Home / ಕಥೆ / ಕಿರು ಕಥೆ / ಪ್ರಕೃತಿ ಮತ್ತು ವಿಮರ್ಶಕ

ಪ್ರಕೃತಿ ಮತ್ತು ವಿಮರ್ಶಕ

ಸಾಹಿತ್ಯ ಲೋಕದಲ್ಲಿ ಆ ವಿಮರ್ಶಕನಿಗೆ ದೊಡ್ಡ ಗೌರವವಿತ್ತು. ಪೌರ್ವಾತ್ಯ, ಪಾಶ್ಚಿಮಾತ್ಯ ಲೇಖಕರ ಕೃತಿಗಳನ್ನು ಆಳವಾಗಿ ಓದಿಕೊಂಡಿದ್ದ ಅವನನ್ನು ವಿಮರ್ಶೆಯಲ್ಲಿ ಮೀರಿಸುವವರೇ ಇರಲಿಲ್ಲ. ಒಮದು ಕೃತಿ ಬಿಡುಗಡೆಯಾಗಿ ಕೈಸೇರುತ್ತಲೆ ಅದರ ಜನ್ಮ ಜಾಲಾಡುವ, ಅದಕ್ಕೊಂದು ಸ್ಥಾನ ಕಲ್ಪಿಸುವ ಪ್ರಗಲ್ಭ ಪಾಂಡಿತ್ಯ ಅವನದು. ಗಣ್ಯಾತಿಗಣ್ಯ ಲೇಖಕರು ಅವನ ವಿಮರ್ಶೆಗಾಗಿ ಕಾತರಿಸುತ್ತಿದ್ದರು.

ಪ್ರಪಂಚದ ಮಹಾ ಕಾವ್ಯಗಳನ್ನು ಮಹಾಲೇಖಕರ ಕೃತಿಗಳನ್ನು ತನ್ನದೇ ಆದ ದೃಷ್ಟಿಕೋನದಿಂದ ಪರಾಮರಿಸುವ, ಸಮರ್ಥಿಸುವ, ಮೌಲಿಕಗೊಳಿಸುವ ಸಾತತ್ಯದಿಂದಾಗಿ ವಿಮರ್ಶಕನಿಗೆ ಪ್ರಶಸ್ತಿ ಪ್ರಸಿದ್ಧಿ ಪ್ರಾಪ್ತವಾಗಿದ್ದವು. ಹೀಗೆ ಒಂದು ನೆಲೆಯಲ್ಲಿ ಗಟ್ಟಿಗೊಂಡ ಮೇಲೆ ವಿಮರ್ಶಕನ ನಿಸ್ಪೃಹತೆ ಅಳ್ಳಕಾಗುತ್ತ ಬಂತು. ಒಂದು ವರ್ಗದ ಸಿದ್ಧಾಂತಗಳನ್ನು ತನ್ನ ವಿಮರ್ಶೆಯ ಮಾನದಂಡವನ್ನಾಗಿಸಿಕೊಂಡ ಅವನು ತನ್ನವರ ಕೃತಿಗಳ ಬಗ್ಗೆ ಹಿತಾಸಕ್ತಿಯನ್ನು ಇತರರ ಕೃತಿಗಳ ಬಗ್ಗೆ ಅಸಹನೆಯನ್ನು ರೂಢಿಸಿಕೊಂಡು ವಿಮರ್ಶಾಕ್ಷೇತ್ರವನ್ನು ರೋಗಗ್ರಸ್ತಗೊಳಿಸಿದ. ಮತ್ತೊಂದು ವರ್ಗದ ಲೇಖಕರ ಸಾಮರ್ಥ್ಯವನ್ನು ಅದ್ಭುತ ಪ್ರತಿಭೆಯನ್ನು ಅಸ್ಥಿರಗೊಳಿಸುವ ಅವನ ದೋಷ ಪ್ರಜ್ಞಾಪೂರ್ವಕವಾಗಿಯೇ ಇರುತ್ತಿತ್ತು. ಕೆಲವರು ಅವನ ಪೂರ್ವಾಗ್ರಹ ಪೀಡಿತ ವಿಮರ್ಶೆಯನ್ನು ಭಯೋತ್ಪಾದಕತೆಗೆ ಹೋಲಿಸುತ್ತಿದ್ದುದು ಸಹಜವೇ ಆಗಿತ್ತು.

ವಿದ್ವತ್ತಿನ ಅಹಮಿಕೆಯಲ್ಲಿ ಸ್ವಜನ ಪ್ರಕ್ಷಪಾತದ ಕಬಂಧಬಾಹುವಿನಲ್ಲಿ ಬಂಧಿಯಾದ ಅವನ ಸೂಕ್ಷ್ಮ ನೋಟ ಒಂದಿನ ಇದ್ದಕ್ಕಿದ್ದಂತೆ ಪ್ರಕೃತಿಯ ಮೇಲೆ ಹರಿದಾಡಿತ್ತು. ಸಮತಳವಿಲ್ಲದ ಭೂಮಿ ಕುರೂಪ, ಬೆಟ್ಟ ಗುಡ್ಡಗಳು, ಸತ್ತ ಹೆಣ, ಮರಗಳು ಡೊಂಕು, ನದಿಗಳದು ತರಾವರಿ ಪಾತ್ರ, ಸಮುದ್ರ ಅಪಾಯಕಾರಿ, ಉರಿಯುವ ಸೂರ್ಯ ನಿಷ್ಕರುಣಿ, ಚಂದ್ರ ಕಳಂಕಿತ… ಹೀಗೆ ಸಾಗಿತ್ತು ಅವನ ಸಮೀಕ್ಷೆ.

“ವಿಮರ್ಶಕ ಮಹಾಶಯರೇ” ಕೂಗಿ ಕರೆಯಿತು ಪ್ರಕೃತಿ.

“ಓ! ಪ್ರಕೃತಿ, ನನ್ನ ವಿಮರ್ಶೆಯಿಂದ ಬೇಸರವಾಯಿತೇ?” ಕೇಳಿದ ವಿಮರ್ಶಕ.

“ಹಾಗೇನಿಲ್ಲ. ಆದರೆ ನಿಮ್ಮ ವಿಮರ್ಶೆ ಸಹಜವಾಗಿಲ್ಲ”

“ನಾನು ಸೂಕ್ಷ್ಮಜ್ಞ ನನ್ನ ವಿಮರ್ಶೆ ಸಮರ್ಥವಾಗಿದೆ”

“ನಿಮ್ಮ ಬುದ್ಧಿಗೆ ಹೊಳೆದಷ್ಟನ್ನೇ ಹೇಳುತ್ತಿದ್ದೀರಿ”

“ಆ ಬುದ್ಧಿಯಲ್ಲಿ ಪ್ರತಿಸೃಷ್ಟಿ ಇರುವದು ವಾಸ್ತವ”

“ಸೃಷ್ಟಿಸುವುದು ಗೊತ್ತಿಲ್ಲದವರಿಗೆ ಪ್ರತಿಸೃಷ್ಟಿ ಹೇಗೆ ಸಾಧ್ಯ?”

“ಅದು ನನಗೆ ದಕ್ಕಿದ ಅಸಾಮಾನ್ಯ ಸಾಮರ್ಥ್ಯ!”

ಪ್ರಕೃತಿ ಹೇಳಿತು:
“ಹಾಗಾದರೆ ಮೋಡಗಳಿಂದ ಮಳೆ ಸುರಿಸುವುದು, ಆಕಾಶದಲ್ಲಿ ಸೂರ್ಯ ಚಂದ್ರರನ್ನು ಬೆಳಗಿಸುವುದು, ಭೂಮಿಯಲ್ಲಿ ಬೀಜ ಸೃಷ್ಟಿಸುವುದು, ಅದನ್ನು ಕೊನರಿಸಿ ಮರವಾಗಿಸುವುದು, ಹೂವಾಗಿಸುವುದು, ಕಾಯಾಗಿಸುವುದು, ಫಲವಾಗಿಸುವುದು ನಿಮ್ಮ ಸಾಮರ್ಥ್ಯದಿಂದ ಸಾಧ್ಯವೇ?”

ವಿಮರ್ಶಕ ಉತ್ತರಕ್ಕಾಗಿ ತಡಕಾಡಿದ.

*****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...