ವಾಗ್ದೇವಿ – ೯

ವಾಗ್ದೇವಿ – ೯

“ಅಮ್ಮಾ! ವೆಂಕಟಪತಿ ಆಚಾರ್ಯರು ಡೊಳ್ಳಾಡಿಸಿಕೊಂಡು ಬರುತ್ತಾರೆ, ಏನೆಲ್ಲ ಚವಡಿಮಾಡಿ ಶ್ರೀಪಾದಂಗಳವರ ಮನಸ್ಸೇ ತಿರುಗಿಸಿಬಿಟ್ಟಿರೋ ಎಂಬ ಸಂಶಯ ವ್ಯರ್ಥವಾಗಿ ತಾಳಿದೆವಲ್ಲ” ಎಂದು. ವಾಗ್ದೇವಿಯು ಹೇಳುವ ದನ್ನು ಕೇಳ ಭಾಗೀರಧಿಯು ಬಾಗಲಲ್ಲ ನಿಂತು ನೋಡಲು, ವೆಂಕಟಪತಿಯು ಮೆಲ್ಲಮೆಲ್ಲಗೆ ಅಡಿ ಇಡುತ್ತಾ ಬರುವದನ್ನು ಕಂಡು “ಆಚಾರ್ಯರೇ! ದ್ವಾದಶಿ ಜೋರಾಯಿತೇ? ಅತಿ ಮಂದಗಮನಕ್ಕೆ ಕಾರಣವೇನೋ ತಿಳಿಯದು” ಎಂದಳು.

“ಅಪ್ಪಾ! ಮಷ್ಕಿರಿಮಾಡುತ್ತೀರೇನು? ಮೊದಲೇ ದ್ವಾದಶಿ, ಆ ಮೇಲೆ ಸ್ವಲ್ಪವಾದರೂ ವಿಶ್ರಾಂತಿತಕ್ಕೊಳ್ಳದೆ ಉಂಡೊಡನೆ ಎದ್ದು ಬಂದು ಬಿಟ್ಟೆ ಬಾಲಾರ್ಕನ ಪ್ರಭೆಯು ತಲೆಯ ಮೇಲೆ ಬೀಳುವದು. ಎಂಧಾ ಯವ್ವನಸ್ಥ ನಾದರೂ ಸೋಥೋಗನೇ! ನನ್ನ ಬಿಸಾತೇನದೆ?” ಎನ್ನುತ್ತಾ ಆಚಾರ್ಯನು ಒಳಗೆ ಒಂದನು.

ಆಗಲೇ ವಾಗ್ದೇವಿಯು ಆಚಾರ್ಯನ ಕಾಲುಮುಟ್ಟಿ ನಮಸ್ಕಾರ ಮಾಡಿ ಕೈಕಾಲು ತೊಳಯಲಿಕ್ಕೆ ನೀರು ಕೊಟ್ಬಬಳಕ ಅವನನ್ನು ಒಂದು ಚೌಕದ ದೊಡ್ಡಮಣೆಯ ಮೇಲೆ ಕುಳ್ಳಿರಿಸಿಕೊಂಡು, ಅತೀ ಸಮಾನದಲ್ಲಿ ತಾನೂ ಕೂತುಕೊಂಡು, ಏಲಕ್ಕಿ, ಪಚ್ಚಕರ್ಪೂರ, ಕುಂಕುಮಕೇಸರಿ ಮಿಶ್ರಿ ಮಾಡಿದ ತಿಳೀ ಸಕ್ರೆ ಪಾನಕವನ್ನುಆಚಾರ್ಯಗೆ ಹೊಟ್ಟ ತುಂಬಾ ಕುಡಿಸಿದಳು. ಎಳೆಬಿಸಿಲಿಗೆ ನಡಕೊಂಡು ಬಂದ ವೆಂಕಟಪತಿಗೆ ವಾಗ್ದೇವಿಯು ಕೊಟ್ಟ ಪಾನಕವು ಅತಿಹಿತವಾಯಿತು. ತದುಪರಿ ಚಿಗುರು ವೀಳ್ಯದೆಲೆಗಳನ್ನು ನಾರು ತೆಗೆದು ಕರ್ಪೂರಚೂರ್ಣಯುಕ್ತವಾದ ಸುಣ್ಣವನ್ನು ಹಚ್ಚಿ ವಾಗ್ದೇವಿಯು ಆಚಾರ್ಯಗಿಗೆ ಒಂದು ತಾಂಬೂಲ ಚರ್ವಣವನ್ನು ಕೋಮಲವಾದ ತನ್ನ ಕೈಯಿಂದ ಮಾಡಿಸಲು ಸ್ವರ್ಗ ಮರ್ತ್ಯ ಪಾತಾಳವೆಂಬ ಈ ಮೂರು ಲೋಕ ಗಳೂಳಗೆ ಯಾವದರಲ್ಲಿ ತಾನು ವಾಸಿಸಿಕೊಂಡಿರುತ್ತೇನೆಂಬುದು ಆತನಿಗೆ ತಿಳೆಯದೆ ಹೋಯಿತು.

ರವಷ್ಟುಸಮಯ ವಿಶ್ರಮಿಸಿಕೊಂಡು ವೆಂಕಟಪತಿಯು ತಾನು ಬಂದ ಮುಖ್ಯ ಉದ್ದೇಶವನ್ನು ಬೇಗನೇ ನೆರವೇರಿಸಬೇಕೆಂಬ ಆತುರವನ್ನು ತೋರಿಸಿಕೊಂಡನು. ವಾಗ್ದೇವಿಯು ಇನೊಮ್ಮೆ ತಾಂಬೂಲಚರ್ವಣವಾಗ ಬೇಕೆಂದು ಹಟಹಿಡಿದು ಅವನನ್ನು ಸಂತೋಷಪಡಿಸಿದಳು. ಎರಡಾವರ್ತಿ ತಾಂಬೂಲಾದಿಗಳಿಂದ ತೃಪ್ತಿಹೊಂದಿದ ವೆಂಕಟಪತಿ ಆಚಾರ್ಯನು “ಇನ್ನು ಮಠಕ್ಕೆ ಹೋಗುವಾ ನಡಿ” ಎಂದು ಭಾಗೀರಧಿ ಕೂಡೆ ಹೇಳಲಾಗಿ “ಏನೇ ವಾಗ್ದೇವಿ. ಆಚಾರ್ಯರು ಏನು ಹೇಳುತ್ತಾರೆ ಕೇಳು” ಎಂದಳು.

“ಆಚಾರ್ಯರು ಹೇಳಿದೆ ಹಾಗೆ ಕುಣಿದರೆ ನಾಳೆ ಎರಡು ಕೈಯಿಂದ ಉಣ್ಣ ಬೇಕಾಗುವುದು; ಆಚಾರ್ಯರಿಗೆ ಸಕ್ರೆಪಾನಕದ ತಂಪಿನಿಂದ ಮರವೆ ಹೆಚ್ಚಾಯಿತೆಂದು” ವಾಗ್ದೇವಿಯು ಉತ್ತರಕೊಟ್ಟಳು.

“ನಾನು ಯಾವುದೂ ಮರೆಯಲಿಲ್ಲ, ಬೇಕಾದಷ್ಟು ಭಂಡಿಗಳನ್ನು ಸಿದ್ಧಪಡಿಸಿರುವೆನು? ಎಂದು ಆಚಾರ್ಯನು ಪ್ರತ್ಯುತ್ತರಕೊಟ್ಟನು.

“ಅಚಾರ್ಯರೇ, ನಿಜವಾಗಿ ನಿಮಗೆ ಮರವೆ ಹೆಚ್ಚಾಗಿದೆ. ಇಲ್ಲವೇ ಇನ್ನೂ ಠಕ್ಕುಮಾಡುತ್ತೀರಿ; ನನ್ನ ಮುಖ್ಯವಾದ ಪ್ರಶ್ನೆಯ ಉತ್ತರವು ಮುಂದಾಗಿ ದೊರೆಯದೆ ಮನೆಯಿಂದ ಹೊರಡಲಿಕ್ಕೆ ನಾನು ಹುಚ್ಚಳಲ್ಲ? ಎಂದು ವಾಗ್ದೇವಿಯು ನಗುತ್ತ ಹೇಳಿದಳು.

ಆಚಾರ್ಯನು ಆ ಪ್ರಶ್ನೆ ಯಾವುದೆಂಬದು ತನಗೆ ತಿಳಿಯದೆ ವಿಸ್ಮಯ ಪಡುವವನಂತೆ ಅವಳ ಮುಖವನ್ನೆ ನೋಡಿಕೊಂಡಿರುವಾಗ ವಾಗ್ದೇವಿಯು ಸಿಟ್ಟಿನಿಂದ ಮುಖವನ್ನುಬ್ಬಿಸಿಕೊಂಡು ಥಟ್ಟಿನೆ ಆಚಾರ್ಯನಿಗೆ ಬೆನ್ನುಹಾಕಿ ಒಳಗೆ ನಡೆದುಬಿಟ್ಟಳು- “ಏನೇ ಸಿಟ್ಟು ನೀನು ಗುತ್ತಿಗೆ ವಹಿಸಿಕೊಂಡಿ ದ್ದೀಯಾ? ಮರವೆಗೆ ಬಂದೆ ಮಾತು ಯಾವುದು? ಏನು ತಾನು ಎಂದು ವಿಚಾರಿಸಿಕೊಳ್ಳುವ ಮೊದಲೇ ನಿನಗೆ ರೇಗಿತೇ? ಈ ನಿನ್ನ ಶುಂಠ ಬುದ್ಧಿ ಯಿಂದ ಮುಂದೆ ಚೆನ್ನಾಗಿ ಬದುಕಿಕೊಂಡಿರಬಹುದು? ಎಂದು ಭಾಗೀರಥಿಯು ಮಗಳಿಗೆ ಗದರಿಸಿದಂತೆ ಮಾತನಾಡಿದಳು.

ಮರವೆಗೆ ಬಂದ ವಿಷಯ ಯಾವುದೆಂಬುದು ಆಚಾರ್ಯನಿಗೂ ಭಾಗೀರ ಧಿಗೂ ಜ್ಞಾಪಕದಲ್ಲಿದ್ದರೂ ಅವರಿಬ್ಬರೂ ಏನೂ ಅರಿಯದವರಂತೆ ತೋರಿಸಿ ಕೊಂಡರು. “ವ್ಯರ್ಧವಾಗಿ ಸಮಯ ಹಾಳಾಗುತ್ತದೆ, ಶ್ರೀಪಾದಂಗಳವರ ಅವಸರಕ್ಕನಕ ಮಿತವೇ ಇಲ್ಲ. ನನ್ನ ಮೇಲೆ ಸಿಟ್ಟುತಾಳುವರೋ ಏನೋ! ಯಾವ ವಿಷಯ ನಿಷ್ಕರ್ಷೆಯಾಗಬೇಕೆಂದು ತಿಳಿಯದೆ ನಾನು ಕಾಡಿನಲ್ಲಿಬಿದ್ದವನಂತಾಗಿದ್ದೇನೆ. ಅವ್ವಾ! ನಿಮ್ಮ ಮಗಳಿಗೆ ಕೇಳಿ ನನಗೆ ತಿಳಿಸಿಬಿಟ್ಟರೆ ದೊಡ್ಡ ಉಪಕಾರವಾದೀತು” ಎಂದು ವೆಂಕಟಪತಿ ಆಚಾರ್ಯನು ಹೆಡ್ಡನಂತೆ ನುಡಿಯಲೆಸಗಿದನು.

ಭಾಗೀರಥಿಯು ಸುಮ್ಮಗಾದರೂ ಸಿಡುಮೋರೆಮಾಡಿಕೊಂಡು ಒಳಗೆ ಹೋಗಿ ನಗುತ್ತ ಕುಂತಿರುವ ಮಗಳ ಮುಖವನ್ನು ನೋಡಿ ಗದರಿಸಿದಂತೆ ಯುಕ್ತಿನಡಿಸಿ ಸ್ವಲ್ಪ ಹೊತ್ತಿನಮೇಲೆ ಹೊರಗೆ ಬಂದು, “ಆಚಾರ್ಯರೇ! ತುಟಗೆ ಮೀರಿದ ಹಲ್ಲಿಗೆ ಏನುಮಾಡಲಿ” ಎಂದು ಬಿಸುಸುಯ್ಯುವುದನ್ನು ಕಂಡು ವೆಂಕಟಪತಿಯು, “ಅಪ್ಪಾ! ಹಾಗೆಲ್ಲಾ ಹೇಳಲಾಗದು, ಇದು ಕಲಿಯುಗ “ಅಬ್‌ಕಾ ಜಮಾನಾ ಖೋಟಾ, ಬಾಪ ಕುಮಾರ ಬೇಟಾ’ ಎಂಬಂತಾಗಿದೆ. ಜಗಳಾಡಲಿಕ್ಕೆ ಮನಸ್ಸು ಕೊಡಬೇಡಿ; ಯಾವ ವಿಷಯದಲ್ಲಿ ಈಗ ಹೆಚ್ಚು ಕಡಮೆಯಾಯಿತೆಂಬ ಸೂಚನೆ ಮಾತ್ರ ಗೊತ್ತಾದರೆ ಚಮತ್ಕಾರದಲ್ಲಿ ಕುಂದೆಲ್ಲಾ ಪರಿಹರಿಸುವೆನು” ಎಂದು ವೆಂಕಟಪತಿಯು ಬಹು ಆತುರದಿಂದ ಕೇಳಿಕೊಂಡಂತೆ ಮಾಡಿದನು. “ಶ್ರೀಪಾದಂಗಳವರು ಪಟ್ಟದ ದೇವರ ಮುಂದೆ ಪ್ರಮಾಣಮಾಡಿ ವಾಗ್ದತ್ತ ಮಾಡಬೇಕೆಂಬ ಹುಚ್ಚು ಅವಳಿಗೆ ಅಂಟಿಕೊಂಡಿದೆ. ಅದು ಸರ್ವಥಾ ಬಿಡಲಿಲ್ಲವಷ್ಟೇ. ಇದಕ್ಕೆ ನಿವೃತ್ತಿ ಹೇಳ ನೋಡುವ. ನನ್ನ ಪೂರ್ವಾರ್ಜಿತದಿಂದ ಇಂಥಾ ಮುಗ್ಧೆಯು ನನ್ನ ಬಸುರಲ್ಲಿ ಬಂದಳಲ್ಲಾ” ಎಂದು ಭಾಗೀರಥಿಯು ತನ್ನ ಕಪಾಲವನ್ನು ಕೈಗಳಿಂದ ಬಡ ಕೊಂಡಳು.

“ಅವ್ವಾ! ಅವ್ವಾ! ಹಾಗೇನೂ ಮಾಡಬೇಡಿ. ಆ ಪ್ರಶ್ನೆಯನ್ನು ಮರಿ ಯಲಿಲ್ಲ; ಅದರ ಪ್ರಸ್ತಾಪವನ್ನು ಶ್ರೀಪಾದಂಗಳವರ ಕೂಡೆ ಮಾಡಿದ್ದೇನೆ. ಹೆಚ್ಚು ಸಮಯ ಚರ್ಚೆಮಾಡಿ ಅವರ ಒಪ್ಪಿಗೆಯನ್ನು ಪಡಕೊಂಡಿರುತ್ತೇನೆ. ಪರಂತು ಅದರ ಪಸ್ತಾಪ ಈ ಹೊತ್ತು ಮಾತ್ರ ಮರೆತು ಹೋಯಿತು. ಇನ್ನಾದರೂ ವಾಗ್ದೇವಿಗೆ ಸಮಾಧಾನಮಾಡಿ ಬೇಗನೆ ಹೊರಡುವಂತೆ ಮಾಡಿ” ಎಂದು ವೆಂಕಟಪತಿಯು ಭಾಗೀರಥಿಯ ಕೂಡೆ ಹೇಳಿದನು.

ಆಗಲೇ ಭಾಗೀರಥಿಯು ಗಾಳಿಯಂತೆ ತವಕದಿಂದ ಒಳಗೆ ಹೋಗಿ “ಜಗಳಗಂಟೀ! ಬೇಗಬಾ. ನಿನ್ನ ಪ್ರಶ್ನೆಯನ್ನು ಆಚಾರ್ಯರು ಮರಿಯಲಿಲ್ಲ” ಎಂಬೋಣ, ವಾಗ್ದೇವಿಯು ನೆಗಾಡುತ್ತಾ ಹೊರಗೆ ಬಂದಳು. ಮತ್ತು ಆಚಾರ್ಯನಮೇಲೆ ಸಿಟ್ಟುತಾಳಿದ್ದಕ್ಕಾಗಿ ಪಶ್ಚಾತ್ತಾಪಪಟ್ಟಿರುವೆನೆಂದು ಕ್ಷಮೆಯನ್ನು ಬೇಡಿಕೊಂಡಳು. “ವಾಗ್ದೇವಿ! ಇನ್ನು ಮುಂದೆ ನೀನೇ ನನ್ನ ಒಡತಿ ಯಲ್ಲವೇ! ನಿನ್ನ ಚಿತ್ತದ ಮೇಲೆ ನನ್ನ ಅನ್ನವೇ ಹೊಂದಿಕೊಂಡಿರುವಕಾರಣ ನೀನು ನನ್ನಲ್ಲಿ ಕ್ಷಮೆ ಕೇಳುವುದಕ್ಕಿಂತಲೂ ನಾನು ನಿನ್ನ ಮುನಿಸಿನಿಂದ ವಿಮುಕ್ತನಾಗುವುದೇ ನನ್ನ ಮುಂಜಾಗ್ರತೆಯಾಗಿರಬೇಕು. ಬಡವರ ಮೇಲೆ ಪರಿಪೂರ್ಣವಾಗಿ ಅನುಗ್ರಹವನ್ನಿಟ್ಟು ಅವರ ಕೃತಜ್ಞತೆಗೆ ಪಾತ್ರಳಾದರೆ ನಿನಗೆ ದೇವರು ನಿರಂತರವಾಗಿ ರಕ್ಷಿಸುವನು. ಇನ್ನು ತಾಮಸಮಾಡುವದು ಯುಕ್ತವಲ್ಲ. ಸರ್ವರೂ ಬಂಡಿಯನ್ನೇರುವುದಕ್ಕೆ ಸಿದ್ಧರಾಗಬೇಕು: ಹೀಗೆಂದು ವೆಂಕಟಪತಿ ಆಚಾರ್ಯನು ಹೇಳಿದೊಡನೆ ಸಣ್ಣ ಬುದ್ಧಿಯಿಂದ ತಾನು ಮಾಡಿದ ಎಷ್ಟು ಅಪರಾಧಗಳಿದ್ದರೂ ಮರೆತು. ಬಿಡಬೇಕಾಗಿ ವಾಗ್ದೇವಿಯು ಆಚಾರ್ಯನ ಎರಡುಕಾಲುಗಳನ್ನು ಬಿಗಿದಪ್ಪಿ ತನ್ನ ಕಡೆಗಣ್ಣ ನೋಟದಿಂದ ಅವನ ಹೃದಯವನ್ನು ಮೃದುಮಾಡಿದಳು.

ಮಠಾಭಿಮುಖ ಪ್ರಯಾಣಕ್ಕೆ ಪ್ರಾರಂಭವಾಯಿತು. ಮೊದಲು ಸಾಮಾನೆಲ್ಲಾ ಬಂಡಿಗಳ ಮೇಲೆ ಇಡಲ್ಪಟ್ಟಿತು. ತರುವಾಯ ಒಳ್ಳೇ ಎತ್ತು ಗಳನ್ನು ಜೋಡಿಸಿರುವ ಜಟ್ಕಾಬಂಡಿಯಲ್ಲಿ ಭಾಗೀರಥಿ, ವಾಗ್ದೇವಿ ಗಂಡಸರ ಸಮೇತ ಕೂತುಕೊಂಡರು. ವೆಂಕಟಪತಿ ಆಚಾರ್ಯನು ಅದೇ ಬಂಡಿಯಲ್ಲಿ ಮುಹೂರ್ತವಾಗಬೇಕೆಂದು ಅಪೇಕ್ಷಿಸಿದರೂ ಅವನು ಒಪ್ಪದೆ ಪಾದಚಾರಿ ಯಾಗಿ ಸಾಮಾನು ಬಂಡಿಗಳ ಸಂಗಡ ಮುಂದಿನಿಂದ ಹೋದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸ್ತಿ – ನಾಸ್ತಿ
Next post ಯಕ್ಷ ಲೋಕ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys