Home / ಕವನ / ಕವಿತೆ / ಕುಂಬಳೆಯ ನಿಲ್ದಾಣ

ಕುಂಬಳೆಯ ನಿಲ್ದಾಣ

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ
ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು-
ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು
ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ
ಹೋಗುವರು ಕಣ್ಣು ತೆರೆಯುವುದರೊಳಗೆ

ಐನೂರು ವರ್ಷದ ಆಲದ ಮರಗಳಿವೆ ಅಲ್ಲಿ
ಬಿಳಲುಗಳು ಬೆಳೆದು ಬೇರುಗಳಾಗಿವೆ ಅವುಗಳ
ನೆರಳಲ್ಲಿ ದನಗಳು ಮಲಗಿ ಮೆಲಕುಹಾಕುತ್ತವೆ
ಪ್ರಯಾಣಿಕರು ಕುಳಿತು ಗಾಡಿಗೆ ಕಾಯುತ್ತಾರೆ
ಮೇಲೆ ಹಕ್ಕಿಗಳು ಹಣ್ಣುಗಳನ್ನು ಹೆಕ್ಕುತ್ತವೆ-ಆಚೆ
ಅರಬೀಸಮುದ್ರ ಬಿದ್ದು ಹೊರಳುತ್ತದೆ

ಊರಿಗೆ ಹೊಸಬನಂತಿರುವ ಯಾತ್ರಿಕನೆ!
ಎಲ್ಲಿಂದ ಬಂದಿಳಿದೆ ನೀನು ಇಂಥ ಹೊತ್ತಿನಲ್ಲಿ
ಎತ್ತ ಹೋಗುವವ ಯಾರಲ್ಲಿ ಕೆಲಸ? ಅಹಾ!
ಅಲ್ಲಿ ಬಚ್ಚಂಗಾಯಿ ಕೊರೆದಿಟ್ಟು ಗಿರಾಕಿಗಳ
ಕಾಯುವ ಮುದುಕನ ಬಳಿ ಸಾಗು!
ಅವನಿಗೆಲ್ಲವೂ ಗೊತ್ತು ಐನೂರು ವರ್ಷಗಳಿಂದ
ಹೀಗೆ ಕಾಯುತ್ತ ಕುಳಿತಿದ್ದಾನೆ! ಅವನ ಕಣ್ಣುಗಳಲ್ಲಿ
ಕಣ್ಣಿಟ್ಟು ನೋಡಿದರೆ ಎಲ್ಲ ಕಾಣಿಸುವುದು!
ಊರು ಮನೆ ಮಠ ಬಿಸಿಲು ಮಳೆಗಾಳಿ
ಮಾಗಿಯ ಚಳಿ ಊರದೇವರ ತೇರು ಯಾರಿಗೂ
ಹೇಳದೆ ಓಡಿಹೋದ ಜೋಡಿ ಕಾರಣವಿರದೆ
ಮಾಡಿದ ಆತ್ಮಹತ್ಯೆ ಎಷ್ಟು ಗಾಲಿಗಳು ಉರುಳಿ
ಹೋದುವು ಎಷ್ಟೊಂದು ಸರ್ತಿ ಎಷ್ಟು ಬೆಂಕಿಯ
ಕಣಗಳು ಸಿಡಿದುವು ಇವನ ಕಣ್ಣುಗಳಲ್ಲಿ!

ಅದೊ ಅದೋ ಸಮೀಪಿಸುವ ಅದೆಂಥ ಸದ್ದು ?
ಇನ್ನೊಂದು ಲೋಕದಿಂದೆದ್ದು ಬಂದಂತಿದೆ!
ಭೀತನಾಗದಿರು! ಅದು ಇನ್ನೊಂದು ಗಾಡಿ
ತುಸು ಹೊತ್ತು, ನಿಂತು ಹೋಗುವುದು, ಆಮೇಲೆ
ಎಲ್ಲ ಮೊದಲಿನಂತಾಗುವುದು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...