ಏತಕೆ ಆಟ ಆಡುವಿ
ಭಕ್ತನ ವೇಷ ಹೂಡುವಿ?
ಮೈಯ ಮೋಹದ ಕಾಮೀ ಬೆಕ್ಕು
ಗುರುಗುಡುತಿದೆ ಒಳಗೆ
ಬಿಚ್ಚಿದೆ ಉಗುರ, ಎತ್ತಿದೆ ಪಂಜ
ವಿರಾಗಿ ವೇಷ ಹೊರಗೆ
ಲೋಭ ಮೋಹಗಳ ಚಿರತೆ, ತೋಳ
ತಲೆಯ ಬೋನಿನೊಳಗೆ
ಆದರ ಫಳಫಳ ಗೋಪೀ ಚಂದನ
ತೋಳಿಗೆ ಎದೆ ಹಣೆಗೆ
ಜಪಮಣಿ ಮಾಲೆಯ ನಾಟಕ ಯಾಕೋ
ಬೆರಳಿಗೆ ಆಯಾಸ,
ವಂಚಿಸಬಲ್ಲೆಯ ಗಿರಿಧರನನ್ನು
ದೇವನೆದುರೆ ಮೋಸ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.