Home / ಲೇಖನ / ಇತರೆ / ಮದುವೆಯ ಏಜಂಟ

ಮದುವೆಯ ಏಜಂಟ

ವಿಮಾ ಏಜಂಟರಿಗಿಂತ ಎರಡು ಮಾತುಗಳನ್ನು ಹೆಚ್ಚಾಗಿ ಮಾತಾಡಿ, ಆಡಿದ ಸುಳ್ಳನ್ನು ಸತ್ಯವೆಂದೇ ಹಟ ವಿಡಿದು ವಾದಿಸುವ ಏಜಂಟರಾರೂ ಇರುವರಾದರೆ- ಅವರೇ ಇವರು ಮದುವೆಯ ಏಜಂಟರು. ಅಷ್ಟೇ ಅಲ್ಲ, ವಿಮಾ ಏಜಂಟರು ತಿಳಿಯದ ಒಂದೆರಡು ಚಿಕ್ಕ ಆಟಗಳನ್ನು ಈ ಏಜಂಟರು ಅರಿತಿರುವರು.

ರಾಮಚಂದ್ರನಾಯ್ಕರು ತಮ್ಮ ಹೆಂಡತಿಯ ಅಕಾಲ ನಿಧನವನ್ನು ಚಿಂತಿಸುತ್ತ ಈ ಐವತ್ತನೆ ವಯಸ್ಸಿನಲ್ಲಿ ತನಗೆ ಮತ್ತೊಂದು ಹೆಣ್ಣನ್ನು ಕೊಡುವ ವಿವೇಕಿಯು ಈ ಮೂಢ ಜಗತ್ತಿನಲ್ಲಿರುವನೇ ಎಂದು ಆಶ್ಚರ್ಯ ಪಡುತ್ತಿರಲು, ಹರೆ ಕಳ ಗೋವರ್ಧನರಾಯರು- ಶತ್ರು ಸೈನ್ಯದಿಂದಾವೃತನಾಗಿ ಚಿಂತಿಸುತ್ತಿದ್ದ ಅರಸನ ಸಮ್ಮುಖಕ್ಕೆ ಬರುವ ಸಾಹಸೀ ಸೇನಾ ನಾಯಕನಂತೆ ನೆಟ್ಟಗೆ ಬಂದು, “ನಮಸ್ಕಾರ!” ಎಂದರು.

ಮಾತುಕತೆಗಳು ನಡೆದುವು. ಮೂಲ್ಕಿಯಲ್ಲಿ ಸಂಪದ್ಗಿರಿರಾಯರ ಮಗಳು ಬೆಳೆದಂತೆಯೂ, ಅವರು ರಾಮಚಂದ್ರ ನಾಯ್ಕರ ಧ್ಯಾನದಲ್ಲೆ ಇದ್ದಂತೆಯೂ ತಿಳಿದು ಬಂತು. ಗೋವರ್ಧನರಾಯರು ಜತೆಯಲ್ಲಿ, ಆ ಹುಡುಗಿಯ ಫೋಟೋವನ್ನೂ ತಂದಿದ್ದರು. ಸಂಪದ್ಗಿರಿರಾಯರು ಒಂದುವರೆ ಸಾವಿರ ವರದಕ್ಷಿಣೆ ಕೊಡುವರು; ವಿವಾಹಕ್ಕೆ ಒಪ್ಪಿಗೆಯನ್ನು ಮರುದಿನವೇ ಕಳುಹಬೇಕಾಗಿ ಹೇಳಿ ಕಳುಹಿರುವರು. ಗೋವರ್ಧನರಾಯರು ಪರೋಪಕಾರಾರ್ಥ ಇತ್ತ ಬಂದಿರುವರು; – ಇವಿಷ್ಟು ಸಂಗತಿಗಳು ಹೊರಬಿದ್ದುವು.

ರಾಮಚಂದ್ರನಾಯ್ಕರು ಅವರನ್ನು ಚೆನ್ನಾಗಿ ಸತ್ಕರಿಸಿದರು. ಮದುವೆಯಾಗಲು ತನ್ನ ಆಕ್ಷೇಪವೇನೂ ಇಲ್ಲವೆಂದರು. ಆ ಮೇಲೆ ಫೋಟೋ ನೋಡಿದರು. ಆನಂತರ, ಪುನಃ ತಮ್ಮ ಆಕ್ಷೇಪವೇನೇನೂ ಇಲ್ಲವೆಂದರು.

ತನಗೆ ಸಂತೋಷವಾಯಿತೆಂದರು ಗೋವರ್ಧನ ರಾಯರು, ಆ ರಾತ್ರೆ ಅಲ್ಲೆ ಉಳಕೊಂಡು, ಮರುದಿನ ಎದ್ದು, ನಾಯ್ಕ ರೊಂದಿಗೆ ಫಲಾಹಾರ ತೀರಿಸಿ, ಮೂಲ್ಕಿಗೆ ಹೋಗಿ ಬರಲು ಹತ್ತು ರೂಪಾಯಿಗಳನ್ನು ನಾಯ್ಕರಿಂದ ಪಡೆದು, ತಾನು ತಂದ ಫೋಟೋವನ್ನು ನಾಯ್ಕರೊಡನೆ ಬಿಟ್ಟು ತೆರಳಿದರು, ಅದೇ ಅವರ ಕೊನೆಯ ಭೇಟಿ.

ಒಂದು ತಿಂಗಳ ನಂತರ, ನಾಯ್ಕರು ಸಂಪದ್ಗಿರಿರಾಯರಿಗೆ ಕಾಗದ ಬರೆದರು. ತನಗೆ ಮಗಳೇ ಇಲ್ಲವೆಂದೂ, ನಾಯ್ಕರ ಪತ್ರವನ್ನು ನೋಡಿ ತಾನು ಆಶ್ಚರ್ಯಪಟ್ಟಿರುವೆನೆಂದೂ, ಗೋವರ್ಧನ ಎಂಬ ಹೆಸರಿನವರನ್ನು ತಾನರಿಯೆನೆಂದೂ ಸಂಪದ್ಗಿರಿರಾಯರಿಂದ ಉತ್ತರ ಬಂತು.

ನಾಯ್ಕರು, ಗೋವರ್ಧನರಾಯರು ತಂದ ಫೋಟೋವನ್ನು ಸಂಪದ್ಗಿರಿರಾಯರಿಗೆ ಕಳುಹಿದರು. ಎರಡು ದಿನಗಳಲ್ಲಿ ಸಂಪದ್ಗಿರಿರಾಯರಿಂದ ಪುನಃ ಉತ್ತರ ಬಂತು:- “ನೀವು ಕಳುಹಿಸಿದ ಫೋಟೋ ನನ್ನ ಮೃತಪತ್ನಿಯದು. ಒಂದು ತಿಂಗಳ ಹಿಂದೆ ‘ಶ್ರೀಧರರಾಯ’ ಎಂಬ ಹೆಸರಿನವ ರೊಬ್ಬರು ನನ್ನ ಮನೆಗೆ ಬಂದಿದ್ದರು. ಒಂದು ದಿನ ಉಳಕೊಂಡು,
ನನಗೆ ಎರಡನೆ ಸಂಬಂಧವೊಂದನ್ನು ಸೂಚಿಸಿ, “ಉಡುಪಿ ನಾರಾಯಣರಾಯರ ಮಗಳ ಫೋಟೋ” ಎನ್ನುತ್ತ ಒಂದು ಫೋಟೋ ಕೊಟ್ಟರು. ಮರುದಿನ ೫ ರೂಪಾಯಿ ಗಳೊಂದಿಗೆ ಹೋದವರು, ಈ ತನಕ ಪತ್ತೆಯಿಲ್ಲ. ಆಗಲೇ ನನ್ನ ಮೃತಪತ್ನಿಯ ಫೋಟೋ ಕಾಣೆಯಾಗಿತ್ತು …… ಎಂದು ಮುಂತಾಗಿ ಬರೆದು, ಆ ‘ಶ್ರೀಧರರಾಯ’ರ ರೂಪವನ್ನು ಕೊಂಚ ವರ್ಣಿಸಿದ್ದರು.

ರಾಮಚಂದ್ರನಾಯ್ಕರಿಗೆ ಎದೆ ಧಸಕ್ಕೆಂದಿತು. ಒಳಗಿನ ಕೊಠಡಿಗೆ ಹೋಗಿ ತಮ್ಮ ಮಗಳ ಫೋಟೋ ಕಡೆಗೆ ನೋಡಿದರು. ಅವರೆಣಿಸಿದುದೇ- ಫೋಟೋ ಕಾಣೆಯಾಗಿದೆ!

ಇನ್ನೊಬ್ಬ ವಿವಾಹಾತುರ ವಿದುರನು ರಾಮಚಂದ್ರನಾಯ್ಕರಿಗೆ- “ನಿಮ್ಮ ಮಗಳ ಫೋಟೋ ನೋಡಿ ಒಪ್ಪಿಗೆಯಾಯಿತು. ಎಷ್ಟು ವರದಕ್ಷಿಣೆ ಕೊಡುವಿರಿ?” ಎಂದು ಪತ್ರ ಬರೆವ ತನಕ ಶ್ರೀಧರ ಯಾನೆ ಗೋವರ್ಧನ ರಾಯರ ಪತ್ತೆ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ತಪ್ಪು – ಎಂದು ಕೊಳ್ಳುತ್ತ ನಾಯ್ಕರು ಪತ್ತೆಗಾರಂಭಿಸಿರುವರು.

ಆದರೆ ………!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...