ಏಕೆ ಮುರಳೀ
ನಿನ್ನ ಕೊಳಲು ನುಡಿಯದಾಗಿದೆ
ಸಪ್ತವರ್ಣ ಸಪ್ತಸ್ವರ
ಮಿಡಿಯದಾಗಿದೆ
ರಾಗನಂದನದಲೀ ಪಿಕವು
ರೆಕ್ಕೆ ಮುರಿದು ಅಡಗಿದೆ
ಭಾವತಂತಿ ಕಡಿದು ಹೋಗಿ
ರಾಗ ಸೆಲೆಯು ಉಡುಗಿದೆ
ತಂಪೆಲರಲಿ ಸಿಡಿಮದ್ದಿನ
ಗಂಧಕವು ತುಂಬಿದೆ
ತಣ್ಣೀರಲು ಕಣ್ಣೀರಿನ
ಲಾವಾರಸ ಬೆರೆತಿದೆ
ಓಟದಲ್ಲೇ ಕಾವ್ಯ ಉದಿಪ
ಕಾಲವೆಲ್ಲಿ ಹೋಗಿದೆ
ಕಿರುನಗೆಗಳು ದಾವಾನಲವಾಗಿ
ಕಾವ್ಯ ದಹಿಸಿದೆ
ಕಾವ್ಯ ಸೆಲೆಯ ನೂರುಬೇರು
ಕಮರಿ ಹೋಗಿ ಬಿಟ್ಟಿದೆ
ಧನಕನಕದ ಝಣಝಣದಲಿ
ಭಾವಲೋಕ ಬತ್ತಿದೆ
ಅಡ್ಡಗೋಡೆ ಕುಟ್ಟಿ ಕೆಡೆವ
ಕಾವ್ಯ ಹುಟ್ಟಬೇಕಿದೆ
ಮನುಜಕುಲವು ಒಂದೇ ಎಂಬ
ನಾದ ನುಡಿಸಲಾಗದೆ
ಮುರಳೀ ಓ ಮುರಳೀ
ಏಕೆ ಮುರಳಿ, ಎಕೆ ಮುರಳಿ
ಏಕೆ ಮುರಳೀ
ನಿನ್ನ ಕೊಳಲು
ಮೌನವಾಗಿದೆ?
೨೦೦೨
*****


















