Home / ಕವನ / ಕವಿತೆ / ನೀ ಕರುಣಿಸಿದ ಬೆಳಕು

ನೀ ಕರುಣಿಸಿದ ಬೆಳಕು

ಹುಲ್ಲುಗಾವಲ ಹುಡುಕಿ ಹೊರಟ ಪಶುಗಳ ಹಿಂಡು
ಮುಂದೆ ಮುಂದೆ
ಕಾಯುತ್ತ ಹೊರಟಿರುವ ಗಂಡು ಹೆಣ್ಣಿನ ದಂಡು
ಅದರ ಹಿಂದೆ
ಪಶುಗು ಪಶುಪತಿಗು ಇರುವೆಲ್ಲ ಅಂತರ ಪಾದಸಂಖ್ಯೆಯೊಂದೆ.
ಕಾಲೆರಡು ಕೈಯಾಗಿ
ಬಾಲ ಕ್ಷೀಣಿಸಿ ಅಡಗಿ
ತಲೆ ಬದಲು ಬುದ್ಧಿಗೇ ಕೊಂಬು ಮೂಡಿ
ಬೆಳೆದ ಹಮ್ಮಿಗೆ ಈ ದ್ವಿಪಾದಿ ತಂದೆ.
ಅಪ್ಪನೋ ಅಣ್ಣನೋ ಅತ್ತಿಗೆಯೊ ಸೊಸೆಯೊ
(ಭಾಷೆ ಯಾರಿಗೆ ಗೊತ್ತು?)
ಗಂಡು ಬಿತ್ತ
ತಿಳಿದ ಸಂಬಂಧ ಒಂದೇ
ಹೆಣ್ಣು ಕ್ಷೇತ್ರ.
ಎಲೆ ಚರ್‍ಮ ಬಟ್ಟೆ ಬರೆ
ಬೆದೆ ಕುದಿಯೆ ಗುಹೆಯೆ ಮರೆ,
ತಿಂದು ಮಲಗಿದ್ದೊಂದೆ, ಕೆರಳಿ ಹೊರಳಿದ್ದೊಂದೆ
ಪಶುವ ಬಳಸಿದ್ದೊಂದೆ ತಿಳಿದ ಸೂತ್ರ
ಕೊಳದಲ್ಲಿ ಕಂಡ ಮುಖ
ತಲೆಯ ಕಾಡಿರಲಿಲ್ಲ
ಒಳಗೆ ಮೂಡಿರಲಿಲ್ಲ ಸ್ವಗತ ಚಿತ್ರ
* * *

ಹಿಮದ ಕಣಿವೆಗಳಲ್ಲಿ ಹೊಕ್ಕು ತೂರಿ
ತಮದ ಸಾವಿರಭವದ ಎದೆಯ ಸೀಳಿ
ನೊಂದು ಕಡೆಗೂ ಬಂದ
ಅಲ್ಲಿಂದ ಇಲ್ಲಿಗೆ
ವೋಲ್ಗಾದಿಂದ ದಿಲ್ಲಿಗೆ,
ಕದಡು ನಿಜಗಳ ಕೊಳದ ತಟ್ಟತಳಕ್ಕೆ ತಳ್ಳಿ
ತಿನಿಂತ ಕಲಿಕೆಗೆ,
ಭಯದಿಂದ ಉಳಿಕೆಗೆ
ಸ್ವಂತ ವೃತ್ತದ ಆಚೆ ಮುಗಿಲ ಡಮರುಗ ಕೇಳಿ
ನವಿಲಿಡುವ ಕೇಕೆಗೆ.
ಬಂದ ರಭಸಕೆ ದಣಿದು
ಹುಟ್ಟು ಪಯಣವ ತಡೆದು
ಹಾಯೆನಿಸಿ ಉರುಳಿದ
ಹೊರಳಿದ ಅರಳಿದ
ಗಂಗೆ ಯಮುನೆಯರ ಸಿರಿದಡಗಳಲ್ಲಿ,
ಗ್ರಹ ತಾರೆಗಳು ಹೊಳೆವ, ನಭಕ್ಕೆ ಮುಗಿಲನು ಬೆಳೆವ
ಜೀವನದಿಗಳು ಕೊಟ್ಟ ಕನಸಿನಲ್ಲಿ
* * *

ಎದ್ದಾಗ ಕಣ್ಣಲ್ಲಿ ನಕ್ಷತ್ರಗಳ ಬೆಳಕು
ದನಿ ಹೊರಳಿ ನಡುನಡುವೆ ಸಣ್ಣ ಗುಡುಗು.
ಒದೆಯಲೆತ್ತಿದ ಕಾಲು ಗುರಿ ಮರೆತು ತೂಗಿ
ಹೊಡೆಯಲೆತ್ತಿದ ತೋಳು ಬಿನ್ನಾಣ ಬೀಗಿ
ಪ್ರಥಮ ಶ್ರೀನೃತ್ಯದ ಅಪೂರ್ವ ಭಂಗಿ;
ತರೆದೆದೆಯ ಮೇಲೆ ಏನೇನೊ ಬಣ್ಣದ ಗುರುತು
ಬರಿಯ ಸೊಂಟವ ಮರೆಸಿ ನೂಲು ಲುಂಗಿ.
ಎರಡೆರಡು ಏಳಾಗಿ ಗಣಿತವೇ ಆಳಾಗಿ
ಲೋಕ ವ್ಯವಹಾರಕ್ಕೆ ರೂಪಾಂತರ,
ಗಿರಿ ಕಾಡು ಕಡಲು ತುಂಬಿರುವ ಉಪಗ್ರಹ ಕೂಡ
ತಾಯಾಗಿ ಉಟ್ಟಿತ್ತು ಪೀತಾಂಬರ.

ಈಗ ಸಿಡಿಲಿನ ಮೊಳಗು ಇಂದ್ರರಥ ಚೀತ್ಕಾರ,
ಕರಿಮುಗಿಲಿನೋಳಿ ರಾಕ್ಷಸರ ದಾಳಿ,
ಸುರಿವ ಮಳೆ ಅರ್ಘ್ಯ ಹೋಮಕ್ಕೆ ಕರುಣಿಸಿ ಬಾನು
ಕಾಲಕಾಲಕ್ಕೆ ಸುರಿವ ಜಲದ ಪಾಳಿ;
ಕಾಡ ಬಿದಿರಿನ ಮೊಳೆಯ ಹಾದು ಊಳಿದ ಗಾಳಿ
ತೂರಿ ಕೊಳಲಿನಲಿ ಬಗೆ ಬಗೆಯ ರಾಗ
ಬರಲಿರುವ ಭಾರಿ ನೆರೆಯರಿವು ಯಾರಿಗೆ ಆಗ?
ಪುಂಗಿನಾದಕೆ ಹೆಡೆಯ ಆಡಿಸಲು ತೊಡಗಿತ್ತು ಕಾಳನಾಗ.
* * *

ಏನು ಗೊತ್ತಿತ್ತು
ಗುರುತು ಎಲ್ಲಿತ್ತು
ನವನವೋನ್ಮೇಷೆ ನೀನೊಲಿದು ಬಂದಾಗ?
ಹಕ್ಕಿಹೂವುಗಳೆಲ್ಲ ಮಾತಾಡಿಕೊಂಡರೂ,
ದಿಕ್ಕುಗಳ ಹಣೆಯಲ್ಲಿ ಚುಕ್ಕಿಗಳು ಹೂಳದರೂ,
ಸಂಜೆಹಣ್ಣಿನ ಸುತ್ತ ಚಲಿಸಿ ನೀರದಪತ್ರ
ಕನಕಾಂಬರಗಳಾಗಿ ಉರಿ ಮಿಂಚಿ ಹನಿದರೂ,
ಹರಿವ ತೊರೆಗಳ ತಳದ ಗುರುಜುಗಲ್ಲಿನ ದನಿಯ
ಶ್ರುತಿಮಾಡಿ ತನ್ನದನಿ ಅದರೊಡನೆ ಕುಣಿದರೂ
ತನ್ನನ್ನೆ ಬಳಸಿ
ನೀ ಬಂದೆ ಎಂದು
ಹೊಡೆದ ವ್ಯಾಧನು ಕೂಡ ಅರಿಯಲಿಲ್ಲ.
ಸೂರ್ಯಚಂದ್ರರ ಬಿಂಬ ನೆಲದಲ್ಲಿ ನೆಡಲು
ಮರ್‍ತ್ಯಚಿತ್ತದ ಹೊಲಕೆ ನಿನ್ನಿಳಿಸಿ ತರಲು
ತಲೆಗೊಟ್ಟು ನಿಂತಂಥ ತಾಪಸಿ ಜಟಾಧರಗೂ
ಶಾಪ ವರವಾದದ್ದು ತಿಳಿಯಲಿಲ್ಲ.
ಬದುಕನ್ನು ಬಳಸಿ ಮಲಗಿದ್ದ ಸಾವಿನ ಸರ್ಪ
ಹರಿದುಹೋದುದನವರು ಕಾಣಲಿಲ್ಲ.
* * *

ಮುತ್ತಜ್ಜ ಮುನಿಯ ಮನಕಿಳಿದ ಭಾಗೀರಥಿಯು
ಹರಿದು ಬಂದಿದ್ದಾಳೆ ಇಲ್ಲಿ ತನಕ,
ಮುಟ್ಟಿದ್ದೆ ತಡ ಮೃಗದ ಶಾಪವೂ ವರವಾಗಿ
ಕಳಚಿ ನೋಡಿದೆ ಕಣ್ಣು ತನ್ನ ಸ್ವಾರ್ಥ.
ಕೆಡೆದ ತರಗಲೆ ಎದ್ದು ಪರ್ಣಶಾಲೆ,
ಬಿದ್ದ ನೆಲವೇ ಎದ್ದು ಸೌಧಮಾಲೆ,
ಹೊದ್ದು ಹೊರಗಾದ ಅನುಭವ ನಿತ್ಯರತಿಯಾಗಿ
ಮೃಗವು ಮರೆಯಾಗುವುದು ಅನಂಗಲೀಲೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ