ಪ್ರಗತಿ ಅಥವಾ ದಾಸ್ಯವಿಮೋಚನೆ – ೮ನೆಯ ಖಂಡ – ಸಾಮರ್‍ಥ್ಯಸಂಚಯ

ಪ್ರಗತಿ ಅಥವಾ ದಾಸ್ಯವಿಮೋಚನೆ – ೮ನೆಯ ಖಂಡ – ಸಾಮರ್‍ಥ್ಯಸಂಚಯ

ಯುದ್ಧದಲ್ಲಿ ಉಪಯೋಗಿಸಬೇಕಾದ ತೋಫುಗಳನ್ನು ಮೊದಲು ಪರೀಕ್ಷಿಸಿ ಆ ಮೇಲೆ ಉಪಯೋಗಿಸುವ ರೂಢಿಯುಂಟು. ಪರೀಕ್ಷೆಯ ಕಾಲಕ್ಕೆ ಅವುಗಳಲ್ಲಿ ಸಾಧಾರಣವಾಗಿ ತುಂಬುವ ಮದ್ದು ಗುಂಡುಗಳಿಗಿಂತ ಹೆಚ್ಚು ಮದ್ದು-ಗುಂಡುಗಳನ್ನು ತುಂಬಿ ಹಾರಿಸಿ ನೋಡುವರು. ಹೆಚ್ಚು ಮದ್ದು-ಗುಂಡು ಉಪಯೋಗಿಸಿ ಹಾರಿಸಿ ನೋಡುವ ಕಾರಣವೇನೆಂದರೆ, ಯಾವನಾದರೊಬ್ಬ ಅರಿಯದ ಮನುಷ್ಯನು ಯುದ್ಧಪ್ರಸಂಗದಲ್ಲಿ ಹಾಗೆ ಹಾರಿಸಿದರೆ ಅಪಘಾತವಾಗಬಾರದು. ಪರೀಕ್ಷೆಯಲ್ಲಿ ಪಾಸಾಗದ ಸ್ವಾಭಾವಿಕ ಶಕ್ತಿಗಿಂತ ಹೆಚ್ಚು ಮದ್ದು-ಗುಂಡಿನ ಆಘಾತವನ್ನು ತಡೆಯದ ತೋಫುಗಳನ್ನು ಯುದ್ಧದಲ್ಲಿ ಉಪಯೋಗಿಸದೆ ಅವನ್ನು ನಾಶಗೊಳಿಸುವರು ಇಲ್ಲವೆ ಅವ್ರುಗಳ ಸ್ವಾಭಾವಿಕ ಶಕ್ತಿಯನ್ನಾದರೂ ಕಡಿಮೆಮಾಡುವರು.

ಉಗೆಬಂಡಿಯ ಇಲ್ಲವೆ ಉಗೆಹಢಗಗಳ ಇಲ್ಲವೆ ಎಂಜಿನ್, ಪ್ರೆಸ್ಸು ಮೊದಲಾದವುಗಳ ಇಂಜಿನಗಳ ಶಕ್ತಿಯನ್ನಾದರೂ ಅವುಗಳನ್ನು ಉಪಯೋಗಿಸುವ ಶಕ್ತಿಗಿಂತ ತುಸು ಹೆಚ್ಚು ಶಕ್ತಿಯನ್ನು ಬೇಕಂತ ಇಟ್ಟಿರುತ್ತಾರೆ, ಸಾಧಾರಣವಾಗಿ ೨೦ಹಾರ್‍ಸ- ಕುದುರೆಯ ಶಕ್ತಿಯ ಇಂಜಿನವು ನಮಗೆ ಬೇಕಾಗಿದ್ದರೆ, ನಿಪುಣಯಾಂತ್ರಿಕನು ತಿಳಿಸಿಯೇ ಆಗಲಿ, ತಿಳಿಸದೆಯೇ ಆಗಲಿ, ಬೇಕಂತ ೫ ಹಾರ್‍ಸ ಪಾವರ ಹೆಚ್ಚು ಶಕ್ತಿಯುಳ್ಳ ಅಂದರೆ ೨೫ ಹಾರ್‍ಸ ಪಾವರವುಳ ಇಂಜಿನವನ್ನು ನಮಗೆ ಕೊಡುವನು: ಈ ಹೆಚ್ಚು ಶಕ್ತಿಯ ಉಪಯೋಗವನ್ನು ಮಾಡಿಕೊಳ್ಳದಿದ್ದರೂ ಚಿಂತೆಯಿಲ್ಲ. ಆದರೆ ಅದರಲ್ಲಿ ಆ ಶಕ್ತಿಯು ಇರಬೇಕಾದದ್ದು ಅತ್ಯವಶ್ಯವಾಗಿದೆ. ಇದರಂತೆ ಪ್ರಗತಿ ಹೊಂದುವ ಮನುಷ್ಯನಲ್ಲಿ ಅವನು ಮಾಡಬೇಕಾದ ಕೆಲಸದ ಜ್ಞಾನವು ಅವನು ಅದರಲ್ಲಿ ಹೊಂದಬೇಕಾದ ಯಶಸ್ಸಿಗಿಂತ ತುಸುಹೆಚ್ಚು ಇರಬೇಕಾಗುವದು. ಈ ಹೆಚ್ಚು ಶಕ್ತಿಯು ಸಾಮರ್ಥ್ಯಸಂಚಯವು ಪ್ರಸಂಗದಲ್ಲಿ ಅವನಿಗೆ ಒಳ್ಳೇ ಸಹಾಯಕಾರಿಯಾಗದೆ ಇರದು.

ಕಾಲವು ಒಂದೇಸವನೆಯಾಗಿರುವವರೆಗೆ ಬಹುಜನರು ಪ್ರಗತಿಪರ ಕೆಲಸಗಳಲ್ಲಿ ತೊಡಗಬಹುದು. ಆದರೆ ಸಾಮರ್‍ಥ್ಯಸಂಚಯವಿದ್ದ ಹೊರತು ಕಠಿಣಪ್ರಸಂಗಗಳಲ್ಲಿ ಅವರ ದೊಡ್ಡ ಕೆಲಸಗಳು ಸುರಳೀತವಾಗಿ ಸಾಗಲಾರವು. ಸಾಮರ್‍ಥ್ಯಸಂಚಯವಿಲ್ಲದವರು ಆಪತ್ತಿನ ಪ್ರಸಂಗಗಳಲ್ಲಿ ಹತಾಶರಾಗಿ ಹಿಡಿದಕಾರ್‍ಯಬಿಟ್ಟು ಬಿಡುವರು. ಆದರೆ ಸಾಮರ್‍ಥ್ಯವಂತನು ಚಾತುರ್ಯದಿಂದ ನಡೆದು ಕಠಿಣಪ್ರಸಂಗಗಳಲ್ಲಿಯೂ ಪ್ರಗತಿಹೊಂದಲು ಯತ್ನಿಸುವನು.

ದೊಡ್ಡ ದೊಡ್ಡ ಕೆಲಸಮಾಡುವ ಯೋಗ್ಯತೆಯುಳ್ಳ ಎಷ್ಟೋ ಜನರು ಇಡಿ ಆಯುಷ್ಯವನ್ನು ಸಾಧಾರಣವಾದ ಕಲಸಮಾಡುವದರಲ್ಲಿಯೇ ಕಳೆಯುವರು. ಇದಕ್ಕೆ ಕಾರಣವೇನಂದರೆ ತಮ್ಮಲ್ಲಿ ಹೆಚ್ಚು ಸಾಮರ್‍ಥ್ಯವಿದ್ದ ಬಗ್ಗೆ ಅವರಿಗೆ ಆತ್ಮವಿಶ್ವಾಸವಿರುವದಿಲ್ಲ. ಹಾಗು ನಿತ್ಯೋಪಯೋಗಕ್ಕೆ ಬೇಕಾಗುವ ಶಕ್ತಿಗಿಂತ ಹೆಚ್ಚು ಸಾಮರ್‍ಥ್ಯವನ್ನು ಸಂಗ್ರಹಿಸಲು ಅವರು ಎಂದೂ ಪ್ರಯತ್ನಮಾಡುವದಿಲ್ಲ. ಹೀಗೆ ಸಾಮರ್‍ಥ್ಯ ಸಂಚಯಿಸದವರೂ, ಇದ್ದ ಸಾಮರ್ಥ್ಯವನ್ನೆಲ್ಲ ಉಪಯೋಗಿಸುವವರೂ ಆದ ಅವರು ಆಕಸ್ಮಿಕವಾದ ಯಾವದೊಂದು ವಿಪತ್ತಿಗೆ (ಅವ್ರು ಎಷ್ಟು ಕ್ಷುಲ್ಲಕಗಳಾಗಿದ್ದರೂ) ಗುರಿಯಾದರೆ ಸಂಪೂರ್‍ಣನಾಶಹೊಂದುವರು. ಭಯಂಕರ ಬಿರುಗಾಳಿಯಿಂದ ಇಲ್ಲವೆ ಮಳೆಯಿಂದ ಸಂಣ ಸಂಣ ಗಿಡಗಳೂ ಮುರುಕಳಿಗಬಂದಿದ್ದ ಮನೆಗಳೂ ಹ್ಯಾಗೆ ಒಮ್ಮೆಲೆ ಬೀಳಹತ್ತುವವೋ ಹಾಗೆ ದುರ್‍ಬಲರು ಸಾಂಕಟಗಳು ಒರಬರುವದರೊಳಗಾಗಿ ನಾಶಯೊಂದಹತ್ತುವರು. ಸಾಕಷ್ಟು ಧನಸಂಗ್ರಹವಿಲ್ಲದೆ ನಡಯಿಸಿದ ಉದ್ಯೋಗಗಳೂ ಯೋಗ್ಯ ಅಭ್ಯಾಸಮಾಡದ ಪರೀಕ್ಷೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳೂ ತಮ್ಮ ಪರಾಜಯದಿಂದ ಮೇಲನ ಸಂಗತಿಗೆ ಪುಷ್ಟಿ ಕೊಡುವರು. ಬ್ಯಾಂಕುಗಳು ದಿವಾಳಿತೆಗೆಯಲಿಕ್ಕೆ ಇದೇ ಕಾರಣವಂದು ತಜ್ಞರ ಮತವದೆ. ಚುನ್ನೀಲಾಲಸರಯ್ಯಾ ಎಂಬ ಸುಪ್ರಸಿದ್ಧ ಬ್ಯಾಂಕರನು ಆತ್ಮಹತ್ಯ ಮಾಡಿಕೊಳ್ಳಲಿಕ್ಕೆ ಇದೇಕಾರಣವು. ತೋಫುಗಳಲ್ಲಿ ಇಲ್ಲವೆ ಇಂಜಿನುಗಳಲ್ಲಿ ಎಂದೂ ಉಪಯೋಗಿಸದಂಥ ಹೆಚ್ಚು ಶಕ್ತಿಯು ಹ್ಯಾಗೆ ಅವಶ್ಯವೋ, ಹಾಗೆಯೇ ಬ್ಯಾಂಕುಗಳಲ್ಲಿ ಉಪಯೋಗಕ್ಕಿಂತ ಹೆಚ್ಚು ಹಣವೂ, ರಾಷ್ಟ್ರಗಳಲ್ಲಿ ಯುದ್ಧಕ್ಕೆ ಬೇಕಾಗುವ ದಂಡಿಗಿಂತ ಹೆಚ್ಚು (Reserved force) ಕಾದಿಟ್ಟ ದಂಡೂ, ವ್ಯಾಖ್ಯಾತೃವಿನಲ್ಲಿ ಕೊಡಬೇಕಾದ ವ್ಯಾಖ್ಯಾನಗಳಿಗಿಂತ ಹೆಚ್ಚು ವಿಷಯಜ್ಞಾನವೂ, ಲೇಖಕನಲ್ಲಿ ವಿವೇಚಿಸಬೇಕಾದ ಲೇಖಕ್ಕಿಂತ ಹೆಚ್ಚು ವಿವೇಚನಶಕ್ತಿಯೂ, ಜಟ್ಟಿಯಲ್ಲಿ ದಿನಾಲು ಉಪಯೋಗಿಸುವ ಶಕ್ತಿಗಿಂತ ಹೆಚ್ಚು ಶಕ್ತಿಯೂ, ಜಠರದಲ್ಲಿ ದಿನಾಲು ಪಚಿಸಬಹುದಾದ ಸಾಮರ್‍ಥ್ಯಕ್ಕಿಂತ ಹೆಚ್ಚು ಸಾಮರ್‍ಥ್ಯವೂ ಇರಬೇಕಾಗಿರುವದು. ಪ್ರಸಂಗಕ್ಕೆ ಉಪಯೋಗಬೀಳಬೇಕೆಂದು ಪ್ರಯತ್ನ ಮಾಡುವಾಗ ಬ್ಯಾಂಕುಗಳು ಬೇಕಂತ ಕೆಲವು ಹಣವನ್ನು ಬೇರೆಯಾಗಿರಿಸಬೇಕಾಗುತ್ತದೆ. ಖರ್ಚಿನಬಾಬ್ತಿನಲ್ಲಿ ರಾಷ್ಟ್ರವು ಬಹಳ ತೊಂದರೆಮಾಡಿ ಕೊಂಡು ಕೆಲವು ದಂಡನ್ನು ಕಾದಿಡಬೇಕಾಗುತ್ತದೆ, ಬಾಲ್ಯದಿಂದ ವ್ಯಾಖ್ಯಾತೃವು ಕಷ್ಟಪಟ್ಟು ಅನೇಕವಿಷಯಗಳನ್ನು ಕಲಿತಿರಬೇಕಾಗುತ್ತದೆ. ಕೂತಲ್ಲಿ, ನಿಂತಲ್ಲಿ, ಮಲಗಿದಲ್ಲಿ ವಿಜಾರಮಾಡಿ ಮಾಡಿ ಲೇಖಕನು ವಿವೇಚನಶಕ್ತಿಯನ್ನು ಸಂಗ್ರಹಿಸಬೇಕಾಗುತ್ತದೆ. ದಿನಾಲು ಹಲವು ಪ್ರಕಾರದ ಅಂಗಸಾಧನಮಾಡಿ ಮಾಡಿ ಜಟ್ಟಿಯೂ ಸಾಮರ್‍ಥ್ಯವನ್ನು ಸಂಚಯಗೊಳಿಸಿಕೊಂಡಿರಬೇಕಾಗುತ್ತದೆ. ದಿನಾಲು ತುತ್ತು ತುತ್ತು ಕಡ್ಮಿಮಾಡಿ ಅನ್ನವನ್ನುಂಡು ಪಚನಶಕ್ತಿಯನ್ನು ಬೆಳೆಸಿರ ಬೇಕಾಗುತ್ತದೆ.

“ಇಟ್ಟು ಒಳಿಸು” ಎಂಬ ನಾಣ್ಣುಡಿಯ ಗರ್‍ಭಿತಾರ್‍ಥವಾದರೂ ಸಾಮರ್‍ಥ್ಯಸಂಚಯಗೊಳಿಸು ಎಂದಿರುವದು. ಮೇಲಿನ ಸಾಮರ್ಥ್ಯ ಸಂಚಯದ ನಿಯಮವು ರೋಗಿಗಳಿಗೂ ಹತ್ತುವದು. ಮೊದಲಿನಿಂದ ನಿಯಮಿತವಾಗಿ ಉಣ್ಣುತ್ತ, ಯೋಗ್ಯವಾಗಿ ವಿಶ್ರಾಂತಿಯನ್ನು ಹೊಂದುತ್ತ ಬಂದಿದ್ದರೆ ಬೇನೆಬರುವ ಸಂಭವವಿದ್ದಿಲ್ಲ. ಒಂದು ವೇಳೆ ಸಾಧಾರಣಬೇನೆಬಂದರೂ ದೇಹವು ನೈಸರ್‍ಗಿಕಧರ್‍ಮದಂತೆ ಬೇನೆಯಿಂದ ತೀವ್ರವೇ ಮುಕ್ತವಾಗುತ್ತಿತ್ತು; ಆದರೆ ರೋಗಿಯು ಉಣ್ಣು-ತಿನ್ನುವದರಲ್ಲಿ ಮಿತಿಯೆನ್ನಿಡದೆ ತನ್ನ ಪಾಚಕಶಕ್ತಿಗೆ ಹರಿಯದಷ್ಟು ಅನ್ನವನ್ನು ಪ್ರತಿನಿತ್ಯ ಮೂರು ಮೂರು ಸಾರೆ ಉಣ್ಣುವದರಿಂದ ಪಚನಶಕ್ತಿಯು ಕೆಟ್ಟುಹೋಗಿ ಕಾಯಮರೋಗಗಳ ಬೀಡಾರಕ್ಕೆ ಅವನ ದೇಹವು ತಕ್ಕದ್ದಾಗುವದು. ಉಣಿಸು-ತಿನಿಸುಗಳಂತೆ ವಿಶ್ರಾಂತಿಯನ್ನಾದರೂ ರೋಗಿಯು ಮಿತಿಯಿಲ್ಲದೆ ತಕ್ಕೊಳ್ಳುವನು. ಆದರಿಂದಲೂ ದೇಹದ ಅಸ್ವಸ್ಥತೆಗೆ ಅನುವುದೊರೆಯುವದು. ದೃಢ ಕಾಯನಾಗ ಬಯಸುವವನು ಜಠರವು ಪಚಿಸಬಹುದಾದ ಅನ್ನಕ್ಕಿಂತ ತುತ್ತು ಕಡಿಮೆ ಉಣ್ಣುವ ಪರಿಪಾಠವಿಡಬೇಕು. ಹಾಗು ಬೇಸರ ಬಾರದಷ್ಟು ವಿಶ್ರಾಂತಿಯನ್ನು ಅನುಭೋಗಿಸುತ್ತಿರಬೇಕು. ಅಂದರೆ ಅವುಗಳಿಂದ ಒಂದುತರದ ಸಾಮರ್‍ಥ್ಯಸಂಚಯಿವಾಗಿ ಪ್ರಕೃತಿಯು ನಿರೋಗವಾಗುವದು.

ವೆಲಿಂಗ್ಟನ್ನನ್ನು ಯುದ್ಧನೈಪುಣ್ಯದಿಂದಾಗಲಿ, ಸಾಮರ್‍ಥ್ಯ ಶ್ರೇಷ್ಠತ್ವದಿಂದಾಗಲಿ ವಾಟರ್‍ಲೂ ಕಾಳಗದಲ್ಲಿ ರಣಧುರಂಧರ ನೆಪೋಲಿಯನ್ನ ಬೋನಾಪಾರ್‍ಟನನ್ನು ಗೆಲ್ಲಲಿಲ್ಲ; ಆದರೆ ಒಳ್ಳೇ ಹೊತ್ತಿಗೆ ದೊರೆತ ೩೦ ಸಾವಿರ ಕಾದಿಟ್ಟದಂಡಿನ ಸಹಾಯದಿಂದ ಅವನು ನೆಪೋಲಿಯನ್ನನನ್ನು ಗೆದ್ದನೆಂದು ಇತಿಹಾಸದಲ್ಲಿ ಬರೆದದೆ. ಇದರಂತೆ ಸದಾ ಶಿವರಾಯನಿಗೆ ಮಲ್ಲಾರರಾವ ಹೋಳಕರನ ಕಾದಿಟ್ಟದಂಡು ಹೊತ್ತಿಗೆಸರಿಯಾಗಿ ಅನುವಾಗದ್ದರಿಂದ ಪಾನಿಪತ್ತದಲ್ಲಿ ಮರಾಟರ ಭಯಂಕರ ಪರಾಜಯವಾಯಿತು. ಸಾಮರ್‍ಥ್ಯ ಸಂಚಯಮಾಡದಿದ್ದವನ ಪರಾಜಯಗಳೆಲ್ಲ ಇದೇ ಪ್ರಕಾರದವಾಗುವವು.

ಕೈ. ನಾಮದಾರ ಗೋಖಲೆಯವರು ವಕ್ತೃತ್ವಸಾಮರ್‍ಥ್ಯವನ್ನು ಬೆಳಿಸಿಕೊಳ್ಳುವದಕ್ಕಾಗಿ ಎಷ್ಟೋ ಉತ್ತಮ ಗ್ರಂಥಗಳನ್ನು ಬಾಯಿ ಪಾಠಮಾಡಿದ್ದರು. ಅವರು ಈ ಭಾಷಾಸಂಚಯದಿಂದ ಲಾರ್ಡ ಕರ್‍ಝನ್ನ ಹಾಗು ಲಾರ್ಡಮಿಂಟೋಸಾಹೇಬರಂಥ ಅತ್ಯಂತ ಆಭಿಮಾನಿಗಳ ಬಾಯಿಗಳನ್ನು ಕಟ್ಟಿ ಬಿಡುತ್ತಿದ್ದರು. ಗೋಖಲೆಯವರ ವಾಕ್‌ಸಾಮರ್‍ಥ್ಯವು ಹ್ಯಾಗೆ ಹ್ಯಾಗೆ ಬೆಳೆಯಹತ್ತಿತೋ ಹಾಗೆ ಹಾಗೆ ಅವರ ವಕ್ತೃತ್ವಕ್ಕೆ ಅಪೂರ್‍ವತೆಯು ಪ್ರಾಪ್ತವಾಗಹತ್ತಿತು. ಮತ್ತು ತಡೆ ಕಡೆಗೆ ಗೋಖಲೆಯವರೆಂದರೆ ಭೂಲೋಕದ ಬ್ರಹಸ್ಪತಿಯೇ ಆಗಿ ಹೋದರು.

ಕೋರ್‍ಟುಗಳಲ್ಲಿ ನಡೆಯುವ ಎಷ್ಟೋ ಖಟ್ಲೆಗಳನ್ನು ಹೊಸಬರಾದ ವಕೀಲರು ನಡೆಯಿಸಲಾರರೆಂತಲ್ಲ; ಆದರೆ ಕೋರ್ಟಿನ ಕೆಲಸಗಳಲ್ಲಿ ತೀರ ಅನನುಭವಿಕರಾದ ಇವರ ಕಡೆಗೆ ಪಕ್ಷಗಾರರು ಮುದ್ದಾಮಾಗಿ ಹೋಗುವದಿಲ್ಲ; ಯೊಕಂದರೆ ಖಟ್ಲೆ ಕೆಡಲಿಕ್ಕೆ ಈ ಅಪಕ್ವ ವಕೀಲನೊಬ್ಬನು ಮತ್ತೆ ಎಲ್ಲಿ ಕಾರಣನಾಗುವನೋ ಎಂದು ಅವರು ತಿಳಿಯುವರು.

ಯಾವದಾದರೊಂದು ಯಂತ್ರವನ್ನು ಮಾಡುವವನಿಗೆ ೫೦ ರೂ. ಬಕ್ಷೀಸು ಕೊಡುವೆನೆಂದೂ, ಯಾವದಾದರೊಂದು ಯಂತ್ರವನ್ನು ಮಾಡಕಲಿಯುವವನಿಗೆ ೩೦೦೦ ರೂ. ಬಕ್ಷೀಸು ಕೊಡುವೆನೆಂದೂ ಒಬ್ಬ ಪ್ರಸಿದ್ಧ ಯಂತ್ರಕಲಾವಿಶಾರದನು ಪ್ರಸಿದ್ಧಿಸಿದ್ದನಂತೆ. ಇದರಲ್ಲಿ ಅವನು ಕೆಲಸಮಾಡುವ ಮನುಷ್ಯನಿಗಿಂತ ಕೆಲಸಕಲಿಯುವ ಮನುಷ್ಯನಿಗೆ ಹೆಚ್ಚು ಇನಾಮು ಕೊಡಲಿಚ್ಚಿಸಿದ್ದನ್ನು ಕೇಳಿ ಸಾಮಾನ್ಯರು ಚಕಿತರಾಗಬಹುದಾಗಿದೆ. ಆದರೆ ಅವನು ಹಾಗೆಬಕ್ಷೀಸು ಕೊಡುವದು ಯೋಗ್ಯವೇ ಅಗಿರುವದು. ಯಾಕೆಂದರೆ ಯಂತ್ರಪ್ರವೀಣನಿಗೆ ಹೊಸಯಂತ್ರ ಮಾಡುವದಕ್ಕೆ ಒಂದೆರೆಡು ದಿವಸಗಳಾದರೆ ಸಾಕು. ಅದರೆ ಅದೇ ಯಂತ್ರ ಮಾಡಕಲಿಯುವವನು ೪-೬ ವರ್ಷ ಒಂದೇಸವನೆ ಲಕ್ಷಗೊಟ್ಟು ಶಿಕ್ಷಣ ಹೊಂದಬೇಕಾಗುತ್ತದೆ. ಆ ಮಾನದಿಂದ ಅವನಿಗೆ ಬಕ್ಷೀಸು ಹೆಚ್ಚು ಸಿಗುವದು ಅವಶ್ಯವಾಗಿದೆ. ಕಲಿಯುವವನು ಸಾಮರ್‍ಥ್ಯಸಂಚಯ ಗೊಳಿಸಲಿಕ್ಕೆ ಪ್ರಯತ್ನಮಾಡಬೇಕಾಗುತ್ತದೆ. ಆದರೆ ಮಾಡುವವನು ತನ್ನಲ್ಲಿದ್ದ ಸಾಮರ್‍ಥ್ಯದ ಲೇಶಾಂಶವನ್ನು ಖರ್ಚುಮಾಡಿ ಯಂತ್ರ ತಯಾರಿಸುವನು.

ತಾಸೆರಡುತಾಸಿನ ಕೆಲಸಕ್ಕಾಗಿ ಪ್ರಸಿದ್ಧ ಡಾಕ್ಟರರೂ, ಬ್ಯಾರಿಸ್ಟರರೂ ಮಿತಿಮೀರಿ ಪ್ರತಿಫಲವನ್ನು ಕೇಳುವದನ್ನು ನೋಡಿದರೆ ಆಶ್ಚರ್‍ಯವಾಗುವದು. ಅದರೆ ಅವರು ಆ ಕಲೆಯಲ್ಲಿ ಪ್ರವೀಣತೆಯೆನ್ನು ಪಡೆದು ಪ್ರಸಿದ್ಧಿಗೆ ಬರಲಿಕ್ಕೆ ಅವರಿಗೆ ಹತ್ತಿದ ಕಾಲ, ಪರಿಶ್ರಮಗಳನ್ನು ಕುರಿತು ಆಲೋಚಿಸಿದರೆ, ಅವರು ಬೇಡುವ ಪ್ರತಿಫಲವು ಯೋಗ್ಯವೆಂದು ತಿಳಿಯ ಬರುವದು. ಕಡಿಮೆ ಪ್ರತಿಫಲತಕ್ಕೊಂಡು ಕೆಲಸಮಾಡಲಿಕ್ಕೆ ಸಿದ್ದರಿದ್ದ ಡಾಕ್ಟರೆ-ಬ್ಗಾರಿಸ್ಟರರಿಗೂ ಇವರಿಗೂ ಆಯಾ ಕಲೆಗಳ ಜ್ಞಾನದಲ್ಲಿ ಏನೂ ಹೆಚ್ಚುಕಡಿಮೆಯಿರುವುದಿಲ್ಲ; ಆದರೆ ಪ್ರಸಿದ್ಧಿ ಪಡೆಯಲಿಕ್ಕೆ ಅವರು ತಪಗಟ್ಟಿಲೆ ತಮ್ಮ ಉದ್ಯೋಗವನ್ನು ಒಳ್ಳೇ ಪರಿಶ್ರಮದಿಂದ ಸಾಗಿಸಿರುವದರಿಂದ, ಅವರಲ್ಲಿ ಆ ಉದ್ಯೋಗದ ಅನುಭವವು ಹೆಚ್ಚಾಗಿರುತ್ತದೆ. ಅವರ ಅನುಭವವಿಶೇಷಕ್ಕಾಗಿಯೇ-ಸಾಮರ್‍ಥ್ಯಸಂಚಯಕ್ಕಾಗಿಯೇ ಅವರಿಗೆ ಹೆಚ್ಚು ಪ್ರತಿಫಲವ್ರ ದೊರೆಯುವದು.

ನಾಮದಾರೆ ರೊದ್ದರವರು ಇಲ್ಲವೆ ರಾ. ಬ. ಆರಟಾಳರವರು ಬಿ. ಏ. ಇಲ್ಲವೆ ಎಂ. ಏ. ಪರೀಕ್ಷೆಗಳಲ್ಲಿ ತೇರ್‍ಗಡೆಯಾಗಿರುವದಿಲ್ಲ. ಅವರು ಒರೇ ಮ್ಯಾಟ್ರಿಕ್ಯುಲೇಶನ್‌ ಪರೀಕ್ಷೆ ಪಾಸಾಗಿದ್ದರೂ, ದೊಡ್ಡ ದೊಡ್ಡ ಹುದ್ದೆಯ ಅತ್ಯಂತ ಜವಾಬುದಾರಿಯ ಕೆಲಸಗಳಿಗೆ ಅರ್ಹರಾಗಿದ್ದರು. ಅದೇ ಈಗ ಪಾಸಾದ ಎಂ ಏ. ಇಲ್ಲವೆ ಬಿ. ಏ. ಯವರಿಗೆ ನಾಮದಾರ ರೊದ್ದರೆಂಥ ಜವಾಬುದಾರಿಯ ಕೆಲಸಗಳೂ, ಹುದ್ದೆಯೂ ಒಮ್ಮೆಲೆ ಸಿಗಲಾರವು; ಅವರು ಮೂವತ್ತುವರ್ಷಗಟ್ಟಲೆ ತಮ್ಮ ಕೆಲಸವನ್ನು ಏಕಪ್ರಕಾರವಾಗಿ ಮಾಡಿ ಪ್ರಗತಿಯನ್ನು ಹೊಂದಿದ್ದರಿಂದ, ಅವರಿಗೆ ಈಗಿನ ಮಹತ್ವವು ಪ್ರಾಪ್ತವಾಗಿದೆ.

ಕಾವ್ಯಾದಿಗಳ ವ್ಯುತ್ಪತ್ತಿ, ಮಾಡಿಕೊಳ್ಳುವಾಗ ಅಮರಕೋಶ, ಸ್ತೋತ್ರರತ್ನಾಕರ, ವ್ಯಾಕರಣಗಳ ಸೂತ್ರ ಮೊದಲಾದವುಗಳನ್ನು ಪಾಠಮಾಡುವದಕ್ಕೆ ಎಷ್ಟೋ ದಿವಸಗಳನ್ನು ಕಳೆಯೆಬೇಕಾಗುತ್ತದೆ. ಅಂಕಗಣಿತ-ಬೀಜಗಣಿತಗಳನ್ನು ಕಲಿಯೆಬೇಕಾದರೆ ಅಂಕಿ, ಮೊಗ್ಗೆ, ಕಾಲು, ಅರ್ಧ, ಮುಕ್ಕಾಲು ಇತ್ಯಾದಿಗಳನ್ನು ಕಲಿಯುವುದಕ್ಕೂ, ವರ್‍ಗಮೂಲ, ಘನಮೂಲ, ಮಹತ್ವಮಾಪನ ಮೊದಲಾದವುಗಳ ನಿಯಮಗಳನ್ನು ಪಾಠಮಾಡುವದಕ್ಕೂ ಬಹು ದಿವಸಗಳನ್ನು ಕಳೆಯಬೇಕಾಗುತ್ತದೆ. ಮೊದಲು ಮಾಮಲತಿಯೆನ್ನು ಸಂಪಾದಿಸಬೇಕಾದರೆ ಬಾರನಿಶಿಕಾರಕೂನನ ಕೆಲಸವನ್ನು ಎಷ್ಟೋ ದಿವಸಗಳವರೆಗೆ ಮಾಡಬೇಕಾಗುತ್ತಿತ್ತು. ಹೀಗೆ ಆಯಾಕೆಲಸಕಲಿಯುವದಕ್ಕಾಗಿ ಕಳೆಯುವ ವೇಳೆಯೂ, ಪಡುವಶ್ರಮವೂ ವ್ಯರ್‍ಥವಾಗುವದಿಲ್ಲ. ಕಾಲಹರಣದ ಪರಿಶ್ರಮ ಮಾಡಿದಂತಾಗುವದಿಲ್ಲ. ಇವುಗಳಿಂದ ಕೆಲಸ ಕಲಿಯುವವನಲ್ಲಿ ಆಯಾ ವಿಷಯದ ಸಾಮರ್‍ಥ್ಯ ಸಂಚಯವು ಬೆಳೆಯುವದು.

ಸಾಮರ್‍ಥ್ಯ ಸಂಚಯದಿಂದ ಅನಿತ್ಯವಾದ ವ್ಯವಹಾರಗಳ ಜ್ಞಾನವಾಗುವದು. ಹೀಗೆ ಅನಿತ್ಯವ್ಯವಹಾರಗಳ ಜ್ಞಾನವಾದ ಹೊರೆತು ಖರೇ ಪ್ರಗತಿಯಾಯಿತೆಂದು ಹೇಳಲಿಕ್ಕೆ ಬರುವದಿಲ್ಲ. ಪ್ರಗತಿಪರನಿಗೆ ಸಾಮರ್‍ಥ್ಯ ಸಂಚಯವೇ ಬಂಡವಾಳವು. ಇದೇ ಅವನ ತಾರಕ ತರುಣೋಪಾಖವು.

ರೈತನು ಭೂಮಿಯನ್ನು ರೆಂಟಿಹೊಡೆದು ಹರಗಿ ತಯರುಮಾಡಿಟ್ಟುಕೊಂಡು ಬಿತ್ತುವುದಕ್ಕಾಗಿ ಮಳೆಯ ಹಾದಿಯನ್ನು ನೋಡುತ್ತ, ಕೂಡ್ರುವಂತೆ, ಪ್ರಗತಿಯ ಇಚ್ಚೆಯುಳ್ಳವನು ಸಾಮರ್‍ಥ್ಯ ಸಂಚಯ ಗೊಳಿಸಿಕೊಂಡು ದೃಢನಿಶ್ಚಯದಿಂದ ಕೆಲಸಮಾಡಿ ಯಶಃಪ್ರಾಪ್ತಿಯ ಹಾದಿಯ ಕಾಯಬೇಕು. ಯಾರಲ್ಲಿ ಯೋಗ್ಯ ಸಾಮರ್‍ಥ್ಯದ ಸಂಚಯವಾಗಿರುವದಿಲ್ಲವೋ ಅವರಿಗೆ ಯಶಃಪ್ರಾಪ್ತಿಯಗಲಾರದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಜ ಸುಧಾರಿಸಿಕೊ
Next post ಎದ್ದೇಳು ಎದ್ದೇಳು ಕನ್ನಡಿಗ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys