Home / ಲೇಖನ / ವಿಜ್ಞಾನ / ಮಳೆಯ ನೀರು ಪರಿಶುದ್ಧವೆ?

ಮಳೆಯ ನೀರು ಪರಿಶುದ್ಧವೆ?

ಭೂಮಿಯ ಮೇಲೆ ಹಲವು ಮಿಲಿಯ ವರ್‍ಷಗಳಿಂದ ಮಳೆ ಸುರಿಯುತ್ತಿದೆ. ಸೂರ್‍ಯನ ಶಾಖದಿಂದ ಸಮುದ್ರ, ಸರೋವರ, ಹಳ್ಳ-ಕೊಳ್ಳಗಳ ನೀರು ಅಲ್ಲದೇ ಸಸ್ಯ ಮತ್ತು ಪ್ರಾಣಿಗಳ ದೇಹದಿಂದ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಆವಿ ಮೇಲೇರಿ ತಂಪಾಗುತ್ತದೆ. ಗಾಳಿಯಲ್ಲಿಯ ಈ ನೀರು ಸಾಂದ್ರೀಕರಿಸಿ ಸಣ್ಣ ಸಣ್ಣ ನೀರ ಹನಿಗಳಾಗುತ್ತವೆ. ಇಂತಹ ಹನಿಗಳು ಒಂದುಗೂಡಿ ಮೋಡವಾಗುತ್ತದೆ. ಮೋಡಗಳು ಭಾರವಾದಾಗ ಮಳೆಯಾಗಿ ಇಳಿಯುತ್ತದೆ.

ಜಲಚಕ್ರ – ಆವಿಕರಣ (ಎವಾಪೊರೇಶನ್), ಸಾಂದ್ರೀಕರಣ (ಕಂಡೆನ್ಸೇಶನ್) ಮತ್ತು ಅಪಾತೀಕರಣ (ಪ್ರೆಸಿಪಿಟೇಶನ್) ಕ್ರಿಯೆಗಳಂತಹ ಸಾಮಾನ್ಯ ನೈಸರ್‍ಗಿಕ ಆಸವನ (ಡಿಸ್ಟೀಲೇಶನ್) ಕ್ರಿಯೆ.

ಭೂಮಿಯ ಮೇಲೆ ಲಭ್ಯವಿರುವ ನೀರಿನಲ್ಲಿ ಮಳೆಯ ನೀರು ಅತ್ಯಂತ ಶುದ್ಧವಾದ ನೀರೆಂದು ತಿಳಿಯಲಾಗಿದೆ. ಅದರೆ ಅದು ನಿಜವಲ್ಲ. ಗಾಳಿಯಲ್ಲಿಯ ನಿಷ್ಕಾಸದ ಅನಿಲಗಳು, ಕಾರ್‍ಖಾನೆಗಳಿಂದ ವಿಸರ್‍ಜಿತ ವಾಯು, ಧೂಳಿನ ಕಣಗಳು, ಮತ್ತಿತರ ಅನಿಲ ರೂಪದ ಮಲಿನಕಾರಕಗಳು ಮಳೆಯ ನೀರಿನೊಂದಿಗೆ ಕಲೆಯಬಲ್ಲವು. ಮಳೆಯ ನೀರಿನಲ್ಲಿ ಸೂಕ್ಷ್ಮಜೀವಿಗಳ ಇರುವಿಕೆಯನ್ನೂ ಅಲ್ಲಗಳೆಯಲಾಗದು.

ವಾತಾವರಣದ ವಾಯುವು ಬ್ಯಾಕ್ಟೀರಿಯಾ, ಪ್ರೋಟೊಜೋವಾ, ಕೆಳವರ್‍ಗದ ಸಸ್ಯಗಳ ಬೀಜಕಗಳು ಮತ್ತು ಪರಾಗರೇಣುಗಳ ವಿಲಂಬಿತ ಸ್ಥಿತಿಯಲ್ಲಿರುವ ಮಿಶ್ರಣ. ಇವೆಲ್ಲ ಗಾಳಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಮೋಡದ ರೂಪದಲ್ಲಿರುತ್ತವೆ. ಮಳೆಯ ಹನಿಗಳೂ ಗಾಳಿಯಲ್ಲಿಯ ಸೂಕ್ಷ್ಮಜೀವಿಯೊಂದಿಗೆ ಕಲೆಯುವುದರಿಂದ ನೀರು ಅಶುದ್ಧಗೊಳ್ಳುತ್ತದೆ. ಸೂಕ್ಷ್ಮಜೀವಿಗಳು ಸಾಮಾನ್ಯವಾಗಿ ವಾತಾವರಣದ ಧೂಳಿನಂತೆ ಹರಡಿರುತ್ತವೆ. ಮಳೆಯ ನೀರು, ಆಲಿಕಲ್ಲು ಅಥವಾ ಹಿಮದ ರೂಪದಲ್ಲಿ ಅದು ನೆಲದ ಮೇಲೆಯೇ ಸುರಿಯಲಿ ಅಥವಾ ಸಾಗರ, ಧ್ರುವಗಳ ಮೇಲೆಯೇ ಬೀಳಲಿ ಅದರಲ್ಲಿ ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳು ಇರುತ್ತವೆ. ಬ್ಯಾಕ್ಟೀರಿಯಾಗಳ ಸಂಖ್ಯೆ ಮೊದಮೊದಲಲ್ಲಿ ಅಧಿಕವಾಗಿದ್ದು ಮಳೆಯು ನಿರಂತರವಾಗಿ ಬೀಳತೊಡಗಿದಂತೆ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅರಣ್ಯಗಳ ಮೇಲೆ ಸುರಿಯುವ ಮಳೆಗಿಂತ ನಗರದಲ್ಲಿ ಬೀಳುವ ಮಳೆಯ ನೀರಿನಲ್ಲಿ ಅತ್ಯಂತ ಹೆಚ್ಚಿನ ಸೂಕ್ಷ್ಮಜೀವಿಗಳಿರುತ್ತವೆ. ಒಂದು ವರದಿಯ ಪ್ರಕಾರ – ಮಹಾನಗರಗಳ ಪ್ರತಿ ಚ.ಮೀ ಜಾಗದಲ್ಲಿ ಬೀಳುವ ಮಳೆಯು ಪ್ರತಿವರ್‍ಷ ಐದು ಮಿಲಿಯನ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳನ್ನು ಹೊತ್ತೊಯ್ಯುತ್ತದೆ. ಈ ಲೆಕ್ಕಾಚಾರವು ಮಳೆಯ ಪ್ರತಿ ಮಿಲೀ. ನೀರಿನಲ್ಲಿ ೧ ರಿಂದ ೨೫ ಸೂಕ್ಷ್ಮಜೀವಿಗಳ ಇರುವಿಕೆಯನ್ನು ಸೂಚಿಸುತ್ತದೆ.

ಮಳೆಯು ವಾತಾವರಣದ ಹಲವು ಗೋಲಗಳಲ್ಲಿ ಉತ್ಪತ್ತಿಯಾಗುತ್ತದೆ. ಅದಕ್ಕಿಂಥ ಕೆಳಗಿರುವ ಸೂಕ್ಷ್ಮಜೀವಿಗಳ ಮೋಡವು ಮಳೆಯೊಂದಿಗೆ ಕಲೆತು ನೆಲಕ್ಕಿಳಿಯುತ್ತದೆ. ಆದರೆ ಗೋಲಗಳ ಮೇಲಿನ ಸೂಕ್ಷ್ಮಜೀವಿಗಳು ಹಾಗೆಯೇ ಉಳಿಯುತ್ತವೆ. ಹಿಮದಲ್ಲಿ ಮಳೆಯ ಹನಿಗಿಂತಲೂ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಎಕೆಂದರೆ ಅವು ಮಳೆಯ ಹನಿಗಿಂತಲೂ ದೊಡ್ಡದಾಗಿರುವುದರಿಂದ. ಹಿಮದ ಪ್ರತಿ ಗ್ರಾಂ ಒಂದಕ್ಕೆ ೭೦೦ ಸೂಕ್ಷ್ಮ ಜೀವಿಗಳು ಮತ್ತು ಆಲಿಕಲ್ಲಿನ ಪ್ರತಿ ಗ್ರಾಂ ಒಂದಕ್ಕೆ ೨೦,೦೦೦ ಸೂಕ್ಷ್ಮಜೀವಿಗಳು ಇರುವ ಬಗ್ಗೆ ವರದಿಯಾಗಿವೆ.

ಗಿರಿ ಪರ್‍ವತಗಳ ಮೇಲೆ ಬೀಳುವ ಹಿಮ ಮತ್ತು ಹಿಮ ನದಿಯ ನೀರು ಪ್ರಾಯೋಗಿಕವಾಗಿ ಕೃಷಿ ಉಪಯೋಗಕ್ಕೆ ಯೋಗ್ಯವಾಗಿರುತ್ತದೆ. ನೈಸರ್‍ಗಿಕವಾಗಿ ಮಳೆಯ ಹನಿಗಳ ಆಕಾರ ವಿಭಿನ್ನವಾಗಿರುತ್ತವೆ. ಅತಿ ಹೆಚ್ಚಿನ ವ್ಯಾಸ ಅಂದರೆ ಐದು ಮಿಲಿಯಮೈಕ್ರಾನ್. ಅದಕ್ಕಿಂತ ಹೆಚ್ಚಿನ ವ್ಯಾಸವುಳ್ಳವು ಅಸ್ಥಿರವಾಗಿದ್ದು, ಬೀಳುವಾಗ ಒಡೆದು ಸಣ್ಣ ಸಣ್ಣ ಹನಿಗಳಾಗುತ್ತವೆ.

ಜಲಪ್ರಿಯ ಕಣಗಳು ಮಳೆ ಹನಿಯೆಡೆಗೆ ಸುಲಭವಾಗಿ ಆಕರ್‍ಷಿತವಾಗುತ್ತವೆ. ಮಳೆಯ ಹನಿಗಳು ಮುಂದೆ ಹೇಳಲಾಗಿರು ಎರಡು ಕಾರಣಗಳಿಂದ ಸ್ಥಾಯೀ ವಿದ್ಯುತ್ ಇರುವ ಕಣಗಳಂತೆ ವರ್‍ತಿಸುತ್ತವೆ. ವಿರುದ್ಧ ಆವೇಶ ಹೊಂದಿರುವ ಬೀಜಕ ಮತ್ತು ಮಳೆಯ ಹನಿಗಳ ನಡುವಿನ ಕೂಲಾಮ್ ಬಂಧ ಮತ್ತು ಪ್ರೇರಿತ ಬಂಧ.

ಮಳೆಯ ಪ್ರಮಾಣದ ಈ ಕ್ರಿಯೆಯು ದ್ರಾವಣದಲ್ಲಿ ಧನ ಮತ್ತು ಋಣ ಆವೇಶ ಪಡೆದುಕೊಂಡ ಕಣಗಳಿಗಿಂತ ಭಿನ್ನವಾಗಿದೆ. ಮಳೆ ಹನಿಗಳು ಅವನ್ನು ಆಕರ್‍ಷಿಸಿ ಜೊತೆಗೆ ಒಯ್ಯುವ ಕ್ರಿಯೆಯು ಸೂಕ್ಷ್ಮ ಬೀಜಕಗಳ ಮೇಲ್ಮೈಯ ತೇವಕಾರಕ ಅಂಶವನ್ನು ಅವಲಂಬಿಸಿದೆ. ಬಹುಬೇಗ ತೇವವಾಗುವ ಬೀಜಕಗಳೆಂದರೆ ಶಿಲೀಂಧ್ರಗಳ ಗುಂಪಿನ ಸೆಫೆಯೋಸ್ಪೋರಿಯಮ್, ಉಸಾರಿಯಮ್, ವರ್‍ಟಿಸಿಲಿಯಂ ಮತ್ತು ಪುಲುಲಾರಿಯಂ. ಇವು ಮಳೆಯ ಹನಿಗಳಲ್ಲಿ ಬೇಗನೇ ಪ್ರವೇಶಿಸಿ ಕೊಂಡೊಯ್ಯಲ್ಪಡುತ್ತವೆ. ತೇವಗೊಳ್ಳದ ಬೀಜಕಗಳು ಅಂದರೆ ಕ್ಲಾಡೋಸ್ಟೋರಿಯಂ, ಆಸ್ಪರಿಜಿಲ್ಲಸ್, ಇತ್ಯಾದಿ ಕಡಿಮೆ ವೇಗದಲ್ಲಿ ಅಣುಜೀವ ಅಸಂಜನ ಕ್ರಿಯೆಯಿಂದ ಮಳೆಯ ಹನಿಯ ಮೇಲ್ಮೈಗೆ ಆಕರ್‍ಷಿತವಾಗುತ್ತವೆ.

ಮೈಸೂರಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮಳೆಯ ನೀರಿನಲ್ಲಿ ಆಸ್ಪರಿಜಿಲ್ಲಸ್ ತರಹದ ಬೀಜಕಗಳು ಹೆಚ್ಚಾಗಿ ಕಂಡುಬಂದಿವೆ.

ಮಳೆ ಸುರಿದ ನಂತರ ಕೆಲವು ತೇವ ಹೊಂದದ ಬೀಜಕಗಳು ಆದ್ರತೆ ಹೊಂದಿದ ಮಣ್ಣಿನ ಮೇಲೆ ಅಥವಾ ನೀರಿನ ಮೇಲೆ ಮೊಳೆತು, ಬೀಜಕಗಳನ್ನು ತಯಾರಿಸಿ ಗಾಳಿಯಲ್ಲಿ ಪ್ರಸಾರಿತವಾಗುತ್ತವೆ. ಸೂಕ್ಷ್ಮ ಮೋಡಗಳ ರೂಪದಲ್ಲಿ ಈ ಬೀಜಕಗಳು ಮಳೆಯನಂತರ ವಾತಾವರಣದಲ್ಲಿ ತೇಲುತ್ತ ಮಳೆಯ ನೀರನ್ನು ಅಶುದ್ಧವಾಗಿಸುತ್ತವೆ.

ಕಾರ್‍ಖಾನೆ ಮತ್ತು ವಾಹನಗಳಿಂದ ಹೊರಹೋಗುವ ಸಲ್ಫರ್‍ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ವಾತಾವರಣದ ತೇವಾಂಶದೊಡನೆ ಕೂಡಿ ಆಮ್ಲ ಉತ್ಪತ್ತಿಯಾಗುತ್ತದೆ. ಈ ಆಮ್ಲವು ಮಳೆಯ ನೀರಿನೊಂದಿಗೆ ಕೂಡಿ ಆಮ್ಲಮಳೆಯಾಗುತ್ತದೆ. ಆಮ್ಲ ಮಳೆ ಸುರಿದಾಗ ಭೂಮಿಯಲ್ಲಿಯ ಸಕಲ ಸಸ್ಯಪ್ರಭೇದಗಳು ಅಪಾಯ ಎದುರಿಸಬೇಕಾಗುತ್ತದೆ.

ದಿನೇ ದಿನೇ ಕಾರ್‍ಖಾನೆಗಳು ಹೆಚ್ಚುತ್ತಿವೆ. ಅವುಗಳಿಂದ ವಿಸರ್‍ಜಿತವಾಗುವ ಕಲುಷಿತ ಹವೆಯ ಪ್ರಮಾಣವೂ ಹೆಚ್ಚುತ್ತಿದೆ. ಇತ್ತ ಗಿಡಮರಗಳನ್ನು ಹಿಂದೆ ಮುಂದೆ ನೋಡದೇ ಕಡಿಯಲಾಗುತ್ತಿದೆ. ಹಾಗಾಗಿ ಕಲುಷಿತ ಹವೆಯು ವಾತಾವರಣದಲ್ಲಿಯೇ ಉಳಿದು, ಮಳೆಯ ಸಂದರ್‍ಭದಲ್ಲಿ ಮಳೆಯ ಹನಿಗಳೊಂದಿಗೆ ಕೂಡಿ, ಮಳೆಯ ನೀರು ಮಲಿನವಾಗುತ್ತಿದೆ.

ಮಳೆಯಿಂದ ಹರಡುವ ರೋಗಗಳು

ಮಳೆಯ ನೀರಿನಲ್ಲಿಯ ಸೂಕ್ಷ್ಮಜೀವಿಗಳು ಭೂಸಂಬಂಧ ಪರಿಸರ ವ್ಯವಸ್ಥೆಯಲ್ಲಿ ಬಹುವಾಗಿ ಪ್ರಭಾವ ಬೀರುತ್ತವೆ. ಅವು ಸಸ್ಯಗಳಲ್ಲಿ ಹಲವು ರೋಗಗಳು ಮತ್ತು ಪ್ರಾಣಿಗಳಲ್ಲಿ ಶ್ವಾಸಕೋಶನಾಳ ಸಂಬಂಧ ರೋಗಗಳು ಹರಡಲು ಕಾರಣವಾಗುತ್ತವೆ. ಮಳೆಯ ಕಾಲದಲ್ಲಿ ಗೋದಿ ತುಕ್ಕುರೋಗವು ಹಿಮಾಲಯದ ಎತ್ತರದ ಬಯಲು ಮೈದಾನಗಳಿಗೆ ಮತ್ತು ದಕ್ಷಿಣದ ನೀಲಗಿರಿ ಮತ್ತು ಪಳನಿ ಬೆಟ್ಟಗಳಿಂದ ಮಧ್ಯ ಭಾರತಕ್ಕೆ ಪ್ರಸಾರಿತವಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಕಂದು ಮತ್ತು ಕಪ್ಪು ತುಕ್ಕು ರೋಗದ ಬೀಜಕಗಳು ದಕ್ಷಿಣದಿಂದ ಮಧ್ಯ ಭಾರತಕ್ಕೆ ಮಳೆಯಿಂದ ಪ್ರಸಾರಿತವಾಗುತ್ತವೆ. ಸುಮಾರು ೬೦೦ ಕಿ.ಮೀ. ಗಳವರೆಗೂ ಬೀಜಕಗಳು ಪ್ರಸಾರಿತವಾದ ಉದಾಹರಣೆಗಳಿವೆ. ಮಳೆಯ ನೀರಿನಲ್ಲಿಯ ಸೂಕ್ಷ್ಮ ಜೀವಿಗಳು ದನ ಮತ್ತು ಕುರಿಗಳಲ್ಲಿ ಕಾಲುಬಾಯಿ ರೋಗ ಹರಡಲೂ ಕಾರಣವಾಗಿವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...