Home / ಕವನ / ಕವಿತೆ / ಬುಡು ಬುಡುಕಿ ಹಾಡು

ಬುಡು ಬುಡುಕಿ ಹಾಡು

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು
ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ||

ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ
ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧||

ಮೂಡಲ ದೇಶದ ಬುಡುಬುಡುಕ್ಯಾನಾ
ಹಾಡನು ಹಾಡುತ ಬಂದೀನಮ್ಮಾ
ಮೂಡುವ ಸೂರ್ಯನ ಹಾಡನು ತಂದೆ
ಓಡಿಸು ಕತ್ತಲ ತಂಗೆಮ್ಮಾ ||೨||

ಹೊಟ್ಟೆಯ ಪಾಡಿಗೆ ದುಡಿಯುತ ಉಣ್ಣುತ
ಕಷ್ಟದಿ ಬದುಕಿರೆ ಸಾಲ್ದಮ್ಮ
ಇಷ್ಟಾನಿಷ್ಟವ ತಿಳಿದೂ ನೋಡೀ
ಗಟ್ಟಿಯ ಬಾಳನ್ನು ಬಾಳಮ್ಮಾ ||೩||

ಹೊಸ ಹೊಸ ಜೀವನ ವಿಧಾನ ಬಂದಿದೆ
ಕಸಮಳ ಕಳೆಯೇ ತಂಗೆಮ್ಮಾ
ಹೊಸಾ ಕಾಲವಿದು ಓದು ಬರೆಯುವುದು
ಹಸನಾಗಿರಲಿಕೆ ಮೂಲಮ್ಮಾ ||೪||

ಓದಿಲ್ಲದ ಮನೆ ಕತ್ತಲೇ ಕಾಣೇ
ಓದನು ಸಾಧಿಸಬೇಕಮ್ಮಾ
ಬಾಧಗಳೆಲ್ಲಕೆ ದಾರಿ ತೋರುವುದು
ವೇದನೆ ಕಳೆಯೇ ತಂಗೆಮ್ಮಾ ||೫||

ಹೆಣ್ಣೊಬ್ಬಳು ನೀ ವಿದ್ಯೆಯ ಕಲಿತರೆ
ಕಣ್ಣೇ ಬಂದಂಗೆ ಮನೆಗೆಲ್ಲಾ
ಪುಣ್ಯವಂತರು ಮುಂದಿನ ಪೀಳಿಗೆ
ಕಣ್ಮಣಿ ಲೋಕಕೆ ನೀನಮ್ಮಾ ||೬||

ನಿನ್ನಾರೋಗ್ಯಾ ಗಂಡನ ಮಕ್ಕಳ
ಚೆನ್ನಾದ ಸ್ಥಿತಿ ನಿನ್ನ ಕೈಲಿ
ಬಿನ್ನಾಣಿಂದಲಿ ಪೇಳುವೆನಮ್ಮಾ
ಚಿನ್ನದ ಕನ್ನಡ ಕಲಿಯಮ್ಮಾ ||೭||

ಮನೆಯೇ ಮೊದಲನೆ ಶಾಲೆಯು ಲೋಕದಿ
ಮನೆ ಮನೆ ಬೆಳಕು ನಿನ್ನಿಂದಾ
ಕನಸುಗಳೆಲ್ಲಾ ಗೂಡು ಕಟ್ಟುವವು
ನನಸಾಗುವವು ನಿನ್ನಿಂದಾ ||೮||

ಹೆಣ್ಣಿಗೆ ಸ್ವಾತಂತ್ರಿಲ್ಲಿನ್ನುವ ಜನ
ಹುಣ್ಣು ರೋಗಮಯವಾಗುವರು
ಹೆಣ್ಣು ಗಂಡುಗಳು ಸಮಬಲವಾದರೆ
ಗಣ್ಯ ಬಲಾಢ್ಯರು ಆಗುವರು ||೯||

ಹುಟ್ಟಿದ ಮನೆಯನು ಬಿಟ್ಟು ಬಂದರೂ
ಕೊಟ್ಟ ಮನೆಯು ನಿನದಾಗುವುದು
ನೆಟ್ಟಗೆ ಎರಡೂ ಮನೆಗಳ ಬೆಸೆದು
ದಿಟ್ಟ ಕೀರ್ತಿ ನಿನಗಾಗುವುದು ||೧೦||

ನಿನ್ನಯ ಜೋಗುಳ ದನಿಯಲಿ ನಾಡಿನ
ಉನ್ನತಿ ಒಲವು ಮೊಳಗುವುದು
ನಿನ್ನೆದೆ ಹಾಲಲಿ ಮಾನವತೆಯ ಹೊಳೆ
ಚೆನ್ನಾಗೆಲ್ಲೆಡೆ ಹರಿಯುವುದು ||೧೧||

ಸದ್ಗುಣ ಎಂಬುದು ನಿನ್ನಾಭರಣ
ಮುದ್ದಿನ ಪ್ರೀತಿಯ ಮೂಗುತಿಯು
ಶುದ್ಧದ ನಗುವೇ ನಂದಾದೀಪವು
ಸದ್ಗತಿ ಮನೆಗದು ನೋಡಮ್ಮಾ ||೧೨||

ಅಕ್ಷರ ಕಲಿಯುತ ಮಕ್ಕಳ ತಿದ್ದುತ
ಶಿಕ್ಷಕಿ ಲೋಕಕೆ ಆಗಮ್ಮಾ
ನಕ್ಕರೆ ನೀನೀ ಜಗವೇ ನಗುವುದು
ಅಕ್ಕರೆಯಲಿ ನೀ ಬೆಳೆಸಮ್ಮಾ ||೧೩||

ಬಂಗಾರೆನ್ನುವ ಆಶೆಯು ಬ್ಯಾಡಾ
ಬಂಗಾರವು ಮನಸಿರಿಯಮ್ಮಾ
ಸಿಂಗಾರೆನ್ನುವ ಪಾಶವು ಬ್ಯಾಡಾ
ಸಿಂಗಾರವು ನಿಜ ವಿದ್ಯಮ್ಮಾ ||೧೪||

ಮೌಢ್ಯದ ಹುಳುಗಳ ನಿನ್ನ ಸೆರಗಿನಲಿ
ಹೊದ್ದಿಸಿ ಪೋಷಿಸಬ್ಯಾಡಮ್ಮಾ
ಆಢ್ಯದಿ ಮೆರೆಯುವ ಬೊಜ್ಜು ಮೈಗಳಿಗೆ
ಕೂಡಿಸಿ ಕೂಳಿಡ ಬ್ಯಾಡಮ್ಮಾ ||೧೫||

ವರದಕ್ಷಣೆಯನು ತೆಗೆದುಕೊಳ್ಳುವ
ಕುರಿ ಮಕ್ಕಳ ಹಡಿಬ್ಯಾಡಮ್ಮಾ
ಪರಿ ಪರಿ ಲಂಚದ ಬೆಂಕಿಯ ಬೆಳೆಸುವ
ನರಿಗಳ ನೀ ಕೊಡಬ್ಯಾಡಮ್ಮಾ ||೧೬||

ಅಬಲೆಯಲ್ಲವೇ ತಂಗೆಮ್ಮಾ ನೀ
ದುರ್ಬಲೆ ಎಂಬುದ ಮರೆಯಮ್ಮಾ
ಸಬಲ ಸಮಾಜದ ನಿರ್ಮಾಣಕೆ ನೀ
ಪ್ರಬಲೆಯಾಗು ನೀ ಏಳಮ್ಮಾ ||೧೭||

ಕೇಳೇ ಅಕ್ಕಾ ಕೇಳೇ ತಂಗೀ
ಕೇಳೇ ಅವ್ವಾ ನಮ್ಮಮ್ಮಾ
ಹೇಳುವೆ ನಿನ್ನದೆ ಒಳಗಿನ ಮಾತಾ
ಬಾಳುವೆ ನುಡಿ ಬುಡುಬುಡಿಕೆಮ್ಮ ||೧೮||

*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...