ದೀಪದ ಕುಡಿಗಳು ಎಲ್ಲೆಲ್ಲೂ
ದೀಪದ ಪಡೆಯೇ ಎಲ್ಲೆಲ್ಲೂ,
ಬಾನಲ್ಲೂ ಬುವಿಯಲ್ಲೂ
ಮಕ್ಕಳು ಮುದುಕರ ಕಣ್ಣಲ್ಲೂ.
ಕರೀ ಮೋಡದಾ ಮರೆಯಲ್ಲಿ
ಹಾಸಿದ ಬೆಳಕಿನ ತೆರೆಯಲ್ಲಿ
ಮಿಂಚುವ ಭಾಷೆ, ಏನೋ ಆಸೆ
ಕಾತರ ತುಂಬಿದ ಬಾನಲ್ಲಿ
ಕಲ್ಲು ಮುಳ್ಳಿನಾ ಬದಿಯಲ್ಲೇ
ಬಿರುಸುಮಣ್ಣಿನಾ ಎದೆಯಲ್ಲೇ,
ಆಡಿವೆ ಗಿಡಮರ ಬಳ್ಳಿಗಳು
ತೂಗಿವೆ ಹೂವೂ ಹಣ್ಣುಗಳು.
ಇದ್ದೇ ಇವೆ ಹಳೆ ನೋವುಗಳು
ಮರೆಯಲು ಬಯಸವೆ ಜೀವಗಳು?
ನೋವಿನ ನೆತ್ತಿಯ ಒತ್ತಿರಲಿ
ಆಸೆಯ ವಾಮನ ಪಾದಗಳು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.