Home / ಕವನ / ಕವಿತೆ / ಕೋಗಿಲೆಯ ಪಾಡು

ಕೋಗಿಲೆಯ ಪಾಡು

ನಿಶಿಯ ನೀರವ ಮೌನದೆದೆಯ ಏಕಾಂತವನು
ಭೇದಿಸುತ ಗಾಳಿಯಲಿ ತೂರಿಬಂತು
ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ
ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು.

“ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ
ನಿನ್ನಿನಿಯನೊಲವಿನೆದೆ ಮಡಿಲೊಳಿರದೆ
ಇಲ್ಲಿ ಏಕಾಂತದಲಿ ತುಂಬು ನೋವಿನೊಳೆದೆಯ
ಹರಿಸಿ ಹಾಯಿಸುತಿರುವೆ – ನನ್ನೊಲವ ನೋವೆ

ನಿನ್ನೊಲವ ಪರಿಯೇನು? – ನಾ ಕಳೆದುಕೊಂಡಿರುವ
ಬೆಳಕ ಕಾತರದಲ್ಲಿ ಹಾಡುತಿಂದು
ನನ್ನ ಹೃದಯದೊಳೇಕೆ ಬಿರುಗಾಳಿಯೆಬ್ಬಿಸಿಹೆ?
ಹೋಗು ದೂರಕೆ ಹುಚ್ಚೆ” ಎಂದೆ ನಾನಾಗ!

ಅಯ್ಯೋ! ನನ್ನೀ ಬಾಳ ನೋವ ಕೇಳುವರಿಲ್ಲ
ವಿಶ್ವದೊಳಗೆನಗೆ ವಿಧಿಯಿತ್ತುದಿನಿತೆ?
ನಾನೇಕೆ ಉಳಿದೆನೋ ನನ್ನವರ ಜತೆಯಲೇ
ನನ್ನನೂ ಕೊಂಡಿದ್ದರೆನಿತು ಸುಖವಿತ್ತು!

ಓ ವಿರಹಿ ಕವಿ, ನಿನ್ನ ನೋವಿನೇಕಾಕಿತನ
ನನಗೆ ಅರಿವಿದೆ; ನನ್ನ ನೋವ ಕೇಳು
ಬಾಳು ಎಂತಿಹುದೆಂದು, ಬಾಳು ಎಂತಹುದೆಂದು.
ಬಾಳ್ಗೆ ಬಾಳುವೆಯುಂಟೆ ಒಲವಿಲ್ಲದಂದು?

ಹಿಂದೊಂದು ದಿನ ಒಂದು ಕಾಗೆಗಳ ಹಿರಿ ತಂಡ
ಕೋಗಿಲೆಯ ಗೂಡೊಂದ ದಾಳಿಯಿಡಲು
ಗಂಡು ಕೋಗಿಲೆ ತನ್ನ ಹೆಂಡತಿಯ ಕಾಪಿಡಲು
ಹೋರಾಡಿ, ಹೋರಾಡಿ, ಜೀವ ಪಣವಿಡಲು,

ಹೆಣ್ಣು ಹೃದಯದ ನೋವು, ಕಾತರತೆ, ಭೀತಿಯಲಿ
ಕಾಗೆಗಳ ಕೂಗಿನಲಿ- ತಲ್ಲಣದಲಿ
ಹಿಮ್ಮೆಟ್ಟಿ ಹಾರುತಿರೆ-ಕೋರಿ ಕಾಗೆಯದೊಂದು
ಮೃತ್ಯುವೊಲು ಚಿಮ್ಮಿತದರೆದೆಯ ಕುಕ್ಕಿಡಲು.

ಹೂಂಕರಿಸಿ, ಹೇಂಕರಿಸಿ, ಕುಕ್ಕಿ ಜೀವವ ಹಿಂಡಿ,
ಕೋಗಿಲೆಯ ನೆತ್ತರಲಿ ತನ್ನ ಕೊಕ್ಕು
ಕೆಂಪಡರೆ, ಸಂತಸದಿ, ಕಾಗೆ ಗೂಡಿಗೆ ಬಂದು,
ಮೂಲೆಯೊಳಗಿದ್ದೊಂದು ಮೊಟ್ಟೆಯನ್ನು ಕಂಡು,

ಹಿಗ್ಗಿನಲಿ ಕೊಂಡೊಯ್ದು, ತನ್ನ ಗೂಡಿನಲದಕೆ
ಕಾವಿತ್ತು, ಮರಿಮಾಡಿ, ಗುಟುಕನಿತ್ತು,
ತನ್ನಂತೆಯೇ ಅದಕು ‘ಕಾ’ ಎನಲು ಕಲಿಸುವೆನು
ಎನುತ ಯತ್ನಿಸುತಿರಲು- ಮರಿಯ ದನಿ ಬೇರೆ!

ಜಗದ ಕರ್ಕಶವೆಲ್ಲ ಕೂಡಿ ಮಾಡಿಸಿದಂತೆ
ಕಾಗೆ ತನ್ನಯ ಕೊರಳ ಹೊರಳಿಸಿರಲು
ಕೋಗಿಲೆಯ ಮರಿ ಹಾಡೆ ಜಗದಿ ಜೀವದ ತಾರೆ
ಪುಲಕಿಸಿತು. ಅರಳಿತ್ತು ಋತು ಕಾಮಬಣ್ಣ!

ನನ್ನಂತೆಯೇ ಹಾಡು ಎನುತ ಎಳ ಕೋಗಿಲೆಯ
ಕತ್ತ ನುಲಿಚಿತು ಕಾಗೆ ಈರ್ಷ್ಯೆಯಲ್ಲಿ
ಕಾಗೆಯೊಲು ಕೂಗಲೆಂದೆನಿತು ಯತ್ನಿಸಲೇನು!
ಮಧುರ ಗೀತವೆ ಮರಿಯ ಕೂರಳ ದನಿಯೊಳಗು!

ಕಾಗೆಗಳು ದ್ವೇಷದಲ್ಲಿ ಗುಂಪುಗೂಡುತ ಎಳೆಯ
ಕೋಗಿಲೆಯ ಕತ್ತಿನಲಿ ಕೊಕ್ಕನಿಟ್ಟು
ಚುಚ್ಚಿದುವು, ತಮ್ಮಂತೆ ಕಂಠ ಒಡಕಾದೊಡದು
ಹಾಡುವುದ ನಿಲ್ಲಿಪುದು, ಆಗ ಸರಿಯೆಂದು!

ಈ ನೋವ ಮುಗಿಸಲೆಂದೆಂದಿರುಳು ಕೋಗಿಲೆಯು
ಹಾರಿತ್ತು ದೂರಕ್ಕೆ ಗೂಡಿನಿಂದ;
ಇಂದದಕೆ ನೆಲೆಯಿಲ್ಲ- ಜಗದಲ್ಲಿ ಒಲವಿಲ್ಲ,
ಅದರ ಹಾಡಿನ ಹುರುಳು ಬರಿಯ ನೋವಾಯ್ತು!

ಎನುತ ಹಾಡಿತು ಹಕ್ಕಿ ತನ್ನ ಬಾಳಿನ ಹಾಡು
ಕೇಳಲಿಲ್ಲಾನದರ ಉಲಿಯ ಮತ್ತೆ,
ಎಲ್ಲಿ ಹೋಯಿತೊ ಏನೊ! ಬಾಳನೇ ಬಿಟ್ಟಿತೋ?
ಕೋಗಿಲೆಗೆ ಇರಲಿಲ್ಲವೇನೋ ನೆಲೆಯಿಲ್ಲಿ!

ಇಂತ ಹಾಡಲು ಬೇಕು, ಅಂತ ನುಡಿಯಲು ಬೇಕು;
ಎಂತಾದರೂ ಸರಿಯೇ ನಮ್ಮ ಬಗೆಯ
ಅನುಸರಿಸಿ ಕವಿಯಾಗು, ಇಲ್ಲದೊಡೆ ನೆಲೆಯಿಲ್ಲ!
ನಿನ್ನ ಹಾಡನು ಕೇಳಿ ಮೆಚ್ಚುವವರಿಲ್ಲ!

ಎನುತ ಕವಿಗಳಿಗೆಲ್ಲ ಹಸಿವ ಬಂಧನದಲ್ಲಿ
ಹಿಡಿದು, ಹಿಡಿತದಿ ಹಿಗ್ಗಿ, ತಗ್ಗಿ ದುಡಿಸಿ,
ದೂರಿಡುವ ಕನ್ನಡದ ನಾಡ ಕವಿಗಳ ಪಾಡೆ
ಕೋಗಿಲೆಯ ಪಾಡೇನೊ ಎನಿಸಿತೆನಗೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...