Home / ಕವನ / ಕವಿತೆ / ಭೂಮಿ

ಭೂಮಿ

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ
ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ
ನಮ್ಮಮ್ಮ ಮಹತಾಯಿ ಭೂಮಿತಾಯೇ
ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ?
ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ
ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ
ಮೈಯ ಮಡಿಕೆ ಮಡಕೆಯ ಚಾಚಿ
ಶತಶತಮಾನದ ದಾಹ ಇಂಗದ ಬಾಯೇ
ಎಷ್ಟಾಯ್ತೆ ಮಳೆ ನಿನಗೆ ವರ್‍ಷಕೆಷ್ಟಾಯ್ತೆ!
ಮುಂಗಾರ ಮಿಂಚಿನಲಿ ಮಿಂಚುತ್ತ ನಡೆದವಳೇ
ಸ್ವಾತಿ ಚಿತ್ತಾ ಉತ್ತರಾ ಧನಿಷ್ಠಾ….
ಕೊನೆಗೊಮ್ಮೆ ಫಸಲಾಗಿ ಕೊಯ್ಲಾಗಿ
ಹಸಿರ ಚೆಲ್ಲಾಡಿ ಮೆರೆದವಳೇ
ಮತ್ತೇಕೆ ಬಾಯ್ ಬಾಯ್ ಬಿಡುವೆಯೇ?
ಮಾರ್‍ಗಶಿರಕೆಲೆಯುದುರಿಸಿ ಕೋಪ ತೋರುವೆಯೆ?
ವಸಂತನಾಗಮನಕೆಂದೇ ಕೋಗಿಲೆಯ
ಬಡಿದೆಬ್ಬಿಸಿ ಚೀರಿಸುವೆಯೆ?
ಮಲ್ಲಿಗೆ ಮಾವು
ಬದನೆ ಹೂವು ಎಲ್ಲ ಎಲ್ಲರಳಿ ನಗುತಿರಲು
ನೀ ಮಾತ್ರ ಬಾಯಾರಿ ಆಗಸಕೆ ಕಣ್ಣಾಗಿ ನಿಂತೆಯೇಕೆ?
ಮುಂಗಾರಿನ ಚಪಲ ನಿರೀಕ್ಷೆಯಲಿ
ಇಂದಾಗುವುತ್ಸವವ ಕೊಂದೆಯೇಕೆ?
ಬೆವರೊರೆಸಿಕೊಳ್ಳುತ್ತ ಶಪಿಸುತ್ತ ಚೀರುತ್ತ
ಬಿಸಿಲ ಬೇಗೆಯನಿಸಿ ದಣಿದೆಯೇಕೆ?


ಮಳೆಗಾಗಿ ಕಾಯುವ ಸೂಳೆ ಇಳೆ
ಎಷ್ಟು ಮಂದಿ ಇನಿಯರೇ ನಿನಗೆ
ಗೆದ್ದಾಳುವವರು? ಕೊಂದು ಬೆಂದು
ಮಡಿದು ಸ್ವರ್ಗ ಸೇರುವವರು?
ನಿನಗಾಗಿ ಹೊಡೆದಾಡುವವರು?
ಗೆದ್ದವರ ತೊತ್ತು ನೀನು ಸೆರಗ ಹಾಸಿ
ಕರೆವೆ ರಮಿಸಿ ರಮಣ ಎನುವೆ
ಯುಗಯುಗವುರುಳಿದರೂ ಕನ್ಯತ್ವ ಹರಿಯದವಳೇ
ಹಲವು ರಾಜರನು ನುಂಗಿ ನೀರು ಕುಡಿದವಳೇ
ರಕ್ತ ಸ್ನಾನದಲಿ ತೊಯ್ದವಳೇ ನವ ನವೋ
ನ್ಮೇಶ ಶಾಲಿನಿ ನವನವೋಲ್ಲೇಖನ ಶಾಲಿನೀ ಎಷ್ಟು
ಜನ ನಿನ್ನ ಬಗ್ಗೆ ಬರೆದರು ಮತ್ತೆ ಮತ್ತೆ ಬರೆದರು
ಎಷ್ಟು ಕೈ ಕತ್ತಿ ಹಿರಿದವು ಮತ್ತೆಷ್ಟು ಮಡಿದವು.|
ಸಿಂಹಾಸನ ಕೆತ್ತಿ ಕೂರಿಸಿ ಮೆರೆಸುವ
ಮುನಿಸು ತಿರುಗಿತೋ ಕಾಲಡಿಗೆ ಹಾಕಿ
ಹೊಸಕುವೆ ಮತ್ತೆ ಹೊಸ ಗಂಡನ
ಹುಡುಕುವೆ ವಲ್ಲಭಾ ಎನ್ನುವೆ
ಚಿರಯೌವನೀ ಚಿರ ಪ್ರಸವಿನೀ
ಮಾತಾ ನಮೋ ನಮಃ
ಎನೆಂದು ಹಾಡಲಿ ಎಷ್ಟೆಂದು ಹಾಡಲಿ
ನಿನ್ನ ಕಥನ?|


ಮಳೆಗಾಗಿ ಇಳೆಯೋ ಇಳೆಗಾಗಿ ಮಳೆಯೋ
ಬೀಜವೃಕ್ಷ ನ್ಯಾಯದ ಪರಿಧಿ ಬಲ್ಲ ಬ್ರಹ್ಮನಿಗೇ
ಸವಾಲು ಮುಗಿದೂ ಮುಗಿಯದ ಈ ಅವಿನಾಭಾವ
ಸಂಬಂಧ “ನನಗೂ ನಿನಗೂ ಅಂಟಿದ ನಂಟಿನ ಕೊನೆ
ಬಲ್ಲವರಾರು ಕಾಮಾಕ್ಷಿಯೇ” ಬೆದೆ ಬಂದಾಗೊಮ್ಮೆ
ಬೆರೆವೆ ಉಗಿ ಪೊರೆಯಾಗಿ ತೇಲುವ ಈ ನೆಲದ
ಧೂಳಿಗೇ ಗಟ್ಟಿಗೊಳುವೆ ಉಗಿ‌ಉಗಿ ಕೆಂಡವಾಗಿ ಉರಿದ
ಈ ಇಳೆಯ ಮೇಲೇ ತಂಪಾಗಿ ಸುರಿವೆ ಕಾದು ಕಾದು
ಕಾಯದಿದ್ದರೆ ಈ ಇಳೆ ಅಲ್ಲೇ ಇರುವೆ ಹಾಯಾಗಿ
ಬಿಳಿ ಮೋಡವಾಗಿ ತೇಲುವ ಮಳೆ ಕಾಯುವ ನೋಂಪಿ
ಹೊತ್ತ ನದಿಗಳೆಲ್ಲಾ ಕಾದು ಕಾದು ಈ ಇಳೆಯ
ಜನರನು ಸಾಯದಂತೆ ಕಾದು ಕಾದು ಅವರ
ನಾಗರಿಕತೆ ಸಂಸ್ಕೃತಿಗಳನ್ನು ಕಾದು ಕಾದು
ತಾವು ಮಾತ್ರ ಹರಿದು ಸಾಗರ ಸೇರಿವೆ ಅಲ್ಲಿಂದಲೇ
ಉಗಿಯಾಗಿ ಮೋಡವಾಗಿ ಮತ್ತೆ ಮಳೆಯಾಗಿ
ಇಳೆಗೇ ಸುರಿದಿವೆ|


ಅದ್ಯಾಕೇ ಹಾಗೆ ಗಡಗಡ ನಡುಗಿದೆ?
ಒಡಲೆಲ್ಲಾ ಬೇನೆ ಬೆಂಕಿಯೆ ನಿನಗೆ?
ಅಲ್ಲಲ್ಲಿ ಆಗಾಗ ಗಡಗಡನೆ ನಡುಗುತ್ತಿರುವ
ನಿನಗೆ ಮಾಘ ಮಾಸದ ಚಳಿಯೇನೇ
ಮಕ್ಕಳ ಮೇಲೆ ಕೋಪವೇನೇ
ಅಗೆದಗೆದು ನಿನ್ನೆಲ್ಲಾ ಚಿನ್ನ ಬೆಳ್ಳಿ ತೆಗೆ
ದರೆಂದು ಅತ್ತತ್ತು ನೀನು ಹಿಡಿದಿಟ್ಟ ಕಣ್ಣೀರನ್ನು
ತಣ್ಣೀರಾಗಿ ಕುಡಿದರೆಂದು ಬಾವಿಗಳ ತೋಡಿ
ತೋಡಿ ಗೋರಿದರೆಂದು ಕೋಪವ ಕಾರಲು ಬಾಯಿ
ಲ್ಲವೇ ನಿನಗೆ? ಹಕ್ಕಿಲ್ಲವೇ ನಿನ್ನ ಮಕ್ಕಳ ಮೇಲೆ
ಹೀಗೆ ನಂಬಿ ನಿಂತಿದ್ದ ಎಲ್ಲರನು ಎಲ್ಲವನು ಎತ್ತಿ
ಅಲ್ಲಾಡಿಸಿ ಬಿಸಾಡುವುದು? ಕಾಂಕ್ರೀಟಿನ
ಹುಡಿಯಡಿ ಕಿತ್ತ ಕೈಕಾಲು ಸಿಕ್ಕಿಸಿ ಎತ್ತಾ
ಕಿಸುವುದು? ಇದು ತರವೇ ನಿನಗೆ?
ಈ ಮಾರಣ ಹೋಮ?
ಸ್ವಂತ ಮಕ್ಕಳ ರಕ್ತ ಕಾಮ?
*****
ಶೂದ್ರ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...