Home / ಕವನ / ಕವಿತೆ / ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ
ಪಶ್ಚಿಮಾದ್ರಿಯ ಗವಿಯ ಸೇರುತಿಹನು;
ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ
ಲೋಗರೆಡೆ ಕೆಕ್ಕರಿಸಿ ನೋಡುತಿಹನು.

ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ
ಕಪ್ಪು ಬಾವುಟವೆತ್ತಿ ತೋರಿಸಿಹುದು;
ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ
ಹಾಡಿ ಜಯಜಯಕಾರ ಗೈಯುತಿಹುದು.

ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿಯು ಉರುಳಿ
ಪಡುವ ಕಡಲಿನ ಹಡಗವೇರುತಿರಲು
ಸಂಧ್ಯಾಸಮೀರನದೊ ಸ್ವಾತಂತ್ರ್‍ಯಸಂದೇಶ
ಹೊತ್ತು ನಾಲ್ದೆಸೆಗಳಲಿ ಹರಡುತಿಹನು.

ಬಿತ್ತರದ ಬಾನಿನಲಿ ಮತ್ತೆ ಜನತಾ ರಾಜ್ಯ
ಮೆರೆಯುತಿದೆ ಚಿಕ್ಕೆಯ ಪ್ರಜಾಪ್ರಭುತ್ವ:
ವ್ಯಕ್ತಿಶಕ್ತಿಯ ಗುಣವಿಕಾಸ ಪ್ರಕಾಶದಲಿ
ಜಗವ ಬೆಳಗುವುದದರ ಮೂಲತತ್ವ.

ಆಕಾಶಗಂಗೆ ಶಾಸನ ಸಭೆಯನೇರ್ಪಡಿಸಿ
ಮಂತ್ರಿಮಂಡಲವನ್ನು ನಿರ್ಮಿಸಿಹುದು;
ಬುಧ ಬೃಹಸ್ಪತಿ ಶುಕ್ರ ಶನಿ ಮಂಗಳಾದ್ಯರನು
ವಿವಿಧ ಮಂತ್ರಿಗಳಾಗಿ ನೇಮಿಸಿಹುದು.

ಕೃತ್ತಿಕೆಯು ಮೃಗಶಿರವು ಸಪ್ತರ್ಷಿ ಮಂಡಲವು
ರಾಜಕೀಯದ ಪಕ್ಷಪಂಗಡವೆನೆ
ದಕ್ಷಿಣೋತ್ತರ ಧ್ರುವದ ರಾಯಭಾರಿತ್ವದಲಿ
ಮುಖ್ಯಮಂತ್ರಿಯು ಚಂದ್ರನಾಗಿರುವನೆ?

ಬಿಡುಗಡೆಯ ಸೌಭಾಗ್ಯ ಪಡೆದ ಬಾನಿನೊಳಿಂತು
ಶಾಂತಿ ಸಮದರ್ಶಿತ್ವ ತಂಪಿನಿರುಳು
ಬಡವ ಬಲ್ಲಿದರೆನದೆ ಸಮತೆಯಲಿ ತಣಿಸಿಹುದು
ಸರ್ವರಿಗು ಸಮಪಾಲು ಬೆಳದಿಂಗಳು.

***

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...