Home / ಕವನ / ಕವಿತೆ / ಬುಡು ಬುಡುಕಿ ಹಾಡು

ಬುಡು ಬುಡುಕಿ ಹಾಡು

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು
ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ||

ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ
ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧||

ಮೂಡಲ ದೇಶದ ಬುಡುಬುಡುಕ್ಯಾನಾ
ಹಾಡನು ಹಾಡುತ ಬಂದೀನಮ್ಮಾ
ಮೂಡುವ ಸೂರ್ಯನ ಹಾಡನು ತಂದೆ
ಓಡಿಸು ಕತ್ತಲ ತಂಗೆಮ್ಮಾ ||೨||

ಹೊಟ್ಟೆಯ ಪಾಡಿಗೆ ದುಡಿಯುತ ಉಣ್ಣುತ
ಕಷ್ಟದಿ ಬದುಕಿರೆ ಸಾಲ್ದಮ್ಮ
ಇಷ್ಟಾನಿಷ್ಟವ ತಿಳಿದೂ ನೋಡೀ
ಗಟ್ಟಿಯ ಬಾಳನ್ನು ಬಾಳಮ್ಮಾ ||೩||

ಹೊಸ ಹೊಸ ಜೀವನ ವಿಧಾನ ಬಂದಿದೆ
ಕಸಮಳ ಕಳೆಯೇ ತಂಗೆಮ್ಮಾ
ಹೊಸಾ ಕಾಲವಿದು ಓದು ಬರೆಯುವುದು
ಹಸನಾಗಿರಲಿಕೆ ಮೂಲಮ್ಮಾ ||೪||

ಓದಿಲ್ಲದ ಮನೆ ಕತ್ತಲೇ ಕಾಣೇ
ಓದನು ಸಾಧಿಸಬೇಕಮ್ಮಾ
ಬಾಧಗಳೆಲ್ಲಕೆ ದಾರಿ ತೋರುವುದು
ವೇದನೆ ಕಳೆಯೇ ತಂಗೆಮ್ಮಾ ||೫||

ಹೆಣ್ಣೊಬ್ಬಳು ನೀ ವಿದ್ಯೆಯ ಕಲಿತರೆ
ಕಣ್ಣೇ ಬಂದಂಗೆ ಮನೆಗೆಲ್ಲಾ
ಪುಣ್ಯವಂತರು ಮುಂದಿನ ಪೀಳಿಗೆ
ಕಣ್ಮಣಿ ಲೋಕಕೆ ನೀನಮ್ಮಾ ||೬||

ನಿನ್ನಾರೋಗ್ಯಾ ಗಂಡನ ಮಕ್ಕಳ
ಚೆನ್ನಾದ ಸ್ಥಿತಿ ನಿನ್ನ ಕೈಲಿ
ಬಿನ್ನಾಣಿಂದಲಿ ಪೇಳುವೆನಮ್ಮಾ
ಚಿನ್ನದ ಕನ್ನಡ ಕಲಿಯಮ್ಮಾ ||೭||

ಮನೆಯೇ ಮೊದಲನೆ ಶಾಲೆಯು ಲೋಕದಿ
ಮನೆ ಮನೆ ಬೆಳಕು ನಿನ್ನಿಂದಾ
ಕನಸುಗಳೆಲ್ಲಾ ಗೂಡು ಕಟ್ಟುವವು
ನನಸಾಗುವವು ನಿನ್ನಿಂದಾ ||೮||

ಹೆಣ್ಣಿಗೆ ಸ್ವಾತಂತ್ರಿಲ್ಲಿನ್ನುವ ಜನ
ಹುಣ್ಣು ರೋಗಮಯವಾಗುವರು
ಹೆಣ್ಣು ಗಂಡುಗಳು ಸಮಬಲವಾದರೆ
ಗಣ್ಯ ಬಲಾಢ್ಯರು ಆಗುವರು ||೯||

ಹುಟ್ಟಿದ ಮನೆಯನು ಬಿಟ್ಟು ಬಂದರೂ
ಕೊಟ್ಟ ಮನೆಯು ನಿನದಾಗುವುದು
ನೆಟ್ಟಗೆ ಎರಡೂ ಮನೆಗಳ ಬೆಸೆದು
ದಿಟ್ಟ ಕೀರ್ತಿ ನಿನಗಾಗುವುದು ||೧೦||

ನಿನ್ನಯ ಜೋಗುಳ ದನಿಯಲಿ ನಾಡಿನ
ಉನ್ನತಿ ಒಲವು ಮೊಳಗುವುದು
ನಿನ್ನೆದೆ ಹಾಲಲಿ ಮಾನವತೆಯ ಹೊಳೆ
ಚೆನ್ನಾಗೆಲ್ಲೆಡೆ ಹರಿಯುವುದು ||೧೧||

ಸದ್ಗುಣ ಎಂಬುದು ನಿನ್ನಾಭರಣ
ಮುದ್ದಿನ ಪ್ರೀತಿಯ ಮೂಗುತಿಯು
ಶುದ್ಧದ ನಗುವೇ ನಂದಾದೀಪವು
ಸದ್ಗತಿ ಮನೆಗದು ನೋಡಮ್ಮಾ ||೧೨||

ಅಕ್ಷರ ಕಲಿಯುತ ಮಕ್ಕಳ ತಿದ್ದುತ
ಶಿಕ್ಷಕಿ ಲೋಕಕೆ ಆಗಮ್ಮಾ
ನಕ್ಕರೆ ನೀನೀ ಜಗವೇ ನಗುವುದು
ಅಕ್ಕರೆಯಲಿ ನೀ ಬೆಳೆಸಮ್ಮಾ ||೧೩||

ಬಂಗಾರೆನ್ನುವ ಆಶೆಯು ಬ್ಯಾಡಾ
ಬಂಗಾರವು ಮನಸಿರಿಯಮ್ಮಾ
ಸಿಂಗಾರೆನ್ನುವ ಪಾಶವು ಬ್ಯಾಡಾ
ಸಿಂಗಾರವು ನಿಜ ವಿದ್ಯಮ್ಮಾ ||೧೪||

ಮೌಢ್ಯದ ಹುಳುಗಳ ನಿನ್ನ ಸೆರಗಿನಲಿ
ಹೊದ್ದಿಸಿ ಪೋಷಿಸಬ್ಯಾಡಮ್ಮಾ
ಆಢ್ಯದಿ ಮೆರೆಯುವ ಬೊಜ್ಜು ಮೈಗಳಿಗೆ
ಕೂಡಿಸಿ ಕೂಳಿಡ ಬ್ಯಾಡಮ್ಮಾ ||೧೫||

ವರದಕ್ಷಣೆಯನು ತೆಗೆದುಕೊಳ್ಳುವ
ಕುರಿ ಮಕ್ಕಳ ಹಡಿಬ್ಯಾಡಮ್ಮಾ
ಪರಿ ಪರಿ ಲಂಚದ ಬೆಂಕಿಯ ಬೆಳೆಸುವ
ನರಿಗಳ ನೀ ಕೊಡಬ್ಯಾಡಮ್ಮಾ ||೧೬||

ಅಬಲೆಯಲ್ಲವೇ ತಂಗೆಮ್ಮಾ ನೀ
ದುರ್ಬಲೆ ಎಂಬುದ ಮರೆಯಮ್ಮಾ
ಸಬಲ ಸಮಾಜದ ನಿರ್ಮಾಣಕೆ ನೀ
ಪ್ರಬಲೆಯಾಗು ನೀ ಏಳಮ್ಮಾ ||೧೭||

ಕೇಳೇ ಅಕ್ಕಾ ಕೇಳೇ ತಂಗೀ
ಕೇಳೇ ಅವ್ವಾ ನಮ್ಮಮ್ಮಾ
ಹೇಳುವೆ ನಿನ್ನದೆ ಒಳಗಿನ ಮಾತಾ
ಬಾಳುವೆ ನುಡಿ ಬುಡುಬುಡಿಕೆಮ್ಮ ||೧೮||

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...