ಹಳೆಬಾಳಿಗೆ ಹೊಸ ಅರ್ಥವ ತಾ
ಸಂಕ್ರಾಂತಿಯ ಸೂರ್ಯ,

ಹೊಸ ಬೆಳಕಲಿ ತೊಳೆ ಈ ಜಗವ
ಮೊಳಗಿಸು ನವತೂರ್ಯ.

ಕಾಲದ ಬೆಂಕಿಯ ಹಾಯ್ದುಳಿದ
ಅಪರಂಜಿಯನುಳಿಸು,
ಚಿತ್ತದ ಕತ್ತಲೆಗಳ ಅಳಿಸಿ
ಭಾವಶುದ್ಧಿ ಹರಸು.

ಅಂತರ್ಮುಖಿ ಆಗಲಿ ಈ ಬಾಳು
ತನ್ನ ನಿಜಕೆ ಒಲಿದು,
ಹತ್ತಲಿ ಮೆಲ್ಲಗೆ ಸತ್ಯ ಅಹಿಂಸೆಯ
ಎತ್ತರಗಳು ಹೊಳೆದು.

ತನ್ನ ನಿಜಕೆ ತಾ ಸಂದವನ
ಬಾಳೇ ನಿಜ ಅಮೃತ
ಮನದಾಳದಿ ಈ ಅರಿವಿರಲು
ಸಂಕ್ರಾಂತಿಯು ಸತತ.
*****