Home / ಕವನ / ಕವಿತೆ / ನೀ ಕರುಣಿಸಿದ ಬೆಳಕು

ನೀ ಕರುಣಿಸಿದ ಬೆಳಕು

ಹುಲ್ಲುಗಾವಲ ಹುಡುಕಿ ಹೊರಟ ಪಶುಗಳ ಹಿಂಡು
ಮುಂದೆ ಮುಂದೆ
ಕಾಯುತ್ತ ಹೊರಟಿರುವ ಗಂಡು ಹೆಣ್ಣಿನ ದಂಡು
ಅದರ ಹಿಂದೆ
ಪಶುಗು ಪಶುಪತಿಗು ಇರುವೆಲ್ಲ ಅಂತರ ಪಾದಸಂಖ್ಯೆಯೊಂದೆ.
ಕಾಲೆರಡು ಕೈಯಾಗಿ
ಬಾಲ ಕ್ಷೀಣಿಸಿ ಅಡಗಿ
ತಲೆ ಬದಲು ಬುದ್ಧಿಗೇ ಕೊಂಬು ಮೂಡಿ
ಬೆಳೆದ ಹಮ್ಮಿಗೆ ಈ ದ್ವಿಪಾದಿ ತಂದೆ.
ಅಪ್ಪನೋ ಅಣ್ಣನೋ ಅತ್ತಿಗೆಯೊ ಸೊಸೆಯೊ
(ಭಾಷೆ ಯಾರಿಗೆ ಗೊತ್ತು?)
ಗಂಡು ಬಿತ್ತ
ತಿಳಿದ ಸಂಬಂಧ ಒಂದೇ
ಹೆಣ್ಣು ಕ್ಷೇತ್ರ.
ಎಲೆ ಚರ್‍ಮ ಬಟ್ಟೆ ಬರೆ
ಬೆದೆ ಕುದಿಯೆ ಗುಹೆಯೆ ಮರೆ,
ತಿಂದು ಮಲಗಿದ್ದೊಂದೆ, ಕೆರಳಿ ಹೊರಳಿದ್ದೊಂದೆ
ಪಶುವ ಬಳಸಿದ್ದೊಂದೆ ತಿಳಿದ ಸೂತ್ರ
ಕೊಳದಲ್ಲಿ ಕಂಡ ಮುಖ
ತಲೆಯ ಕಾಡಿರಲಿಲ್ಲ
ಒಳಗೆ ಮೂಡಿರಲಿಲ್ಲ ಸ್ವಗತ ಚಿತ್ರ
* * *

ಹಿಮದ ಕಣಿವೆಗಳಲ್ಲಿ ಹೊಕ್ಕು ತೂರಿ
ತಮದ ಸಾವಿರಭವದ ಎದೆಯ ಸೀಳಿ
ನೊಂದು ಕಡೆಗೂ ಬಂದ
ಅಲ್ಲಿಂದ ಇಲ್ಲಿಗೆ
ವೋಲ್ಗಾದಿಂದ ದಿಲ್ಲಿಗೆ,
ಕದಡು ನಿಜಗಳ ಕೊಳದ ತಟ್ಟತಳಕ್ಕೆ ತಳ್ಳಿ
ತಿನಿಂತ ಕಲಿಕೆಗೆ,
ಭಯದಿಂದ ಉಳಿಕೆಗೆ
ಸ್ವಂತ ವೃತ್ತದ ಆಚೆ ಮುಗಿಲ ಡಮರುಗ ಕೇಳಿ
ನವಿಲಿಡುವ ಕೇಕೆಗೆ.
ಬಂದ ರಭಸಕೆ ದಣಿದು
ಹುಟ್ಟು ಪಯಣವ ತಡೆದು
ಹಾಯೆನಿಸಿ ಉರುಳಿದ
ಹೊರಳಿದ ಅರಳಿದ
ಗಂಗೆ ಯಮುನೆಯರ ಸಿರಿದಡಗಳಲ್ಲಿ,
ಗ್ರಹ ತಾರೆಗಳು ಹೊಳೆವ, ನಭಕ್ಕೆ ಮುಗಿಲನು ಬೆಳೆವ
ಜೀವನದಿಗಳು ಕೊಟ್ಟ ಕನಸಿನಲ್ಲಿ
* * *

ಎದ್ದಾಗ ಕಣ್ಣಲ್ಲಿ ನಕ್ಷತ್ರಗಳ ಬೆಳಕು
ದನಿ ಹೊರಳಿ ನಡುನಡುವೆ ಸಣ್ಣ ಗುಡುಗು.
ಒದೆಯಲೆತ್ತಿದ ಕಾಲು ಗುರಿ ಮರೆತು ತೂಗಿ
ಹೊಡೆಯಲೆತ್ತಿದ ತೋಳು ಬಿನ್ನಾಣ ಬೀಗಿ
ಪ್ರಥಮ ಶ್ರೀನೃತ್ಯದ ಅಪೂರ್ವ ಭಂಗಿ;
ತರೆದೆದೆಯ ಮೇಲೆ ಏನೇನೊ ಬಣ್ಣದ ಗುರುತು
ಬರಿಯ ಸೊಂಟವ ಮರೆಸಿ ನೂಲು ಲುಂಗಿ.
ಎರಡೆರಡು ಏಳಾಗಿ ಗಣಿತವೇ ಆಳಾಗಿ
ಲೋಕ ವ್ಯವಹಾರಕ್ಕೆ ರೂಪಾಂತರ,
ಗಿರಿ ಕಾಡು ಕಡಲು ತುಂಬಿರುವ ಉಪಗ್ರಹ ಕೂಡ
ತಾಯಾಗಿ ಉಟ್ಟಿತ್ತು ಪೀತಾಂಬರ.

ಈಗ ಸಿಡಿಲಿನ ಮೊಳಗು ಇಂದ್ರರಥ ಚೀತ್ಕಾರ,
ಕರಿಮುಗಿಲಿನೋಳಿ ರಾಕ್ಷಸರ ದಾಳಿ,
ಸುರಿವ ಮಳೆ ಅರ್ಘ್ಯ ಹೋಮಕ್ಕೆ ಕರುಣಿಸಿ ಬಾನು
ಕಾಲಕಾಲಕ್ಕೆ ಸುರಿವ ಜಲದ ಪಾಳಿ;
ಕಾಡ ಬಿದಿರಿನ ಮೊಳೆಯ ಹಾದು ಊಳಿದ ಗಾಳಿ
ತೂರಿ ಕೊಳಲಿನಲಿ ಬಗೆ ಬಗೆಯ ರಾಗ
ಬರಲಿರುವ ಭಾರಿ ನೆರೆಯರಿವು ಯಾರಿಗೆ ಆಗ?
ಪುಂಗಿನಾದಕೆ ಹೆಡೆಯ ಆಡಿಸಲು ತೊಡಗಿತ್ತು ಕಾಳನಾಗ.
* * *

ಏನು ಗೊತ್ತಿತ್ತು
ಗುರುತು ಎಲ್ಲಿತ್ತು
ನವನವೋನ್ಮೇಷೆ ನೀನೊಲಿದು ಬಂದಾಗ?
ಹಕ್ಕಿಹೂವುಗಳೆಲ್ಲ ಮಾತಾಡಿಕೊಂಡರೂ,
ದಿಕ್ಕುಗಳ ಹಣೆಯಲ್ಲಿ ಚುಕ್ಕಿಗಳು ಹೂಳದರೂ,
ಸಂಜೆಹಣ್ಣಿನ ಸುತ್ತ ಚಲಿಸಿ ನೀರದಪತ್ರ
ಕನಕಾಂಬರಗಳಾಗಿ ಉರಿ ಮಿಂಚಿ ಹನಿದರೂ,
ಹರಿವ ತೊರೆಗಳ ತಳದ ಗುರುಜುಗಲ್ಲಿನ ದನಿಯ
ಶ್ರುತಿಮಾಡಿ ತನ್ನದನಿ ಅದರೊಡನೆ ಕುಣಿದರೂ
ತನ್ನನ್ನೆ ಬಳಸಿ
ನೀ ಬಂದೆ ಎಂದು
ಹೊಡೆದ ವ್ಯಾಧನು ಕೂಡ ಅರಿಯಲಿಲ್ಲ.
ಸೂರ್ಯಚಂದ್ರರ ಬಿಂಬ ನೆಲದಲ್ಲಿ ನೆಡಲು
ಮರ್‍ತ್ಯಚಿತ್ತದ ಹೊಲಕೆ ನಿನ್ನಿಳಿಸಿ ತರಲು
ತಲೆಗೊಟ್ಟು ನಿಂತಂಥ ತಾಪಸಿ ಜಟಾಧರಗೂ
ಶಾಪ ವರವಾದದ್ದು ತಿಳಿಯಲಿಲ್ಲ.
ಬದುಕನ್ನು ಬಳಸಿ ಮಲಗಿದ್ದ ಸಾವಿನ ಸರ್ಪ
ಹರಿದುಹೋದುದನವರು ಕಾಣಲಿಲ್ಲ.
* * *

ಮುತ್ತಜ್ಜ ಮುನಿಯ ಮನಕಿಳಿದ ಭಾಗೀರಥಿಯು
ಹರಿದು ಬಂದಿದ್ದಾಳೆ ಇಲ್ಲಿ ತನಕ,
ಮುಟ್ಟಿದ್ದೆ ತಡ ಮೃಗದ ಶಾಪವೂ ವರವಾಗಿ
ಕಳಚಿ ನೋಡಿದೆ ಕಣ್ಣು ತನ್ನ ಸ್ವಾರ್ಥ.
ಕೆಡೆದ ತರಗಲೆ ಎದ್ದು ಪರ್ಣಶಾಲೆ,
ಬಿದ್ದ ನೆಲವೇ ಎದ್ದು ಸೌಧಮಾಲೆ,
ಹೊದ್ದು ಹೊರಗಾದ ಅನುಭವ ನಿತ್ಯರತಿಯಾಗಿ
ಮೃಗವು ಮರೆಯಾಗುವುದು ಅನಂಗಲೀಲೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...