ಗಾಳ ಬೀಸಿ ಕೊಳಕ್ಕೆ
ದಡದಲ್ಲಿ ಕಾಯುತ್ತ
ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ.
ಸಾಕುಹಕ್ಕಿಯ ಮೇಲೆ ತೂರಿ,
ಹೊಸಹಕ್ಕಿಯನು
ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ
ಹಿಂದೆ ಬಾವಿಗೆ ಜಾರಿ
ತಳಕಿಳಿದು ಮರೆತ
ಸರಕುಗಳ ತರುವ ಪಾತಾಳಗರಡಿ.
ಸ್ವಾತಿ ಹನಿ ಹೀರಿ
ಮುತ್ತನು ಬೆಳೆದ
ಚಿಪ್ಪುಗಳ ಎತ್ತಿ ಹೊರತರುವ ನೋಡಿ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.