ಕಾಡುತ್ತವೆ ನೆನಪು

ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು
ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ
ತನ್ನ ಕಾಡಿದ ಅದೇ ಬಾಲ್ಯದ ನೋವು
ಇವರ ಕಾಡದಿರಲಿ ಎಂದು.
ಕಾಡುತ್ತವೆ ನೆನಪು

ನಿನ್ನೆ ನೆನೆಯಿಟ್ಟ ಕಾಳುಗಳು ಇಂದು
ಮೊಳಕೆಯೊಡೆದಿವೆ
ಜೋಪಾನವಾಗಿ ತೆಗೆದಿಡುವ ಕೆಲಸವಾಗಬೇಕು.
ಮೊಳಕೆ ಮುರಿಯದಂತೆ ಜಾಗೃತಿಯಲ್ಲಿ,
ದಷ್ಟಪುಷ್ಟ ಸಸಿಗಳು ಧೃಢಮೊಳಕೆಯಿಂದ
ಮಾತ್ರ ಸಾಧ್ಯ-ಎನ್ನುತ್ತಿರುತ್ತಾಳೆ.
ಅದು ಆಕೆಗೆ ಗೊತ್ತು.
ಕಾಡುತ್ತವೆ ನೆನಪು

ನೂಲಿನಂತೆ ಸೀರೆ ಆಗಬೇಕೆಂದು
ಚೆಂದದ ಗಟ್ಟಿನೂಲಲ್ಲೇ ನೇಯ್ದರೂ ಈಗೀಗ
ಸೀರೆಗಿಲ್ಲ ಅದೇ ಆಕಾರ ಬಣ್ಣ ಧಾಡಸಿತನ
ಎತ್ತೆತ್ತಿ ಒಗೆದರೂ ಹರಿಯದ ಆ ಕಾಲದ
ಸೀರೆ ಇವಲ್ಲ ಕಸಿವಿಸಿಯಾಗುತ್ತಾಳೆ ಆಕೆ
ಬರಿ ಚೆಂದ ಅಲ್ಲ ಬದುಕು ಆತ್ಮಬಲ ಬೇಕು
ಸ್ಥೈರ್ಯಕ್ಕೆ ಇಂಬು ಆಕೆ
ಕಾಡುತ್ತವೆ ನೆನಪು

ಎಂದೋ ಎಡವಿಕೊಂಡ ಕಾಲು
ನೋವು ಮರುಕಳಿಸಿ ಘಾಸಿ ಮಾಡುತ್ತವೆ.
ತಣ್ನೀರನ್ನಾದರೂ ತಣಿಸಿ ಕುಡಿಯಲು ಹೇಳು
ಹೇಳುತ್ತಾನೆ ಆಕೆಗೆ
ಕೇಳಲೆಂದೆ – ಎತ್ತರಿಸಿದ ದನಿಯಲ್ಲಿ
ಬೇಡಿದ್ದನ್ನು ಕೊಡಿಸಬೇಡ
ತಾಕೀತು ಮಾಡುತ್ತಾನೆ ಆಗಾಗ
ಚಟವಾದೀತು, ಹಟವಾದೀತು ಬಯಕೆಗಳು
ಬೆಳೆದಂತೆ – ಎನ್ನುತ್ತಾನೆ
ರಾಗಕ್ಕೆ ತೆರನಾದ ತಾಳ ಆಕೆಯದು.
ಕಾಡುತ್ತವೆ ನೆನಪು

ಬಿರುಸಾದ ಗಾಳಿಗೂ ಕೂಡ ಗಿಡಗಳು
ಬಗ್ಗಿಲ್ಲ. ಸ್ವಲ್ಪ ಸೊಟ್ಟಗಾದರೂ ಅರೆಗಳಿಗೆ
ನೆಟ್ಟಗೆ ನಿಲ್ಲುತ್ತವೆ ಮರುಗಳಿಗೆ
ಬಯಲ ಗಿಡಗಳಿಗೆ ಗಾಳಿ ಎದುರಿಸಿ ಗೊತ್ತು.
ಬೆಳೆಯಬೇಕು, ಕಲಿಯಲಿ ಇವರೂ ಅವರಂತೆ
ಎನ್ನುತ್ತಾನೆ ಆತ
ಕಾಡುತ್ತವೆ ನೆನಪು

ತೊಗಲ ಹೊದಿಕೆಯ ಹೊದಿಸಿ
ರಕ್ತಕ್ಕೆ ಕೆಂಪು ಸುರಿದವರು ಅವರು
ಕಾಡುತ್ತವೆ ನೆನಪು
ಕಾಡುತ್ತಲೇ ಇರುತ್ತವೆ ನೆನಪು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಸತ್ತ ಮನೆಯಲ್ಲಿ
Next post ತುಘ್ಲಕ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…