಸನು.

ಅನು ರಹೀಮನು
ಅವನೂ ಗುಣ ಸಂಪನ್ನನು
ಕೊಂಚ ಸಂಕೋಚದ ಸ್ವಭಾವ
ಸದಾ ಧ್ಯಾನಸ್ಥನು
ಏಕಾಂತ ಪ್ರಿಯನು.

ಹೀಗೊಮ್ಮೆ
ರಾಮನೂ ರಹೀಮನೂ
ಭೆಟ್ಟಿಯಾದರು
ಅವನೊಳಗೆ ಅವನೊ
ಇವನೊಳಗೆ ಅವನೊ
ಎಂಬಂತೆ ಒಂದಾದರು.

ಒಂದೇ ನೋಟ
ಒಂದೇ ಮಾಟ
ಕಣ್ಣಿದ್ದವರಿಗೂ
ಕಗ್ಗಂಟಾದರು.
ಸೂರ್‍ಯಚಂದ್ರರ
ಜೋಡಿ ಕೂಡಿ
ನಲಿದಿದ್ದು ನೋಡಿ
ಜನ ತಬ್ಬಿಬ್ಬಾದರು.

ಹೀಗೆ….. ಇಬ್ಬರೂ ಕೂಡಿ
ಒಬ್ಬರೇ ಆಗಿ
ಆಟವಾಡಿದರು.

ಹಗಲು-ರಾತ್ರಿಯ ಆಟ
ಹೂವು-ಗಿಡದ ಆಟ
ಬೆಂಕಿ-ಬೆಳಕಿನ ಆಟ
ಮೋಡ-ಮಳೆಯ
ಆಟವಾಡಿದರು.

ಕೆರೆ-ದಡ, ದಡ-ಕೆರೆ,
ಎಂದು ಕುಪ್ಪಳಿಸಿದರು
ಕಣ್ಣಾಮುಚ್ಚೆ ಕಾಡೆಗೂಡೆ
ಎಂದು ಉದ್ದಿನ ಮೂಟೆ
ಉರುಳಿಸಿದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟಿದರು.


ರಾಮನಿಗೆ ಮೀಸೆ ಮೂಡಿ
ಮದುವೆಯಾಗಿ ಮಕ್ಕಳಾಗಿ
ಮರಣವೂ ಬಂತು.
ರಹೀಮ ಅಬ್ಬೆಪಾರಿಯಾಗಿ
ಅಲೆದು ಅಂತರ್‍ಧಾನನಾದನು.


ಇದೀಗ ಕೆರೆ ಬತ್ತಿ ದಡ ಕುಸಿದು
ಕಪ್ಪೆಗೂಡು ಹುಳುಹುಪ್ಪಟೆ
ಬಾವಲಿಗಳಿಗೆ ಬಿಡಾರವಾಯಿತು
ಹೆಬ್ಬಾಗಿಲಿನಲ್ಲಿ ಹಾವೊಂದು
ಪೊರೆಕಳಚಿ, ಪಹರೆ ನಡೆಸುತ್ತಿದ್ದ
ಮುಂಗುಸಿಗೆ ಮುಖಭಂಗವಾಗಿ
ಮುನಿಸು ಮುಗಿಲು ಮುಟ್ಟಿತು.

ಪ್ರಸಿದ್ದ ಕಪ್ಪೆಗೂಡಿನ ಕದನಲ್ಲಿ
ನೆಲವೂ ನೀರಾಗಿ
ಚರಿತ್ರೆಗೂ ಚುರುಕು ಮುಟ್ಟಿತು.


ಎಲ್ಲಾ ಮುಗಿಯಿತು
ಮುಗಿದೇ ಹೋಯಿತು ಅನ್ನುವಾಗ….
ಹೀಗೆಯೆ ಒಮ್ಮೆ
ಅಶೋಕನೂ, ಅಕ್ಬರನೂ
ಭೆಟ್ಟಿಯಾದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟತೊಡಗಿದರು…..
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...