ಬೆಂಗಳೂರು ’೭೨

ಪರಚಿಕೊಂಡ ಪರಿಚಯದ ರಸ್ತೆ
ಉರುಳು
ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು
ಬದುಕು ಬಿರುಕು
ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ
ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ
ಕಾಲ
ಚಕ್ರದ
ಕೆಳಗೆ ಕರುಳ ಕಣ್ಣೊಡೆದು ಕೆಂಪು ಭೂಪಟ
ಬಿಡಿಸುತ್ತವೆ; ಇಲ್ಲಿ ಸಲ್ಲದೆ ಅಲ್ಲಿ ಸಲ್ಲುತ್ತವೆ.

ಇಲ್ಲಿ- ಪ್ರಜಾಪ್ರಭುತ್ವಕ್ಕೆ ಹೆಸರಾದ ಫುಟ್‍ಪಾತಿನಲ್ಲಿ
ಕಾಲುಗಳು ಇಂಟುಮಾರ್ಕು ಹಾಕುತ್ತವೆ ಸತತ.
ಮಧ್ಯೆ ಹರಿಯುವ ಮೀನು ಮೊಸಳೆಗಳ ಹೊಳೆ
-ಯಾಚೆ ದಡಕ್ಕೆ ಮತ್ತಕಣ್ಣು ಮುಕ್ಕಳಿಸಿ ಸುತ್ತುತ್ತವೆ ವೃತ್ತ.
ದಡದಿಂದ ದಡಕ್ಕೆ ಬ್ರಿಡ್ಜು ಕಟ್ಟಿ ನಿಂತಕಡೆಯೆ ಬದುಕಿ
-ನ ಬ್ಯಾಡ್ಜು ಧರಿಸಿ ಕೈಚಾಚಿ ಬರುತ್ತ
ಮಧ್ಯ ಹೊಳೆಯಲ್ಲಿ ತಣ್ಣನೆಯ ನೀರಲ್ಲಿ
ಬೆಚ್ಚನೆಯ ಬಂಧನದಲ್ಲಿ ಮತ್ತೆ
ಚುಂಬನದಲ್ಲಿ ಡೈವೊರ್‍ಸಿಗೆ ಸಹಿಮಾಡುತ್ತವೆ.

ಗುಪ್ತ
ಮಾರ್ಕೆಟ್ಟಿನ ಮುಂದೆ ಸುಪ್ತ ಚಿತ್ತ ಬಿಚ್ಚುತ್ತವೆ
ಅತ್ತ ಇತ್ತ ಸುತ್ತಮುತ್ತ ಮೆಲುಕುತ್ತ
ಆ ಈ ಭಾಷೆಗಳ ಕ್ರಾಸ್ ಬ್ರೀಡಿನಲ್ಲಿ
ಹೊಸದೊಂದು ಹುಟ್ಟಿಸುತ್ತವೆ; ಕಿವಿಬೆದರಿಸುತ್ತವೆ
ಅಲಂಕಾರದಲ್ಲಿ ಮುಳುಗಿ ಕಲ್ಪನಾಕ್ಕೆ ಪ್ರಭಾತ್ ಭೇರಿಹಾಕಿ
ಮೇನಕಾ ಮೈಯಲ್ಲಿ ಬಾಳು ಬರೆಯುತ್ತ
ಹಿಮಾಲಯ ಹತ್ತುತ್ತವೆ; ಹಡೆಯುತ್ತವೆ.

ಇಲ್ಲಿ ಈ ಸಿಟಿ
ಮಾರ್ಕೆಟ್ಟಿನಲ್ಲಿ ಮೀನುಬಲೆ ಮಾತು
ಬಿಡಿಸಲಾಗದ ಜಟಿಲತೆ ಜಂಜಾಟ ಜೀಕು
ಅಮಾವಾಸ್ಯೆಯಲ್ಲಿ ಬೆಳದಿಂಗಳ ಬಯಕೆ
ಬೆನ್ನಮೇಲೆ ಹೊತ್ತು ಬೆವರು ಬಸಿಯುತ್ತವೆ.
ಬಿಡುವು ಸಿಕ್ಕಾಗ ಸಿಳ್ಳು ಸಂಭ್ರಮದಲ್ಲಿ ಬಣ್ಣಕ್ಕೆ ಕಣ್ಣು
ಕೆನೆಸುತ್ತ ಕಳ್ಳು ಕುಡಿಯುತ್ತವೆ; ಸ್ವರ್ಗದ ಬಾಗಿಲಿಗೆ ಡಿಕ್ಕಿ
ಹೊಡೆದು ದುಡುಮ್ಮನೆ ಬೀಳುತ್ತವೆ.
ಸಿಳ್ಳು ಕಳ್ಳುಗಳ ದಡದಲ್ಲಿ ಮಾಮೂಲು ಮುಳ್ಳುಗಳು
ಬಿಲದಲ್ಲಿದ್ದು ನೆಲದ ನೈಜವಾಸನೆ ಕುಡಿತ ಕಡಿತಗಳು
ಬಾಯಿಗೆ ಬೆಣೆ ಬಡಿಸಿಕೊಂಡು ಬಂಡೆ ಸಂದಿಯಲ್ಲೂ ಬದುಕು
ಬಿಕ್ಕುತ್ತವೆ; ಬರೆಯುತ್ತವೆ.
‘ಅವು ಇವು’ಗಳ ಬದಲು ‘ಅವರು ಇವರು’ ಆಗಲು ಒದ್ದಾಡುತ್ತವೆ
ಇವು ಕೊಳಚೆ ಕಾವ್ಯದ ನಾಯಕ ನಾಯಕಿಯರು.
ನರನರಕ್ಕೆ ಬರದ ಬರೆ ಬಿದ್ದು ಬೆಣೆಯೆದ್ದು
ಬಾಯಿ ಬಿಟ್ಟರೆ ಸಾಕು
ಮೂರಂತಸ್ತಿನ ತುಟ್ಟ ತುದಿಯಲ್ಲಿ ವಾಯುವಿಹಾರದಲ್ಲಿ
‘ಅವು’
ಸ್ಲೋ-ಗನ್ನುಗಳ ಗೋಡನ್ನು ತೋರಿಸಿ ಕೋಟೆ ಕಟ್ಟುತ್ತವೆ.
‘ಇವರು’
ಹತ್ತಲು ಉಡವಾಗುತ್ತಾರೆ; ಉಡ ಬಡವಾಗುತ್ತದೆ.
ಇಷ್ಟಿಷ್ಟೇ ಹಿಡಿತ ಇಲ್ಲವಾಗುತ್ತ
ಅರ್ಥ ಹುಡುಕುತ್ತ ಹುಡುಕುತ್ತ ನೆಲವಾಗುತ್ತದೆ.

ಎಲೆಕ್ಟ್ರಿಸಿಟಿ ಬೋರ್ಡು ಅದರದೇ ಹತ್ತಾರು ವಾರ್ಡು
ಇರುವ ಬೆಳ್ಳಂಬೆಳಗಿನ ಬೆಂಗಳೂರಲ್ಲಿ
ಏನು ಮಾಡುವುದು ಸ್ವಾಮಿ ತಂತಿ ಕತ್ತರಿಸುತ್ತದೆ ಇಲ್ಲ ಕಂಬ ಬೀಳುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೬
Next post ವಿರಹಿ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…