Home / ಕವನ / ಕವಿತೆ / ಕೋಗಿಲೆಯ ಪಾಡು

ಕೋಗಿಲೆಯ ಪಾಡು

ನಿಶಿಯ ನೀರವ ಮೌನದೆದೆಯ ಏಕಾಂತವನು
ಭೇದಿಸುತ ಗಾಳಿಯಲಿ ತೂರಿಬಂತು
ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ
ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು.

“ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ
ನಿನ್ನಿನಿಯನೊಲವಿನೆದೆ ಮಡಿಲೊಳಿರದೆ
ಇಲ್ಲಿ ಏಕಾಂತದಲಿ ತುಂಬು ನೋವಿನೊಳೆದೆಯ
ಹರಿಸಿ ಹಾಯಿಸುತಿರುವೆ – ನನ್ನೊಲವ ನೋವೆ

ನಿನ್ನೊಲವ ಪರಿಯೇನು? – ನಾ ಕಳೆದುಕೊಂಡಿರುವ
ಬೆಳಕ ಕಾತರದಲ್ಲಿ ಹಾಡುತಿಂದು
ನನ್ನ ಹೃದಯದೊಳೇಕೆ ಬಿರುಗಾಳಿಯೆಬ್ಬಿಸಿಹೆ?
ಹೋಗು ದೂರಕೆ ಹುಚ್ಚೆ” ಎಂದೆ ನಾನಾಗ!

ಅಯ್ಯೋ! ನನ್ನೀ ಬಾಳ ನೋವ ಕೇಳುವರಿಲ್ಲ
ವಿಶ್ವದೊಳಗೆನಗೆ ವಿಧಿಯಿತ್ತುದಿನಿತೆ?
ನಾನೇಕೆ ಉಳಿದೆನೋ ನನ್ನವರ ಜತೆಯಲೇ
ನನ್ನನೂ ಕೊಂಡಿದ್ದರೆನಿತು ಸುಖವಿತ್ತು!

ಓ ವಿರಹಿ ಕವಿ, ನಿನ್ನ ನೋವಿನೇಕಾಕಿತನ
ನನಗೆ ಅರಿವಿದೆ; ನನ್ನ ನೋವ ಕೇಳು
ಬಾಳು ಎಂತಿಹುದೆಂದು, ಬಾಳು ಎಂತಹುದೆಂದು.
ಬಾಳ್ಗೆ ಬಾಳುವೆಯುಂಟೆ ಒಲವಿಲ್ಲದಂದು?

ಹಿಂದೊಂದು ದಿನ ಒಂದು ಕಾಗೆಗಳ ಹಿರಿ ತಂಡ
ಕೋಗಿಲೆಯ ಗೂಡೊಂದ ದಾಳಿಯಿಡಲು
ಗಂಡು ಕೋಗಿಲೆ ತನ್ನ ಹೆಂಡತಿಯ ಕಾಪಿಡಲು
ಹೋರಾಡಿ, ಹೋರಾಡಿ, ಜೀವ ಪಣವಿಡಲು,

ಹೆಣ್ಣು ಹೃದಯದ ನೋವು, ಕಾತರತೆ, ಭೀತಿಯಲಿ
ಕಾಗೆಗಳ ಕೂಗಿನಲಿ- ತಲ್ಲಣದಲಿ
ಹಿಮ್ಮೆಟ್ಟಿ ಹಾರುತಿರೆ-ಕೋರಿ ಕಾಗೆಯದೊಂದು
ಮೃತ್ಯುವೊಲು ಚಿಮ್ಮಿತದರೆದೆಯ ಕುಕ್ಕಿಡಲು.

ಹೂಂಕರಿಸಿ, ಹೇಂಕರಿಸಿ, ಕುಕ್ಕಿ ಜೀವವ ಹಿಂಡಿ,
ಕೋಗಿಲೆಯ ನೆತ್ತರಲಿ ತನ್ನ ಕೊಕ್ಕು
ಕೆಂಪಡರೆ, ಸಂತಸದಿ, ಕಾಗೆ ಗೂಡಿಗೆ ಬಂದು,
ಮೂಲೆಯೊಳಗಿದ್ದೊಂದು ಮೊಟ್ಟೆಯನ್ನು ಕಂಡು,

ಹಿಗ್ಗಿನಲಿ ಕೊಂಡೊಯ್ದು, ತನ್ನ ಗೂಡಿನಲದಕೆ
ಕಾವಿತ್ತು, ಮರಿಮಾಡಿ, ಗುಟುಕನಿತ್ತು,
ತನ್ನಂತೆಯೇ ಅದಕು ‘ಕಾ’ ಎನಲು ಕಲಿಸುವೆನು
ಎನುತ ಯತ್ನಿಸುತಿರಲು- ಮರಿಯ ದನಿ ಬೇರೆ!

ಜಗದ ಕರ್ಕಶವೆಲ್ಲ ಕೂಡಿ ಮಾಡಿಸಿದಂತೆ
ಕಾಗೆ ತನ್ನಯ ಕೊರಳ ಹೊರಳಿಸಿರಲು
ಕೋಗಿಲೆಯ ಮರಿ ಹಾಡೆ ಜಗದಿ ಜೀವದ ತಾರೆ
ಪುಲಕಿಸಿತು. ಅರಳಿತ್ತು ಋತು ಕಾಮಬಣ್ಣ!

ನನ್ನಂತೆಯೇ ಹಾಡು ಎನುತ ಎಳ ಕೋಗಿಲೆಯ
ಕತ್ತ ನುಲಿಚಿತು ಕಾಗೆ ಈರ್ಷ್ಯೆಯಲ್ಲಿ
ಕಾಗೆಯೊಲು ಕೂಗಲೆಂದೆನಿತು ಯತ್ನಿಸಲೇನು!
ಮಧುರ ಗೀತವೆ ಮರಿಯ ಕೂರಳ ದನಿಯೊಳಗು!

ಕಾಗೆಗಳು ದ್ವೇಷದಲ್ಲಿ ಗುಂಪುಗೂಡುತ ಎಳೆಯ
ಕೋಗಿಲೆಯ ಕತ್ತಿನಲಿ ಕೊಕ್ಕನಿಟ್ಟು
ಚುಚ್ಚಿದುವು, ತಮ್ಮಂತೆ ಕಂಠ ಒಡಕಾದೊಡದು
ಹಾಡುವುದ ನಿಲ್ಲಿಪುದು, ಆಗ ಸರಿಯೆಂದು!

ಈ ನೋವ ಮುಗಿಸಲೆಂದೆಂದಿರುಳು ಕೋಗಿಲೆಯು
ಹಾರಿತ್ತು ದೂರಕ್ಕೆ ಗೂಡಿನಿಂದ;
ಇಂದದಕೆ ನೆಲೆಯಿಲ್ಲ- ಜಗದಲ್ಲಿ ಒಲವಿಲ್ಲ,
ಅದರ ಹಾಡಿನ ಹುರುಳು ಬರಿಯ ನೋವಾಯ್ತು!

ಎನುತ ಹಾಡಿತು ಹಕ್ಕಿ ತನ್ನ ಬಾಳಿನ ಹಾಡು
ಕೇಳಲಿಲ್ಲಾನದರ ಉಲಿಯ ಮತ್ತೆ,
ಎಲ್ಲಿ ಹೋಯಿತೊ ಏನೊ! ಬಾಳನೇ ಬಿಟ್ಟಿತೋ?
ಕೋಗಿಲೆಗೆ ಇರಲಿಲ್ಲವೇನೋ ನೆಲೆಯಿಲ್ಲಿ!

ಇಂತ ಹಾಡಲು ಬೇಕು, ಅಂತ ನುಡಿಯಲು ಬೇಕು;
ಎಂತಾದರೂ ಸರಿಯೇ ನಮ್ಮ ಬಗೆಯ
ಅನುಸರಿಸಿ ಕವಿಯಾಗು, ಇಲ್ಲದೊಡೆ ನೆಲೆಯಿಲ್ಲ!
ನಿನ್ನ ಹಾಡನು ಕೇಳಿ ಮೆಚ್ಚುವವರಿಲ್ಲ!

ಎನುತ ಕವಿಗಳಿಗೆಲ್ಲ ಹಸಿವ ಬಂಧನದಲ್ಲಿ
ಹಿಡಿದು, ಹಿಡಿತದಿ ಹಿಗ್ಗಿ, ತಗ್ಗಿ ದುಡಿಸಿ,
ದೂರಿಡುವ ಕನ್ನಡದ ನಾಡ ಕವಿಗಳ ಪಾಡೆ
ಕೋಗಿಲೆಯ ಪಾಡೇನೊ ಎನಿಸಿತೆನಗೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...