Home / ಕವನ / ಅನುವಾದ / ಗ್ರೀಕ್ ಹನಿಗವಿತೆಗಳು

ಗ್ರೀಕ್ ಹನಿಗವಿತೆಗಳು

ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ
ಆದ್ದರಿಂದಲೇ
ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ.
– ಅಜ್ಞಾತ

ಬದುಕಿದ್ದಾಗ ಸರ್ವಾಧಿಕಾರಿಗೆ
ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ
ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ
ಇರಲಿಲ್ಲ ಒಂದು ಕಲ್ಲು
– ಅಜ್ಞಾತ

ಕದ್ದೋಡಿ ಬಂದ ಡೆಮಿಟ್ರಿಯಸ್
ಕಾಳಗದಿಂದ
ಎಸೆದು ಭಲ್ಲೆ ಗುರಾಣಿ ನಿರ್ಲಜ್ಜೆಯಿಂದ.
ಬಾಗಿಲು ತೆರೆದ ತಾಯಿ
ಇರಿದು ಕೂಗಿದಳು “ನಾಯಿ!
ನಿನ್ನ ಧೈರ್ಯಕ್ಕೆ ಊರು ನಾಚೀತು, ಸಾಯಿ!’
– ಇರೀಸಿಯಸ್. ಕ್ರಿ.ಪೂ. ಒಂದನೆಯ ಶತಮಾನ

ಕೇಶ ದಂತ ಬಣ್ಣ ಸುಣ್ಣ
ಏನೆಲ್ಲ ಕೊಂಡೆ ಚೆನ್ನೆ
ಕೊಳ್ಳಬಹುದಿತ್ತಲ್ಲೆ ಅದರ ಬದಲು
ಭರ್ಜರಿ ಮುಖವನ್ನೆ!
– ಲ್ಯುಸಿಲಿಯಸ್, ಕ್ರಿ.ಪೂ. ಒಂದನೆಯ ಶತಮಾನ

ನಾನು ಮುತ್ತಿಟ್ಟಿದ್ದು ತಪ್ಪು, ಪಾಪ ಎನ್ನಿಸಿದರೆ ನಿನಗೆ
ಶಿಕ್ಷಿಸಿಬಿಡು ಕೂಡಲೆ
ಅದನ್ನು ಹಿಂತಿರುಗಿಸಿ ನನಗೆ
– ಸ್ಟ್ರ್ಯಾಟೊ. ಕ್ರಿ.ಪೂ. ಎರಡನೆಯ ಶತಮಾನ

ಪರಿಚಯ ಕೊಲ್ಲುತ್ತದೆ ಪ್ರೀತಿಯನ್ನ
ಇಲ್ಲ, ಕಾಲ ಮೆಲ್ಲುತ್ತದೆ ನಿಧಾನ
ಎರಡಕ್ಕೂ ತಗ್ಗದಿದ್ದರೆ ಬೆಂಕಿ
ಸ್ವಾಗತಿಸುತ್ತಾನೆ ಪ್ರೇಮಿ ನೇಣನ್ನ
– ಕ್ರೇಟ್ಸ್, ಕ್ರಿ.ಪೂ. ಎರಡನೆಯ ಶತಮಾನ

ವಾಗ್ಮಿಗಳೇ ಬನ್ನಿ ಈಗ
ಬೇಕಾದಷ್ಟು ವಾಕ್ಚಾತುರ್ಯ ತೋರಿ
ಮಹಾವಾಗ್ಮಿ ಆಂಫಿಲೋಕಸನ
ತುಟಿಯನ್ನು ಹೊಲಿದಿದ ಈ ಗೋರಿ
– ಸೇಂಟ್ ಗ್ರಿಗರಿ, ಕ್ರಿ.ಶ. ನಾಲ್ಕನೆಯ ಶತಮಾನ

ಬಡವನಿಗೆ ಸಾವೇ ಇಲ್ಲ.
ಏಕೆಂದರೆ ಅವನು ಬದುಕಿರಲೇ ಇಲ್ಲ;
ಉಸಿರಾಡಲಿಲ್ಲವೆ ಎಂದರೆ
ಅದು ಒಡಲೆನ್ನುವ ಗೋರಿಯಲ್ಲಿ
ಹಣವಿಲ್ಲದೆ ಸಾವು ಸಹ ಸಿಕ್ಕೀತು ಎಲ್ಲಿ?
– ಪಾಲಡಾಸ್, ಕ್ರಿ.ಶ. ಐದನೆಯ ಶತಮಾನ

ನಾಲಿಗೆ ಇಲ್ಲದ ಛಾವಣಿ
ಮಿದುಳಿಲ್ಲದ ಬೋಗುಣಿ
ಆಲಿಯಿರದ ಖಾಲಿಚಿಪ್ಪು
ತಳವಿಲ್ಲದ ಭರಣಿ
ಮೊನ್ನೆ ಹಾಗೆ ಉರಿದ ಬದುಕು
ಈಗ ಬರೀ ಬುರುಡ
ನಾಯಿ ಹೊಯ್ದು ಹೋದರು ಸಹ
ಕಚ್ಚಲಿಲ್ಲ ದವಡೆ!
– ಅಜ್ಞಾತ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...