Home / ಕವನ / ಕವಿತೆ / ಬುಡು ಬುಡುಕಿ ಹಾಡು

ಬುಡು ಬುಡುಕಿ ಹಾಡು

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು
ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ||

ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ
ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧||

ಮೂಡಲ ದೇಶದ ಬುಡುಬುಡುಕ್ಯಾನಾ
ಹಾಡನು ಹಾಡುತ ಬಂದೀನಮ್ಮಾ
ಮೂಡುವ ಸೂರ್ಯನ ಹಾಡನು ತಂದೆ
ಓಡಿಸು ಕತ್ತಲ ತಂಗೆಮ್ಮಾ ||೨||

ಹೊಟ್ಟೆಯ ಪಾಡಿಗೆ ದುಡಿಯುತ ಉಣ್ಣುತ
ಕಷ್ಟದಿ ಬದುಕಿರೆ ಸಾಲ್ದಮ್ಮ
ಇಷ್ಟಾನಿಷ್ಟವ ತಿಳಿದೂ ನೋಡೀ
ಗಟ್ಟಿಯ ಬಾಳನ್ನು ಬಾಳಮ್ಮಾ ||೩||

ಹೊಸ ಹೊಸ ಜೀವನ ವಿಧಾನ ಬಂದಿದೆ
ಕಸಮಳ ಕಳೆಯೇ ತಂಗೆಮ್ಮಾ
ಹೊಸಾ ಕಾಲವಿದು ಓದು ಬರೆಯುವುದು
ಹಸನಾಗಿರಲಿಕೆ ಮೂಲಮ್ಮಾ ||೪||

ಓದಿಲ್ಲದ ಮನೆ ಕತ್ತಲೇ ಕಾಣೇ
ಓದನು ಸಾಧಿಸಬೇಕಮ್ಮಾ
ಬಾಧಗಳೆಲ್ಲಕೆ ದಾರಿ ತೋರುವುದು
ವೇದನೆ ಕಳೆಯೇ ತಂಗೆಮ್ಮಾ ||೫||

ಹೆಣ್ಣೊಬ್ಬಳು ನೀ ವಿದ್ಯೆಯ ಕಲಿತರೆ
ಕಣ್ಣೇ ಬಂದಂಗೆ ಮನೆಗೆಲ್ಲಾ
ಪುಣ್ಯವಂತರು ಮುಂದಿನ ಪೀಳಿಗೆ
ಕಣ್ಮಣಿ ಲೋಕಕೆ ನೀನಮ್ಮಾ ||೬||

ನಿನ್ನಾರೋಗ್ಯಾ ಗಂಡನ ಮಕ್ಕಳ
ಚೆನ್ನಾದ ಸ್ಥಿತಿ ನಿನ್ನ ಕೈಲಿ
ಬಿನ್ನಾಣಿಂದಲಿ ಪೇಳುವೆನಮ್ಮಾ
ಚಿನ್ನದ ಕನ್ನಡ ಕಲಿಯಮ್ಮಾ ||೭||

ಮನೆಯೇ ಮೊದಲನೆ ಶಾಲೆಯು ಲೋಕದಿ
ಮನೆ ಮನೆ ಬೆಳಕು ನಿನ್ನಿಂದಾ
ಕನಸುಗಳೆಲ್ಲಾ ಗೂಡು ಕಟ್ಟುವವು
ನನಸಾಗುವವು ನಿನ್ನಿಂದಾ ||೮||

ಹೆಣ್ಣಿಗೆ ಸ್ವಾತಂತ್ರಿಲ್ಲಿನ್ನುವ ಜನ
ಹುಣ್ಣು ರೋಗಮಯವಾಗುವರು
ಹೆಣ್ಣು ಗಂಡುಗಳು ಸಮಬಲವಾದರೆ
ಗಣ್ಯ ಬಲಾಢ್ಯರು ಆಗುವರು ||೯||

ಹುಟ್ಟಿದ ಮನೆಯನು ಬಿಟ್ಟು ಬಂದರೂ
ಕೊಟ್ಟ ಮನೆಯು ನಿನದಾಗುವುದು
ನೆಟ್ಟಗೆ ಎರಡೂ ಮನೆಗಳ ಬೆಸೆದು
ದಿಟ್ಟ ಕೀರ್ತಿ ನಿನಗಾಗುವುದು ||೧೦||

ನಿನ್ನಯ ಜೋಗುಳ ದನಿಯಲಿ ನಾಡಿನ
ಉನ್ನತಿ ಒಲವು ಮೊಳಗುವುದು
ನಿನ್ನೆದೆ ಹಾಲಲಿ ಮಾನವತೆಯ ಹೊಳೆ
ಚೆನ್ನಾಗೆಲ್ಲೆಡೆ ಹರಿಯುವುದು ||೧೧||

ಸದ್ಗುಣ ಎಂಬುದು ನಿನ್ನಾಭರಣ
ಮುದ್ದಿನ ಪ್ರೀತಿಯ ಮೂಗುತಿಯು
ಶುದ್ಧದ ನಗುವೇ ನಂದಾದೀಪವು
ಸದ್ಗತಿ ಮನೆಗದು ನೋಡಮ್ಮಾ ||೧೨||

ಅಕ್ಷರ ಕಲಿಯುತ ಮಕ್ಕಳ ತಿದ್ದುತ
ಶಿಕ್ಷಕಿ ಲೋಕಕೆ ಆಗಮ್ಮಾ
ನಕ್ಕರೆ ನೀನೀ ಜಗವೇ ನಗುವುದು
ಅಕ್ಕರೆಯಲಿ ನೀ ಬೆಳೆಸಮ್ಮಾ ||೧೩||

ಬಂಗಾರೆನ್ನುವ ಆಶೆಯು ಬ್ಯಾಡಾ
ಬಂಗಾರವು ಮನಸಿರಿಯಮ್ಮಾ
ಸಿಂಗಾರೆನ್ನುವ ಪಾಶವು ಬ್ಯಾಡಾ
ಸಿಂಗಾರವು ನಿಜ ವಿದ್ಯಮ್ಮಾ ||೧೪||

ಮೌಢ್ಯದ ಹುಳುಗಳ ನಿನ್ನ ಸೆರಗಿನಲಿ
ಹೊದ್ದಿಸಿ ಪೋಷಿಸಬ್ಯಾಡಮ್ಮಾ
ಆಢ್ಯದಿ ಮೆರೆಯುವ ಬೊಜ್ಜು ಮೈಗಳಿಗೆ
ಕೂಡಿಸಿ ಕೂಳಿಡ ಬ್ಯಾಡಮ್ಮಾ ||೧೫||

ವರದಕ್ಷಣೆಯನು ತೆಗೆದುಕೊಳ್ಳುವ
ಕುರಿ ಮಕ್ಕಳ ಹಡಿಬ್ಯಾಡಮ್ಮಾ
ಪರಿ ಪರಿ ಲಂಚದ ಬೆಂಕಿಯ ಬೆಳೆಸುವ
ನರಿಗಳ ನೀ ಕೊಡಬ್ಯಾಡಮ್ಮಾ ||೧೬||

ಅಬಲೆಯಲ್ಲವೇ ತಂಗೆಮ್ಮಾ ನೀ
ದುರ್ಬಲೆ ಎಂಬುದ ಮರೆಯಮ್ಮಾ
ಸಬಲ ಸಮಾಜದ ನಿರ್ಮಾಣಕೆ ನೀ
ಪ್ರಬಲೆಯಾಗು ನೀ ಏಳಮ್ಮಾ ||೧೭||

ಕೇಳೇ ಅಕ್ಕಾ ಕೇಳೇ ತಂಗೀ
ಕೇಳೇ ಅವ್ವಾ ನಮ್ಮಮ್ಮಾ
ಹೇಳುವೆ ನಿನ್ನದೆ ಒಳಗಿನ ಮಾತಾ
ಬಾಳುವೆ ನುಡಿ ಬುಡುಬುಡಿಕೆಮ್ಮ ||೧೮||

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...