Home / ಕವನ / ಕವಿತೆ / ಹೊಸ ಸೂರ್ಯನುದಯಕೆ

ಹೊಸ ಸೂರ್ಯನುದಯಕೆ

ತುಂಬಿದೊಡಲ ಅಬಲೆ ಮೇಲೆ
ಕಾಮಾಂಧರ ನರ್ತನ
ತಾಯೆ ನಿನ್ನ ಒಡಲ ಮೇಲೆ
ನಿತ್ಯ ರಕ್ತ ತರ್ಪಣ
ಅರಳಲಿಲ್ಲಿ ತಾವು ಎಲ್ಲಿ
ಫಲಪುಷ್ಪದ ನಂದನ?

ಅತ್ತು ಅತ್ತು ಸತ್ತ ಭ್ರೂಣ
ಬಿಕ್ಕಿ ಬಿಕ್ಕಿ ಅತ್ತ ’ಬಾನು’
ಜೀವ ಜೀವದಾರ್ತನಾದ
ಕಾಣಲಿಲ್ಲ ಕುರುಡು ಜನಕೆ
ಕೇಳಲಿಲ್ಲ ಕಿವುಡು ಮನಕೆ

ಖಾಕಿಬೂಟಿನಟ್ಪಹಾಸ
ಖಾದಿ ಖದರ ಜಯದ ಘೋಷ
ಹಾಡುಹಗಲೆ ಮೃತ್ಯುಪಾಶ
ಹೆಣ್ಣೆ ನಿನಗೆ ಜೀವಶಿಕ್ಷೆ
ಹೆಜ್ಜೆ ಹೆಜ್ಜೆಗಿರಲು ಎಲ್ಲಿರಕ್ಷೆ?

ಹಿಂದು ಮುಸ್ಲಿಂ ಹೆಸರಿನಲ್ಲಿ
‘ಬಲ್ಕೀಸ’ಳಾ ಉಸಿರು ಎಲ್ಲಿ
ಅಂಧ ಮತಕೆ ಬಂಧವೆಲ್ಲಿ
ತಂದೆ ತಾಯಿ ಬಂಧುವೆಲ್ಲಿ
ಎಲ್ಲಿ ಎಲ್ಲಿ ಎಲ್ಲೆ ಎಲ್ಲಿ
ಉರಿಯ ಸುರಿವ ಜ್ವಾಲೆಗೆ?

ಪ್ರೇತದಂತೆ ನರ್ತನ
ಭೂತದಂತೆ ಕೀರ್ತನ
ಹೆಣ್ಣ ದಾಹ ಹೊನ್ನ ದಾಹ ಮಣ್ಣ ದಾಹ
ದಾಹ ದಾಹ ದಾಹ ದಾಹ…
ದಾಸನಾಗಿ ಮರೆತೆಯಲ್ಲೋ
ಮನುಜನೆಂಬುದ

ಕಮರಿಹೋಯ್ತೆ ಮೊಗ್ಗೆ ನಿನ್ನ
ಹೂವಾಗುವ ಕನಸು?
ಕಸವಾಯಿತೆ ಕಾಲಡಿಯಲ್ಲಿ
ಕಂದ ನಿನ್ನ ಮನಸು?
ಕಣ್ಣು ತೆಗೆವ ಮುನ್ನ ಕೊಂದರಲ್ಲ ನಿನ್ನ
ಥೂ… ಎಂಥ ಹೊಲಸು

ಅಲ್ಲಿ ’ಬಾನು’ ಇಲ್ಲಿ ನಾನು
ನಿತ್ಯ ನರಕಯಾತನೆ
ಎಲ್ಲೆ ಇರಲಿ ಹೇಗೆ ಇರಲಿ
ತಪ್ಪಲಿಲ್ಲ ಯೋಚನೆ
ಹೆಣ್ಣಿಗಿರುವ ಸ್ವಾತಂತ್ರ್ಯ
ಬರಿಯ ಹುಚ್ಚು ಕಲ್ಪನೆ

ತಾಯಿ ತಂಗಿ ಮಾತೃದೈವ
ಎನುವದೆಲ್ಲ ಬೊಗಳೆ
ಸಂತೈಸಲಿ ಹೇಗೆ ಮಗಳೆ
ಇರಲು ದಿನವೂ ರಗಳೆ?
ನಿನ್ನ ನೋವು ನಿನ್ನ ಸಾವು
ತಿಳಿವುದೆಂತು ತಾಯ್ಗಂಡರ ಎದೆಗೆ?

ನ್ಯಾಯವಿಲ್ಲಿ ಕಣ್ಣು ಕುರುಡು
ಕೂಗಿಗಿಲ್ಲಿ ಕಿವಿಯೆ ಕೊರಡು
ಹೃದಯವದು ಬರಿದೆ ಬರಡು
ಇರುವ ಜನರ ಮಾತಿಗಿಲ್ಲ ಎರಡು
ಎನಿತು ಕಾಲ ನೂಕಬೇಕೋ
ನಾಕ ಬೆಳಗಲು?

ನೋವಿಗಿಲ್ಲ ಜಾತಿ ಧರ್ಮ
ಜೀವಕೇಕೆ ಮತದ ಕರ್ಮ
ಬಸವ ಬುದ್ಧ ಏಸು ಬಿದ್ದ
ರಾಮ ರಹಿಮ ಎಲ್ಲಿ ಗೆದ್ದ?
ಕಡಿ ಬಡಿ ಮಂತ್ರವಾಯ್ತೆ ಭಾರತಾಂಬೆಗೆ?
*
ಕಾಯತಿರುವೆ ಕಣ್ಣು ತೆರೆದು
ಹೊಸ ಸೂರ್ಯನ ಉದಯಕೆ!

(ಬಲ್ಕಿಶ್ ಬಾನು ಹೃದಯ ವಿದ್ರಾವಕ ಸಾವಿನ ನೋವಿನಲಿ)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...