Home / ಕವನ / ಕವಿತೆ / ಬೆಂಗಳೂರು ’೭೨

ಬೆಂಗಳೂರು ’೭೨

ಪರಚಿಕೊಂಡ ಪರಿಚಯದ ರಸ್ತೆ
ಉರುಳು
ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು
ಬದುಕು ಬಿರುಕು
ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ
ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ
ಕಾಲ
ಚಕ್ರದ
ಕೆಳಗೆ ಕರುಳ ಕಣ್ಣೊಡೆದು ಕೆಂಪು ಭೂಪಟ
ಬಿಡಿಸುತ್ತವೆ; ಇಲ್ಲಿ ಸಲ್ಲದೆ ಅಲ್ಲಿ ಸಲ್ಲುತ್ತವೆ.

ಇಲ್ಲಿ- ಪ್ರಜಾಪ್ರಭುತ್ವಕ್ಕೆ ಹೆಸರಾದ ಫುಟ್‍ಪಾತಿನಲ್ಲಿ
ಕಾಲುಗಳು ಇಂಟುಮಾರ್ಕು ಹಾಕುತ್ತವೆ ಸತತ.
ಮಧ್ಯೆ ಹರಿಯುವ ಮೀನು ಮೊಸಳೆಗಳ ಹೊಳೆ
-ಯಾಚೆ ದಡಕ್ಕೆ ಮತ್ತಕಣ್ಣು ಮುಕ್ಕಳಿಸಿ ಸುತ್ತುತ್ತವೆ ವೃತ್ತ.
ದಡದಿಂದ ದಡಕ್ಕೆ ಬ್ರಿಡ್ಜು ಕಟ್ಟಿ ನಿಂತಕಡೆಯೆ ಬದುಕಿ
-ನ ಬ್ಯಾಡ್ಜು ಧರಿಸಿ ಕೈಚಾಚಿ ಬರುತ್ತ
ಮಧ್ಯ ಹೊಳೆಯಲ್ಲಿ ತಣ್ಣನೆಯ ನೀರಲ್ಲಿ
ಬೆಚ್ಚನೆಯ ಬಂಧನದಲ್ಲಿ ಮತ್ತೆ
ಚುಂಬನದಲ್ಲಿ ಡೈವೊರ್‍ಸಿಗೆ ಸಹಿಮಾಡುತ್ತವೆ.

ಗುಪ್ತ
ಮಾರ್ಕೆಟ್ಟಿನ ಮುಂದೆ ಸುಪ್ತ ಚಿತ್ತ ಬಿಚ್ಚುತ್ತವೆ
ಅತ್ತ ಇತ್ತ ಸುತ್ತಮುತ್ತ ಮೆಲುಕುತ್ತ
ಆ ಈ ಭಾಷೆಗಳ ಕ್ರಾಸ್ ಬ್ರೀಡಿನಲ್ಲಿ
ಹೊಸದೊಂದು ಹುಟ್ಟಿಸುತ್ತವೆ; ಕಿವಿಬೆದರಿಸುತ್ತವೆ
ಅಲಂಕಾರದಲ್ಲಿ ಮುಳುಗಿ ಕಲ್ಪನಾಕ್ಕೆ ಪ್ರಭಾತ್ ಭೇರಿಹಾಕಿ
ಮೇನಕಾ ಮೈಯಲ್ಲಿ ಬಾಳು ಬರೆಯುತ್ತ
ಹಿಮಾಲಯ ಹತ್ತುತ್ತವೆ; ಹಡೆಯುತ್ತವೆ.

ಇಲ್ಲಿ ಈ ಸಿಟಿ
ಮಾರ್ಕೆಟ್ಟಿನಲ್ಲಿ ಮೀನುಬಲೆ ಮಾತು
ಬಿಡಿಸಲಾಗದ ಜಟಿಲತೆ ಜಂಜಾಟ ಜೀಕು
ಅಮಾವಾಸ್ಯೆಯಲ್ಲಿ ಬೆಳದಿಂಗಳ ಬಯಕೆ
ಬೆನ್ನಮೇಲೆ ಹೊತ್ತು ಬೆವರು ಬಸಿಯುತ್ತವೆ.
ಬಿಡುವು ಸಿಕ್ಕಾಗ ಸಿಳ್ಳು ಸಂಭ್ರಮದಲ್ಲಿ ಬಣ್ಣಕ್ಕೆ ಕಣ್ಣು
ಕೆನೆಸುತ್ತ ಕಳ್ಳು ಕುಡಿಯುತ್ತವೆ; ಸ್ವರ್ಗದ ಬಾಗಿಲಿಗೆ ಡಿಕ್ಕಿ
ಹೊಡೆದು ದುಡುಮ್ಮನೆ ಬೀಳುತ್ತವೆ.
ಸಿಳ್ಳು ಕಳ್ಳುಗಳ ದಡದಲ್ಲಿ ಮಾಮೂಲು ಮುಳ್ಳುಗಳು
ಬಿಲದಲ್ಲಿದ್ದು ನೆಲದ ನೈಜವಾಸನೆ ಕುಡಿತ ಕಡಿತಗಳು
ಬಾಯಿಗೆ ಬೆಣೆ ಬಡಿಸಿಕೊಂಡು ಬಂಡೆ ಸಂದಿಯಲ್ಲೂ ಬದುಕು
ಬಿಕ್ಕುತ್ತವೆ; ಬರೆಯುತ್ತವೆ.
‘ಅವು ಇವು’ಗಳ ಬದಲು ‘ಅವರು ಇವರು’ ಆಗಲು ಒದ್ದಾಡುತ್ತವೆ
ಇವು ಕೊಳಚೆ ಕಾವ್ಯದ ನಾಯಕ ನಾಯಕಿಯರು.
ನರನರಕ್ಕೆ ಬರದ ಬರೆ ಬಿದ್ದು ಬೆಣೆಯೆದ್ದು
ಬಾಯಿ ಬಿಟ್ಟರೆ ಸಾಕು
ಮೂರಂತಸ್ತಿನ ತುಟ್ಟ ತುದಿಯಲ್ಲಿ ವಾಯುವಿಹಾರದಲ್ಲಿ
‘ಅವು’
ಸ್ಲೋ-ಗನ್ನುಗಳ ಗೋಡನ್ನು ತೋರಿಸಿ ಕೋಟೆ ಕಟ್ಟುತ್ತವೆ.
‘ಇವರು’
ಹತ್ತಲು ಉಡವಾಗುತ್ತಾರೆ; ಉಡ ಬಡವಾಗುತ್ತದೆ.
ಇಷ್ಟಿಷ್ಟೇ ಹಿಡಿತ ಇಲ್ಲವಾಗುತ್ತ
ಅರ್ಥ ಹುಡುಕುತ್ತ ಹುಡುಕುತ್ತ ನೆಲವಾಗುತ್ತದೆ.

ಎಲೆಕ್ಟ್ರಿಸಿಟಿ ಬೋರ್ಡು ಅದರದೇ ಹತ್ತಾರು ವಾರ್ಡು
ಇರುವ ಬೆಳ್ಳಂಬೆಳಗಿನ ಬೆಂಗಳೂರಲ್ಲಿ
ಏನು ಮಾಡುವುದು ಸ್ವಾಮಿ ತಂತಿ ಕತ್ತರಿಸುತ್ತದೆ ಇಲ್ಲ ಕಂಬ ಬೀಳುತ್ತದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...