Home / ಕವನ / ಕವಿತೆ / ಪರಕಾಯ ಪ್ರವೇಶ

ಪರಕಾಯ ಪ್ರವೇಶ

ಹೆಸರು ಪರಪುಂಜನ ಪರಕಾಯ ಪ್ರವೇಶ
ಹಿಂದೆ ಅಂಥ ಹೆಸರಿನ ಒಬ್ಬ ರಾಜ
ದೇಶ ಸಂಚಾರ ಮಾಡಬೇಕೆಂದು ನಿರ್ಧರಿಸಿ
ನಿಜ ದೇಹವನ್ನು ತನ್ನ ಆಪ್ತ ಮಿತ್ರ ವಿದೂಷಕನ
ಕೈಗೊಪ್ಪಿಸಿ ಆಗ ತಾನೇ ಸತ್ತ ಅಲೆಮಾರಿ
ಸನ್ಯಾಸಿಯೊಬ್ಬನ ದೇಹವನ್ನು ಸೇರುವನು.
ವಿದೂಷಕನೊ ಎಲ್ಲ ವಿದೂಷಕರಂತೆ ಕರುಬುತ್ತ
ಹಾಸ್ಯದ ಚಟಾಕಿಗಳನ್ನು ಹಾರಿಸುತ್ತ ರಾಜನ
ಕಳೇಬರವನ್ನೊಂದು ಗುಪ್ತ ಕೊಠಡಿಯೊಳಗಿರಿಸಿ
ಕಾಯುತ್ತಾನೆ ಆತ ಮರಳಿ ಬರುವುದನ್ನು.
ಇದು ತಿಳಿದ ಮಂತ್ರಿ (ಮಂತ್ರಿಯೇ ಖಳನಾಯಕ)
ರಾಜ್ಯವನ್ನು ಪಡೆಯುವುದಕ್ಕೆ ಮತ್ತು ರಾಣಿ
ಅಪ್ರತಿಮಳನ್ನು ಅನುಭವಿಸುವುದಕ್ಕೆ
ಒಂದು ಏಟಿಗೆ ಎರಡು ಹಣ್ಣುಗಳನ್ನು ಉದುರಿಸುವುದಕ್ಕೆ
ಇದೇ ತಕ್ಕ ಸಮಯವೆಂದು ರಾಜನ ಕಳೇಬರವನ್ನು
ಹುಡುಕಿ ಹಿಡಿದು ಯಾರಿಗೂ ತಿಳಿಯದಂತೆ ಅದನ್ನು
ಹೊಕ್ಕುಬಿಡುತ್ತಾನೆ-ತಾನೇ ಪರಪುಂಜನೆಂದು
ಎದ್ದು ಬರುತ್ತಾನೆ. ಆದರೆ ಚಾಣಾಕ್ಷನಾದ
ವಿದೂಷಕನಿಗೆ ತಿಳಿಯದುದು ಯಾವುದೂ ಇಲ್ಲ.
ಆತ ಅಂದುಕೊಂಡಷ್ಟು ದಡ್ದನೇನಲ್ಲ
ತಾನೇ ಖುದ್ದು ಹೊರಟು ನಿಜವಾದ ರಾಜನನ್ನು
ಹುಡುಕಿ ತರುತ್ತಾನೆ. ಆದರೂ ರಾಜನಿಗೆ
ತನ್ನ ದೇಹ ಮರಳಿ ದೊರಕುವುದು ಹೇಗೆ?
ತಾನೇ ನಿಜವಾದ ಪರಪುಂಜನೆಂದು ಅಪ್ರತಿಮಳಿಗೆ
ತಿಳಿಸಿಕೊಡುವುದು ಹೇಗೆ? ಆಕೆಯನ್ನಾದರೂ
ನಂಬುವುದು ಹೇಗೆ? ನಾಟಕದ ಕುತೂಹಲ
ಇರುವುದೇ ಇಲ್ಲಿ!

ಪರಪುಂಜನ ಪಾತ್ರವನ್ನು ಪ್ರವಣಕುಮಾರನೂ
ಅಪ್ರತಿಮಳ ಪಾತ್ರವನ್ನು ಅಶ್ವಿನಿಯೂ
ಖಳನಾಯಕನ ಪಾತ್ರವನ್ನು ಸುಂಠಣಕರನೂ
ಅಭಿನಯಿಸುತ್ತಾರೆ. ವಿದೂಷಕನ ನಿಜವಾದ
ಹೆಸರು ಯಾರಿಗೂ ಗೊತ್ತಿಲ್ಲ! ಎಲ್ಲರೂ
ಚೆನ್ನಾಗಿ ನಟಿಸುತ್ತಾರೆ. ಅಶ್ವಿನಿಗೆ ಮಾತ್ರ
ಕುಂಡೆಯಲ್ಲೊಂದು ಕುರುವಾದ್ದರಿಂದ
ಒಂದು ಥರ ಲಾಸ್ಯದಲ್ಲಿ ನಡೆಯುತ್ತಾಳೆ
ಒಂದು ಥರ ಆಲಸ್ಯದಲ್ಲಿ ಕುಳಿತುಕೊಳ್ಳುತ್ತಾಳೆ
ಪ್ರೇಕ್ಷಕರು ದಂಗಾಗಿದ್ದಾರೆ! ಇಂಥ ಮಾದಕ
ಭಂಗಿಯನ್ನು ಅವರು ಇದು ತನಕ
ನೋಡಿಯೆ ಇಲ್ಲ! ಎಲ್ಲವೂ ಮುಗಿದಾಗ
ನಿಟ್ಬುಸಿರಿಟ್ಟು ಚಪ್ಪಾಳೆ ತಟ್ಟುವರು
ಅದೆಷ್ಟು ಹೊತ್ತು! ಅಂಥವರಲ್ಲೊಬ್ಬಾತ
ಕುಸುಮಾಕರ ಕಲಘಟಗಿ

ಒಂಟಿ ಜೀವಿ. ತರುಣ, ನೃತ್ಯನಾಟಕ
ಸಂಗೀತ ಪ್ರೇಮಿ ಭಾರತದ ಆಹಾರ ನಿಗಮದಲ್ಲಿ
ಕಾರಕೂನ ತನ್ನ ಅಡುಗೆಯನ್ನು ತಾನೇ
ಮಾಡಿಕೊಳ್ಳುತ್ತಾನೆ. ಅಲುಮಿನಿಯಂ ಇಂಡೇಲಿಯಂ
ಪಾತ್ರೆ ಪಗಡೆ ಇಟ್ಟುಕೊಂಡಿದ್ದಾನೆ.
ಸಂಜೆ ಕಿಟಿಕಿಯ ಹತ್ತಿರ ಕುಳಿತುಕೊಳ್ಳುತ್ತಾನೆ
ತುಂಬ ದುಃಖವಾದಾಗ ತಬಲ ಬಾರಿಸುತ್ತಾನೆ
ಒಲೆಯ ಮೇಲಿನ ಅನ್ನ ಸೀದುಹೋಗುತ್ತದೆ!
ಹೋದರೆ ಹೋಗಲಿ! ನೆರೆಮನೆಯ ಹೆಣ್ಣು-
ಹೆಸರು ಕಾಮಿನಿಯೆಂದು-ಆಕೆ ಹೂದೋಟದಲ್ಲಿ
ಅಡ್ಡಾಡುವುದು ಇದೇ ಸಮಯ!
ಎರಡು ಮಕ್ಕಳ ತಾಯಿ-ಆದರೇನು, ನೋಡಿದವರು
ಯಾರೂ ಅಂದುಕೊಳ್ಳಲಾರರು ಹಾಗೆ
ಆ ರೀತಿ ಇದ್ದಾಳೆ! ಇಚೆಗಂತೂ
ಪ್ರತ್ಯೇಕ ಶೈಲಿಯಲ್ಲಿ ನಡೆಯುವಳು
ತುಳುಕಿ ಬಳುಕಿ ಕಾಲು ಉಳುಕದಿದ್ದರೂ
ಉಳುಕಿದಂತೆ! ಕುಸುವಣಕರ ಕಲಘಟಗಿ
ರಾತ್ರಿ ನಿದ್ದೆಯಿಲ್ಲದೆ ಹೊರಳುವನು
ಮನಸ್ಸಿನಲ್ಲೇ ಬರೆಯುವನು
“ಕಾಮಿನಿ! ಕಾಮಿನಿ! ಕೇಳಿಸುವುದೆ
ನಿನಗೆ ನನ್ನ ದನಿ? ಎಷ್ಟು ಹತ್ತಿರವಿದ್ದೂ
ಎಷ್ಟು ದೂರ ! ಎಷ್ಟ ರಾತ್ರಿಗಳು!
ಎಷ್ಟು ಮೌನಗಳು! ಮತ್ತೆ ಬೆಳಗಾಗಲು
ಎಷ್ಟು ಯುಗಗಳು !”

ಸುಂಠಣಕರ ಮತ್ತು ಕುಸುಮಾಕರ ಕಲಘಟಗಿ
ಸ್ಥಳ ರಾಮಯ್ಯ ಮೆಸ್ಸು ಸಮಯ ಸಾಯಂಕಾಲ
ಒಂದೆ ಟೇಬಲಿನ ಆಚೀಚೆ! ಸುಂಠಣಕರನಿಗಿದು
ಖಾಯಮ್‌ ಜಾಗ. ಕಲಘಟಗಿ ಬಂದಿದ್ದಾನೆ
ಸ್ವಂತ ಅಡುಗೆಯಲ್ಲಿ ಪರಮ ಬೇಸರದಿಂದ
ಸಾಂಬಾರಿನ ಮಸಾಲೆ ಬಹಳ ಖಾರ. ಆದ್ದರಿಂದಲೆ
ಅವನ ಕಣ್ಣು ಮೂಗುಗಳಲ್ಲಿ ನೀರು.
ಸುಂಠಣಕರನೋ ಎತ್ತರದ ದಪ್ಪ ಮನುಷ್ಯ
ಅವನ ಸ್ವರವೂ ಆಪ್ಟೆ ಕರ್ಕಶ: “ಸಾಂಬಾರು!
ಸಾಂಬಾರು!” ಎಂದು ಅರಚುತ್ತಾನೆ.
ಎಲ್ಲೋ ಕೇಳಿದ ಧ್ವನಿ! ಕಲಘಟಗಿ ಮುಖವೆತ್ತಿ
ನೋಡುವನು. ಇಲ್ಲ, ಗುರುತಿಸಲಾರ!
ಸುಂಠಣಕರ ಪಾಪ ನಿಜಜೀವನದಲ್ಲಿ
ತುಂಬ ಸಾಧು ಒಳಗೊಳಗೆ ತನ್ನ ನಾಟಕದ
ನಾಯಕಿಯರನ್ನೆಲ್ಲ-ಮುಖ್ಯವಾಗಿ ಅಶ್ವಿನಿಯನ್ನು–
ಮನಸಾರೆ ಪ್ರೀತಿಸುವನು- ಎಂಥ ತ್ಯಾಗಕ್ಕೂ
ಸಿದ್ಧನು! ಯಾರೂ ನಂಬುವುದಿಲ್ಲ ಇದನ್ನೆಲ್ಲ!
ಖಳನಾಯಕನ ದುರಂತ ಇಂದು ನಿನ್ನೆಯದಲ್ಲ.
ಮಾತಿಗನ್ನುವನು, “ಚೆನ್ನಾಗಿದೆ ಸಾಂಬಾರು!”
ಕಲಘಟಗಿ “ಹೂಂ! ಹೂಂ” ಎಂದು ಮೂಗೊರೆಸಿಕೊಳ್ಳುವನು
ಇನ್ನೆಂದಿಗೂ ಇತ್ತ ಬರಲಾರೆ ಎಂದುಕೊಳ್ಳುತ್ತ!

ಇತ್ತ ನಿರ್ದೇಶಕ ಶ್ರೀನಿವಾಸ
(ಸಕಲರ ಬಾಯಲ್ಲೂ ಕೇವಲ ಶ್ರೀನಿ)
ಸುರುಮಾಡಿದ್ದಾನೆ ಈಗಾಗಲೆ
ಇನ್ನೊಂದು ನಾಟಕದ ತಾಲೀಮು
ಹೆಸರೇನು ಕಥೆಯೇನು
ಎಲ್ಲಿ ರಹಸ್ಯವಾಗಿದೆ!
ಅಶ್ವಿನಿ ಮಾತ್ರ ಇದರಲ್ಲಿ ಇಲ್ಲ
ಅವಳ ಕುರು ಇನ್ನೂ ಗುಣವಾಗಿಲ್ಲ ಪಾಪ !
ಅವಳ ಬದಲಿಗೆ ನಟಿಸುತ್ತಾಳೆ ಪದ್ಮಿನಿ.
ಪದ್ಮಿನಿಗೆ ಯಾವ ತೊಂದರೆಯೂ ಇಲ್ಲ
ಆದರೆ ಭಾವಾತಿರೇಕದಲ್ಲಿ ಮಾತ್ರ
ಒಮ್ಮೊಮ್ಮೆ ಉಗ್ಗುವುದುಂಟು
ಉಗ್ಗಿದಾಗ ಮಾತು ನಿಂತುಬಿಡುತ್ತದೆ
ಅವಳ ಮೂಗಿನ ಹೊಳ್ಳೆಗಳು ಅರಳುತ್ತವೆ!
ಶ್ರೀನಿಗೆ ಮಾತ್ರ ಇದೊಂದೂ ಗೊತ್ತಿಲ್ಲ
ಅವನು ಪ್ರತಿ ಸೀನಿಗೂ ಹತ್ತತ್ತು ಬಾರಿ
ಸೀನುತ್ತಾನೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...