Home / ಕವನ / ಕವಿತೆ / ಕಾರ್ಗಿಲ್‌ನಿಂದ ಬಂದವನು…!

ಕಾರ್ಗಿಲ್‌ನಿಂದ ಬಂದವನು…!

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ
ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ
ಇವರೆಲ್ಲ ಅಳುತ್ತಿದ್ದಾರೆ.
ದೇಶಭಕ್ತ ಇವ ನಮ್ಮ ಹುಡುಗ
ಜೈಕಾರ ಹಾಕುತ ಮನೆಯ ಬೆಳಕು ನುಂಗಿದ
ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು.

ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು
ಗುಂಗುರು ಕೂದಲು, ನೇರ ಮೂಗು
ಹೇಳಿ ಕೇಳಿ ಇಪ್ಪತ್ತೆರಡರ ಹರೆಯ ಅಷ್ಟೆ.
ಕಿತ್ತು ತಿನ್ನುವ ಬಡತನ
ಮನೆ ತುಂಬ ಮಕ್ಕಳಲಿ ಬೆಳೆದವ
ಕಿಚ್ಚು ರೊಚ್ಚಿನೊಳಗೆ ಹೊಸ ಬದುಕಿಗೆ ಹುಡುಕಾಟ
ಸಿಕ್ಕದ್ದು ಗಡಿಕಾಯುವ ಕೆಲಸ.

ದೇಶಭಕ್ತಿ-ಅಭಿಮಾನವೆಲ್ಲ
ಗಡಿ ಗುಂಪಿನೊಳಗೇ ಬೆಳೆಸಿಕೊಂಡಿದ್ದ.
ಮನೆ ಮಂದಿಯ ಪ್ರೀತಿ ಕೂಡಾ
ಅಲ್ಲೆ ನೆನೆಪಿಸಿಕೊಂಡು ಮಡವುಗಟ್ಟಿದ್ದ.
ಇಲ್ಲಿ ಇದ್ದಾಗಿನ ಸಿಟ್ಟು ಸೆಡವುಗಳನೆಲ್ಲ
ಅಲ್ಲಿ ಇಳಿಸಿಕೊಂಡು
ಉಳಿದೆಲ್ಲ ಜವಾಬ್ದಾರಿ
ನನಗಿರಲೆಂದು ಪತ್ರಬರೆದಿದ್ದ.

ದುರ್ದಿನದೊಂದು ದಿನ ಸಿಡಿಯಿತು
ವೈರಿಗಳ ಕಿಡಿ
ಧಗಧಗನೆ ಹೊತ್ತಿ ಉರಿಯಿತು
ಯೋಧರ ಎದೆ
ಕತ್ತಲು ಕಗ್ಗತ್ತಲಿಗಂಜದೆ
ಮಂಜು ಚಳಿ ಮಳೆಗೆ ಹೆದರದೆ
ಹಸಿವು ಪ್ರಾಣದ ಹಂಗು ತೊರೆದು
ಗುಂಡು ಮದ್ದುಗಳ ನಡುವೆ
ಹೋರಾಡಿದ್ದೇನು
ಉಸಿರು ಉಸಿರಿಗೆ ಪ್ರೀತಿಸಿದ್ದೇನು ದೇಶ.

ವೈರಿಗಳ ಸದ್ದಡಗಿಸುತ ನೆಲತಟ್ಟಿ
ಮಾತೃವಂದನೆ ಮಾಡಿ
ಮುಖಾಮುಖಿ ಕೊರಳಿಗೆ ಕೊರಳುಕೊಟ್ಟು
ದೇಶಭಕ್ತಿ ರಕ್ತ ಪತಾಕೆಗೆ ಹಾರಿಸಿ
ಹೋದ, ಅವ ದೂರ ಹೊರಟೇ ಹೋದ.
ಅವ ನಮ್ಮವ ನಿಮ್ಮವ ಎಲ್ಲರವ
ವೀರಕುಮಾರ, ಮನೆಯಮಗನವ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...