ಮಾಡಿದ್ದೊಂದು ಆಗಿದ್ದೊಂದು

ಹೀಗೆ ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿಗೆ ಸೊಸೆಯೂ ಬಂದಿದ್ದಳು. ವಾಡಿಕೆಯಂತೆ ಅತ್ತೆ ಸೊಸೆಯರಲ್ಲಿ ವಿರಸಕ್ಕಾರಂಭವಾಗಿ ಕದನವಾಗತೊಡಗಿದವು. ಕದನದ ಪರಿಣಾಮದಿಂದ ಕುನಸುಹುಟ್ಟಿಕೊಂಡಿತು ಪರಸ್ಪರರಲ್ಲಿ. ಎಂಥದೋ ಒಂದು ಉಪಾಯದಿಂದ ಅತ್ತೆಯನ್ನು ಇಲ್ಲದಂತಾಗಿಸಬೇಕೆಂಬ ಹಂಚಿಕೆಯನ್ನು ಸೊಸೆ ಹುಡುಕ ತೊಡಗಿದಳು. ಅದಕ್ಕೆ ಗಂಡನ ಸಹಾಯವೂ ಸಕಾಲದಲ್ಲಿ ದೊರೆಯುವಂತೆ ಹೇಳಿದ್ದಳು.

ರಾತ್ರಿ ಮಲಗಿರುವಾಗ ಅತ್ತೆಯನ್ನು ಕಟ್ಟಿ ಒಯ್ದು ಹೊಳೆಯಲ್ಲಿ ಒಗೆಯಬೇಕೆಂದು ನಿರ್ಧರಿಸಿ ಗಂಡನಿಗೆ ಸಿದ್ಧನಾಗಿರಲು ತಿಳಿಸಿದಳು. ಗಂಡನು ಹೆಂಡತಿಯ ಕೆಲಸಕ್ಕೆ ಸಮ್ಮತಿಸಿ ಅದನ್ನು ನಿರ್ವಹಿಸಲು ಸಿದ್ದನಾದರೂ ಆ ವಿಷಯವನ್ನು ತಾಯಿಗೆ ಹೇಳಲು ಮರೆಯಲಿಲ್ಲ.

ಅದೇ ಸಂದರ್ಭದಲ್ಲಿ ಮಗಳನ್ನು ಕಂಡು ಹೋಗಬೇಕೆಂದು ಸೊಸೆಯ ತಾಯಿ ಆ ಊರಿಗೆ ಬಂದಳು. ಮನೆಗೆ ಬಂದ ಬೀಗತಿಯನ್ನು ತಾಯಿ ಆದರದಿಂದ ಬರಮಾಡಿಕೊಂಡಳು. ಎಲ್ಲರೂ ಕೂಡಿ ಉಂಡುನಕ್ಕರು, ಕೆಲೆದರು. ರಾತ್ರಿ ಬಹಳ ಆಯಿತೆಂದು ತಂತಮ್ಮ ಹಾಸಿಗೆ ಹಾಸಿಕೊಂಡರು.

ಬೀಗತಿಯರು ಒಂದೇ ಕಡೆಯಲ್ಲಿ ಹಾಸಿಗೆ ಹಾಕಿದರು. ತಂತಮ್ಮ ಹೊದಿಕೆ ಹೊತ್ತು ಕೆಲಹೊತ್ತು ಮಾತಾಡುತ್ತ ಮಲಗಿದರು- ಬಳಿಕ ಅದರಿಗೆ ನಿದ್ದೆ ಹತ್ತಿತು.
ಗಂಡ ಹೆಂಡಿರು ನಿತ್ಯದಂತೆ ತಮ್ಮ ಕೋಣೆಗೆ ತೆರಳಿದರು ಮಲಗಲಿಕ್ಕೆ. ಸೊಸೆ ಯಾವುದೊ ನೆವದಿಂದ ಹೊರಗೆ ಬಂದು, ತನ್ನ ತಾಯಿ-ಅತ್ತೆಯರಿಗೆ ನಿದ್ದೆ ಹತ್ತಿದೆಯೆಂದು ಬಗೆದು, ಅತ್ತೆಯ ಕಾಲಬೆರಳಿಗೆ ಕಂಬಳಿಯ ಕರೆಯನ್ನು ಕಟ್ಟಿದಳು. ಅಂದಿನ ರಾತ್ರಿಯಲ್ಲಿಯೇ ಆಕೆಯನ್ನು ಹೊಳೆ ಕಾಣಿಸಿ ಬರಬೇಕಾಗಿತ್ತು.
ಇಬ್ಬರು ಮುದುಕಿಯರು ಒತ್ತಟ್ಟಿಗೆ ಮಲಗಿದಾಗ, ಗಂಡನು ತನ್ನ ತಾಯನ್ನು ಸಹಜವಾಗಿ ಗುರುತಿಸಲೆಂದು ಹಾಗೆ ಮಾಡಿ ಗಂಡನಿಗೆ ತಿಳಿಸಿದಳು.

ತನ್ನನ್ನು ಎಂದಾದರೊಮ್ಮೆ ಹೊತ್ತೊಯ್ಯುವರೆಂಬ ಎದೆಗುದಿಯಲ್ಲಿ ಆತನ ತಾಯಿಗೆ ನಿದ್ದೆ ಹತ್ತಿರಲಿಲ್ಲ. ಕಾಲಕಿರಿಬೆರಳಿಗೆ ಸೊಸೆ ಕಂಬಳಿಯ ಕರೆ ಕಟ್ಟುವುದು
ಆಕೆಗೆ ಗೊತ್ತಾಗಿತ್ತು. ಆದರೂ ಬೇಕೆಂತಲೇ ಡುಕ್ಕು ಹೊಡೆದಿದ್ದಳು. ಸೊಸೆ ತನ್ನ ಕೋಣೆಗೆ ಹೊರಟುಹೋದ ಮೇಲೆ, ಆಕೆ ಎದ್ದು ಕುಳಿತು ತನ್ನ ಕಾಲಿನ ಕರೆಯನ್ನು
ಬಿಚ್ಚಿ, ಬೀಗತಿಯ ಕಾಲಬೆರಳಿಗೆ ಕಟ್ಟಿದಳು. ಅದು ಆಕೆಗೆ ಗೊತ್ತಾಗಲಿಲ್ಲ. ಗಡದಾಗಿ ನಿದ್ದೆಹತ್ತಿತ್ತು.

ದೊಡ್ಡ ನಸುಕಿನಲ್ಲೆದ್ದು ಆತನು ಕರೆಕಟ್ಟಿದ ಕಾಲುಳ್ಳ ಮುದುಕಿಯನ್ನು ಅದೇ ಹಾಸಿಗೆಯಲ್ಲಿ ಸುತ್ತಿ ಬಿಗಿದು, ಹೊತ್ತುಕೊಂಡು ಹೊಳೆಯಕಡೆಗೆ ನಡೆದನು.
ಜೊತೆಯಲ್ಲಿ ಹೆಂಡತಿಯೂ ಇದ್ದಳು. ಹೊಳೆಯಲ್ಲಿ ಒಂದು ಕಡೆಗೆ ನೀರು ಬಹಳವಿದ್ದವು. ಅಲ್ಲಿಗೆ ಹೋಗಿ ತಲೆಯಮೇಲಿನ ಗಂಟನ್ನು ಚೆಲ್ಲಿಕೊಟ್ಟ ಬಳಿಕ
“ಪೀಡೆ ತೊಲಗಿತು” ಎಂದು ಹೆಂಡತಿ ಸಮಾಧಾನದ ಉಸಿರು ಹಾಕಿದಳು.

ಅವರು ತಮ್ಮ ಕೆಲಸ ಮುಗಿಸುವ ಹೊತ್ತಿಗೆ ನಸುಕುಹರಿದು ಬೆಳಗಾಗತೊಡಗಿತು. ಗಂಡ ಹೆಂಡರು ಮನೆಯ ಹಾದಿ ಹಿಡಿದರು.

ಎಂಥದೋ ಮೌನದಲ್ಲಿ ಅರ್ಧದಾರಿ ಮರಳಿ ಬಂದ ಮೇಲೆ “ಮನಸಿನಂತೆ ಮಹಾದೇವ” ಎಂದಳು ಹೆಂಡತಿ.

“ಮನೆಗೆ ಹೋದ ಬಳಿಕ ತಿಳಿಯುವದು” ಗಂಡನ ಪಡಿನುಡಿ.

ಹೆಂಡತಿಗೆ ಅದೇನೋ ದಿಗಿಲು. ಮತ್ತೆ ಅದೇ ಮೌನದಲ್ಲಿ ಮನೆಗೆ ಬರುವಷ್ಟರಲ್ಲಿ ತನ್ನತ್ತೆಯೇ ಬಾಗಿನಿಂತು, ಬಾಗಿಲಮುಂದೆ ಕಸಗುಡಿಸುವದನ್ನು ಕಂಡು ತಬ್ಬಿಬ್ಬಾದಳು. ಆದರೆ ಯಾರಿಗೆ ಹೇಳುವುದು, ಏನೆಂದು ಹೇಳುವುದು. ಹೊಳೆಯ ಪಾಲಾದವಳು ಗಂಡನ ತಾಯಾಗಿರದೆ ತನ್ನ ತಾಯಿಯೇ ಆಗಿದ್ದಾಳೆಂದು
ಬಗೆದು ಒಳಗಿನದೊಳಗೇ ದುಃಖಿಸಿದಳು. ಆಡಿತೋರಿಸಲು ಸಾಧ್ಯವೇ ?

ಹೆಂಡತಿಯ ಅತ್ತೆಯನ್ನು ಹೊತ್ತೊಯ್ದು ಹೊಳೆಕಾಣಿಸುವುದನ್ನು ಬಿಟ್ಟು. ತನ್ನತ್ತೆಯನ್ನು ಹೊತ್ತೊಯ್ಯುವ ಪ್ರಸಂಗ ಬಂದುದು ಆಶ್ಚರ್ಯವೆಂದು ಬಗೆದ ಗಂಡನಿಗೂ ಅದರ ಕೀಲು ತಿಳಿದಿರಲಿಲ್ಲ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಮಾಡೆನು ನನ್ನ ದೊರೆಗಾಗಿ?
Next post ನಗೆ ಡಂಗುರ – ೧೦೧

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…