Home / ಕವನ / ಕವಿತೆ / ಇರುಳಿನಲ್ಲಿ ಬೆಳಗು

ಇರುಳಿನಲ್ಲಿ ಬೆಳಗು


ಸರಿರಾತ್ರಿಯಲ್ಲಿ ಹುಡುಗಿ
ಕನಸು ಕಾಣುತ್ತಿದ್ದಾಳೆ.
ಅವಳ ಕನಸು ಹೀಗಿದೆ:

ಪೇಪರಿನವನ ಚರಪರ
ಚಪ್ಪಲಿ ಸದ್ದಿನಲ್ಲಿ
ಹಾಲಿನವನ ಅವಸರದ ಗುದ್ದಿನಲ್ಲಿ
ಇಬ್ಬನಿಯಲ್ಲಿ ತೊಯ್ದ
ಹೂವಿನೊಡತಿಯ ದನಿಯಲ್ಲಿ
ಬೆಳಗಾಗಿದೆ

ಮುಲ್ಲ ಅಲ್ಲಾನಿಗಾಗಿ
ತುಟಿ ಬಿಚ್ಚಿದ್ದಾನೆ
ಮೈಕಾಸುರ ಮಂಜುನಾಥ
ಎಂದು ಕಿವಿ ಕಚ್ಚುತ್ತಿದ್ದಾನೆ.
ಬಂಗಾರದ ರಥ
ರಿಪೇರಿಗೆ ಹೋಗಿದೆ
ಬರಿಗಾಲಲ್ಲೆ ನಡೆದು ಬಂದ
ಸೂರ್ಯನ ಮುಖ ಕೆಂಪಾಗಿದೆ.

ಗಿಡಗಂಟೆಗಳ ಕೊರಳೊಳಗಿಂದ
ಹೊಮ್ಮಿದ ಹಕ್ಕಿಗಳ ಹಾಡನ್ನು
ಆಕಾಶವಾಣಿ ಮರುಪ್ರಸಾರ
ಮಾಡುತ್ತಿದೆ, ಕೇಳಲು
ತುಂಬಾ ಹಿತವಾಗಿದೆ.


‘ಬೆಳಗಾಯ್ತು’ ಎಂದರಚುತ್ತಾ
ಹುಡುಗಿಯ ಅಮ್ಮ
ತಟ್ಟಿ ಎಬ್ಬಿಸುತ್ತಿದ್ದಾಳೆ.

ಹುಡುಗಿ ಕಿವುಡಿ-
ಅವಳಿಗೆ ಸದ್ದುಗದ್ದಲದಲ್ಲಿ
ಬೆಳಗಾಗುವುದಿಲ್ಲ.

ಹುಡುಗಿ ಕುರುಡಿ-
ಅವಳಿಗೆ ವರ್ಣರಂಜಿತ
ಬೆಳಗು ಕಾಣಲಾಗುವುದಿಲ್ಲ.

ಹುಡುಗಿ ಮೂಗಿ-
ಕನಸನ್ನೇಕೆ ಕಸಿದುಕೊಂಡೆ?
ಎಂದವಳು ಅಮ್ಮನನ್ನು
ಕೇಳುವುದಿಲ್ಲ.

ಸದ್ಯಕ್ಕವಳು ಇರುಳಿನಲ್ಲಿ
ಬೆಳಗಿನ ಕನಸು ಕಂಡ
ಖುಷಿಯಲ್ಲಿದ್ದಾಳೆ.


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...