ಮೂಲ: ಸುರೇಂದ್ರಸೇನ್ ಗುಪ್ತ
ನಾನು ಎನ್ನುವುದು ನನಗೆ
ನನ್ನಿಂದ ನನ್ನಲ್ಲಿ,
ನಾನೇ ಎಲ್ಲದರ ಶಿಖರ
ಉತ್ತಮ ಪುರುಷ ನಾನು
ಎತ್ತರದ ದನಿಯಲ್ಲಿ ಕೂಗಿಕೊಂಡೆ
ಸುತ್ತ ಇದ್ದವರೆಲ್ಲ ಬೆಚ್ಚಿ ನೋಡಿದರು
ದೇಶ ಹೊರಗಟ್ಟಿದ್ದ ದಂಗೆಕೋರನೊ ಎಂದು
ಚಕಿತರಾದರು ಕೆಲವರು
ಅಷ್ಟರಲ್ಲೇ
ಪುಟ್ಟ ಹುಡುಗಿಯೊಂದು
ಓಡಿ ಹತ್ತಿರ ಬಂದು
ಪಿಸುಗುಟ್ಟಿ ಹೇಳಿತು – “ಮಾಮ
ನಾನು ಎನ್ನುವುದು ಸರ್ವನಾಮ”
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.