Home / ಕವನ / ಕವಿತೆ / ಜೀನನ ಹಾಡು

ಜೀನನ ಹಾಡು

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ||
ಅದ್ದಽನ ಬೀಸಽ ಗಿದ್ದಽನ ಕುಟ್ಟ|
ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ||
ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ|
ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ||

ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ||
ಅಂಟಽದ ತೆಳೆಗ ಇಟ್ಟಾನೊ ಜೀನಾ|
ಅಂಟಽಕ ತೆಲಿಕೊಟ್ಟು ಮಲಗ್ಯಾನೊ ಜೀನಾ||

ಮುಕ್ಕ ಮಗಿ ನೀರಾ ಕಾಗಿ ಕುಡಿತಲ್ಲ|
ಕುಳ್ಳ್ಯಾಗಿನ ನುಚ್ಚ ಹದ್ದ ಒಯಿತಲ್ಲ|
ಇನ್ನ್ಯಾನ ಉಳ್ಳೇ ಇನ್ನ್ಯಾನ ತಿಲ್ಲೇ||
* * *

ಉದ ಉದ ಅಂತ ಹೋಗಿ ನಿಂತಾ`ಳೆಲ್ಲ’|
ಉದ ಉದ ಅಂದರ ನೀಡಾಽಣಿಲ್ಲ||

ಓಡ್ಯಾಡಿ ಪುಂಡಿ ಕಟಿಗಿ ಕಿತ್ತ್ಯಾನೊ ಜೀನಾ|
ಎಲ್ಲವನ ಬೆನ್ನ ಬೆನ್ನ ಶಳದಾನೊ ಜೀನಾ||

ಹೊಡಿಬ್ಯಾಡೊ ಜೀನಾ ಹೊಡಿಬ್ಯಾಡೊ ಜೀನಾ|
ಬಂದ ಹಾದೀ ಕೂಡಿ ಹೋಗತೇನೊ ಜೀನಾ||

ಜ್ವಾಳಽದ ಹೊಲಕ ಹೋಗ್ಯಾಳ ಎಲ್ಲ|
ಕಣ್ಣಾನ ಕಾಡೀಗಿ ಉದರ್‍ಸ್ಯಾಳೆಲ್ಲ||

ಹತ್ತಿಯ ಹೊಲಕ ಹೋದಾಳೆಲ್ಲಾ|
ಕೈಮ್ಯಾಲಿನ ಗಂಧಾ ಉದರ್‍ಸ್ಯಾಳೆಲ್ಲಾ||

ಗೋದೀಯ ಹೊಲಕ ಹೋದಾಳೆಲ್ಲಾ|
ಉಡಿಯಾನ ಭಂಡಾರ ಉದರ್‍ಸ್ಯಾಳೆಲ್ಲಾ||

ಕಡ್ಲೀಯ ಹೊಲಕ ಹೋದಾಳೆಲ್ಲಾ|
ಹಣಿಮ್ಯಾಲಿನ ಕೂಕಮ್ಮ ಉದರ್‍ಸ್ಯಾಳೆಲ್ಲಾ||
* * *

ಜ್ವಾಳಽದ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಜ್ವಾಳೆಲ್ಲಾ ಬತ್ತಗಾಡೀಗಿ||

ಹತ್ತೀಯ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲಾ||

ಗೋದೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್‌ತ ಖಂಡ್ಗ ಗೋದೆಲ್ಲಾ ಜೊಳ್ಳಹಾಯಿತಲ್ಲ||

ಕಡ್ಲೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್ತ್‌ ಖಂಡೆಗ್ಕಡ್ಲೆಲ್ಲಾ ಕೊಳ್ಳಿಹಾಯಿತಲ್ಲ||
* * *

ಕಂಬ್ಳೀಯ ಮುಸಕಾ ಹೊಡೆದಾನೊ ಜೀನಾ|
ಜಗಲೀಗಿ ತಲಿಕೊಟ್ಟು ಮಲಗ್ಯಾನೊ ಜೀನಾ||

ಉಣ್ಣೇಳೊ ಜೀನಾ ತಿನ್ನೇಳೊ ಜೀನಾ|
ಇನ್ನೇನ ಉಳ್ಳೇ ಇನ್ನೇನ ತಿಲ್ಲೆ||

ಹೆತ್ತ್ ಖಂಡಗ ಜ್ವಾಳೆಲ್ಲಾ ಬತ್ತ್‌ ಗಾಡೀಗೆ|
ಹೆತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲ||

ಹೆತ್ತ್‌ ಖಂಡಗ ಗೋದೆಲ್ಲಾ ಸೊಳ್ಳೆ ಹಾಯಿತಲ್ಲ|
ಹತ್ತ್‌ ಖಂಡಗ ಕಡ್ಲೆಲ್ಲಾ ಕೊಳ್ಳಿಹಾಯ್ತಲ್ಲ||
****
ಜೀನನ ಹಾಡು

ಇದೊಂದು ಯಕ್ಷಿಣಿಯ ಕಥೆ. ಜೀನನೊಬ್ಬನು ನೈವೇದ್ಯದ ಸಲುವಾಗಿ ತೀರ ತುಸು ಅಡಿಗೆಯನ್ನು ಮಾಡಿಸಿಕೊಂಡು ಎಳ್ಳಾಮಾಸೀ ದಿನ ಹೊಲಕ್ಕೆ ಹೋದನು. ಆ ಇದ್ದಷ್ಟು ಅಡಿಗೆಯನ್ನು ಗುಬ್ಬಿಕಾಗೆಗಳು ತಿಂದುಬಿಡುವವು. ಮೋರೆ ಒಣಗಿಸಿಕೊಂಡು ಕುಳಿತಿರುವ ಜೀನನ ಮುಂದೆ ಒಬ್ಬ ಯಕ್ಷಿಣಿಯು ಬಂದು `ನನ್ನ ನೈವೇದ್ಯವನ್ನು ನನಗೆ ಕೊಡು’ ಎಂದು ಕೇಳುವಳು. ಹೆಸಿದು ಹೊಟ್ಟೆ ಉರಿಯುತ್ತಿರುವ ಜೀನನು ಹಸಿದಂಟುಗಳಿಂದ ಅವಳನ್ನು
ಚೆನ್ನಾಗಿ ಥಳಿಸಿದನು. ಅವಳು ತನ್ನ ಮಂಗಲದ್ರವ್ಯ (ಅರಿಸಿಣ, ಕುಂಕುಮ್ಮ, ಕಾಡಿಗೆ, ಗಂಧ)ಗಳನ್ನು ಮಂತ್ರಿಸಿ ಅವನ ಬೆಳೆಗಳ ಮೇಲೆ ತೂರುವಳು. ಅದರಿಂದ ಆ ಬೆಳೆಗಳಿಗೆಲ್ಲ ಬಗೆಬಗೆಯ ರೋಗಗಳುಂಟಾಗಿ ಅವೆಲ್ಲವೂ ಕೆಟ್ಟುಹೋಗುತ್ತವೆ.

ಛಂದಸ್ಸು:- ಮಂದಾನಿಲ ರಗಳೆಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಅದ್ನಗಿದ್ನ=ಅರ್ಧ ಸೇರು, ಗಿರ್ಧ ಸೇರು. ಕುಳ್ಯಾಗ=ಚಿಕ್ಕ ಮಡಿಕೆಯಲ್ಲಿ. ಛರಗ=ಅಡವಿಯ ನೈವೇದ್ಯ. ಅಂಟ-ಮಂಚಿಕೆ. ಎಲ್ಲ=ಎಲ್ಲಮ್ಮ(ದೇವತೆ). ಬತ್ತಗಾಡಿಗೆ=ಜೋಳದ ತೆನೆಗಳಿಗೆ ಬೀಳುವ ಕಾಡಿಗೆರೋಗ. ಬಂಜಿ=ಹತ್ತಿಯ ಕಾಯಿಗಳಿಗೆ ಬೀಳುವ ರೋಗ. ಸೊಳ್ಳು ಹಾಯಿ=ಗೋದಿಯ ಬೆಳೆಯ ಮೇಲೆ ಇಟ್ಟಂಗಿಯಂತಹ ರೋಗ ಬೀಳುವುದರಿಂದ ಬೆಳೆಯೆಲ್ಲ ಸೊಳ್ಳಾಗುತ್ತದೆ. ಕೊಳ್ಳಿ=ಕಡಲೆಯಗಿಡೆಗಳನ್ನು ಒಣಗಿಸುವ ಕೆಂಪು ರೋಗ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...