ಬಂದೇ ಬರುವುವು ಬಂಗಾರದ
ಹೊಂಗಿರಣದ ನಾಳೆಗಳು,
ಬಣ್ಣ ಬಣ್ಣದಾ ಬದುಕನು ಬರೆಯಲು
ತೆರೆದಿದೆ ಹಾಳೆಗಳು.
ಎಲ್ಲೆಲ್ಲೂ ಹೊಗೆಯಾಡಿದೆ ನೋವೇ
ಅಳುಕದಿರಲಿ ಮನವು,
ಕಲಕದೆ ಬಾಳು ತಿಳಿವುದೆ ಹೇಳು
ಜಗದ ದುಃಖ ನೋವು?
ನಾಳೆಯ ಬಾಳಿನ ಸವಿಯನು ಕನಸದ
ಜೀವವಿಲ್ಲ ಜಗದಿ,
ಆಸೆಯ ಅಮೃತದ ಸಿಂಚನವಾಗಲು
ಕೆರೆ ಆಗದೆ ಜಲಧಿ?
ಬಂದೇ ಬರಲಿವೆ ನಾಳೆಗಳು
ಬೆಳಕಿನ ತಾರೆಗಳು,
ಬಂದೇ ಬರಲಿವೆ ನಾಳೆಗಳು
ಹೊನ್ನಿನ ತೀರಗಳು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.