Home / ಕವನ / ಕವಿತೆ / ಇರುಳಿನಲ್ಲಿ ಬೆಳಗು

ಇರುಳಿನಲ್ಲಿ ಬೆಳಗು


ಸರಿರಾತ್ರಿಯಲ್ಲಿ ಹುಡುಗಿ
ಕನಸು ಕಾಣುತ್ತಿದ್ದಾಳೆ.
ಅವಳ ಕನಸು ಹೀಗಿದೆ:

ಪೇಪರಿನವನ ಚರಪರ
ಚಪ್ಪಲಿ ಸದ್ದಿನಲ್ಲಿ
ಹಾಲಿನವನ ಅವಸರದ ಗುದ್ದಿನಲ್ಲಿ
ಇಬ್ಬನಿಯಲ್ಲಿ ತೊಯ್ದ
ಹೂವಿನೊಡತಿಯ ದನಿಯಲ್ಲಿ
ಬೆಳಗಾಗಿದೆ

ಮುಲ್ಲ ಅಲ್ಲಾನಿಗಾಗಿ
ತುಟಿ ಬಿಚ್ಚಿದ್ದಾನೆ
ಮೈಕಾಸುರ ಮಂಜುನಾಥ
ಎಂದು ಕಿವಿ ಕಚ್ಚುತ್ತಿದ್ದಾನೆ.
ಬಂಗಾರದ ರಥ
ರಿಪೇರಿಗೆ ಹೋಗಿದೆ
ಬರಿಗಾಲಲ್ಲೆ ನಡೆದು ಬಂದ
ಸೂರ್ಯನ ಮುಖ ಕೆಂಪಾಗಿದೆ.

ಗಿಡಗಂಟೆಗಳ ಕೊರಳೊಳಗಿಂದ
ಹೊಮ್ಮಿದ ಹಕ್ಕಿಗಳ ಹಾಡನ್ನು
ಆಕಾಶವಾಣಿ ಮರುಪ್ರಸಾರ
ಮಾಡುತ್ತಿದೆ, ಕೇಳಲು
ತುಂಬಾ ಹಿತವಾಗಿದೆ.


‘ಬೆಳಗಾಯ್ತು’ ಎಂದರಚುತ್ತಾ
ಹುಡುಗಿಯ ಅಮ್ಮ
ತಟ್ಟಿ ಎಬ್ಬಿಸುತ್ತಿದ್ದಾಳೆ.

ಹುಡುಗಿ ಕಿವುಡಿ-
ಅವಳಿಗೆ ಸದ್ದುಗದ್ದಲದಲ್ಲಿ
ಬೆಳಗಾಗುವುದಿಲ್ಲ.

ಹುಡುಗಿ ಕುರುಡಿ-
ಅವಳಿಗೆ ವರ್ಣರಂಜಿತ
ಬೆಳಗು ಕಾಣಲಾಗುವುದಿಲ್ಲ.

ಹುಡುಗಿ ಮೂಗಿ-
ಕನಸನ್ನೇಕೆ ಕಸಿದುಕೊಂಡೆ?
ಎಂದವಳು ಅಮ್ಮನನ್ನು
ಕೇಳುವುದಿಲ್ಲ.

ಸದ್ಯಕ್ಕವಳು ಇರುಳಿನಲ್ಲಿ
ಬೆಳಗಿನ ಕನಸು ಕಂಡ
ಖುಷಿಯಲ್ಲಿದ್ದಾಳೆ.


Tagged:

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...