Home / ಕವನ / ಕವಿತೆ / ಕೋಗಿಲೆಯ ಪಾಡು

ಕೋಗಿಲೆಯ ಪಾಡು

ನಿಶಿಯ ನೀರವ ಮೌನದೆದೆಯ ಏಕಾಂತವನು
ಭೇದಿಸುತ ಗಾಳಿಯಲಿ ತೂರಿಬಂತು
ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ
ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು.

“ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ
ನಿನ್ನಿನಿಯನೊಲವಿನೆದೆ ಮಡಿಲೊಳಿರದೆ
ಇಲ್ಲಿ ಏಕಾಂತದಲಿ ತುಂಬು ನೋವಿನೊಳೆದೆಯ
ಹರಿಸಿ ಹಾಯಿಸುತಿರುವೆ – ನನ್ನೊಲವ ನೋವೆ

ನಿನ್ನೊಲವ ಪರಿಯೇನು? – ನಾ ಕಳೆದುಕೊಂಡಿರುವ
ಬೆಳಕ ಕಾತರದಲ್ಲಿ ಹಾಡುತಿಂದು
ನನ್ನ ಹೃದಯದೊಳೇಕೆ ಬಿರುಗಾಳಿಯೆಬ್ಬಿಸಿಹೆ?
ಹೋಗು ದೂರಕೆ ಹುಚ್ಚೆ” ಎಂದೆ ನಾನಾಗ!

ಅಯ್ಯೋ! ನನ್ನೀ ಬಾಳ ನೋವ ಕೇಳುವರಿಲ್ಲ
ವಿಶ್ವದೊಳಗೆನಗೆ ವಿಧಿಯಿತ್ತುದಿನಿತೆ?
ನಾನೇಕೆ ಉಳಿದೆನೋ ನನ್ನವರ ಜತೆಯಲೇ
ನನ್ನನೂ ಕೊಂಡಿದ್ದರೆನಿತು ಸುಖವಿತ್ತು!

ಓ ವಿರಹಿ ಕವಿ, ನಿನ್ನ ನೋವಿನೇಕಾಕಿತನ
ನನಗೆ ಅರಿವಿದೆ; ನನ್ನ ನೋವ ಕೇಳು
ಬಾಳು ಎಂತಿಹುದೆಂದು, ಬಾಳು ಎಂತಹುದೆಂದು.
ಬಾಳ್ಗೆ ಬಾಳುವೆಯುಂಟೆ ಒಲವಿಲ್ಲದಂದು?

ಹಿಂದೊಂದು ದಿನ ಒಂದು ಕಾಗೆಗಳ ಹಿರಿ ತಂಡ
ಕೋಗಿಲೆಯ ಗೂಡೊಂದ ದಾಳಿಯಿಡಲು
ಗಂಡು ಕೋಗಿಲೆ ತನ್ನ ಹೆಂಡತಿಯ ಕಾಪಿಡಲು
ಹೋರಾಡಿ, ಹೋರಾಡಿ, ಜೀವ ಪಣವಿಡಲು,

ಹೆಣ್ಣು ಹೃದಯದ ನೋವು, ಕಾತರತೆ, ಭೀತಿಯಲಿ
ಕಾಗೆಗಳ ಕೂಗಿನಲಿ- ತಲ್ಲಣದಲಿ
ಹಿಮ್ಮೆಟ್ಟಿ ಹಾರುತಿರೆ-ಕೋರಿ ಕಾಗೆಯದೊಂದು
ಮೃತ್ಯುವೊಲು ಚಿಮ್ಮಿತದರೆದೆಯ ಕುಕ್ಕಿಡಲು.

ಹೂಂಕರಿಸಿ, ಹೇಂಕರಿಸಿ, ಕುಕ್ಕಿ ಜೀವವ ಹಿಂಡಿ,
ಕೋಗಿಲೆಯ ನೆತ್ತರಲಿ ತನ್ನ ಕೊಕ್ಕು
ಕೆಂಪಡರೆ, ಸಂತಸದಿ, ಕಾಗೆ ಗೂಡಿಗೆ ಬಂದು,
ಮೂಲೆಯೊಳಗಿದ್ದೊಂದು ಮೊಟ್ಟೆಯನ್ನು ಕಂಡು,

ಹಿಗ್ಗಿನಲಿ ಕೊಂಡೊಯ್ದು, ತನ್ನ ಗೂಡಿನಲದಕೆ
ಕಾವಿತ್ತು, ಮರಿಮಾಡಿ, ಗುಟುಕನಿತ್ತು,
ತನ್ನಂತೆಯೇ ಅದಕು ‘ಕಾ’ ಎನಲು ಕಲಿಸುವೆನು
ಎನುತ ಯತ್ನಿಸುತಿರಲು- ಮರಿಯ ದನಿ ಬೇರೆ!

ಜಗದ ಕರ್ಕಶವೆಲ್ಲ ಕೂಡಿ ಮಾಡಿಸಿದಂತೆ
ಕಾಗೆ ತನ್ನಯ ಕೊರಳ ಹೊರಳಿಸಿರಲು
ಕೋಗಿಲೆಯ ಮರಿ ಹಾಡೆ ಜಗದಿ ಜೀವದ ತಾರೆ
ಪುಲಕಿಸಿತು. ಅರಳಿತ್ತು ಋತು ಕಾಮಬಣ್ಣ!

ನನ್ನಂತೆಯೇ ಹಾಡು ಎನುತ ಎಳ ಕೋಗಿಲೆಯ
ಕತ್ತ ನುಲಿಚಿತು ಕಾಗೆ ಈರ್ಷ್ಯೆಯಲ್ಲಿ
ಕಾಗೆಯೊಲು ಕೂಗಲೆಂದೆನಿತು ಯತ್ನಿಸಲೇನು!
ಮಧುರ ಗೀತವೆ ಮರಿಯ ಕೂರಳ ದನಿಯೊಳಗು!

ಕಾಗೆಗಳು ದ್ವೇಷದಲ್ಲಿ ಗುಂಪುಗೂಡುತ ಎಳೆಯ
ಕೋಗಿಲೆಯ ಕತ್ತಿನಲಿ ಕೊಕ್ಕನಿಟ್ಟು
ಚುಚ್ಚಿದುವು, ತಮ್ಮಂತೆ ಕಂಠ ಒಡಕಾದೊಡದು
ಹಾಡುವುದ ನಿಲ್ಲಿಪುದು, ಆಗ ಸರಿಯೆಂದು!

ಈ ನೋವ ಮುಗಿಸಲೆಂದೆಂದಿರುಳು ಕೋಗಿಲೆಯು
ಹಾರಿತ್ತು ದೂರಕ್ಕೆ ಗೂಡಿನಿಂದ;
ಇಂದದಕೆ ನೆಲೆಯಿಲ್ಲ- ಜಗದಲ್ಲಿ ಒಲವಿಲ್ಲ,
ಅದರ ಹಾಡಿನ ಹುರುಳು ಬರಿಯ ನೋವಾಯ್ತು!

ಎನುತ ಹಾಡಿತು ಹಕ್ಕಿ ತನ್ನ ಬಾಳಿನ ಹಾಡು
ಕೇಳಲಿಲ್ಲಾನದರ ಉಲಿಯ ಮತ್ತೆ,
ಎಲ್ಲಿ ಹೋಯಿತೊ ಏನೊ! ಬಾಳನೇ ಬಿಟ್ಟಿತೋ?
ಕೋಗಿಲೆಗೆ ಇರಲಿಲ್ಲವೇನೋ ನೆಲೆಯಿಲ್ಲಿ!

ಇಂತ ಹಾಡಲು ಬೇಕು, ಅಂತ ನುಡಿಯಲು ಬೇಕು;
ಎಂತಾದರೂ ಸರಿಯೇ ನಮ್ಮ ಬಗೆಯ
ಅನುಸರಿಸಿ ಕವಿಯಾಗು, ಇಲ್ಲದೊಡೆ ನೆಲೆಯಿಲ್ಲ!
ನಿನ್ನ ಹಾಡನು ಕೇಳಿ ಮೆಚ್ಚುವವರಿಲ್ಲ!

ಎನುತ ಕವಿಗಳಿಗೆಲ್ಲ ಹಸಿವ ಬಂಧನದಲ್ಲಿ
ಹಿಡಿದು, ಹಿಡಿತದಿ ಹಿಗ್ಗಿ, ತಗ್ಗಿ ದುಡಿಸಿ,
ದೂರಿಡುವ ಕನ್ನಡದ ನಾಡ ಕವಿಗಳ ಪಾಡೆ
ಕೋಗಿಲೆಯ ಪಾಡೇನೊ ಎನಿಸಿತೆನಗೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...