Home / ಕವನ / ಕವಿತೆ / ಬೆಂಗಳೂರು ’೭೨

ಬೆಂಗಳೂರು ’೭೨

ಪರಚಿಕೊಂಡ ಪರಿಚಯದ ರಸ್ತೆ
ಉರುಳು
ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು
ಬದುಕು ಬಿರುಕು
ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ
ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ
ಕಾಲ
ಚಕ್ರದ
ಕೆಳಗೆ ಕರುಳ ಕಣ್ಣೊಡೆದು ಕೆಂಪು ಭೂಪಟ
ಬಿಡಿಸುತ್ತವೆ; ಇಲ್ಲಿ ಸಲ್ಲದೆ ಅಲ್ಲಿ ಸಲ್ಲುತ್ತವೆ.

ಇಲ್ಲಿ- ಪ್ರಜಾಪ್ರಭುತ್ವಕ್ಕೆ ಹೆಸರಾದ ಫುಟ್‍ಪಾತಿನಲ್ಲಿ
ಕಾಲುಗಳು ಇಂಟುಮಾರ್ಕು ಹಾಕುತ್ತವೆ ಸತತ.
ಮಧ್ಯೆ ಹರಿಯುವ ಮೀನು ಮೊಸಳೆಗಳ ಹೊಳೆ
-ಯಾಚೆ ದಡಕ್ಕೆ ಮತ್ತಕಣ್ಣು ಮುಕ್ಕಳಿಸಿ ಸುತ್ತುತ್ತವೆ ವೃತ್ತ.
ದಡದಿಂದ ದಡಕ್ಕೆ ಬ್ರಿಡ್ಜು ಕಟ್ಟಿ ನಿಂತಕಡೆಯೆ ಬದುಕಿ
-ನ ಬ್ಯಾಡ್ಜು ಧರಿಸಿ ಕೈಚಾಚಿ ಬರುತ್ತ
ಮಧ್ಯ ಹೊಳೆಯಲ್ಲಿ ತಣ್ಣನೆಯ ನೀರಲ್ಲಿ
ಬೆಚ್ಚನೆಯ ಬಂಧನದಲ್ಲಿ ಮತ್ತೆ
ಚುಂಬನದಲ್ಲಿ ಡೈವೊರ್‍ಸಿಗೆ ಸಹಿಮಾಡುತ್ತವೆ.

ಗುಪ್ತ
ಮಾರ್ಕೆಟ್ಟಿನ ಮುಂದೆ ಸುಪ್ತ ಚಿತ್ತ ಬಿಚ್ಚುತ್ತವೆ
ಅತ್ತ ಇತ್ತ ಸುತ್ತಮುತ್ತ ಮೆಲುಕುತ್ತ
ಆ ಈ ಭಾಷೆಗಳ ಕ್ರಾಸ್ ಬ್ರೀಡಿನಲ್ಲಿ
ಹೊಸದೊಂದು ಹುಟ್ಟಿಸುತ್ತವೆ; ಕಿವಿಬೆದರಿಸುತ್ತವೆ
ಅಲಂಕಾರದಲ್ಲಿ ಮುಳುಗಿ ಕಲ್ಪನಾಕ್ಕೆ ಪ್ರಭಾತ್ ಭೇರಿಹಾಕಿ
ಮೇನಕಾ ಮೈಯಲ್ಲಿ ಬಾಳು ಬರೆಯುತ್ತ
ಹಿಮಾಲಯ ಹತ್ತುತ್ತವೆ; ಹಡೆಯುತ್ತವೆ.

ಇಲ್ಲಿ ಈ ಸಿಟಿ
ಮಾರ್ಕೆಟ್ಟಿನಲ್ಲಿ ಮೀನುಬಲೆ ಮಾತು
ಬಿಡಿಸಲಾಗದ ಜಟಿಲತೆ ಜಂಜಾಟ ಜೀಕು
ಅಮಾವಾಸ್ಯೆಯಲ್ಲಿ ಬೆಳದಿಂಗಳ ಬಯಕೆ
ಬೆನ್ನಮೇಲೆ ಹೊತ್ತು ಬೆವರು ಬಸಿಯುತ್ತವೆ.
ಬಿಡುವು ಸಿಕ್ಕಾಗ ಸಿಳ್ಳು ಸಂಭ್ರಮದಲ್ಲಿ ಬಣ್ಣಕ್ಕೆ ಕಣ್ಣು
ಕೆನೆಸುತ್ತ ಕಳ್ಳು ಕುಡಿಯುತ್ತವೆ; ಸ್ವರ್ಗದ ಬಾಗಿಲಿಗೆ ಡಿಕ್ಕಿ
ಹೊಡೆದು ದುಡುಮ್ಮನೆ ಬೀಳುತ್ತವೆ.
ಸಿಳ್ಳು ಕಳ್ಳುಗಳ ದಡದಲ್ಲಿ ಮಾಮೂಲು ಮುಳ್ಳುಗಳು
ಬಿಲದಲ್ಲಿದ್ದು ನೆಲದ ನೈಜವಾಸನೆ ಕುಡಿತ ಕಡಿತಗಳು
ಬಾಯಿಗೆ ಬೆಣೆ ಬಡಿಸಿಕೊಂಡು ಬಂಡೆ ಸಂದಿಯಲ್ಲೂ ಬದುಕು
ಬಿಕ್ಕುತ್ತವೆ; ಬರೆಯುತ್ತವೆ.
‘ಅವು ಇವು’ಗಳ ಬದಲು ‘ಅವರು ಇವರು’ ಆಗಲು ಒದ್ದಾಡುತ್ತವೆ
ಇವು ಕೊಳಚೆ ಕಾವ್ಯದ ನಾಯಕ ನಾಯಕಿಯರು.
ನರನರಕ್ಕೆ ಬರದ ಬರೆ ಬಿದ್ದು ಬೆಣೆಯೆದ್ದು
ಬಾಯಿ ಬಿಟ್ಟರೆ ಸಾಕು
ಮೂರಂತಸ್ತಿನ ತುಟ್ಟ ತುದಿಯಲ್ಲಿ ವಾಯುವಿಹಾರದಲ್ಲಿ
‘ಅವು’
ಸ್ಲೋ-ಗನ್ನುಗಳ ಗೋಡನ್ನು ತೋರಿಸಿ ಕೋಟೆ ಕಟ್ಟುತ್ತವೆ.
‘ಇವರು’
ಹತ್ತಲು ಉಡವಾಗುತ್ತಾರೆ; ಉಡ ಬಡವಾಗುತ್ತದೆ.
ಇಷ್ಟಿಷ್ಟೇ ಹಿಡಿತ ಇಲ್ಲವಾಗುತ್ತ
ಅರ್ಥ ಹುಡುಕುತ್ತ ಹುಡುಕುತ್ತ ನೆಲವಾಗುತ್ತದೆ.

ಎಲೆಕ್ಟ್ರಿಸಿಟಿ ಬೋರ್ಡು ಅದರದೇ ಹತ್ತಾರು ವಾರ್ಡು
ಇರುವ ಬೆಳ್ಳಂಬೆಳಗಿನ ಬೆಂಗಳೂರಲ್ಲಿ
ಏನು ಮಾಡುವುದು ಸ್ವಾಮಿ ತಂತಿ ಕತ್ತರಿಸುತ್ತದೆ ಇಲ್ಲ ಕಂಬ ಬೀಳುತ್ತದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...