Home / ಕವನ / ಕವಿತೆ / ಕವಿ-ಕಾಲ

ಕವಿ-ಕಾಲ

ಸ್ಯಾದಸ್ತಿ ಸ್ಯಾನ್ನಾಸ್ತಿ ಸ್ಯಾದಸ್ತಿ ನಾಸ್ತೀತಿ- !
ಸ್ಯಾದವಕ್ತವ್ಯವೋ? ವಾಚಾಮಗೋಚರವೋ?
ಇಂದ್ರಿಯಾತೀತವೋ? ಖಲು ಜ್ಞಾನ ಬ್ರಹ್ಮವೋ?
ಆದ್ಯಂತ ರಹಿತ ನಾಕಾರ ಶೂನ್ಯಂ ದಿಟಂ
ಎಂಬೀನಿನಾದದಲಿ ತಥ್ಯಾಂಶವಿದೆ; ಸಹಜ!
ನಾ ಬ್ರಹ್ಮ ನೀ ಬ್ರಹ್ಮ; ಕಾಂಬುದೆಲ್ಲವು ಬ್ರಹ್ಮ!
ಬ್ರಹ್ಮನಿಂ ನಾ ಬೇರೆ; ಜೀವಾತ್ಮ ಪರಮಾತ್ಮ
ದ್ವೈತದಲಿ ದೇದೀಪ್ಯಮಾನವಾಗಿದೆ; ಸತ್ಯ;
ಸೊಲ್ಲಿನಲಿ ಶಬ್ದಾರ್ಥ ಬೆರೆದಂತೆ ಶಿವ-ಶಕ್ತಿ
ಒಂದಾಗಿ ಬೆಳಗಿಸಿವೆ ಜಡವ ಚೇತನಗೊಳಿಸಿ;
ಅಪರ ವಸ್ತುವ ನಂಬಿ ನಡೆವರೇ ಬಹಳ ಜನ
ಆದರೂ ನಾಸ್ತಿಕರು ತಲೆಯೆತ್ತಿ ನಿಂತಿಹರು
ಕಾಲ ಪ್ರವಾಹದಲಿ ಕೊಚ್ಚಿ ಹೋಗದೆ ಏಕೆ?
ಬುದ್ಧಿ ಬೆಳವಣಿಗೆಗಿದು ಬೆನ್ನೆಲುಬು; ಶಾಶ್ವತಂ!
ಭಾವನಾ ಸ್ವಾತಂತ್ರಕಿದು ಬೆಲೆಯು; ಇಲ್ಲದೊಡೆ
ಬರಿಕಾಡು, ಮಾನವ್ಯದಂತಸ್ತು ಮುಗಿಲಿನೊಲು
ವೈಶಾಲ್ಯ ಸಾಗರದ ಗಾಂಭೀರ್ಯಮಂ ತಳೆದು
ಚಾಚಿಹುದು ಸಪ್ತ ಸಾಗರದಾಚೆ-ಇದು ಊಹೆ!
ಊಹೆಯನು ಮೀರಿ ನಿಂತಿದೆ ತನ್ನ ಶಕ್ತಿಯನು
ಶೂನ್ಯದಲಿ ನೆರೆತುಂಬಿ; ಘನಘೋರ ಗಂಭೀರ
ನೋಟವಿದ ನೋಡೆ ಮನುಜನ ಚರ್ಮ ಚಕ್ಷುಗಳು
ಚೈತನ್ಯವಳಿದು ನಿಂತಿವೆ; ಧರ್ಮದಾರಿಯನು
ತೋರುವಡೆ ಸಾರ್ಥಕ್ಯ! ಧರ್ಮಹಾಳಾಗಿಹುದು
ಪ್ರೇಮಪ್ರೇತವ ತಬ್ಬಿ ವಿಕಟಾಟ್ಟಹಾಸದಲಿ-
ಕುಣಿಯುತಿದೆ!

ಓ! ಸಾಕು! ಕವಿವರ್ಯ ನಿನ್ನ ಘನ
ಪಾಂಡಿತ್ಯ ದರ್ಶನಂ; ಇದನಾರು ಓದುವರು?
ಕಾಲ ಬದಲಾಯಿಸಿದೆ; ಕೋಟಿಗಟ್ಟಳೆ ಜನರು
ಆನಂದದಿಂದೋದಿ ನಲಿದುಲಿವ ಸಾಹಿತ್ಯ
ನಿರ್ಮಿತಿಗೆ ನೀ ತೊಡಗು; ಇಲ್ಲದಿರೆ ನೀಸತ್ತು
ಸಾಹಿತ್ಯವನು ಕೊಂದು ನಾಡದ್ರೋಹವ ಬಗೆದು
ಮಣ್ಣಾಗಿ ಮಲಗುವೆಯೊ! ಇಂದಿನೀ ಓಘವನು
ದಿಟ್ಟಸೆಲೊ! ಕುರುಡನೊಲು ಹಗ್ಗವನು ಹೊಸೆದೊಡೇಂ
ಸಂದೀತು? ಕಾಲವನ್ನನುಸರಿಸಿ ಕವಿಸಾಗೆ
ಬುವಿ ಸ್ವರ್ಗ ವಿಷವಮೃತವಾದಂತೆ! ಇಲ್ಲದಿರೆ
ಕಾವ್ಯ ಶಬ್ದದ ಕಂತೆ, ಹಾಳೂರ ಬರಿಸಂತೆ!!
*****
ಬೆಂಗಳೂರು : ೧೯೪೪

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...