ಯಾರದು, ಯಾರದು, ಯಾರದು
ತಿಳಿಯಲು ಏತಕೆ ಬಾರದು?
ಗಂಧದ ಮರದಲಿ ನಂದದ ಪರಿಮಳ
ಲೇಪಿಸಿದವರಾರು?
ಮಂದಾರದ ಹೂಬಟ್ಟಲ ಬಂಧವ
ರೂಪಿಸಿದವರಾರು – ಗಿಡದಲಿ
ಛಾಪಿಸಿದವರಾರು?
ಬೆಟ್ಟದ ಮೈಯಲ್ಲೆಲ್ಲೋ ಸಂದಿಯ
ಇಟ್ಟ ಧೀರ ಯಾರು?
ಒಂದೊಂದೇ ಹನಿ ನೀರಿನಲಿ – ನದಿ
ಹರಿಸಿದವರು ಯಾರು – ಸಾಗರ
ತೆರೆಸಿದವರು ಯಾರು?
ಹತ್ತದ ಆರದ ಕೆಂಡದ ಉಂಡೆಯ
ಬಾನಿಗಿಟ್ಟರಾರು?
ಹತ್ತುವ ಆರುವ ಶಶಿಯನು ನಭದಲಿ
ಬಿತ್ತಿದವರು ಯಾರು – ಬೆಳೆಸಿ
ಸುತ್ತಿಸುವರು ಯಾರು?
ಯಾರಾದರೂ ನೀನಾಗಿರು ಗೂಢವೆ
ಶರಣು ನಿನಗೆ ನಾವು
ಕಾಣದೆ ಇದ್ದರು ಕಾಪಾಡುವ ಹೊಣೆ
ಹೊತ್ತಿಹ ಧಣಿ ನೀನು-ನಿನಗೆ
ಸಂತತ ಋಣಿ ನಾವು
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕಾಣ್ಕೆ ಬೇರಾದರೂ ಕರುಳು ಒಂದೇ - January 21, 2021
- ಒಪ್ಪಿಕೊ ಪರಾಭವ! - January 14, 2021
- ಕದನ ವಿರಾಮದ ಮಾತು - January 7, 2021