Home / ಕವನ / ಕವಿತೆ / ಭೂಮಿ

ಭೂಮಿ

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ
ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ
ನಮ್ಮಮ್ಮ ಮಹತಾಯಿ ಭೂಮಿತಾಯೇ
ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ?
ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ
ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ
ಮೈಯ ಮಡಿಕೆ ಮಡಕೆಯ ಚಾಚಿ
ಶತಶತಮಾನದ ದಾಹ ಇಂಗದ ಬಾಯೇ
ಎಷ್ಟಾಯ್ತೆ ಮಳೆ ನಿನಗೆ ವರ್‍ಷಕೆಷ್ಟಾಯ್ತೆ!
ಮುಂಗಾರ ಮಿಂಚಿನಲಿ ಮಿಂಚುತ್ತ ನಡೆದವಳೇ
ಸ್ವಾತಿ ಚಿತ್ತಾ ಉತ್ತರಾ ಧನಿಷ್ಠಾ….
ಕೊನೆಗೊಮ್ಮೆ ಫಸಲಾಗಿ ಕೊಯ್ಲಾಗಿ
ಹಸಿರ ಚೆಲ್ಲಾಡಿ ಮೆರೆದವಳೇ
ಮತ್ತೇಕೆ ಬಾಯ್ ಬಾಯ್ ಬಿಡುವೆಯೇ?
ಮಾರ್‍ಗಶಿರಕೆಲೆಯುದುರಿಸಿ ಕೋಪ ತೋರುವೆಯೆ?
ವಸಂತನಾಗಮನಕೆಂದೇ ಕೋಗಿಲೆಯ
ಬಡಿದೆಬ್ಬಿಸಿ ಚೀರಿಸುವೆಯೆ?
ಮಲ್ಲಿಗೆ ಮಾವು
ಬದನೆ ಹೂವು ಎಲ್ಲ ಎಲ್ಲರಳಿ ನಗುತಿರಲು
ನೀ ಮಾತ್ರ ಬಾಯಾರಿ ಆಗಸಕೆ ಕಣ್ಣಾಗಿ ನಿಂತೆಯೇಕೆ?
ಮುಂಗಾರಿನ ಚಪಲ ನಿರೀಕ್ಷೆಯಲಿ
ಇಂದಾಗುವುತ್ಸವವ ಕೊಂದೆಯೇಕೆ?
ಬೆವರೊರೆಸಿಕೊಳ್ಳುತ್ತ ಶಪಿಸುತ್ತ ಚೀರುತ್ತ
ಬಿಸಿಲ ಬೇಗೆಯನಿಸಿ ದಣಿದೆಯೇಕೆ?


ಮಳೆಗಾಗಿ ಕಾಯುವ ಸೂಳೆ ಇಳೆ
ಎಷ್ಟು ಮಂದಿ ಇನಿಯರೇ ನಿನಗೆ
ಗೆದ್ದಾಳುವವರು? ಕೊಂದು ಬೆಂದು
ಮಡಿದು ಸ್ವರ್ಗ ಸೇರುವವರು?
ನಿನಗಾಗಿ ಹೊಡೆದಾಡುವವರು?
ಗೆದ್ದವರ ತೊತ್ತು ನೀನು ಸೆರಗ ಹಾಸಿ
ಕರೆವೆ ರಮಿಸಿ ರಮಣ ಎನುವೆ
ಯುಗಯುಗವುರುಳಿದರೂ ಕನ್ಯತ್ವ ಹರಿಯದವಳೇ
ಹಲವು ರಾಜರನು ನುಂಗಿ ನೀರು ಕುಡಿದವಳೇ
ರಕ್ತ ಸ್ನಾನದಲಿ ತೊಯ್ದವಳೇ ನವ ನವೋ
ನ್ಮೇಶ ಶಾಲಿನಿ ನವನವೋಲ್ಲೇಖನ ಶಾಲಿನೀ ಎಷ್ಟು
ಜನ ನಿನ್ನ ಬಗ್ಗೆ ಬರೆದರು ಮತ್ತೆ ಮತ್ತೆ ಬರೆದರು
ಎಷ್ಟು ಕೈ ಕತ್ತಿ ಹಿರಿದವು ಮತ್ತೆಷ್ಟು ಮಡಿದವು.|
ಸಿಂಹಾಸನ ಕೆತ್ತಿ ಕೂರಿಸಿ ಮೆರೆಸುವ
ಮುನಿಸು ತಿರುಗಿತೋ ಕಾಲಡಿಗೆ ಹಾಕಿ
ಹೊಸಕುವೆ ಮತ್ತೆ ಹೊಸ ಗಂಡನ
ಹುಡುಕುವೆ ವಲ್ಲಭಾ ಎನ್ನುವೆ
ಚಿರಯೌವನೀ ಚಿರ ಪ್ರಸವಿನೀ
ಮಾತಾ ನಮೋ ನಮಃ
ಎನೆಂದು ಹಾಡಲಿ ಎಷ್ಟೆಂದು ಹಾಡಲಿ
ನಿನ್ನ ಕಥನ?|


ಮಳೆಗಾಗಿ ಇಳೆಯೋ ಇಳೆಗಾಗಿ ಮಳೆಯೋ
ಬೀಜವೃಕ್ಷ ನ್ಯಾಯದ ಪರಿಧಿ ಬಲ್ಲ ಬ್ರಹ್ಮನಿಗೇ
ಸವಾಲು ಮುಗಿದೂ ಮುಗಿಯದ ಈ ಅವಿನಾಭಾವ
ಸಂಬಂಧ “ನನಗೂ ನಿನಗೂ ಅಂಟಿದ ನಂಟಿನ ಕೊನೆ
ಬಲ್ಲವರಾರು ಕಾಮಾಕ್ಷಿಯೇ” ಬೆದೆ ಬಂದಾಗೊಮ್ಮೆ
ಬೆರೆವೆ ಉಗಿ ಪೊರೆಯಾಗಿ ತೇಲುವ ಈ ನೆಲದ
ಧೂಳಿಗೇ ಗಟ್ಟಿಗೊಳುವೆ ಉಗಿ‌ಉಗಿ ಕೆಂಡವಾಗಿ ಉರಿದ
ಈ ಇಳೆಯ ಮೇಲೇ ತಂಪಾಗಿ ಸುರಿವೆ ಕಾದು ಕಾದು
ಕಾಯದಿದ್ದರೆ ಈ ಇಳೆ ಅಲ್ಲೇ ಇರುವೆ ಹಾಯಾಗಿ
ಬಿಳಿ ಮೋಡವಾಗಿ ತೇಲುವ ಮಳೆ ಕಾಯುವ ನೋಂಪಿ
ಹೊತ್ತ ನದಿಗಳೆಲ್ಲಾ ಕಾದು ಕಾದು ಈ ಇಳೆಯ
ಜನರನು ಸಾಯದಂತೆ ಕಾದು ಕಾದು ಅವರ
ನಾಗರಿಕತೆ ಸಂಸ್ಕೃತಿಗಳನ್ನು ಕಾದು ಕಾದು
ತಾವು ಮಾತ್ರ ಹರಿದು ಸಾಗರ ಸೇರಿವೆ ಅಲ್ಲಿಂದಲೇ
ಉಗಿಯಾಗಿ ಮೋಡವಾಗಿ ಮತ್ತೆ ಮಳೆಯಾಗಿ
ಇಳೆಗೇ ಸುರಿದಿವೆ|


ಅದ್ಯಾಕೇ ಹಾಗೆ ಗಡಗಡ ನಡುಗಿದೆ?
ಒಡಲೆಲ್ಲಾ ಬೇನೆ ಬೆಂಕಿಯೆ ನಿನಗೆ?
ಅಲ್ಲಲ್ಲಿ ಆಗಾಗ ಗಡಗಡನೆ ನಡುಗುತ್ತಿರುವ
ನಿನಗೆ ಮಾಘ ಮಾಸದ ಚಳಿಯೇನೇ
ಮಕ್ಕಳ ಮೇಲೆ ಕೋಪವೇನೇ
ಅಗೆದಗೆದು ನಿನ್ನೆಲ್ಲಾ ಚಿನ್ನ ಬೆಳ್ಳಿ ತೆಗೆ
ದರೆಂದು ಅತ್ತತ್ತು ನೀನು ಹಿಡಿದಿಟ್ಟ ಕಣ್ಣೀರನ್ನು
ತಣ್ಣೀರಾಗಿ ಕುಡಿದರೆಂದು ಬಾವಿಗಳ ತೋಡಿ
ತೋಡಿ ಗೋರಿದರೆಂದು ಕೋಪವ ಕಾರಲು ಬಾಯಿ
ಲ್ಲವೇ ನಿನಗೆ? ಹಕ್ಕಿಲ್ಲವೇ ನಿನ್ನ ಮಕ್ಕಳ ಮೇಲೆ
ಹೀಗೆ ನಂಬಿ ನಿಂತಿದ್ದ ಎಲ್ಲರನು ಎಲ್ಲವನು ಎತ್ತಿ
ಅಲ್ಲಾಡಿಸಿ ಬಿಸಾಡುವುದು? ಕಾಂಕ್ರೀಟಿನ
ಹುಡಿಯಡಿ ಕಿತ್ತ ಕೈಕಾಲು ಸಿಕ್ಕಿಸಿ ಎತ್ತಾ
ಕಿಸುವುದು? ಇದು ತರವೇ ನಿನಗೆ?
ಈ ಮಾರಣ ಹೋಮ?
ಸ್ವಂತ ಮಕ್ಕಳ ರಕ್ತ ಕಾಮ?
*****
ಶೂದ್ರ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...