Home / ಕವನ / ಕವಿತೆ / ಕುಂಬಳೆಯ ನಿಲ್ದಾಣ

ಕುಂಬಳೆಯ ನಿಲ್ದಾಣ

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ
ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು-
ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು
ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ
ಹೋಗುವರು ಕಣ್ಣು ತೆರೆಯುವುದರೊಳಗೆ

ಐನೂರು ವರ್ಷದ ಆಲದ ಮರಗಳಿವೆ ಅಲ್ಲಿ
ಬಿಳಲುಗಳು ಬೆಳೆದು ಬೇರುಗಳಾಗಿವೆ ಅವುಗಳ
ನೆರಳಲ್ಲಿ ದನಗಳು ಮಲಗಿ ಮೆಲಕುಹಾಕುತ್ತವೆ
ಪ್ರಯಾಣಿಕರು ಕುಳಿತು ಗಾಡಿಗೆ ಕಾಯುತ್ತಾರೆ
ಮೇಲೆ ಹಕ್ಕಿಗಳು ಹಣ್ಣುಗಳನ್ನು ಹೆಕ್ಕುತ್ತವೆ-ಆಚೆ
ಅರಬೀಸಮುದ್ರ ಬಿದ್ದು ಹೊರಳುತ್ತದೆ

ಊರಿಗೆ ಹೊಸಬನಂತಿರುವ ಯಾತ್ರಿಕನೆ!
ಎಲ್ಲಿಂದ ಬಂದಿಳಿದೆ ನೀನು ಇಂಥ ಹೊತ್ತಿನಲ್ಲಿ
ಎತ್ತ ಹೋಗುವವ ಯಾರಲ್ಲಿ ಕೆಲಸ? ಅಹಾ!
ಅಲ್ಲಿ ಬಚ್ಚಂಗಾಯಿ ಕೊರೆದಿಟ್ಟು ಗಿರಾಕಿಗಳ
ಕಾಯುವ ಮುದುಕನ ಬಳಿ ಸಾಗು!
ಅವನಿಗೆಲ್ಲವೂ ಗೊತ್ತು ಐನೂರು ವರ್ಷಗಳಿಂದ
ಹೀಗೆ ಕಾಯುತ್ತ ಕುಳಿತಿದ್ದಾನೆ! ಅವನ ಕಣ್ಣುಗಳಲ್ಲಿ
ಕಣ್ಣಿಟ್ಟು ನೋಡಿದರೆ ಎಲ್ಲ ಕಾಣಿಸುವುದು!
ಊರು ಮನೆ ಮಠ ಬಿಸಿಲು ಮಳೆಗಾಳಿ
ಮಾಗಿಯ ಚಳಿ ಊರದೇವರ ತೇರು ಯಾರಿಗೂ
ಹೇಳದೆ ಓಡಿಹೋದ ಜೋಡಿ ಕಾರಣವಿರದೆ
ಮಾಡಿದ ಆತ್ಮಹತ್ಯೆ ಎಷ್ಟು ಗಾಲಿಗಳು ಉರುಳಿ
ಹೋದುವು ಎಷ್ಟೊಂದು ಸರ್ತಿ ಎಷ್ಟು ಬೆಂಕಿಯ
ಕಣಗಳು ಸಿಡಿದುವು ಇವನ ಕಣ್ಣುಗಳಲ್ಲಿ!

ಅದೊ ಅದೋ ಸಮೀಪಿಸುವ ಅದೆಂಥ ಸದ್ದು ?
ಇನ್ನೊಂದು ಲೋಕದಿಂದೆದ್ದು ಬಂದಂತಿದೆ!
ಭೀತನಾಗದಿರು! ಅದು ಇನ್ನೊಂದು ಗಾಡಿ
ತುಸು ಹೊತ್ತು, ನಿಂತು ಹೋಗುವುದು, ಆಮೇಲೆ
ಎಲ್ಲ ಮೊದಲಿನಂತಾಗುವುದು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...