Home / ಕವನ / ಕವಿತೆ / ತಿರುಗಿ ನೋಡೇ ಒಮ್ಮೆ

ತಿರುಗಿ ನೋಡೇ ಒಮ್ಮೆ

ಹಳೆಯೂರ ಧಿಕ್ಕರಿಸಿ
ಹೊಸ ಊರುಗಳ ಕನಸಿ
ಕಟ್ಟಿದ್ದ ಕೆಡವಿ ಹೊರಟಿರುವ ಹೆಣ್ಣೆ
ತಿರುಗಿ ನೋಡೇ ಒಮ್ಮೆ ಇಳಿದ ದಿನ್ನೆ

“ನಾ ಮುಡಿದ ಹೂವು, ನಾ ತೊಟ್ಟ ಕೈಬಳೆ, ಹಣೆಗೆ
ಇಟ್ಟ ಸಿಂಧೂರ, ಎದೆಕವಚ ನೀನೇ” ಎಂದು
ನನ್ನೂರ ದಾರಿಯನು ತೂರಿ ತೇರಿನ ಕಳಸ
ಏರಬಲ್ಲ ಸವಾರಧೀರ ಬಾರೋ” ಎಂದು,
ಮದಿಸಿ ಮೈಬಿಲ್ಲಿನಲಿ ಹೂಡಿದವಳೆ
ಹೊತ್ತ ಭಾರದ ಕೆಳಗೆ ತೆತ್ತ ಧನ್ಯತೆ ಪಡೆದು
ತಾಳಲಾಗದ ಸುಖದಿ ನರಳಿದವಳೆ,
ಎಲ್ಲಿ ಹೋಯಿತು ಹೇಳೆ ಹೆಣ್ಣೆ, ಘಮ ಘಮ ಹಣ್ಣೆ
ಬಿಗಿದ ಹೆಡೆ ಫಟ್ಟೆಂದು ಕಡಿಯಿತೇನೇ ?

“ಮೊಗ್ಗು ಕಚ್ಚಿದ ಎದೆಗೆ
ಹೂವು ಕಚ್ಚಿದ ಕವೆಗೆ
ಚಿಗುರು ಸೊಕ್ಕಿದ ಕೆನ್ನೆ, ಕೆಂಪುತುಟಿಗೆ
ಹಗಲಿರುಳು ತೂಗಿದವ
ಕಾಲವನೆ ತೇಗಿದವ
ಮಳೆ ಕೆರೆವವನೆ ನನ್ನ ಮಣ್ಣ ಬಿಸಿಗೆ
ಬಾರೋ ಬಾರೋ ಬದುಕು ಹಗುರ ಬಾರೋ
ಹೇರಿಕೊಳ್ಳುವೆ ನಿನ್ನ ಭಾರ ತಾರೋ”
ಎಂದು ಕೂಗಿದ ಹೆಣ್ಣೆ
ಜೇನು ಹನಿಯುವ ಹಣ್ಣೆ
ಇರುಳು ಇಳಿಯುವ ಮೊದಲೆ ಎಲ್ಲಿ ಹೋದೆ ?
ಮರುಳು ಹಾಡುವ ಮೈಯ ತೊರೆದೆ ಹೇಗೆ ?

ಅಲಕಾವತಿಯ ಕನಸುಬುರುಡೆಗಳ ಬಿಗಿದಪ್ಪಿ
ವರುಷಶಾಪವ ಈಜಿ ಬಂದ ಜೀವ
ಹೇಗೆ ತಾಳೀತು ಬಾಳೀತು ಉದುರಲು ಮುತ್ತು
ಬರಿಯ ಚಿಪ್ಪನು, ಮರೆತು ಕುದಿವ ನೋವ ?
ನಾಳೆಗಳ ಸೂತ್ರದಲಿ ನಿನ್ನೆ ನೆನಪನು ಕೋದು
ಬಾಳುವುದೆ ಜೀವನವೆ ಹೇಳು ಚೆನ್ನೆ
ಸಾರ ತೀರಿದ ಬಾಳು ತುರಿವ ತಿರುಳಿನ ಕರಟ
ದನಿಸತ್ತ ಚೇಷ್ಟೆಗಳ ಮೂಕ ಸನ್ನೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...