Home / ಕವನ / ಕವಿತೆ / ಭೂಮಿ

ಭೂಮಿ

ಗುಂಡಗುರುಳಿ ದುಂಡಾಗಿ ಹೊಗೆ ಬೆಂಕಿ
ಒಳಗೇ ಅಮುಕಿ ಹಸಿರು ಚೆಲ್ಲುತ ನಿಂತ ತಾಯೇ
ನಮ್ಮಮ್ಮ ಮಹತಾಯಿ ಭೂಮಿತಾಯೇ
ಹಸಿರಿನ ಪಸೆ ಎಷ್ಟು ಹೊತ್ತೇ ನಿನಗೆ?
ಬೆಂಕಿಯುಗುಳಿ ಒಳಗಿನ ಕಿಚ್ಚ ಹೊರ ಚೆಲ್ಲಿ
ಕಾರಿಕೊಳ್ಳುವ ಬಾಯೇ ನಿನ್ನ ಒಣಗಿದ
ಮೈಯ ಮಡಿಕೆ ಮಡಕೆಯ ಚಾಚಿ
ಶತಶತಮಾನದ ದಾಹ ಇಂಗದ ಬಾಯೇ
ಎಷ್ಟಾಯ್ತೆ ಮಳೆ ನಿನಗೆ ವರ್‍ಷಕೆಷ್ಟಾಯ್ತೆ!
ಮುಂಗಾರ ಮಿಂಚಿನಲಿ ಮಿಂಚುತ್ತ ನಡೆದವಳೇ
ಸ್ವಾತಿ ಚಿತ್ತಾ ಉತ್ತರಾ ಧನಿಷ್ಠಾ….
ಕೊನೆಗೊಮ್ಮೆ ಫಸಲಾಗಿ ಕೊಯ್ಲಾಗಿ
ಹಸಿರ ಚೆಲ್ಲಾಡಿ ಮೆರೆದವಳೇ
ಮತ್ತೇಕೆ ಬಾಯ್ ಬಾಯ್ ಬಿಡುವೆಯೇ?
ಮಾರ್‍ಗಶಿರಕೆಲೆಯುದುರಿಸಿ ಕೋಪ ತೋರುವೆಯೆ?
ವಸಂತನಾಗಮನಕೆಂದೇ ಕೋಗಿಲೆಯ
ಬಡಿದೆಬ್ಬಿಸಿ ಚೀರಿಸುವೆಯೆ?
ಮಲ್ಲಿಗೆ ಮಾವು
ಬದನೆ ಹೂವು ಎಲ್ಲ ಎಲ್ಲರಳಿ ನಗುತಿರಲು
ನೀ ಮಾತ್ರ ಬಾಯಾರಿ ಆಗಸಕೆ ಕಣ್ಣಾಗಿ ನಿಂತೆಯೇಕೆ?
ಮುಂಗಾರಿನ ಚಪಲ ನಿರೀಕ್ಷೆಯಲಿ
ಇಂದಾಗುವುತ್ಸವವ ಕೊಂದೆಯೇಕೆ?
ಬೆವರೊರೆಸಿಕೊಳ್ಳುತ್ತ ಶಪಿಸುತ್ತ ಚೀರುತ್ತ
ಬಿಸಿಲ ಬೇಗೆಯನಿಸಿ ದಣಿದೆಯೇಕೆ?


ಮಳೆಗಾಗಿ ಕಾಯುವ ಸೂಳೆ ಇಳೆ
ಎಷ್ಟು ಮಂದಿ ಇನಿಯರೇ ನಿನಗೆ
ಗೆದ್ದಾಳುವವರು? ಕೊಂದು ಬೆಂದು
ಮಡಿದು ಸ್ವರ್ಗ ಸೇರುವವರು?
ನಿನಗಾಗಿ ಹೊಡೆದಾಡುವವರು?
ಗೆದ್ದವರ ತೊತ್ತು ನೀನು ಸೆರಗ ಹಾಸಿ
ಕರೆವೆ ರಮಿಸಿ ರಮಣ ಎನುವೆ
ಯುಗಯುಗವುರುಳಿದರೂ ಕನ್ಯತ್ವ ಹರಿಯದವಳೇ
ಹಲವು ರಾಜರನು ನುಂಗಿ ನೀರು ಕುಡಿದವಳೇ
ರಕ್ತ ಸ್ನಾನದಲಿ ತೊಯ್ದವಳೇ ನವ ನವೋ
ನ್ಮೇಶ ಶಾಲಿನಿ ನವನವೋಲ್ಲೇಖನ ಶಾಲಿನೀ ಎಷ್ಟು
ಜನ ನಿನ್ನ ಬಗ್ಗೆ ಬರೆದರು ಮತ್ತೆ ಮತ್ತೆ ಬರೆದರು
ಎಷ್ಟು ಕೈ ಕತ್ತಿ ಹಿರಿದವು ಮತ್ತೆಷ್ಟು ಮಡಿದವು.|
ಸಿಂಹಾಸನ ಕೆತ್ತಿ ಕೂರಿಸಿ ಮೆರೆಸುವ
ಮುನಿಸು ತಿರುಗಿತೋ ಕಾಲಡಿಗೆ ಹಾಕಿ
ಹೊಸಕುವೆ ಮತ್ತೆ ಹೊಸ ಗಂಡನ
ಹುಡುಕುವೆ ವಲ್ಲಭಾ ಎನ್ನುವೆ
ಚಿರಯೌವನೀ ಚಿರ ಪ್ರಸವಿನೀ
ಮಾತಾ ನಮೋ ನಮಃ
ಎನೆಂದು ಹಾಡಲಿ ಎಷ್ಟೆಂದು ಹಾಡಲಿ
ನಿನ್ನ ಕಥನ?|


ಮಳೆಗಾಗಿ ಇಳೆಯೋ ಇಳೆಗಾಗಿ ಮಳೆಯೋ
ಬೀಜವೃಕ್ಷ ನ್ಯಾಯದ ಪರಿಧಿ ಬಲ್ಲ ಬ್ರಹ್ಮನಿಗೇ
ಸವಾಲು ಮುಗಿದೂ ಮುಗಿಯದ ಈ ಅವಿನಾಭಾವ
ಸಂಬಂಧ “ನನಗೂ ನಿನಗೂ ಅಂಟಿದ ನಂಟಿನ ಕೊನೆ
ಬಲ್ಲವರಾರು ಕಾಮಾಕ್ಷಿಯೇ” ಬೆದೆ ಬಂದಾಗೊಮ್ಮೆ
ಬೆರೆವೆ ಉಗಿ ಪೊರೆಯಾಗಿ ತೇಲುವ ಈ ನೆಲದ
ಧೂಳಿಗೇ ಗಟ್ಟಿಗೊಳುವೆ ಉಗಿ‌ಉಗಿ ಕೆಂಡವಾಗಿ ಉರಿದ
ಈ ಇಳೆಯ ಮೇಲೇ ತಂಪಾಗಿ ಸುರಿವೆ ಕಾದು ಕಾದು
ಕಾಯದಿದ್ದರೆ ಈ ಇಳೆ ಅಲ್ಲೇ ಇರುವೆ ಹಾಯಾಗಿ
ಬಿಳಿ ಮೋಡವಾಗಿ ತೇಲುವ ಮಳೆ ಕಾಯುವ ನೋಂಪಿ
ಹೊತ್ತ ನದಿಗಳೆಲ್ಲಾ ಕಾದು ಕಾದು ಈ ಇಳೆಯ
ಜನರನು ಸಾಯದಂತೆ ಕಾದು ಕಾದು ಅವರ
ನಾಗರಿಕತೆ ಸಂಸ್ಕೃತಿಗಳನ್ನು ಕಾದು ಕಾದು
ತಾವು ಮಾತ್ರ ಹರಿದು ಸಾಗರ ಸೇರಿವೆ ಅಲ್ಲಿಂದಲೇ
ಉಗಿಯಾಗಿ ಮೋಡವಾಗಿ ಮತ್ತೆ ಮಳೆಯಾಗಿ
ಇಳೆಗೇ ಸುರಿದಿವೆ|


ಅದ್ಯಾಕೇ ಹಾಗೆ ಗಡಗಡ ನಡುಗಿದೆ?
ಒಡಲೆಲ್ಲಾ ಬೇನೆ ಬೆಂಕಿಯೆ ನಿನಗೆ?
ಅಲ್ಲಲ್ಲಿ ಆಗಾಗ ಗಡಗಡನೆ ನಡುಗುತ್ತಿರುವ
ನಿನಗೆ ಮಾಘ ಮಾಸದ ಚಳಿಯೇನೇ
ಮಕ್ಕಳ ಮೇಲೆ ಕೋಪವೇನೇ
ಅಗೆದಗೆದು ನಿನ್ನೆಲ್ಲಾ ಚಿನ್ನ ಬೆಳ್ಳಿ ತೆಗೆ
ದರೆಂದು ಅತ್ತತ್ತು ನೀನು ಹಿಡಿದಿಟ್ಟ ಕಣ್ಣೀರನ್ನು
ತಣ್ಣೀರಾಗಿ ಕುಡಿದರೆಂದು ಬಾವಿಗಳ ತೋಡಿ
ತೋಡಿ ಗೋರಿದರೆಂದು ಕೋಪವ ಕಾರಲು ಬಾಯಿ
ಲ್ಲವೇ ನಿನಗೆ? ಹಕ್ಕಿಲ್ಲವೇ ನಿನ್ನ ಮಕ್ಕಳ ಮೇಲೆ
ಹೀಗೆ ನಂಬಿ ನಿಂತಿದ್ದ ಎಲ್ಲರನು ಎಲ್ಲವನು ಎತ್ತಿ
ಅಲ್ಲಾಡಿಸಿ ಬಿಸಾಡುವುದು? ಕಾಂಕ್ರೀಟಿನ
ಹುಡಿಯಡಿ ಕಿತ್ತ ಕೈಕಾಲು ಸಿಕ್ಕಿಸಿ ಎತ್ತಾ
ಕಿಸುವುದು? ಇದು ತರವೇ ನಿನಗೆ?
ಈ ಮಾರಣ ಹೋಮ?
ಸ್ವಂತ ಮಕ್ಕಳ ರಕ್ತ ಕಾಮ?
*****
ಶೂದ್ರ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...