Home / ಕವನ / ಕವಿತೆ / ಕಾಡುತ್ತವೆ ನೆನಪು

ಕಾಡುತ್ತವೆ ನೆನಪು

ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು
ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ
ತನ್ನ ಕಾಡಿದ ಅದೇ ಬಾಲ್ಯದ ನೋವು
ಇವರ ಕಾಡದಿರಲಿ ಎಂದು.
ಕಾಡುತ್ತವೆ ನೆನಪು

ನಿನ್ನೆ ನೆನೆಯಿಟ್ಟ ಕಾಳುಗಳು ಇಂದು
ಮೊಳಕೆಯೊಡೆದಿವೆ
ಜೋಪಾನವಾಗಿ ತೆಗೆದಿಡುವ ಕೆಲಸವಾಗಬೇಕು.
ಮೊಳಕೆ ಮುರಿಯದಂತೆ ಜಾಗೃತಿಯಲ್ಲಿ,
ದಷ್ಟಪುಷ್ಟ ಸಸಿಗಳು ಧೃಢಮೊಳಕೆಯಿಂದ
ಮಾತ್ರ ಸಾಧ್ಯ-ಎನ್ನುತ್ತಿರುತ್ತಾಳೆ.
ಅದು ಆಕೆಗೆ ಗೊತ್ತು.
ಕಾಡುತ್ತವೆ ನೆನಪು

ನೂಲಿನಂತೆ ಸೀರೆ ಆಗಬೇಕೆಂದು
ಚೆಂದದ ಗಟ್ಟಿನೂಲಲ್ಲೇ ನೇಯ್ದರೂ ಈಗೀಗ
ಸೀರೆಗಿಲ್ಲ ಅದೇ ಆಕಾರ ಬಣ್ಣ ಧಾಡಸಿತನ
ಎತ್ತೆತ್ತಿ ಒಗೆದರೂ ಹರಿಯದ ಆ ಕಾಲದ
ಸೀರೆ ಇವಲ್ಲ ಕಸಿವಿಸಿಯಾಗುತ್ತಾಳೆ ಆಕೆ
ಬರಿ ಚೆಂದ ಅಲ್ಲ ಬದುಕು ಆತ್ಮಬಲ ಬೇಕು
ಸ್ಥೈರ್ಯಕ್ಕೆ ಇಂಬು ಆಕೆ
ಕಾಡುತ್ತವೆ ನೆನಪು

ಎಂದೋ ಎಡವಿಕೊಂಡ ಕಾಲು
ನೋವು ಮರುಕಳಿಸಿ ಘಾಸಿ ಮಾಡುತ್ತವೆ.
ತಣ್ನೀರನ್ನಾದರೂ ತಣಿಸಿ ಕುಡಿಯಲು ಹೇಳು
ಹೇಳುತ್ತಾನೆ ಆಕೆಗೆ
ಕೇಳಲೆಂದೆ – ಎತ್ತರಿಸಿದ ದನಿಯಲ್ಲಿ
ಬೇಡಿದ್ದನ್ನು ಕೊಡಿಸಬೇಡ
ತಾಕೀತು ಮಾಡುತ್ತಾನೆ ಆಗಾಗ
ಚಟವಾದೀತು, ಹಟವಾದೀತು ಬಯಕೆಗಳು
ಬೆಳೆದಂತೆ – ಎನ್ನುತ್ತಾನೆ
ರಾಗಕ್ಕೆ ತೆರನಾದ ತಾಳ ಆಕೆಯದು.
ಕಾಡುತ್ತವೆ ನೆನಪು

ಬಿರುಸಾದ ಗಾಳಿಗೂ ಕೂಡ ಗಿಡಗಳು
ಬಗ್ಗಿಲ್ಲ. ಸ್ವಲ್ಪ ಸೊಟ್ಟಗಾದರೂ ಅರೆಗಳಿಗೆ
ನೆಟ್ಟಗೆ ನಿಲ್ಲುತ್ತವೆ ಮರುಗಳಿಗೆ
ಬಯಲ ಗಿಡಗಳಿಗೆ ಗಾಳಿ ಎದುರಿಸಿ ಗೊತ್ತು.
ಬೆಳೆಯಬೇಕು, ಕಲಿಯಲಿ ಇವರೂ ಅವರಂತೆ
ಎನ್ನುತ್ತಾನೆ ಆತ
ಕಾಡುತ್ತವೆ ನೆನಪು

ತೊಗಲ ಹೊದಿಕೆಯ ಹೊದಿಸಿ
ರಕ್ತಕ್ಕೆ ಕೆಂಪು ಸುರಿದವರು ಅವರು
ಕಾಡುತ್ತವೆ ನೆನಪು
ಕಾಡುತ್ತಲೇ ಇರುತ್ತವೆ ನೆನಪು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...