Home / ಕವನ / ಕವಿತೆ / ಕೃಷ್ಣಭಕ್ತರ ಕುಣಿತ

ಕೃಷ್ಣಭಕ್ತರ ಕುಣಿತ

ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ?
ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ
ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ
ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ
ಯಾವ ಅಲೌಕಿಕ ಶ್ರುತಿಯಿದು, ಇದಕ್ಕೆ ಲೋಕವ ಹೂಡಿದರೇತಕ್ಕೆ?
ಆರಿಹೋಗುತಿದೆ ಎಲ್ಲ ಧಗೆ ಈ ಪ್ರಾಣವೀಣೆಯ ನುಡಿತಕ್ಕೆ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ಕುಣಿಯುತ ಬಂದರು ಕೈಗಳನೆತ್ತಿ ಕೃಷ್ಣ ಭಕ್ತರು ಬೀದಿಯಲಿ
ಆನಂದದ ಉದ್ರೇಕಕೆ ತುಳುಕಿದೆ ಕಂಬನಿಧಾರೆ ಕೆನ್ನೆಯಲಿ
ಹೊಳೆಯುವ ನುಣ್ಣನೆ ತಲೆ, ಹಿಂಬದಿಯಲಿ ಚಲಿಸುತ್ತಿದೆ ಶಿಖೆ ಅತ್ತಿತ್ತ
ಸರಿದವು ವಾಹನ ದಾರಿಯ ಬಿಟ್ಟು, ಒಳಗಿನ ಜನ ಕೈಮುಗಿಯುತ್ತ
ಕುಣಿದರು ಭಕ್ತರು ಲಜ್ಜೆಯ ತೊರೆದು ಹಾಡಹಗಲು ನಡುಬೀದಿಯಲಿ
ಹಿಂದೆ ಕುಣಿದಂತೆ ಪ್ರಭು ಚೈತನ್ಯರು ದನಿಯನೆತ್ತಿ ಆಕಾಶದಲಿ-
“ರಾಮ ಹರೇ ರಾಮ ಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ಮಿರುಗುವ ಗೋಪೀಚಂದನ ಹಣೆಯಲಿ, ಕೊರಳಲಿ ತುಳಸೀಮಣಿಮಾಲೆ
ಎದೆಯಲಿ ತೂಗುವ ಸಣ್ಣ ಚೀಲದಲಿ ಶ್ರೀಹರಿ ಸ್ಮರಣೆಗೆ ಜಪಮಾಲೆ
ಭೋಗಕೆ ಬಾಗದ ಬತ್ತಿದ ದೇಹ, ಕಣ್ಣೋ ಹಚ್ಚಿದ ಹಣತೆಗಳು
ದಿನವಿಡಿ ಕೃಷ್ಣನ ನೋಡಿ ನೋಡಿ ಕಪ್ಪೇರಿದ ನೇರಿಳೆ ಹಣ್ಣುಗಳು
ಯಾವ ಕಾಲದಿಂದೆದ್ದು ಬಂದಿತೋ ಭಕ್ತಿರಸದ ಈ ಸುಖಚಿತ್ರ?
ನಿಂತ ನೆಲವ ಬೃಂದಾವನವಾಯಿತು ಕುಣಿಯಲು ಭಕ್ತರು ಹಾಡುತ್ತ-
“”ರಾಮ ಹರೇ ರಾಮ ಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ತೋಳ ಚಿರತೆಗಳು ಗದ್ದುಗೆ ಹಿಡಿದ ಗೊಂದಲಾಸುರನ ರಾಜ್ಯದಲಿ
ಉರಿವ ಬಾಣಲಿಗೆ ಬಿದ್ದಿದೆ ಬದುಕು ನರಳಿದೆ ನಾಸ್ತಿಕ ವ್ಯಾಜದಲಿ
ಹೇಗೆ ಹುಟ್ಟಿತೀ ಹೊಸ ಹೂವಿನಗಿಡ ಬತ್ತಿ ಹೋದ ಒಣಪಾತಿಯಲಿ?
ಮತ್ತೆ ಬಂದರೋ ಕನಕಪುರಂದರ ಶರೀಫರೆನ್ನುವ ರೀತಿಯಲಿ
ಕುಣಿದರು ಭಕ್ತರು ಅಂತರಂಗವನೆ ಮೃದಂಗಮಾಡಿ ಬಡಿಯುತ್ತ
ನೋಡಿದ ಜನ ರೋಮಾಂಚಿತರಾದರು ತಾವೂ ಕುಣಿದರು ಹಾಡುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ದೇಶ ಜಾತಿ ಮತ ಭೇದವಿಲ್ಲದ ಸಕಲೋದ್ಯಾನದ ಪುಷ್ಟಗಳು
ಕಪ್ಪು ಬಿಳುಪುಗಳ ಭೇದವನಳಿಸಿ ಗಂಗೆಯಮುನೆ ಥರ ನೆರೆದವರು
ಇಂದ್ರಿಯದುರಿಗಳ ಹೃಷಿಕೇಶಪದ ಗಂಗೆಯಲ್ಲಿ ಮುಳುಗಿಸಿದವರು
ಕೃಷ್ಣನಾಮ ಸಂಕೀರ್ತನ ಯಜ್ಞಕೆ ಮೈಯೇ ವೇದಿಕೆಯಾದವರು.
ಹಾಡುತ ಕುಣಿಯುತ ನಡೆದರು ಭಕ್ತರು ಸಾಗುವಂತೆ ಶ್ರೀಹರಿಯತ್ತ
ಸುತ್ತ ನಿಂತ ಜನ ಹಾಡಿದರೊಟ್ಟಿಗೆ ನದಿಗಳು ಕಡಲಿಗೆ ಕೂಡುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣ ಹರೇ ಕೃಷ್ಣ ಹರೇ, ಕೃಷ್ಣ ಕೃಷ್ಣ ಜಯ ಕೃಷ್ಣ ಹರೇ”

ಕೃಷ್ಣನೆ ಸ್ವಾಮಿ ಕೃಷ್ಣನಮಾಮಿ ಈ ವಿಶ್ವದ ಪ್ರಭು ನೀನೆಂದು
ಕೃಷ್ಣನೆ ಸ್ವಾಮಿ ಕೃಷ್ಣನಮಾಮಿ ನಿನ್ನ ಸೇವಕರು ನಾವೆಂದು
ಭಕ್ತಿಸೇವೆಯಲಿ ಮೈಮರೆಯುವುದೆ ಮುಕ್ತಿಗು ಮೀರಿದ ಗುರಿಯೆಂದು
ಭಾವದ್ಭಾವಕೆ ಮತ್ತೆ ಮರಳುವುದೆ ಭಕ್ತಿಸೇವೆಯ ಗುರಿ ಎಂದು
ಗುರುಪ್ರಭುಪಾದರ ತಾಳದ ದನಿಗೆ ಹಾಡಲು ಭಕ್ತರು ಕುಣಿಯುತ್ತ
ಲೋಕಕೆ ಲೋಕವ ದನಿಗೂಡಿಸಿತು ಕೃಷ್ಣನ ಪಾದಕೆ ಮಣಿಯುತ್ತ-
“ರಾಮಹರೇ ರಾಮಹರೇ, ರಾಮ ರಾಮ ಜಯರಾಮ ಹರೇ
ಕೃಷ್ಣಹರೇ ಕೃಷ್ಣಹರೇ, ಕೃಷ್ಣ ಕೃಷ್ಣ ಜಯಕೃಷ್ಣ ಹರೇ.”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...