Home / ಕವನ / ಕವಿತೆ / ಹೊಸ ಸೂರ್ಯನುದಯಕೆ

ಹೊಸ ಸೂರ್ಯನುದಯಕೆ

ತುಂಬಿದೊಡಲ ಅಬಲೆ ಮೇಲೆ
ಕಾಮಾಂಧರ ನರ್ತನ
ತಾಯೆ ನಿನ್ನ ಒಡಲ ಮೇಲೆ
ನಿತ್ಯ ರಕ್ತ ತರ್ಪಣ
ಅರಳಲಿಲ್ಲಿ ತಾವು ಎಲ್ಲಿ
ಫಲಪುಷ್ಪದ ನಂದನ?

ಅತ್ತು ಅತ್ತು ಸತ್ತ ಭ್ರೂಣ
ಬಿಕ್ಕಿ ಬಿಕ್ಕಿ ಅತ್ತ ’ಬಾನು’
ಜೀವ ಜೀವದಾರ್ತನಾದ
ಕಾಣಲಿಲ್ಲ ಕುರುಡು ಜನಕೆ
ಕೇಳಲಿಲ್ಲ ಕಿವುಡು ಮನಕೆ

ಖಾಕಿಬೂಟಿನಟ್ಪಹಾಸ
ಖಾದಿ ಖದರ ಜಯದ ಘೋಷ
ಹಾಡುಹಗಲೆ ಮೃತ್ಯುಪಾಶ
ಹೆಣ್ಣೆ ನಿನಗೆ ಜೀವಶಿಕ್ಷೆ
ಹೆಜ್ಜೆ ಹೆಜ್ಜೆಗಿರಲು ಎಲ್ಲಿರಕ್ಷೆ?

ಹಿಂದು ಮುಸ್ಲಿಂ ಹೆಸರಿನಲ್ಲಿ
‘ಬಲ್ಕೀಸ’ಳಾ ಉಸಿರು ಎಲ್ಲಿ
ಅಂಧ ಮತಕೆ ಬಂಧವೆಲ್ಲಿ
ತಂದೆ ತಾಯಿ ಬಂಧುವೆಲ್ಲಿ
ಎಲ್ಲಿ ಎಲ್ಲಿ ಎಲ್ಲೆ ಎಲ್ಲಿ
ಉರಿಯ ಸುರಿವ ಜ್ವಾಲೆಗೆ?

ಪ್ರೇತದಂತೆ ನರ್ತನ
ಭೂತದಂತೆ ಕೀರ್ತನ
ಹೆಣ್ಣ ದಾಹ ಹೊನ್ನ ದಾಹ ಮಣ್ಣ ದಾಹ
ದಾಹ ದಾಹ ದಾಹ ದಾಹ…
ದಾಸನಾಗಿ ಮರೆತೆಯಲ್ಲೋ
ಮನುಜನೆಂಬುದ

ಕಮರಿಹೋಯ್ತೆ ಮೊಗ್ಗೆ ನಿನ್ನ
ಹೂವಾಗುವ ಕನಸು?
ಕಸವಾಯಿತೆ ಕಾಲಡಿಯಲ್ಲಿ
ಕಂದ ನಿನ್ನ ಮನಸು?
ಕಣ್ಣು ತೆಗೆವ ಮುನ್ನ ಕೊಂದರಲ್ಲ ನಿನ್ನ
ಥೂ… ಎಂಥ ಹೊಲಸು

ಅಲ್ಲಿ ’ಬಾನು’ ಇಲ್ಲಿ ನಾನು
ನಿತ್ಯ ನರಕಯಾತನೆ
ಎಲ್ಲೆ ಇರಲಿ ಹೇಗೆ ಇರಲಿ
ತಪ್ಪಲಿಲ್ಲ ಯೋಚನೆ
ಹೆಣ್ಣಿಗಿರುವ ಸ್ವಾತಂತ್ರ್ಯ
ಬರಿಯ ಹುಚ್ಚು ಕಲ್ಪನೆ

ತಾಯಿ ತಂಗಿ ಮಾತೃದೈವ
ಎನುವದೆಲ್ಲ ಬೊಗಳೆ
ಸಂತೈಸಲಿ ಹೇಗೆ ಮಗಳೆ
ಇರಲು ದಿನವೂ ರಗಳೆ?
ನಿನ್ನ ನೋವು ನಿನ್ನ ಸಾವು
ತಿಳಿವುದೆಂತು ತಾಯ್ಗಂಡರ ಎದೆಗೆ?

ನ್ಯಾಯವಿಲ್ಲಿ ಕಣ್ಣು ಕುರುಡು
ಕೂಗಿಗಿಲ್ಲಿ ಕಿವಿಯೆ ಕೊರಡು
ಹೃದಯವದು ಬರಿದೆ ಬರಡು
ಇರುವ ಜನರ ಮಾತಿಗಿಲ್ಲ ಎರಡು
ಎನಿತು ಕಾಲ ನೂಕಬೇಕೋ
ನಾಕ ಬೆಳಗಲು?

ನೋವಿಗಿಲ್ಲ ಜಾತಿ ಧರ್ಮ
ಜೀವಕೇಕೆ ಮತದ ಕರ್ಮ
ಬಸವ ಬುದ್ಧ ಏಸು ಬಿದ್ದ
ರಾಮ ರಹಿಮ ಎಲ್ಲಿ ಗೆದ್ದ?
ಕಡಿ ಬಡಿ ಮಂತ್ರವಾಯ್ತೆ ಭಾರತಾಂಬೆಗೆ?
*
ಕಾಯತಿರುವೆ ಕಣ್ಣು ತೆರೆದು
ಹೊಸ ಸೂರ್ಯನ ಉದಯಕೆ!

(ಬಲ್ಕಿಶ್ ಬಾನು ಹೃದಯ ವಿದ್ರಾವಕ ಸಾವಿನ ನೋವಿನಲಿ)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...