Home / ಕವನ / ಕವಿತೆ / ಕಾಡುತ್ತವೆ ನೆನಪು

ಕಾಡುತ್ತವೆ ನೆನಪು

ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು
ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ
ತನ್ನ ಕಾಡಿದ ಅದೇ ಬಾಲ್ಯದ ನೋವು
ಇವರ ಕಾಡದಿರಲಿ ಎಂದು.
ಕಾಡುತ್ತವೆ ನೆನಪು

ನಿನ್ನೆ ನೆನೆಯಿಟ್ಟ ಕಾಳುಗಳು ಇಂದು
ಮೊಳಕೆಯೊಡೆದಿವೆ
ಜೋಪಾನವಾಗಿ ತೆಗೆದಿಡುವ ಕೆಲಸವಾಗಬೇಕು.
ಮೊಳಕೆ ಮುರಿಯದಂತೆ ಜಾಗೃತಿಯಲ್ಲಿ,
ದಷ್ಟಪುಷ್ಟ ಸಸಿಗಳು ಧೃಢಮೊಳಕೆಯಿಂದ
ಮಾತ್ರ ಸಾಧ್ಯ-ಎನ್ನುತ್ತಿರುತ್ತಾಳೆ.
ಅದು ಆಕೆಗೆ ಗೊತ್ತು.
ಕಾಡುತ್ತವೆ ನೆನಪು

ನೂಲಿನಂತೆ ಸೀರೆ ಆಗಬೇಕೆಂದು
ಚೆಂದದ ಗಟ್ಟಿನೂಲಲ್ಲೇ ನೇಯ್ದರೂ ಈಗೀಗ
ಸೀರೆಗಿಲ್ಲ ಅದೇ ಆಕಾರ ಬಣ್ಣ ಧಾಡಸಿತನ
ಎತ್ತೆತ್ತಿ ಒಗೆದರೂ ಹರಿಯದ ಆ ಕಾಲದ
ಸೀರೆ ಇವಲ್ಲ ಕಸಿವಿಸಿಯಾಗುತ್ತಾಳೆ ಆಕೆ
ಬರಿ ಚೆಂದ ಅಲ್ಲ ಬದುಕು ಆತ್ಮಬಲ ಬೇಕು
ಸ್ಥೈರ್ಯಕ್ಕೆ ಇಂಬು ಆಕೆ
ಕಾಡುತ್ತವೆ ನೆನಪು

ಎಂದೋ ಎಡವಿಕೊಂಡ ಕಾಲು
ನೋವು ಮರುಕಳಿಸಿ ಘಾಸಿ ಮಾಡುತ್ತವೆ.
ತಣ್ನೀರನ್ನಾದರೂ ತಣಿಸಿ ಕುಡಿಯಲು ಹೇಳು
ಹೇಳುತ್ತಾನೆ ಆಕೆಗೆ
ಕೇಳಲೆಂದೆ – ಎತ್ತರಿಸಿದ ದನಿಯಲ್ಲಿ
ಬೇಡಿದ್ದನ್ನು ಕೊಡಿಸಬೇಡ
ತಾಕೀತು ಮಾಡುತ್ತಾನೆ ಆಗಾಗ
ಚಟವಾದೀತು, ಹಟವಾದೀತು ಬಯಕೆಗಳು
ಬೆಳೆದಂತೆ – ಎನ್ನುತ್ತಾನೆ
ರಾಗಕ್ಕೆ ತೆರನಾದ ತಾಳ ಆಕೆಯದು.
ಕಾಡುತ್ತವೆ ನೆನಪು

ಬಿರುಸಾದ ಗಾಳಿಗೂ ಕೂಡ ಗಿಡಗಳು
ಬಗ್ಗಿಲ್ಲ. ಸ್ವಲ್ಪ ಸೊಟ್ಟಗಾದರೂ ಅರೆಗಳಿಗೆ
ನೆಟ್ಟಗೆ ನಿಲ್ಲುತ್ತವೆ ಮರುಗಳಿಗೆ
ಬಯಲ ಗಿಡಗಳಿಗೆ ಗಾಳಿ ಎದುರಿಸಿ ಗೊತ್ತು.
ಬೆಳೆಯಬೇಕು, ಕಲಿಯಲಿ ಇವರೂ ಅವರಂತೆ
ಎನ್ನುತ್ತಾನೆ ಆತ
ಕಾಡುತ್ತವೆ ನೆನಪು

ತೊಗಲ ಹೊದಿಕೆಯ ಹೊದಿಸಿ
ರಕ್ತಕ್ಕೆ ಕೆಂಪು ಸುರಿದವರು ಅವರು
ಕಾಡುತ್ತವೆ ನೆನಪು
ಕಾಡುತ್ತಲೇ ಇರುತ್ತವೆ ನೆನಪು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...