Home / ಕವನ / ಕವಿತೆ / ಭೂಮಿ

ಭೂಮಿ

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ
ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ
ನಮ್ಮಮ್ಮ ಮಹತಾಯಿ ಭೂಮಿತಾಯೇ
ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ?
ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ
ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ
ಮೈಯ ಮಡಿಕೆ ಮಡಕೆಯ ಚಾಚಿ
ಶತಶತಮಾನದ ದಾಹ ಇಂಗದ ಬಾಯೇ
ಎಷ್ಟಾಯ್ತೆ ಮಳೆ ನಿನಗೆ ವರ್‍ಷಕೆಷ್ಟಾಯ್ತೆ!
ಮುಂಗಾರ ಮಿಂಚಿನಲಿ ಮಿಂಚುತ್ತ ನಡೆದವಳೇ
ಸ್ವಾತಿ ಚಿತ್ತಾ ಉತ್ತರಾ ಧನಿಷ್ಠಾ….
ಕೊನೆಗೊಮ್ಮೆ ಫಸಲಾಗಿ ಕೊಯ್ಲಾಗಿ
ಹಸಿರ ಚೆಲ್ಲಾಡಿ ಮೆರೆದವಳೇ
ಮತ್ತೇಕೆ ಬಾಯ್ ಬಾಯ್ ಬಿಡುವೆಯೇ?
ಮಾರ್‍ಗಶಿರಕೆಲೆಯುದುರಿಸಿ ಕೋಪ ತೋರುವೆಯೆ?
ವಸಂತನಾಗಮನಕೆಂದೇ ಕೋಗಿಲೆಯ
ಬಡಿದೆಬ್ಬಿಸಿ ಚೀರಿಸುವೆಯೆ?
ಮಲ್ಲಿಗೆ ಮಾವು
ಬದನೆ ಹೂವು ಎಲ್ಲ ಎಲ್ಲರಳಿ ನಗುತಿರಲು
ನೀ ಮಾತ್ರ ಬಾಯಾರಿ ಆಗಸಕೆ ಕಣ್ಣಾಗಿ ನಿಂತೆಯೇಕೆ?
ಮುಂಗಾರಿನ ಚಪಲ ನಿರೀಕ್ಷೆಯಲಿ
ಇಂದಾಗುವುತ್ಸವವ ಕೊಂದೆಯೇಕೆ?
ಬೆವರೊರೆಸಿಕೊಳ್ಳುತ್ತ ಶಪಿಸುತ್ತ ಚೀರುತ್ತ
ಬಿಸಿಲ ಬೇಗೆಯನಿಸಿ ದಣಿದೆಯೇಕೆ?


ಮಳೆಗಾಗಿ ಕಾಯುವ ಸೂಳೆ ಇಳೆ
ಎಷ್ಟು ಮಂದಿ ಇನಿಯರೇ ನಿನಗೆ
ಗೆದ್ದಾಳುವವರು? ಕೊಂದು ಬೆಂದು
ಮಡಿದು ಸ್ವರ್ಗ ಸೇರುವವರು?
ನಿನಗಾಗಿ ಹೊಡೆದಾಡುವವರು?
ಗೆದ್ದವರ ತೊತ್ತು ನೀನು ಸೆರಗ ಹಾಸಿ
ಕರೆವೆ ರಮಿಸಿ ರಮಣ ಎನುವೆ
ಯುಗಯುಗವುರುಳಿದರೂ ಕನ್ಯತ್ವ ಹರಿಯದವಳೇ
ಹಲವು ರಾಜರನು ನುಂಗಿ ನೀರು ಕುಡಿದವಳೇ
ರಕ್ತ ಸ್ನಾನದಲಿ ತೊಯ್ದವಳೇ ನವ ನವೋ
ನ್ಮೇಶ ಶಾಲಿನಿ ನವನವೋಲ್ಲೇಖನ ಶಾಲಿನೀ ಎಷ್ಟು
ಜನ ನಿನ್ನ ಬಗ್ಗೆ ಬರೆದರು ಮತ್ತೆ ಮತ್ತೆ ಬರೆದರು
ಎಷ್ಟು ಕೈ ಕತ್ತಿ ಹಿರಿದವು ಮತ್ತೆಷ್ಟು ಮಡಿದವು.|
ಸಿಂಹಾಸನ ಕೆತ್ತಿ ಕೂರಿಸಿ ಮೆರೆಸುವ
ಮುನಿಸು ತಿರುಗಿತೋ ಕಾಲಡಿಗೆ ಹಾಕಿ
ಹೊಸಕುವೆ ಮತ್ತೆ ಹೊಸ ಗಂಡನ
ಹುಡುಕುವೆ ವಲ್ಲಭಾ ಎನ್ನುವೆ
ಚಿರಯೌವನೀ ಚಿರ ಪ್ರಸವಿನೀ
ಮಾತಾ ನಮೋ ನಮಃ
ಎನೆಂದು ಹಾಡಲಿ ಎಷ್ಟೆಂದು ಹಾಡಲಿ
ನಿನ್ನ ಕಥನ?|


ಮಳೆಗಾಗಿ ಇಳೆಯೋ ಇಳೆಗಾಗಿ ಮಳೆಯೋ
ಬೀಜವೃಕ್ಷ ನ್ಯಾಯದ ಪರಿಧಿ ಬಲ್ಲ ಬ್ರಹ್ಮನಿಗೇ
ಸವಾಲು ಮುಗಿದೂ ಮುಗಿಯದ ಈ ಅವಿನಾಭಾವ
ಸಂಬಂಧ “ನನಗೂ ನಿನಗೂ ಅಂಟಿದ ನಂಟಿನ ಕೊನೆ
ಬಲ್ಲವರಾರು ಕಾಮಾಕ್ಷಿಯೇ” ಬೆದೆ ಬಂದಾಗೊಮ್ಮೆ
ಬೆರೆವೆ ಉಗಿ ಪೊರೆಯಾಗಿ ತೇಲುವ ಈ ನೆಲದ
ಧೂಳಿಗೇ ಗಟ್ಟಿಗೊಳುವೆ ಉಗಿ‌ಉಗಿ ಕೆಂಡವಾಗಿ ಉರಿದ
ಈ ಇಳೆಯ ಮೇಲೇ ತಂಪಾಗಿ ಸುರಿವೆ ಕಾದು ಕಾದು
ಕಾಯದಿದ್ದರೆ ಈ ಇಳೆ ಅಲ್ಲೇ ಇರುವೆ ಹಾಯಾಗಿ
ಬಿಳಿ ಮೋಡವಾಗಿ ತೇಲುವ ಮಳೆ ಕಾಯುವ ನೋಂಪಿ
ಹೊತ್ತ ನದಿಗಳೆಲ್ಲಾ ಕಾದು ಕಾದು ಈ ಇಳೆಯ
ಜನರನು ಸಾಯದಂತೆ ಕಾದು ಕಾದು ಅವರ
ನಾಗರಿಕತೆ ಸಂಸ್ಕೃತಿಗಳನ್ನು ಕಾದು ಕಾದು
ತಾವು ಮಾತ್ರ ಹರಿದು ಸಾಗರ ಸೇರಿವೆ ಅಲ್ಲಿಂದಲೇ
ಉಗಿಯಾಗಿ ಮೋಡವಾಗಿ ಮತ್ತೆ ಮಳೆಯಾಗಿ
ಇಳೆಗೇ ಸುರಿದಿವೆ|


ಅದ್ಯಾಕೇ ಹಾಗೆ ಗಡಗಡ ನಡುಗಿದೆ?
ಒಡಲೆಲ್ಲಾ ಬೇನೆ ಬೆಂಕಿಯೆ ನಿನಗೆ?
ಅಲ್ಲಲ್ಲಿ ಆಗಾಗ ಗಡಗಡನೆ ನಡುಗುತ್ತಿರುವ
ನಿನಗೆ ಮಾಘ ಮಾಸದ ಚಳಿಯೇನೇ
ಮಕ್ಕಳ ಮೇಲೆ ಕೋಪವೇನೇ
ಅಗೆದಗೆದು ನಿನ್ನೆಲ್ಲಾ ಚಿನ್ನ ಬೆಳ್ಳಿ ತೆಗೆ
ದರೆಂದು ಅತ್ತತ್ತು ನೀನು ಹಿಡಿದಿಟ್ಟ ಕಣ್ಣೀರನ್ನು
ತಣ್ಣೀರಾಗಿ ಕುಡಿದರೆಂದು ಬಾವಿಗಳ ತೋಡಿ
ತೋಡಿ ಗೋರಿದರೆಂದು ಕೋಪವ ಕಾರಲು ಬಾಯಿ
ಲ್ಲವೇ ನಿನಗೆ? ಹಕ್ಕಿಲ್ಲವೇ ನಿನ್ನ ಮಕ್ಕಳ ಮೇಲೆ
ಹೀಗೆ ನಂಬಿ ನಿಂತಿದ್ದ ಎಲ್ಲರನು ಎಲ್ಲವನು ಎತ್ತಿ
ಅಲ್ಲಾಡಿಸಿ ಬಿಸಾಡುವುದು? ಕಾಂಕ್ರೀಟಿನ
ಹುಡಿಯಡಿ ಕಿತ್ತ ಕೈಕಾಲು ಸಿಕ್ಕಿಸಿ ಎತ್ತಾ
ಕಿಸುವುದು? ಇದು ತರವೇ ನಿನಗೆ?
ಈ ಮಾರಣ ಹೋಮ?
ಸ್ವಂತ ಮಕ್ಕಳ ರಕ್ತ ಕಾಮ?
*****
ಶೂದ್ರ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...